Advertisement

ಬ್ರಿಟಿಷರ ಕುರುಹುಗಳ ಬದಲಾವಣೆ: ಕಾಲಘಟ್ಟದ ಅನಿವಾರ್ಯ

11:49 PM Sep 08, 2022 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು 76ನೇ ವರ್ಷದಲ್ಲಿ ನಡೆಯುತ್ತಿದ್ದೇವೆ. ಇಂಥ ಹೊತ್ತಿನಲ್ಲೂ ನಮ್ಮನ್ನು 200 ವರ್ಷಗಳ ಕಾಲ ಆಳಿದ ಬ್ರಿಟಿಷರ ಕುರುಹುಗಳನ್ನು ಹಾಗೇ ಇರಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ‌ಕಾರ ಬ್ರಿಟಿಷರ ಕಾಲದ ಕಾನೂನುಗಳಿಂದ ಹಿಡಿದು ಹಲವಾರು ವಿಷಯಗಳಲ್ಲಿ ಸ್ವಂತಿಕೆಯನ್ನು ತಂದಿದೆ.

Advertisement

2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಮೊದಲಿಗೆ ಮಾಡಿದ ಕೆಲಸವೇ, ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ 1,800ಕ್ಕೂ ಹೆಚ್ಚು ಕಾನೂನುಗಳನ್ನು ರದ್ದು ಮಾಡಿದ್ದು. ವಿಚಿತ್ರವೆಂದರೆ ಇವುಗಳಲ್ಲಿ ಎಷ್ಟೋ ಕಾನೂನುಗಳು ಏಕೆ ಬಳಕೆಯಾಗುತ್ತಿವೆ? ಎಲ್ಲಿ ಬಳಕೆಯಾಗುತ್ತಿವೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ, ಇವುಗಳನ್ನು ರದ್ದು ಮಾಡ ಲಾಗಿದೆ. ಆದರೆ, ಇದಕ್ಕಿಂತ ಪ್ರಮುಖವಾಗಿ ದೇಶದ್ರೋಹ ಕಾನೂನು ಮಾತ್ರ ಇನ್ನೂ ಜಾರಿಯಲ್ಲಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಇದರ ಅಗತ್ಯವಿಲ್ಲ. ಇದನ್ನು ರದ್ದು ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.  ಬ್ರಿಟಿಷರ ಕಾಲದಲ್ಲಿ ಈ ದೇಶದ್ರೋಹ ಕಾನೂನನ್ನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಾಕಲಾಗುತ್ತಿತ್ತು. ಈಗಲೂ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಗಳಿವೆ. ಹೀಗಾಗಿ ಇದನ್ನು ನಿಷೇಧಿಸಿದರೆ ಉತ್ತಮ ನಿರ್ಧಾರವಾದೀತು.

ಈ ಸಂಗತಿಗಳಿಗಿಂತ ಪ್ರಮುಖವಾಗಿ ಇನ್ನೂ ನಾಲ್ಕು ಅಂಶಗಳನ್ನು ಹಾಲಿ ಮೋದಿ ಸರಕಾರ ಬದಲಾವಣೆ ಮಾಡಿದೆ. ಪ್ರಮುಖವಾಗಿ ಇಂಡಿಯಾ ಗೇಟ್‌ ಬಳಿ 5ನೇ ಕಿಂಗ್‌ ಜಾರ್ಜ್‌ ಪ್ರತಿಮೆ ಇದ್ದ ಸ್ಥಳದಲ್ಲಿ ಈಗ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ವಿಚಿತ್ರವೆಂದರೆ, ಈ ಪ್ರತಿಮೆ ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡ ಮೇಲೂ 1968ರ ವರೆಗೆ ಇಂಡಿಯಾ ಗೇಟ್‌ ಬಳಿಯೇ ಇತ್ತು. ಮೊದಲಿಗೆ ನೇತಾಜಿ ಅವರ ಹಾಲೋಗ್ರಾಮ್‌ ಪ್ರತಿಮೆಯನ್ನು ಇರಿಸಿ, ಈಗ ಶಾಶ್ವತವಾದ ಪ್ರತಿಮೆ ನಿರ್ಮಿಸಲಾಗಿದೆ.

ಮೊದಲನೇ ವಿಶ್ವಯುದ್ಧದಲ್ಲಿ ಭಾಗಿಯಾಗಿ ಹುತಾತ್ಮರಾಗಿದ್ದವರ ನೆನಪಿಗಾಗಿ ಸ್ಥಾಪಿಸಲಾಗಿದ್ದ ಅಮರ ಜವಾನ್‌ ಜ್ಯೋತಿ ಸ್ಮಾರಕವನ್ನು ಈಗ ರಾಷ್ಟ್ರೀಯ ಯುದ್ಧ ಸ್ಮಾರಕದೊಳಗೆ ವಿಲೀನ ಮಾಡಲಾಗಿದೆ. ಇಂಡಿಯಾ ಗೇಟ್‌ ಬಳಿ ಇದ್ದ ಈ ಸ್ಮಾರಕದಲ್ಲಿ ಕೇವಲ ಮೊದಲನೇ ಮಹಾಸಮರ ಮತ್ತು ಆಂಗ್ಲೋ-ಅಫ್ಘಾನ್‌ ಯುದ್ಧದಲ್ಲಿ ಭಾಗಿಯಾಗಿದ್ದವರ ಹೆಸರುಗಳಷ್ಟೇ ಇದ್ದವು. ಬಳಿಕ 1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಸಮರದಲ್ಲಿ ಹುತಾತ್ಮರಾದವರ ಹೆಸರುಗಳನ್ನು ಇಂದಿರಾ ಗಾಂಧಿಯವರ ಅವಧಿಯಲ್ಲಿ ಸೇರಿಸಲಾಗಿತ್ತು. ಈಗ ಭಾರತದಲ್ಲಿ ಇದುವರೆಗೆ ಆಗಿರುವ ಎಲ್ಲ ಯುದ್ಧಗಳ ಹುತಾತ್ಮರ ಹೆಸರುಗಳನ್ನು ಸೇರಿಸಿ ರಾಷ್ಟ್ರೀಯ ಸ್ಮಾರಕ ಮಾಡಲಾಗಿದ್ದು, ಎಲ್ಲವನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ.

ದಿಲ್ಲಿಯ ರೇಸ್‌ ಕೋರ್ಸ್‌ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂಬುದಾಗಿ ಬ್ರಿಟಿಷರ ಕಾಲದ ಪ್ರತ್ಯೇಕ ರೈಲ್ವೇ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ನೊಳಗೇ ಸಮ್ಮಿಳಿತ ಮಾಡಲಾಗಿದೆ. ವಸಾಹತುಶಾಹಿಯ ಕುರುಹುಗಳಂತಿದ್ದ ಈ ಸಂಗತಿಗಳನ್ನು ತೆಗೆದುಹಾಕಿರುವುದು ಪ್ರಸ್ತುತ ಸಂದರ್ಭದಲ್ಲಿ ಸರಿಯಾದ ನಿರ್ಧಾರವೇ ಆಗಿದೆ.

Advertisement

ಇವೆಲ್ಲದರ ಜತೆಗೆ ಈಗ ಬ್ರಿಟಿಷರ ಕಾಲದ ರಾಜಪಥವನ್ನು ಕರ್ತವ್ಯ ಪಥವಾಗಿ ಬದಲಾವಣೆ ಮಾಡಿರುವುದು ದೇಶೀಯತೆಯ ಕುರುಹಾಗಿದೆ. ಈ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡಬೇಕಾದ ಅಗತ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next