Advertisement

ಬ್ರೇಕ್‌ ಕೆ ಬಾದ್‌!

12:39 PM Sep 26, 2017 | |

“ಬಿಗ್‌ ಬಾಸ್‌’ ಮನೆಯಿಂದ ಬಂದ ನಂತರ ಮೋಹನ್‌ ಒಂದು ಚಿತ್ರ ಮಾಡೋಕೆ ಅಂತ ಕಥೆ ಬರೆಯುವುದಕ್ಕೆ ಕೂತರಂತೆ. ಚಿತ್ರದ ಹೆಸರು “ಮನೆಗೊಬ್ಬ ಮನೆಹಾಳ’ ಅಂತ. ಈ ಚಿತ್ರವನ್ನು ಹಿರಿಯ ನಿರ್ಮಾಪಕ ಬಿ.ಎನ್‌. ಗಂಗಾಧರ್‌ ನಿರ್ಮಿಸಬೇಕಿತ್ತು. ಸೆಪ್ಟೆಂಬರ್‌ನಲ್ಲಿ ಅವರ ಮಗನ ಮದುವೆ ಇರುವುದರಿಂದ, ಮದುವೆ ಮುಗಿದ ನಂತರ ಚಿತ್ರ ಶುರು ಮಾಡುವುದಾಗಿ ಹೇಳಿದರಂತೆ ಗಂಗಾಧರ್‌. ಹಾಗಂತ ಮೋಹನ್‌ ಸುಮ್ಮನೆ ಕುಳಿತಿಲ್ಲ. ಮೂರ್‍ನಾಲ್ಕು ಕಥೆಗಳನ್ನು ಬರೆದಿಟ್ಟುಕೊಂಡಿದ್ದಾರೆ. ಒಂದರಹಿಂದೊಂತೆ ಚಿತ್ರ ಮಾಡುವುದಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ. ಅದರ ಮೊದಲ ಅಧ್ಯಾಯವಾಗಿ ಅವರು “ಹಲೋ ಮಾಮ’ ಎಂಬ ಚಿತ್ರವನ್ನು ಶುರು ಮಾಡಿದ್ದೂ ಆಗಿದೆ …

Advertisement

“ಥ್ಯಾಂಕ್ಸ್‌ ಟು ವಿಜಯಪ್ರಸಾದ್‌ …’
ಹಾಗೆಂದು ಹೇಳಿ ನಕ್ಕರು ಮೋಹನ್‌. ವಿಜಯಪ್ರಸಾದ್‌ ಅವರಿಗೂ ಮೋಹನ್‌ಗೂ ಸಂಬಂಧವೇನು ಮತ್ತು ಮೋಹನ್‌ ಯಾಕೆ ವಿಜಯಪ್ರಸಾದ್‌ಗೆ ಥ್ಯಾಂಕ್ಸ್‌ ಹೇಳಬೇಕು ಎಂಬ ಪ್ರಶ್ನೆ ಬರುವುದು ಸಹಜ. ಉತ್ತರ ಏನೆಂದರೆ, ವಿಜಯಪ್ರಸಾದ್‌ರಿಂದ ಮೋಹನ್‌ ಸಾಕಷ್ಟು ಕಲಿತಿದ್ದಾರಂತೆ. ಅದೇ ಕಾರಣಕ್ಕೆ ಅವರು ವಿಜಯಪ್ರಸಾದ್‌ಗೆ ಧನ್ಯವಾದ ಸಲ್ಲಿಸುತ್ತಾರೆ.

“ನಾನು ಬರೆಯುವುದಕ್ಕೆ ಶುರು ಮಾಡಿ ಎಷ್ಟೋ ವರ್ಷ ಆಯ್ತು. “ಯಾರಿಗೆ ಸಾಲತ್ತೆ ಸಂಬಳ’ ಚಿತ್ರದಿಂದ ಇದುವರೆಗೂ 50-51 ಚಿತ್ರಗಳಿಗೆ ಬರೆದಿದ್ದೇನೆ. ಈ “ಹಲೋ ಮಾಮ’, ನನ್ನ 51ನೇ ಚಿತ್ರ ಇರಬಹುದು. ಇದುವರೆಗೂ ನನ್ನ ಬರವಣಿಗೆಯಲ್ಲಿ ಸ್ವಲ್ಪ ಮೈಚಳಿ ಇತ್ತು. ಇದೀಗ ಚಳಿ ಬಿಟ್ಟಿದ್ದೀನಿ. ಸ್ವಲ್ಪ ನಾಟಿಯಾಗಿದ್ದೀನಿ. ಮಡಿ ಮೈಲಿಗೆ ಎಲ್ಲಾ ಬಿಟ್ಟು ಪೆನ್‌ಗೆ ಸ್ವತಂತ್ರ ಕೊಡೋಣ ಅಂತಿದ್ದೀನಿ. ಇದಕ್ಕೆ ವಿಜಯಪ್ರಸಾದ್‌ ಅವರೇ ಸ್ಫೂರ್ತಿ. “ನೀರ್‌ ದೋಸೆ’ ಚಿತ್ರವನ್ನ ನೋಡಿ ನನಗೆ ಈ ನಂಬಿಕೆ ಬಂತು. ಹಾಗಾಗಿ ಅವರಿಗೊಂದು ವಿಶೇಷ ಥ್ಯಾಂಕ್ಸ್‌’ ಎಂದು ಧನ್ಯವಾದ ಸಲ್ಲಿಸುತ್ತಾರೆ ಅವರು.

ಈಗ ಮೋಹನ್‌, “ಹಲೋ ಮಾಮ’ ಎಂಬ ಹೊಸ ಚಿತ್ರವನ್ನು ಶುರು ಮಾಡಿದ್ದಾರೆ. ಈ ಚಿತ್ರಕ್ಕೆ ಅವರು ನಾಯಕನಷ್ಟೇ ಅಲ್ಲ, ನಿರ್ದೇಶನ ಮಾಡುವುದರ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ. ಈ ಚಿತ್ರದಲ್ಲಿ ಅವರು ಜಗತ್ತಿನ ವಿವಿಧ ಮಾಮಾಗಿರಿಗಳ ಕುರಿತು ಹೇಳಲಿದ್ದಾರಂತೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಮಾಮ ಆಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. “ಸರಳವಾಗಿ ಹೇಳಬೇಕು ಎಂದರೆ, ಶಾಸ್ತ್ರೋಕ್ತವಾಗಿ ಹೆಣ್ಣು ಕೊಟ್ಟರೆ ಅವನು ಮಾವ, ಶಾಸ್ತ್ರೋಕ್ತವಾಗಿ ಹೆಣ್ಣು ಕೊಡದಿದ್ದರೆ ಅವನು ಮಾಮ ಅಂತ ಅರ್ಥ. ಚಿತ್ರದಲ್ಲಿ ಯಾವ್ಯಾವ ತರಹ ಮಾಮಾಗಿರಿ ಇದೆ ಎನ್ನುವುದನ್ನು ಹೇಳುವುದಕ್ಕೆ ಹೊರಟಿದ್ದೀನಿ. ಮಾಮಗಿರಿಯ ಕುರಿತು ತಮಾಷೆಯಾಗಿ ಹೇಳುವುದರ ಜೊತೆಗೆ, ಇಲ್ಲಿ ಅಂತಹವರ ನೋವನ್ನೂ ಹೇಳುವ ಪ್ರಯತ್ನ ಮಾಡುತ್ತಿದ್ದೀನಿ. ಮಾಮಗಳು ಎಲ್ಲರಿಗೂ ಬೇಕು. ಆದರೆ, ಯಾರಿಗೂ ಅವರೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ಚಿತ್ರದ ಪೂರಾ ನಗು ಇರುತ್ತದೆ. ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶವಿರುತ್ತದೆ’ ಎನ್ನುತ್ತಾರೆ ಮೋಹನ್‌.

“ಬಿಗ್‌ ಬಾಸ್‌’ ಮನೆಯಿಂದ ವಾಪಸ್ಸು ಬಂದ ನಂತರ ಮೋಹನ್‌ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆ ಮನೆಯಲ್ಲಿ ಅವರ ಜೊತೆಗೆ ಇದ್ದ ಒಬ್ಬೊಬ್ಬರು ಒಂದೊಂದು ಕಡೆ ಬಿಝಿಯಾದರೆ, ಮೋಹನ್‌ ಮಾತ್ರ ನಾಪತ್ತೆಯಾಗಿದ್ದರು. ಕೆಲವರು ಪಾರ್ಟಿ, ವಿವಾದ, ಲಾಂಗ್‌ ಡ್ರೈವ್‌ ಅಂತ ಓಡಾಡುತ್ತಿದ್ದರೆ, ಮೋಹನ್‌ ಮಾತ್ರ ಕುಳಿತು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದರು. ಯಾಕೆ ಎಂದು ಅವರನ್ನು ಕೇಳಿದರೆ, “ಹಾಗೇನಿಲ್ಲ ಒಂದೆರೆಡು ಪಾರ್ಟಿಗಳಲ್ಲಿ ನಾನೂ ಇದ್ದೆ. ಕ್ರಮೇಣ ಎಲ್ಲರ ಹಣೆಬರಹ ಚೆನ್ನಾಗಿ ಗೊತ್ತಾಯ್ತು. ಕ್ರಮೇಣ ನಾನೇ ಹಿಂದೆ ಸರಿದೆ. ಪಾರ್ಟಿ ಮಾಡೋಣ ಅಂತ ಎಲ್ಲರೂ ಬರೋರು. ಆದರೆ, ಬಿಲ್‌ ಕೊಡೋಕೆ ಯಾರೂ ಇರುತ್ತಿರಲಿಲ್ಲ. ಕೊನೆಗೆ ನಾನು, ದೊಡ್ಡ ಗಣೇಶ್‌ ಮಾತ್ರ ಬಿಲ್‌ ಕೊಡಬೇಕಿತ್ತು. ಕೆಲವೊಮ್ಮೆ 25 ಸಾವಿರದವರೆಗೂ ಬಿಲ್‌ ಆಗೋದು. ಚೆನ್ನಾಗಿ ಕುಡಿದು, ತಿಂದು ಬೆಳಿಗ್ಗೆ ಬಂದು ಬಿಲ್‌ ಎಷ್ಟಾಗಿತ್ತು ಅನ್ನೋರು. ಹಾಗಾಗಿ ಕ್ರಮೇಣ ಬಿಟ್ಟುಬಿಟ್ಟೆ. ದೊಡ್ಡ ಗಣೇಶ್‌ ಮತ್ತು ಶಾಲಿನಿ ಬಿಟ್ಟರೆ ಬೇರೆ ಯಾರೂ ಟಚ್‌ ಇಲ್ಲ’ ಎನ್ನುತ್ತಾರೆ ಅವರು.

Advertisement

“ಬಿಗ್‌ ಬಾಸ್‌’ ಮುಗಿದ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ, ಚಾನಲ್‌ನಲ್ಲೇ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬಿಝಿಯಾದರು. ಮೋಹನ್‌ ಮಾತ್ರ ಆಗಲಿಲ್ಲ. ಏನು ಕಾರಣ? “ಅದು ಕೆಲವರಿಗೆ ಅವಶ್ಯಕತೆ ಇತ್ತು. ನನಗೆ ಇಲ್ಲ. ನಾನು ಕಾರ್ಯಕ್ರಮಕ್ಕೆ ಹೋಗುವಾಗಲೇ ಮೋಹನ್‌ ಆಗಿಯೇ ಹೋಗಿದ್ದೆ. ನನಗೆ ಆ್ಯಂಕರಿಂಗ್‌ ಮಾಡುವುದಕ್ಕೆ ಇಷ್ಟವಿಲ್ಲ. ಸಿನಿಮಾ ನಿರ್ದೇಶನ ಮಾಡಬಹುದು, ಸೀರಿಯಲ್‌ ನಿರ್ದೇಶನ ಮಾಡುವುದು ಹಿಂಸೆ. ಹಾಗಾಗಿ ನಾನು ಆ ಕಡೆ ಹೋಗಲಿಲ್ಲ, ಸ್ಕ್ರಿಪ್ಟ್ ಕೆಲಸದಲ್ಲಿ ಕೂತೆ. ಈಗ ನನ್ನ ಬಳಿ ಮೂರ್‍ನಾಲ್ಕು ಕಥೆಗಳಿವೆ. ಬೇರೆ ಬೇರೆ ಜಾನರ್‌ಗಳ ಕಥೆ. ನನಗೆ ನಾನೇ ಚಿತ್ರ ಮಾಡಿಕೊಂಡರೆ ಕಾಮಿಡಿ ಚಿತ್ರ ಮಾಡಿಕೊಳ್ಳುತ್ತೀನಿ. ಬೇರೆಯವರಿಗೆ ನಿರ್ದೇಶನ ಮಾಡಬೇಕೆಂದರೂ, ನನ್ನ ಬಳಿ ಕಥೆ ಇದೆ. “ಮುಧೋಳ’ ಎಂಬ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಥೆ ಇದೆ. “ಶತಾಯ’ ಎಂಬ ಇನ್ನೊಂದು ಕಥೆ ಸಿದ್ಧವಿದೆ. ಸೆಪ್ಟೆಂಬರ್‌ನಲ್ಲಿ “ಮನೆಗೊಬ್ಬ ಮನೆಹಾಳ’ ಶುರುವಾಗಲಿದೆ. ಅಲ್ಲಿಯವರೆಗೂ ಯಾಕೆ ಕಾಯಬೇಕು ಎಂದು ಇದು ಶುರು ಮಾಡಿದೆ. ನನ್ನ ಐಡಿಯಾ ಪ್ರಕಾರ, ಮೂರು ತಿಂಗಳುಗಳಲ್ಲಿ ಚಿತ್ರ ಮಾಡಿ ಬಿಡುಗಡೆ ಮಾಡಬೇಕು’ ಎಂದು ಗುರಿ ಇಟ್ಟುಕೊಂಡಿದ್ದಾರೆ ಮೋಹನ್‌.

“ಬಿಗ್‌ ಬಾಸ್‌’ ನಂತರ ಕಿರುತೆರೆಯಲ್ಲಿ ಮೋಹನ್‌ ತೊಡಗಿಸಿಕೊಳ್ಳದಿದ್ದರೂ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ತಮ್ಮ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು ಎನ್ನುತ್ತಾರೆ ಮೋಹನ್‌. “ಇತ್ತೀಚೆಗೆ ಕೆಲವು ಸೋಲುಗಳು ಮತ್ತು ಗ್ಯಾಪ್‌ನ ನಂತರ ಜನಪ್ರಿಯತೆ ಕಡಿಮೆಯಾಗಿತ್ತು. “ಬಿಗ್‌ ಬಾಸ್‌’ ಮನೆಗೆ ಹೋಗಿ ಬಂದಿದ್ದೇ ಬಂದಿದ್ದು, ಸ್ಕೂಲ್‌ ಮಕ್ಕಳು ಸಹ ಗುರುತಿಸುತ್ತಾರೆ. ಎಷ್ಟೋ ಮಕ್ಕಳು ಮನೆಗೆ ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದಾರೆ. ಇದುವರೆಗೂ ಚೆನ್ನಾಗಿ ಬರೀತೀರಿ, ಚೆನ್ನಾಗಿ ನಟನೆ ಮಾಡ್ತೀರಿ ಅಂತ ಎಷ್ಟೋ ಜನ ಕಾಂಪ್ಲಿಮೆಂಟ್‌ ಕೊಟ್ಟಿದ್ದಾರೆ. ಆದರೆ, ಅನಾಗರಿಗರ ಜೊತೆಗೆ ನಾಗರಿಕರ ತರಹ ಇದ್ದು ಬಂದಿದ್ದೀರಿ ಎಂಬ ದೊಡ್ಡ ಪ್ರಶಂಸೆ ಸಿಕ್ಕಿದೆ. “ಬಿಗ್‌ ಬಾಸ್‌’ ಮನೆಯಲ್ಲಿ ಇರುವುದು ಅಷ್ಟು ಸುಲಭವಲ್ಲ. ಮನೆಯವರ ಜೊತೆಗೇ ಒಂದಿಷ್ಟು ಸಮಯ ಕಳೆಯೋದು ಕಷ್ಟ. ಹಾಗಿರುವಾಗ ಅಪರಿಚಿತರ ಜೊತೆಗೆ ನೂರು ದಿನಗಳ ಕಾಲ ನಡೆಯೋದು ಎಷ್ಟು ಕಷ್ಟ ಯೋಚಿಸಿ. ಸಂಯಮ, ಎನರ್ಜಿ ಎಲ್ಲಾ ಪರೀಕ್ಷೆ ಆಗುತ್ತೆ ಅಲ್ಲಿ. ಅಂತಹ ಕಡೆ ಮರ್ಯಾದೆ ಹೆಚ್ಚಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಆ ಕೆಲಸ ಮಾಡಿದ್ದೀನಿ ಅಂತ ಖುಷಿ ನನಗೆ ಇದೆ’ ಎನ್ನುತ್ತಾರೆ ಮೋಹನ್‌.

ನೂರು ದಿನಗಳಲ್ಲಿ ಕಲಿಯೋಕಾಗುತ್ತಾ?
“ಬಿಗ್‌ ಬಾಸ್‌’ ಮನೆಯಿಂದ ಹೊರಬರುವವರೆಲ್ಲಾ, ಅಲ್ಲಿದ್ದಾಗ ಬಹಳ ಕಲಿತಿದ್ದಾಗಿ ಹೇಳುತ್ತಾರೆ. “ಬಿಗ್‌ ಬಾಸ್‌’ ಮನೆಯಿಂದ ಬಂದಿರುವ ಮೋಹನ್‌, ಅಲ್ಲಿದ್ದಾಗ ಏನು ಕಲಿತರು ಎಂದರೆ, “40 ವರ್ಷಗಳಲ್ಲಿ ಕಲಿಯೋಕೆ ಆಗದ್ದು, 100 ದಿನಗಳಲ್ಲಿ ಕಲಿಯೋಕೆ ಸಾಧ್ಯವಾ?’ ಎನ್ನುತ್ತಾರೆ.

“ಅಲ್ಲಿ ಕಲಿಯೋದು, ಗಿಲಿಯೋದು ಎಲ್ಲಾ ಸುಳ್ಳು. ಮ್ಯಾನೇಜ್‌ ಮಾಡೋದು ಗೊತ್ತಿದ್ದರೆ, ಅಲ್ಲಿ ಇದ್ದು ಬರಬಹುದು. ನಾನು ಕಾಲೇಜ್‌ ದಿನಗಳಿಂದ ವರ್ಕ್‌ಶಾಪ್‌ ಎಲ್ಲಾ ಮಾಡಿದ್ದರಿಂದ ಮ್ಯಾನೇಜ್‌ ಮಾಡುವುದು ಸುಲಭವಾಯ್ತು. ಮೇಲಾಗಿ ನನಗೆ ಇಗೋ ಇಲ್ಲ. ಹಾಗಾಗಿ ಗಲಾಟೆ ಆಗುವುದಕ್ಕೆ ಆಸ್ಪದ ಇಲ್ಲ. ಆದರೂ ಅಲ್ಲಲ್ಲಿ ಆಯ್ತು. ಏಕೆಂದರೆ, ಆ ತರಹದ ಕಾರ್ಯಕ್ರಮಗಳಿಗೆ ರಿಫ್ಟ್ ಬಹಳ ಮುಖ್ಯ. ನಾನು ಸಾಧ್ಯವಾದಷ್ಟು ಎಲ್ಲವನ್ನೂ ಮ್ಯಾನೇಜ್‌ ಮಾಡಿಕೊಂಡೇ ಬಂದೆ’ ಎನ್ನುತ್ತಾರೆ ಅವರು.

ಚೇತನ್‌; ಚಿತ್ರಗಳು: ಮನು 

Advertisement

Udayavani is now on Telegram. Click here to join our channel and stay updated with the latest news.

Next