Advertisement

‌ಫಲಿತಾಂಶದಿಂದ ಕಾಂಗ್ರೆಸ್‌ಗೆ ಮರ್ಮಾಘಾತ ­

02:14 PM May 23, 2022 | Team Udayavani |

ದಾವಣಗೆರೆ: ಕಾಂಗ್ರೆಸ್‌ನ ಘಟಾನುಘಟಿಗಳ ಅಬ್ಬರದ ಪ್ರಚಾರ, ಅಲ್ಪಸಂಖ್ಯಾತ ಸಮುದಾಯದ ಮತಗಳ ವಿಭಜನೆ, ಹೊಸಬರಿಗೆ ಅವಕಾಶ ನೀಡಬಹುದು ಎಂಬ ರಾಜಕೀಯದ ಲೆಕ್ಕಾಚಾರ, ತೀವ್ರ ಪೈಪೋಟಿಯ ನಡುವೆಯೂ ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ ಉಪಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ಶಕ್ತಿ ವೃದ್ಧಿಸಿಕೊಂಡಿದೆ.

Advertisement

2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಜೆ.ಎನ್. ಶ್ರೀನಿವಾಸ್‌ ದಂಪತಿ ತಮ್ಮನ್ನು ಸರಿಯಾಗಿ ಕಾಣುತ್ತಿಲ್ಲ ಎಂಬ ಬೇಗುದಿಯಿಂದ ಕೈ ಬಿಟ್ಟು ಕಮಲ ಪಾಳೆಯ ಸೇರಿದ ಕೆಲವೇ ದಿನಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪೈಪೋಟಿಯ ನಡುವೆಯೂ ನಿರೀಕ್ಷೆಯಂತೆ ಗೆಲ್ಲುವ ಮೂಲಕ ಕಾಂಗ್ರೆಸ್‌ ಗೆ ಮರ್ಮಾಘಾತ ಉಂಟು ಮಾಡಿದರೆ, ಬಿಜೆಪಿಯ ಕಮಲ ಉತ್ತರದಲ್ಲಿ ಇನ್ನೂ ಆಳವಾಗಿ ಬೇರೂರುವಂತೆ ಮಾಡಿದ್ದಾರೆ.

ಉಪ ಚುನಾವಣೆ ಘೋಷಣೆ ಆದ ನಂತರದ ಭಾರೀ ರಾಜಕೀಯ ಲೆಕ್ಕಾಚಾರ ನಡೆದವು. ಕಾಂಗ್ರೆಸ್‌ ಅಚ್ಚರಿ ಎನ್ನುವಂತೆ 37ನೇ ವಾರ್ಡ್‌ನಲ್ಲಿ ಶಿಕ್ಷಕಿಯಾಗಿರುವ ರೇಖಾರಾಣಿ ಅಖಾಡಕ್ಕಿಳಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಿತು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಶಾಸಕ ಡಾ| ಶಾಮನೂರು ಶಿವಶಂಕರಪ್ಪ, ಡಾ| ಪ್ರಭಾ ಮಲ್ಲಿಕಾರ್ಜುನ್‌ ಬಿರುಸಿನ ಪ್ರಚಾರವನ್ನೂ ನಡೆಸಿದರು. ಬಿಜೆಪಿಯ ಈ ವಾರ್ಡ್‌ ಕಳೆದುಕೊಳ್ಳಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬಂದವು. ಆದರೂ ಅಂತಿಮವಾಗಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ವಾರ್ಡ್‌ ಗಳಿಸಿಕೊಂಡಿತು. ಎಸ್‌. ಶ್ವೇತಾ 793 ಮತಗಳ ಭರ್ಜರಿ ಜಯ ಸಾಧಿಸಿರುವುದು ಮುಂದಿನ ಚುನಾವಣಾ ಲೆಕ್ಕಾಚಾರಕ್ಕೆ ಬಿಜೆಪಿಗೆ ಭಾರೀ ಬೂಸ್ಟ್‌ ನೀಡಿದೆ.

ತೀವ್ರ ಕುತೂಹಲ ಕೆರಳಿಸಿದ್ದ 28ನೇ ವಾರ್ಡ್‌ನಲ್ಲಿ ಬಿಜೆಪಿಯ ಜೆ.ಎನ್. ಶ್ರೀನಿವಾಸ್‌ ಅವರನ್ನು ಸೋಲಿಸಲೇಬೇಕು ಎಂದು ಪಕ್ಕದ ವಾರ್ಡ್‌ನ ಹುಲ್ಮನಿ ಗಣೇಶ್‌ ಅವರನ್ನ ಕಣಕ್ಕಿಳಿಸಲಾಯಿತು. ಜೆಡಿಎಸ್‌ ಅಭ್ಯರ್ಥಿಯನ್ನು ಕಾಂಗ್ರೆಸ್‌ ಗೆ ಸೇರಿಸಿಕೊಳ್ಳಲಾಯಿತು. ಸ್ವತಃ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಒಂದು ಕಾಲದ ತಮ್ಮ ಶಿಷ್ಯನ ಸೋಲಿಸಲು ಪ್ರಚಾರವನ್ನೂ ನಡೆಸಿದರು. ಅಲ್ಪಸಂಖ್ಯಾತ ಸಮುದಾಯದ ಮತಗಳು ಬಿಜೆಪಿಗೆ ದಕ್ಕಲಾರವು, ವಿಭಜನೆ ಆಗಿ ಕಾಂಗ್ರೆಸ್‌ ಗೆಲ್ಲಲಿದೆ ಎಂಬ ಲೆಕ್ಕಾಚಾರವೂ ಇತ್ತು. ಆದರೆ ಬಿಜೆಪಿಯ ನಡೆಸಿದ ಪ್ರಚಾರ, ಹೆಣೆದ ಗೆಲುವಿನ ತಂತ್ರ ಮತ್ತು ಜೆ.ಎನ್. ಶ್ರೀನಿವಾಸ್‌ ಹೊಂದಿರುವ ಬಲಾಡ್ಯ ಮತ ಬ್ಯಾಂಕ್‌ ಕಮಲ ಅರಳಲು ಸಹಕಾರಿಯಾಯಿತು.

ಈಗ ಸಮಬಲ

Advertisement

ಒಟ್ಟಾರೆ 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಾಲ್ವರು ಪಕ್ಷೇತರರು, ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರ ಬೆಂಬಲದೊಂದಿಗೆ ರಾಜಕೀಯ ಚಾಣಾಕ್ಷತೆಯ ಮೂಲಕ ಅಧಿಕಾರ ನಡೆಸುತ್ತಿದೆ. ಎರಡು ವಾರ್ಡ್‌ಗಳಲ್ಲಿನ ಗೆಲುವು ಬಿಜೆಪಿಗೆ ಕಾಂಗ್ರೆಸ್‌ನೊಂದಿಗೆ ಸಮಬಲ ಸಾಧಿಸಲು ನೆರವಾಗಿದೆ. ಈಗ ಪಾಲಿಕೆಯಲ್ಲಿ ಬಿಜೆಪಿ- ಕಾಂಗ್ರೆಸ್‌ ತಲಾ 20 ಸದಸ್ಯರನ್ನು ಹೊಂದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ವಾರ್ಡ್‌ ಗೆದ್ದಿದ್ದರೂ ಕಾಂಗ್ರೆಸ್‌ ಮೇಯರ್‌ ಗಾದಿಗೇರುವ ನಿಟ್ಟಿನಲ್ಲಿ ದಿಟ್ಟ ಪ್ರಯತ್ನ ನಡೆಸಲಿಲ್ಲ. ಪ್ರಮುಖವಾಗಿ ತನ್ನದೇ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ. ಈಗ ಎರಡು ವಾರ್ಡ್‌ ಉಪ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್‌ ಬಲ 23ರಿಂದ 20ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಇನ್ನೂ ಇಬ್ಬರು ಕಾಂಗ್ರೆಸ್‌ಗೆ ಕೈ ಕೊಡಬಹುದು ಎಂಬ ಮಾತು ಕೇಳಿ ಬರುತ್ತಿವೆ. ಅದು ನಿಜವಾದಲ್ಲಿ ಕಾಂಗ್ರೆಸ್‌ ಸ್ಥಿತಿ ಇನ್ನೂ ಶೋಚನೀಯವಾಗಲಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಯೇ ತೀರುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಗೆ ಎರಡು ವಾರ್ಡ್‌ಗಳ ಉಪ ಚುನಾವಣೆಯಲ್ಲಿನ ಗೆಲುವು ಟಾನಿಕ್‌. ಇಬ್ಬರು ಸದಸ್ಯರು ತಂದುಕೊಡುವ ಒಂದೊಂದು ಮತ ಗೆಲುವಿನ ಮೆಟ್ಟಿಲುಗಳಾಗಲಿವೆ. ಕಾಂಗ್ರೆಸ್‌ ಈಗಾಲಾದರೂ ಮೈಚಳಿ ಬಿಟ್ಟು ಸನ್ನದ್ಧವಾದರೆ ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಆಗಬಹುದು. ಇಲ್ಲದೆ ಹೋದಲ್ಲಿ ಕಮಲ ಪಾಳೆಯದ ಗೆಲುವಿನ ನಾಗಾಲೋಟಕ್ಕೆ ತಡೆ ಇರಲಾರದು ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿವೆ.

-ರಾ. ರವಿಬಾಬು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next