Advertisement

ಅಂಜನಿ ಪುತ್ರದಲ್ಲಿ ಬಾಲಿವುಡ್‌ ವಿಲನ್ಸ್‌

06:21 PM Sep 17, 2017 | |

ಪುನೀತ್‌ರಾಜ್‌ಕುಮಾರ್‌ ಅಭಿನಯದ “ಅಂಜನಿ ಪುತ್ರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ ಅನ್ನೋದು ಇನ್ನೊಂದು ವಿಶೇಷ. ಅದರಲ್ಲೂ ಬಾಲಿವುಡ್‌ನ‌ ಖ್ಯಾತ ನಟರು ನಟಿಸುತ್ತಿದ್ದಾರೆ ಅನ್ನೋದು ಮತ್ತೂಂದು ವಿಶೇಷ. ಈಗಾಗಲೇ ಬಾಲಿವುಡ್‌ನ‌ ಮುಖೇಶ್‌ ತಿವಾರಿ ಅವರು ಈ ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಈಗ ಬಾಲಿವುಡ್‌ನ‌ ಮತ್ತೂಬ್ಬ ನಟ ಅಖೀಲೇಂದ್ರ ಮಿಶ್ರಾ ಕೂಡ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ “ಅಂಜನಿ ಪುತ್ರ’ ಚಿತ್ರತಂಡವನ್ನು ಸೇರಿಕೊಂಡಿರುವ ಅಖೀಲೇಂದ್ರ ಮಿಶ್ರಾ, ಪುನೀತ್‌ ಎದುರು ಅಬ್ಬರಿಸಲು ಸಜ್ಜಾಗಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ರವಿಶಂಕರ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ನಟಿ ರಮ್ಯಾಕೃಷ್ಣ ಅವರು ಸಹ ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಬಾಲಿವುಡ್‌ನ‌ ಅಖೀಲೇಂದ್ರ ಮಿಶ್ರಾ ಅವರಿಗೆ ಕನ್ನಡ ಸಿನಿಮಾ ಮೊದಲೇನಲ್ಲ.

ಈ ಹಿಂದೆ ಅವರು ಶ್ರೀಮುರಳಿ ಅಭಿನಯದ “ಸಿದ್ದು’ ಚಿತ್ರದಲ್ಲಿ ನಟಿಸಿದ್ದರು. ಬಾಲಿವುಡ್‌ನ‌ಲ್ಲಿ ಸೂಪರ್‌ಹಿಟ್‌ ಸಿನಿಮಾ ಎನಿಸಿಕೊಂಡ “ಲಗಾನ್‌’, “ಗಂಗಾಜಲ್‌’ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಖೀಲೇಂದ್ರ ಮಿಶ್ರಾ, ಬಹಳ ವರ್ಷಗಳ ಬಳಿಕ ಪುನಃ “ಅಂಜನಿ ಪುತ್ರ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರಿಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು, ಎರಡು ಫೈಟ್‌ ಹಾಗೂ ಕೆಲವು ದೃಶ್ಯಗಳಲ್ಲಿ ಅಖೀಲೇಂದ್ರ ಮಿಶ್ರಾ ಅಭಿನಯಿಸಲಿದ್ದಾರೆ.

ಮುಖೇಶ್‌ ತಿವಾರಿ ಕೂಡ ಕನ್ನಡದ “ಕೋಟಿಗೊಬ್ಬ 2′ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಈಗ “ಅಂಜನಿ ಪುತ್ರ’ ಸಿನಿಮಾದಲ್ಲಿ ಪುನೀತ್‌ ಎದುರು ನಿಲ್ಲುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ‘ಅಂಜನಿಪುತ್ರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲಾ, ಚಿಕ್ಕಣ್ಣ, ಗಿರಿ, ಧರ್ಮ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next