Advertisement

ಪ್ರಜಾತಂತ್ರಕ್ಕೆ ಕಳಂಕ

12:49 AM Apr 10, 2019 | mahesh |

ಚುನಾವಣೆ ಬಂದಾಗ ರಾಜಕೀಯ ನಾಯಕರು ತಮ್ಮ ಪಕ್ಷದ ಬಗೆಗಿನ ಅಸಮಾಧಾನವನ್ನು ಮುಂದಿಟ್ಟು ಇನ್ನೊಂದು, ಅದರಲ್ಲೂ ವಿರೋಧಿ ಪಾಳಯಕ್ಕೆ ಜಿಗಿಯುವುದು ಮಾಮೂಲು. ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ಬಂಡಾಯ ನಾಯಕರು ತಮ್ಮ ಪಕ್ಷಕ್ಕೆ ಗುಡ್‌ಬೈ ಹೇಳಿ ಇನ್ನೊಂದು ಪಕ್ಷವನ್ನು ಅಪ್ಪಿಕೊಳ್ಳುವುದು ಸರ್ವೇಸಾಮಾನ್ಯ ಬೆಳವಣಿಗೆಯಾಗಿದೆ. ಈ ಪಕ್ಷಾಂತರ ರಾಜಕಾರಣ ಆಯಾಯ ನಾಯಕರು ಮತ್ತವರ ಬೆಂಬಲಿಗರ ಪಾಲಿಗೆ ಆಶಾವಾದದ ವಿದ್ಯಮಾನದಂತೆ ಕಂಡರೂ ಪ್ರಜಾಪ್ರಭುತ್ವದ ಮೂಲ ಸಾರಕ್ಕೆ ಕೊಡಲಿಯೇಟು ನೀಡುತ್ತಲೇ ಬಂದಿದೆ. ಪಕ್ಷಾಂತರದ ಸಂದರ್ಭದಲ್ಲಿ ಇವರು ನೀಡುವ ಸ್ಪಷ್ಟನೆಗಳು ಮೇಲ್ನೋಟಕ್ಕೆ ನೈಜ ಎಂಬಂತೆ ಕಂಡುಬಂದರೂ ವಾಸ್ತವವಾಗಿ ಬಹುತೇಕ ಪಕ್ಷಾಂತರಗಳು ನಾಯಕರ ಸ್ವಾರ್ಥ, ಅಧಿಕಾರ ಲಾಲಸೆಯಿಂದ ಕೂಡಿದ್ದಾಗಿರುತ್ತವೆ.

Advertisement

ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಪಕ್ಷಾಂತರದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ನಾಯಕರ ಕಪ್ಪೆ ಜಿಗಿತ ಕೇವಲ ರಾಷ್ಟ್ರಮಟ್ಟಕ್ಕೆ ಸೀಮಿತವಾಗಿರದೇ ರಾಜ್ಯಗಳಲ್ಲೂ ಬಿರುಸಿನಿಂದ ಸಾಗಿದೆ. ಕಳೆದೊಂದು ದಶಕದ ಅವಧಿಯನ್ನು ಪರಿಗಣಿಸಿದ್ದೇ ಆದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ನಾಯಕರನ್ನು ಬಿಜೆಪಿ ಇತರ ಪಕ್ಷಗಳಿಂದ ಅದರಲ್ಲೂ ಕಾಂಗ್ರೆಸ್‌ನಿಂದ ತನ್ನತ್ತ ಸೆಳೆದುಕೊಂಡಿದೆ. ಹಾಗೆಂದ ಮಾತ್ರಕ್ಕೆ ನಾಯಕರ “ಪಕ್ಷಾಂತರ’ ಕಸರತ್ತಿಗೆ ನಾಂದಿ ಹಾಡಿದ್ದು ಬಿಜೆಪಿಯಂತೂ ಅಲ್ಲ. ಇದಕ್ಕೆ ಐದಾರು ದಶಕಗಳ ಇತಿಹಾಸವಿದು,ª ಬಹುತೇಕ ಪ್ರಕರಣಗಳಲ್ಲಿ ನಾಯಕರ ಅಧಿಕಾರ ಲಾಲಸೆಯೇ ಮುಖ್ಯ ಕಾರಣವಾಗಿದೆ. ಯಾವ ಪಕ್ಷ ಅಧಿಕಾರಕ್ಕೇರಬಹುದು ಎಂಬ ನಿರೀಕ್ಷೆ ಇರುತ್ತದೆಯೋ ಆ ಪಕ್ಷಕ್ಕೆ ಸಹಜವಾಗಿ ಪಕ್ಷಾಂತರ ತುಸು ಜೋರಾಗಿಯೇ ಇರುತ್ತದೆ. ಮುಳುಗುತ್ತಿರುವ ದೋಣಿಯನ್ನೇರಲು ಯಾರೂ ಇಷ್ಟ ಪಡುವುದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವವರ ಸಂಖ್ಯೆಯೇ ಜಾಸ್ತಿಯಾಗಿರುವಾಗ ಈ ಬೆಳವಣಿಗೆ ಸಹಜವೂ ಕೂಡಾ.

ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ಅಧಿಕಾರರೂಢ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಹೈಕಮಾಂಡ್‌ ಮತ್ತು ನಾಯಕರ ವಿರುದ್ಧ ಅಸಮಾಧಾನಗೊಂಡು ಬಹಿರಂಗವಾಗಿ ಹೇಳಿಕೆ ನೀಡಲಾರಂಭಿಸಿದಾಗ ಈ ಮುಖಂಡರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ವಿಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಇದೇ ರೀತಿ ವಿರೋಧಿ ಪಾಳಯದಲ್ಲಿ ನಾಯಕರ ನಡುವೆ ಕಚ್ಚಾಟ, ಅಸಮಾಧಾನಗಳು ಭುಗಿಲೇಳಲಾರಂಭಿಸಿದರೆ ಆಡಳಿತಾರೂಢ ಪಕ್ಷ ವಿಪಕ್ಷಗಳ ಅತೃಪ್ತರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಗಳನ್ನು ಆರಂಭಿಸುತ್ತವೆ. ಈ ಎರಡೂ ಸಂದರ್ಭಗಳಲ್ಲಿ ಪಕ್ಷಾಂತರಗೊಂಡ ಮುಖಂಡರು ಸೇರ್ಪಡೆಗೊಂಡ ಪಕ್ಷದ ನಾಯಕರು ಬೆಂಬಲಕ್ಕೆ ನಿಲ್ಲುತ್ತಾರಾದರೆ ಆ ಮುಖಂಡರ ಮಾತೃಪಕ್ಷದ ನಾಯಕರು ಅವರ ವಿರುದ್ಧ ಮುಗಿಬೀಳುತ್ತಾರೆ. ಆದರೆ ಈ ಪಕ್ಷಾಂತರ ಪ್ರಕ್ರಿಯೆಯ ಸಂದರ್ಭದಲ್ಲಿ ಎಲ್ಲೂ ಪಕ್ಷದ ಸಿದ್ಧಾಂತ, ನೈತಿಕತೆಯ ಪ್ರಶ್ನೆಗಳ ಬಗೆಗೆ ಚರ್ಚೆಗಳು ನಡೆಯುವುದೇ ಇಲ್ಲ. ತಮ್ಮ ವಿರೋಧಿಗಳ ಸದ್ದಡಗಿಸಲು ಒಂದು ಪಕ್ಷ ಅಥವಾ ಅದರ ನಾಯಕರು ಇವೆಲ್ಲವುಗಳಿಗೂ ತಿಲಾಂಜಲಿ ನೀಡಲು ಸಿದ್ಧವಾಗಿರುತ್ತಾರೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಬಹುಮತಕ್ಕೆ ಪ್ರಾಶಸ್ತ್ಯವಿರುವುದರಿಂದ ಸಿದ್ಧಾಂತ, ನೈತಿಕತೆ, ವಿಶ್ವಾಸಾರ್ಹತೆಗಳೆಲ್ಲವೂ ನಗಣ್ಯ.

ಚುನಾವಣ ಪೂರ್ವದಲ್ಲಿ ನಡೆಯುವ ಪಕ್ಷಾಂತರಗಳನ್ನು ಒಂದು ನೆಲೆಯಲ್ಲಿ ಸಮರ್ಥಿಸಿಕೊಳ್ಳಬಹುದಾದರೂ ಚುನಾವಣ ಫ‌ಲಿತಾಂಶ ಪ್ರಕಟವಾದ ಬಳಿಕ ನಡೆಯುವ ಪಕ್ಷಾಂತರಗಳನ್ನು ಯಾವುದೇ ದೃಷ್ಟಿಯಿಂದಲೂ ಸಮರ್ಥಿಸಿಕೊಳ್ಳಲಾಗದು. ಇಂಥ ಪಕ್ಷಾಂತರಕ್ಕೆ ಕಡಿವಾಣ ಹಾಕಲು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆಯಲ್ಲದೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಹಲವಾರು ಪ್ರಕರಣಗಳಲ್ಲಿ ಇಂಥ ಪಕ್ಷಾಂತರವನ್ನು ಅಸಿಂಧು ಎಂದು ಘೋಷಿಸಿವೆ. ಆದರೂ ನಮ್ಮ ನಾಯಕರು ಬಹುಮತದ ಸಂಖ್ಯೆಯನ್ನು ಕ್ರೋಡೀಕರಿಸಿಕೊಳ್ಳುವ ಉದ್ದೇಶದಿಂದಲೇ ಕಾನೂನು, ಕೋರ್ಟ್‌ ತೀರ್ಪುಗಳಲ್ಲಿನ ಕೆಲವೊಂದು ಸೂಕ್ಷ್ಮಾತಿಸೂಕ್ಷ್ಮ ಲೋಪಗಳನ್ನು ಮುಂದೊಡ್ಡಿ “ರಂಗೋಲಿ’ಯಡಿಗೇ ನುಸುಳುವ ಕಸರತ್ತನ್ನು ನಡೆಸುತ್ತಲೇ ಬಂದಿದ್ದಾರೆ.

ಯಾವೊಂದೂ ತತ್ವ, ಸಿದ್ಧಾಂತ, ನಿಷ್ಠೆ, ಬದ್ಧತೆಗಳಿಲ್ಲದ ಈ ಪಕ್ಷಾಂತರಿ ನಾಯಕರ ಮೇಲೆ ವಿಶ್ವಾಸ ಇರಿಸಿಕೊಳ್ಳುವುದಾದರೂ ಹೇಗೆ? ಅನ್ಯ ಪಕ್ಷದಿಂದ ಬಂದ ನಾಯಕರಿಗೆ ಯಾವುದೇ ಆ ಪಕ್ಷ ತತ್‌ಕ್ಷಣ ಸದಸ್ಯತ್ವವನ್ನು ನೀಡುವ ಮೂಲಕ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆ ಮತ್ತು ಬದ್ಧತೆಯಿಂದ ಕೆಲಸ ಮಾಡಿಕೊಂಡು ಬಂದ ಕಾರ್ಯಕರ್ತರು, ಸ್ಥಳೀಯ ಮುಖಂಡರನ್ನೂ ಮರೆತು ಬಿಡುತ್ತದೆ. ಇವೆಲ್ಲವನ್ನೂ ಪರಿಗಣಿಸಿದಾಗ ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಬಲು ದೊಡ್ಡ ಕಳಂಕ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದ ಮಾತ್ರಕ್ಕೆ ಪ್ರಜಾಪ್ರಭುತ್ವದಲ್ಲಿ ಪಕ್ಷಾಂತರಕ್ಕೆ ನಿಷೇಧ ಹೇರಲಾಗದು. ಇದಕ್ಕೊಂದು ನಿರ್ದಿಷ್ಟ ಮಾನದಂಡವನ್ನು ರೂಪಿಸಿದ್ದೇ ಆದಲ್ಲಿ ಪಕ್ಷಾಂತರಿಗಳ ಸಂಖ್ಯೆಗೆ ಕಡಿವಾಣ ಹಾಕುವ ಜತೆಯಲ್ಲಿ ಪ್ರಜಾಪ್ರಭುತ್ವದ ಮೂಲೋದ್ದೇಶವನ್ನು ಎತ್ತಿಹಿಡಿದಂತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next