Advertisement

ಬಾಂಬ್‌ ಪ್ರಕರಣ: ಬ್ಯಾಂಕ್‌ ಲಾಕರ್‌ನಲ್ಲಿ ಸೈನೆಡ್‌ ಪತ್ತೆ

12:13 AM Jan 26, 2020 | Team Udayavani |

ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ ಆರೋಪಿ ಆದಿತ್ಯ ರಾವ್‌ನ ಉಡುಪಿಯ ಕರ್ಣಾಟಕ ಬ್ಯಾಂಕ್‌ನ ಕುಂಜಿಬೆಟ್ಟು ಶಾಖೆಯ ಸೇಫ್ ಲಾಕರ್‌ನಲ್ಲಿ ಸೈನೆಡ್‌ ಪತ್ತೆಯಾಗಿದೆ.

Advertisement

ಪೊಲೀಸ್‌ ಕಸ್ಟಡಿಯಲ್ಲಿರುವ ಆದಿತ್ಯ ರಾವ್‌ನನ್ನು ಶನಿವಾರ ಮಂಗಳೂರು ಉತ್ತರ ಪೊಲೀಸ್‌ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ ಉಡುಪಿಗೆ ಕರೆ ತಂದಿದ್ದು, ಆರೋಪಿಯ ಹೆಸರಿನಲ್ಲಿ ಇದ್ದ ಸೇಫ್ ಲಾಕರ್‌ ಕೀ ತೆರೆದು ಪರಿಶೀಲನೆ ಮಾಡಿತು.

ಲಾಕರ್‌ನಲ್ಲಿ ಪೊಲೀಸರಿಗೆ ಕೆಲ ದಾಖಲೆಗಳು ಹಾಗೂ ಪ್ಯಾಕೇಟ್‌ ಒಂದು ದೊರಕಿದೆ. ಪ್ಯಾಕೇಟ್‌ನಲ್ಲಿ ಆರೋಪಿ ಎರಡು ಸೈನೆಡ್‌ ಇರಿಸಿರುವುದಾಗಿ ಮೂಲಗಳು ತಿಳಿಸಿವೆ. ಹೆಚ್ಚಿನ ಪರೀಕ್ಷೆಗಾಗಿ ಪ್ಯಾಕೇಟ್‌ನ್ನು ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಹಿಂದೆ ಬೆಂಗಳೂರು ವಿಮಾನ ನಿಲ್ದಾಣದ ಹುಸಿ ಬಾಂಬ್‌ ಕರೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಶಿಕ್ಷೆ ಅನುಭವಿಸಿ ಹೊರ ಬಂದ ಆರೋಪಿ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಸೈನೆಡ್‌ ತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಕೊನೇ ಕ್ಷಣದಲ್ಲಿ ಮನಸ್ಸು ಬದಲಾದ ಹಿನ್ನೆಲೆಯಲ್ಲಿ ಒಂದು ಚಿಕ್ಕ ಸ್ಟೀಲ್‌ ಬಾಕ್ಸ್‌ನಲ್ಲಿ ಸೈನೆಡ್‌ ಹಾಕಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next