Advertisement

ಬಿಎಸ್‌ವೈಗೆ ಈಶ್ವರಪ್ಪ ಟಾಂಗ್‌; ಶಾಸಕರಿಗೆ ಬ್ರಿಗೇಡ್ ಇಷ್ಟ

03:45 AM Jan 12, 2017 | Team Udayavani |

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಣಕ್ಕೆ ಸಡ್ಡು ಹೊಡೆದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಬುಧವಾರ ನಡೆದ ಬ್ರಿಗೇಡ್‌ನ‌ ಸಮಾವೇಶದಲ್ಲಿ ತಮ್ಮ ಭಾಷಣದುದ್ದಕ್ಕೂ ಪಕ್ಷ ನಿಷ್ಠೆ ಮಾತುಗಳನ್ನಾಡಿ, ಯಡಿಯೂರಪ್ಪ ಅವರಿಗೆ ಮಾತುಮಾತಿಗೂ ಟಾಂಗ್‌ ಕೊಡುವ ಮೂಲಕ ಕುತೂಹಲ ಮೂಡಿಸಿದರು.

Advertisement

ತಮ್ಮ ಭಾಷಣದ ಆರಂಭದಲ್ಲಿಯೇ, ಬೆಂಗಳೂರು ನಗರ ನಾಯಕರಾಗಿದ್ದ ವೆಂಕಟೇಶ್‌ ಮೂರ್ತಿ ಅವರನ್ನು ಅಮಾನತು ಮಾಡುವ ಮೂಲಕ ರಾಜ್ಯ ನಾಯಕರನ್ನಾಗಿ ಮಾಡಲಾಗಿದೆ. ಇದಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಈ ತಿಂಗಳ 26ರಂದು ನಡೆಯುವ ಬ್ರಿಗೇಡ್‌ ಸಮಾವೇಶದ ಸಿದ್ಧತೆ ಕುರಿತು ಚರ್ಚಿಸಲು ನಡೆಸಲು ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿನ ಶ್ರೀಹರಿ ಕಲ್ಯಾಣಮಂಟಪದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಮ್ಮ ಭಾಷಣದುದಕ್ಕೂ ನೆಪಮಾತ್ರಕ್ಕೆ ಕಾಂಗ್ರೆಸ್‌ ವಿರುದ್ಧ ಮಾತನಾಡಿದರೂ ನಾಜೂಕಾಗಿ ಯಡಿಯೂರಪ್ಪ ವಿರುದ್ಧವೇ ವಾಗ್ಧಾಳಿ ನಡೆಸಿದರು.

ಅಲ್ಲದೇ, ಸಭೆಯಲ್ಲಿ ಸಮಾವೇಶದ ಪೂರ್ವ ಸಿದ್ಧತೆ ಕುರಿತು ಚರ್ಚೆ ನಡೆಯುವುದಕ್ಕಿಂತ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ವಿಷಯದ ಬಗ್ಗೆಯೇ ಪ್ರಮುಖವಾಗಿ ಮಾತನಾಡಿದರು. ಮಾತ್ರವಲ್ಲ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿತು.

ಎಲ್ಲಾ ವರ್ಗದ ಬಡವರಿಗೆ ನ್ಯಾಯ ಒದಗಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆ ಕಟ್ಟಲಾಗಿದೆ. ಇದೊಂದು ಪಕ್ಷಾತೀತ ಸಂಘಟನೆಯಾಗಿದೆ. ಸಂಘಟನೆ ಪ್ರಾರಂಭಿಸಿರುವುದಕ್ಕೆ ಬಿಜೆಪಿಯ ಶಾಸಕರು ಸೇರಿದಂತೆ ಮುಖಂಡರಿಗೆ ಸಂತೋಷ ಇದ್ದು, ಖಾಸಗಿಯಾಗಿ ಬಂದು ಒಳ್ಳೆಯ ಮಾತುಗಳನ್ನಾಡುತ್ತಾರೆ. ಮುಂದಿನ ಚುನಾವಣೆಗೆ ನಮಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಹೇಳುತ್ತಾರೆ. ಆದರೆ, ಯಾರೂ ಸಹ ಬಹಿರಂಗವಾಗಿ ಹೇಳುವುದಿಲ್ಲ. ಯಾಕೆಂದರೆ ಎಲ್ಲರಿಗೂ ಯಡಿಯೂರಪ್ಪ ಬೆದರಿಕೆ ಇದೆ ಎಂದು ಈಶ್ವರಪ್ಪ ಮಾರ್ಮಿಕವಾಗಿ ನುಡಿದರು. 

Advertisement

ಯಡಿಯೂರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬೇಡ ಎನ್ನುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಬೇಡ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಬ್ರಿಗೇಡ್‌ ಕುರಿತು ಅವರಿಗೆ ಯಾರೋ ತಪ್ಪಾಗಿ ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕಾರಣಕ್ಕಾಗಿ ಸಂಘಟನೆ ಆರಂಭಿಸಲಾಗಿದೆ. ಅವರಿಗೆ ಗೊಂದಲ ಮೂಡಿದ್ದು, ಬ್ರಿಗೇಡ್‌ ಪ್ರಾರಂಭಕ್ಕೆ ಸಂತೋಷ ಪಡಬೇಕಾಗಿತ್ತು ಎಂದು ಚಾಟಿ ಬೀಸಿದರು.

ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶಗಳನ್ನು ನಡೆಸಿ ಎಂಬುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶ ನಡೆಸಿದರೆ ಪಕ್ಷದ ಬಾವುಟಗಳು ರಾರಾಜಿಸುತ್ತವೆ. ಇವುಗಳನ್ನು ನೋಡಿ ಬಿಜೆಪಿಯೇತರ ನಾಯಕರು, ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರಾ ಎಂದು ಯಡಿಯೂರಪ್ಪ ಅವರನ್ನು ನೇರವಾಗಿ ಪ್ರಶ್ನಿಸಿದರು.

ಈಶ್ವರಪ್ಪ ಮತ್ತು ಯಡಿಯೂರಪ್ಪ ಬಡಿದಾಡಿಕೊಂಡ್ರೆ ನಮಗೆ ಲಾಭ ಅಂತ ಕಾಂಗ್ರೆಸ್‌ನವರು ತಿಳಿದುಕೊಂಡಿದ್ದಾರೆ. ಆದರೆ ನಮ್ಮನ್ನು ಕೇಳಲು ಕೇಂದ್ರದ ವರಿಷ್ಠರು ಇದ್ದಾರೆ. ದೊಡ್ಡವರು ಗೊಂದಲವನ್ನು ಬಗೆಹರಿಸುತ್ತಾರೆ. ನಾವಿಬ್ಬರೂ ಮತ್ತೆ ಒಂದಾಗುತ್ತೇವೆ.
– ಕೆ.ಎಸ್‌. ಈಶ್ವರಪ್ಪ, ಬಿಜೆಪಿ ನಾಯಕ

ಅಮಾನತಿನಿಂದ ನೋವಾಗಿದೆ,
ಆದರೂ ಬ್ರಿಗೇಡ್‌ ನಿಲ್ಲಿಸಲ್ಲ

ಪಕ್ಷದ ನಿಷ್ಠಾವಂತ ಕಾರ್ಯಕರ್ತ ವೆಂಕಟೇಶ್‌ ಮೂರ್ತಿ ಅವರನ್ನು ಅಮಾನತುಗೊಳಿಸಿರುವುದು ನನಗೆ ನೋವು ತಂದಿದೆ ಎಂದು ಈಶ್ವರಪ್ಪ ಹೇಳಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಳ್ಳುವುದು ತಪ್ಪಾ? ಇದನ್ನೇ ಪಕ್ಷದ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ. ಪಕ್ಷದ ಈ ಕ್ರಮದಿಂದ ನನಗೆ ನೋವಾಗಿದೆ. ಯಾರು ಏನೇ ಮಾಡಿದರೂ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು. 

ಪಕ್ಷದ ಶಿಸ್ತು ಸಮಿತಿಯಲ್ಲಿ ಅಶಿಸ್ತು 
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಶಿಸ್ತು ಸಮಿತಿಗೆ ಅಶಿಸ್ತು ಬಂದಿದೆಯಾ ಎಂಬ ಅನುಮಾನ ಮೂಡಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಪಕ್ಷದ ಮುಖಂಡರಾದ ಸೊಗಡು ಶಿವಣ್ಣ ಮತ್ತು ನಂದೀಶ್‌ ಅವರಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಶಿಸ್ತು ಸಮಿತಿ ಏನು ಮಾಡುತ್ತಿದೆ ಎಂಬುದೇ ಗೊತ್ತಿಲ್ಲ. ವೆಂಕಟೇಶ್‌ ಮೂರ್ತಿಗೆ ನೋಟಿಸ್‌ ಜಾರಿಗೊಳಿಸದೆ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಬಗ್ಗೆ ಮತ್ತು ವ್ಯವಸ್ಥೆ ಕುರಿತು ಅನುಮಾನ ಮೂಡಿದೆ ಎಂದರು. 

ದಕ್ಷಿಣ ಕರ್ನಾಟಕಕ್ಕೂ ಬ್ರಿಗೇಡ್‌ ಬರಲಿದೆ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಜ.26ರಂದು ಕೂಡಲ ಸಂಗಮ ಸಮಾವೇಶದ ಬಳಿಕ ದಕ್ಷಿಣ ಕರ್ನಾಟಕಕ್ಕೂ ಸಂಘಟನೆ ಕಾರ್ಯಗಳು ವ್ಯಾಪಿಸಲಿವೆ ಎಂದು ಈಶ್ವರಪ್ಪ ತಿಳಿಸಿದರು. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಎಲ್ಲಾ ವರ್ಗದ ಬಡವರ ಏಳ್ಗೆಗಾಗಿ 10 ಸಾವಿರ ಕೋಟಿ ರೂ .ಮೀಸಲಿರಿಸುತ್ತೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಈಶ್ವರಪ್ಪ ಆಸೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next