Advertisement

ಬೋಗಸ್‌ ಹಕುಪತ್ರ: ಡೀಸಿಗೆ ದೂರು

03:12 PM Jun 17, 2023 | Team Udayavani |

ಮೇಲುಕೋಟೆ: ಪಾಂಡವಪುರ ತಹಶೀಲ್ದಾರ್‌ ಸಹಿಯನ್ನೇ ಬಳಸಿ ಸರ್ವೆ ನಂ.15ರಲ್ಲಿ ಆಶ್ರಯ ಯೋಜನೆಯ ಬೋಗಸ್‌ ಹಕ್ಕು ಪತ್ರ ತಯಾರಿಸಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತಸಂಘದ ಕಾರ್ಯಕರ್ತರು ಶಾಸಕ ದರ್ಶನ್‌ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿದರು.

Advertisement

ಶ್ರೀಯೋಗನರಸಿಂಹಸ್ವಾಮಿ ಬೆಟ್ಟದ ಸಮೀಪ ಆಶ್ರಯ ಯೋಜನೆಯಲ್ಲಿ ಸಣ್ಣಮ್ಮ ಎಂಬವರಿಗೆ 1991ರಲ್ಲಿ ಪಾಂಡವಪುರ ತಹಶೀಲ್ದಾರ್‌ ನೀಡಿದ್ದಾರೆನ್ನುವ 46×80 ಅಡಿ ನಿವೇಶನದ ಹಕ್ಕುಪತ್ರ ಇದೀಗ ಹೊರ ಬಂದಿದ್ದು ಭಾರೀ ಸಂಚಲನ ಉಂಟು ಮಾಡಿದೆ. ಆಶ್ರಯ ಯೋಜನೆಗೆ ಅತಿ ಹೆಚ್ಚೆಂದರೂ 30×40 ಅಳತೆ ನಿವೇಶನ ಮಾತ್ರ ನೀಡಲಾಗುತ್ತದೆ. ಆದರೆ ಬೆಟ್ಟದ ಪಕ್ಕದಲ್ಲೇ ನೀಡಿರುವ ಈ ಭಾರಿ ಪ್ರಮಾಣದ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನದ ಹಕ್ಕು ಪತ್ರ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸಹಕಾರ: ನಾಗರಿಕರ ನಿಯೋಗದೊಂದಿಗೆ ಶುಕ್ರವಾರ ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಅವರನ್ನು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಭೇಟಿ ಮಾಡಿ ಬೋಗಸ್‌ ಎನ್ನಲಾದ ಹಕ್ಕುಪತ್ರ ನೀಡಿ ತನಿಖೆಗೆ ಆಗ್ರಹ ಮಾಡಿದ್ದಾರೆ. ಪಾಂಡವಪುರ ತಹಶೀಲ್ದಾರ್‌ಗೆ ಬೋಗಸ್‌ ಹಕ್ಕುಪತ್ರದ ಬಗ್ಗೆ ತನಿಖೆ ಮಾಡುವಂತೆ ಜೂ.3ರಂದು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಎಸಗಿರುವವರಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಮೇಲುಕೋಟೆಯ ಖಾಲಿ ನಿವೇಶನಗಳಿಗೆ ಇದೇ ಮಾದರಿ ಬೋಗಸ್‌ ಹಕ್ಕುಪತ್ರ ತಯಾರಿಸಿ ಹಲವು ಮಂದಿ ಇಟ್ಟುಕೊಂಡಿರುವ ಸಾಧ್ಯತೆ ಇದೆ. ಇಂತಹ ಹಕ್ಕುಪತ್ರ ಪರಿಶೀಲಿಸದೆ ಖಾತೆ ಮಾಡಿಕೊಟ್ಟರೆ ಭೂಗಳ್ಳರಿಗೆ ಅನುಕೂಲವಾಗಲಿದ್ದು, ತಕ್ಷಣ ತನಿಖೆಗೆ ಆದೇಶಿಸಬೇಕು ಮೇಲುಕೋಟೆ ಅಭಿವೃದ್ಧಿ ಮಾಡಲು ಮುಂದಾಗಬೇಕಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಕಳೆದ ಒಂದು ತಿಂಗಳಿಂದ ಬಸವರಾಜು ಎಂಬವರು ಯೋಗಾನರಸಿಂಹಸ್ವಾಮಿ ಬೆಟ್ಟದ ಸಮೀಪ ಸರ್ವೆ ನಂಬರ್‌ 15ರಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ವೇಳೆ ನಾಗರೀಕರ ದೂರಿನ ಸಂಬಂಧ ತಹಶೀಲ್ದಾರ್‌ ಸೌಮ್ಯಾ ಸ್ಥಳ ಪರಿಶೀಲಿಸಿ ಕಟ್ಟಣ ನಿರ್ಮಾಣ ಸ್ಥಗಿತಗೊಳಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್‌ ಜಾರಿ ಮಾಡಿ, ಕಟ್ಟಡಕ್ಕೆ ಬೀಗ ಹಾಕಿಸಿದ್ದರು. ವಿವಾದ ಅಲ್ಲಿಗೇ ತಣ್ಣಗಾಗಿತ್ತು. ಇದೀಗ ಸಣ್ಣಮ್ಮ ಎಂಬವರು ಬೋಗಸ್‌ ಎನ್ನಲಾದ ಹಕ್ಕುಪತ್ರ ಮತ್ತು ಗ್ರಾಪಂನಿಂದ ಪಡೆದಿದ್ದೇನೆ ಎಂದಿರುವ ಕಟ್ಟಡ ನಿರ್ಮಾಣ ಪರವಾನಗಿ ಸಲ್ಲಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಮುಂದಿನ ವಿಚಾರಣೆಯವರೆಗೆ ತಹಶೀಲ್ದಾರ್‌ ನೋಟಿಸಿನಂತೆ ಕಾನೂನು ಕ್ರಮ ಜರುಗಿಸಬಾರದು ಎಂದು ಆದೇಶ ಮಾಡಿದೆ.

Advertisement

ತಹಶೀಲ್ದಾರ್‌ ಅಕ್ರಮ ಕಟ್ಟಡ ನಿರ್ಮಾಣ ಎಂದು ನೋಟಿಸ್‌ ನೀಡಿದ್ದೇ ಒಬ್ಬರಿಗಾದರೆ, ಕಟ್ಟಡ ನನಗೆ ಸೇರಿದ್ದು ಎಂದು ನ್ಯಾಯಾಲಯದ ಮೊರೆ ಹೋದವರೆ ಮತ್ತೂಬ್ಬರಾಗಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬಿಂಬಿಸಿದ ತಹಶೀಲ್ದಾರ್‌ ಗೊಂದಲವಿರುವ ಪ್ರಕರಣದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಕಟ್ಟಡಕ್ಕೆ ಹಾಕಿದ್ದ ಬೀಗದ ಕೀಗಳನ್ನು ಬಸವರಾಜುಗೆ ಹಸ್ತಾಂತರ ಮಾಡಿದ್ದರು. ಇದರಿಂದ ಮನೆ ಗೃಹಪ್ರವೇಶವೂ ನಡೆದು ಹೋಗಿರುವುದು ನಾಗರೀಕರನ್ನು ಮತ್ತಷ್ಟು ಕೆರಳಿಸಿದೆ.

ಹಕ್ಕು ಪತ್ರ, ಗ್ರಾಪಂ ಪರವಾನಗಿಯೂ ಬೋಗಸ್‌: ಸಣ್ಣಮ್ಮ ಹೈಕೋರ್ಟ್‌ಗೆ ಸಲ್ಲಿಸಿರುವ ಹಕ್ಕುಪತ್ರವೂ ಬೋಗಸ್‌ ಮತ್ತು ಗ್ರಾಪಂ ಪರವಾನಗಿಯೂ ಬೋಗಸ್‌ ಎಂದಿರುವ ರೈತಸಂಘದ ಉಪಾಧ್ಯಕ್ಷ ಈಶಮುರಳಿ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಬೆನಕ ಸುಬ್ಬಣ್ಣ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಬೋಗಸ್‌ ಹಕ್ಕುಪತ್ರದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾವೂ ನ್ಯಾಯಾಲಯದಲ್ಲಿ ಪ್ರತಿವಾದಿಗಳಾಗುತ್ತೇವೆ ಎಂದಿದ್ದು, ಸಣ್ಣಮ್ಮಗೆ ನೀಡಲಾದ ಹಕ್ಕುಪತ್ರದಲ್ಲಿ ನಿವೇಶನ ಸಂಖ್ಯೆಯೇ ಇಲ್ಲ. ಆಶ್ರಯ ಯೋಜನೆಗೆ ನಿಗದಿಪಡಿಸಿದ ಅಳತೆಗಿಂತಲೂ ಎರಡು ಪಟ್ಟು ಹೆಚ್ಚಿನ ನಿವೇಶನ ಅಳತೆ ದಾಖಲಾಗಿದೆ. ಹಕ್ಕುಪತ್ರದ ನಂತರ ಗ್ರಾಪಂನಲ್ಲಿ ಖಾತೆಯೂ ಆಗಿಲ್ಲ. ಪಂಚಾಯ್ತಿಯಿಂದ ಮನೆ ನಿರ್ಮಿಸಲು ಅನುಮತಿಯೇ ನೀಡಿಲ್ಲ. ದೇವಾಲಯಕ್ಕೆ ಸೇರಿದ ಜಮೀನು ಉಳಿಸಲು ನಾಗರಿಕರೂ ದನಿ ಎತ್ತಬೇಕು ಎಂದಿದ್ದಾರೆ.

ಸಣ್ಣಮ್ಮರ ಹಕ್ಕುಪತ್ರದ ಸಂಬಂಧ ಮೇಲುಕೋಟೆ ಗ್ರಾಪಂನಲ್ಲಿ ಯಾವುದೇ ಖಾತೆ ಆಗಿಲ್ಲ. ಮನೆ ನಿರ್ಮಿಸಲು ಪಂಚಾಯಿತಿ ಪರವಾನಗಿಯನ್ನೂ ನೀಡಿಲ್ಲ. ಹಲವರು ನನ್ನ ಸಹಿಯನ್ನೂ ನಕಲಿ ಮಾಡಿರುವುದು ಗಮನಕ್ಕೆ ಬಂದಿದ್ದು, ನಾನೂ ಠಾಣೆಗೆ ದೂರು ನೀಡುತ್ತೇನೆ. – ರಾಜೇಶ್ವರ್‌, ಪಿಡಿಒ, ಗ್ರಾಪಂ ಮೇಲುಕೋಟೆ

Advertisement

Udayavani is now on Telegram. Click here to join our channel and stay updated with the latest news.

Next