Advertisement

“ರುಸ್ತುಂ’ಮೇಲೆ ಬಿಟೌನ್ ಕಾತುರ

10:58 AM Jun 20, 2019 | Lakshmi GovindaRaj |

ಬಾಲಿವುಡ್‌ನ‌ ಕೆಲ ಸ್ಟಾರ್‌ಗಳು ಈಗ ಕನ್ನಡ ಚಿತ್ರವೊಂದನ್ನು ನೋಡುವ ಕಾತುರದಲ್ಲಿದ್ದಾರೆ…! ಹೀಗೆಂದಾಕ್ಷಣ, ಅಚ್ಚರಿ ಸಹಜ. ಅಷ್ಟೇ ಅಲ್ಲ, ಕಣ್ಣ ಮುಂದೆ ಹಾಗೊಂದು ಪ್ರಶ್ನೆಯೂ ಹಾದುಹೋಗುತ್ತೆ. ಅಷ್ಟಕ್ಕೂ ಬಾಲಿವುಡ್‌ನ‌ ಯಾವ ಸ್ಟಾರ್‌ ನಟರು, ಕನ್ನಡದ ಯಾವ ಸಿನಿಮಾ ನೋಡಲು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ “ರುಸ್ತುಂ’.

Advertisement

ಹೌದು, ಶಿವರಾಜಕುಮಾರ್‌ ಅಭಿನಯದ ಈ ಚಿತ್ರವನ್ನು ನೋಡುವುದಾಗಿ ಹೇಳಿರುವ ನಟರು ಬೇರಾರೂ ಅಲ್ಲ, ಬಾಲಿವುಡ್‌ನ‌ ಸಲ್ಮಾನ್‌ಖಾನ್‌, ಶಾರುಖ್‌ಖಾನ್‌, ಅಜಯ್‌ದೇವಗನ್‌, ಪ್ರಭುದೇವ, ತೆಲುಗು ನಟ ನಾಗಾರ್ಜುನ ಕೂಡ “ರುಸ್ತುಂ’ ಚಿತ್ರ ನೋಡುವುದಾಗಿ ಹೇಳಿದ್ದಾರೆ. ಅದನ್ನು ಸ್ಪಷ್ಟಪಡಿಸಿದ್ದು “ರುಸ್ತುಂ’ ನಿರ್ದೇಶಕ ರವಿವರ್ಮ.

ಇದುವರೆಗೆ ಸ್ಟಂಟ್‌ ಮಾಸ್ಟರ್‌ ಆಗಿ ಗುರುತಿಸಿಕೊಂಡಿದ್ದ ರವಿವರ್ಮ ಅವರು “ರುಸ್ತುಂ’ ಮೂಲಕ ನಿರ್ದೇಶಕರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಆಗಿರುವುದರಿಂದ ಸಿನಿಮಾವನ್ನು ತುಂಬ ಕಮರ್ಷಿಯಲ್‌ ಆಗಿ, ಮಾಸ್‌ ಅಂಶಗಳೊಂದಿಗೆ ಮಾಡಿದ್ದಾರೆ. ಇಷ್ಟಕ್ಕೂ ಸಲ್ಲು, ಶಾರುಖ್‌, ಅಜಯ್‌ ದೇವಗನ್‌ ಇವರೆಲ್ಲರೂ ಸಿನಿಮಾ ನೋಡ್ತೀನಿ ಎಂದು ಹೇಳ್ಳೋಕೆ ಕಾರಣ, ನಿರ್ದೇಶಕ ರವಿವರ್ಮ.

ಯಾಕೆಂದರೆ, ರವಿವರ್ಮ ಈಗಾಗಲೇ ಬಾಲಿವುಡ್‌ನ‌ಲ್ಲಿ ಕೆಲಸ ಮಾಡಿ ಬಂದವರು. ಅಲ್ಲಿನ ಸ್ಟಾರ್‌ಗಳಿಗೆ ಆ್ಯಕ್ಷನ್‌ ಹೇಳಿಕೊಟ್ಟವರು. ಹಾಗಾಗಿ ಅವರೊಂದಿಗೆ ಒಳ್ಳೆಯ ಗೆಳೆತನವಿದೆ. ಮೊದಲ ನಿರ್ದೇಶನ ಚಿತ್ರ ಎಂಬ ಕಾರಣಕ್ಕೆ, ಅವರಿಗೆ ಸಿನಿಮಾ ತೋರಿಸುವ ಉತ್ಸಾಹ ರವಿವರ್ಮ ಅವರದು. ಅದಕ್ಕೆ ಆ ನಟರು ಕೂಡ ನೋಡುವ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ.

ಜೂನ್‌ 28 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಆ ನಂತರ ಈ ಎಲ್ಲಾ ನಟರು ಯಾವಾಗ ಫ್ರೀ ಇರುತ್ತಾರೆ ಎಂಬುದನ್ನು ನೋಡಿ, ಮುಂಬೈನಲ್ಲೇ “ರುಸ್ತುಂ’ ಚಿತ್ರ ತೋರಿಸುವ ಯೋಚನೆ ರವಿವರ್ಮ ಅವರದು. ಅಂದಹಾಗೆ, ಈ ಚಿತ್ರದಲ್ಲಿ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೂಡ ನಟಿಸಿದ್ದಾರೆ.

Advertisement

ಇದೊಂದು ಪೊಲೀಸ್‌ ಸ್ಟೋರಿ ಚಿತ್ರವಾಗಿದ್ದು, ಪಕ್ಕಾ ರಗಡ್‌ ಆಗಿರುವ ಎಲಿಮೆಂಟ್ಸ್‌ ಇಲ್ಲಿವೆ. ಅದೇನೆ ಇರಲಿ, “ರುಸ್ತುಂ’ ಚಿತ್ರ ನೋಡೋಕೆ ಸಲ್ಲು, ಶಾರುಖ್‌, ಅಜಯ್‌ ದೇವಗನ್‌, ಪ್ರಭುದೇವ, ನಾಗಾರ್ಜುನ ಇತರರು ರೆಡಿಯಾಗಿದ್ದಾರೆ. ಇನ್ನು, ಸಿನಿಮಾ ತೋರಿಸೋಕೆ ಚಿತ್ರತಂಡ ತಯಾರಾಗಬೇಕಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next