Advertisement

150ಕ್ಕಿಂತ ಅಧಿಕ ಸ್ಥಾನಗಳಿಸಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ

03:50 AM Jul 16, 2017 | Team Udayavani |

ವಿಟ್ಲ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ 3 ವರ್ಷಗಳಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಿದೆ. ದೇಶದಲ್ಲಿ ಈಗಾಗಲೇ 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಅಧಿಕಾರ ನೀಡಬೇಕೆಂದು ಜನತೆ ತೀರ್ಮಾನಿಸಿದೆ. 

Advertisement

ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯಲ್ಲಿ 150ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಕುಡ್ತಮುಗೇರು ವಿಜಯಶ್ರೀ  ಕಲ್ಯಾಣ ಮಂಟಪದಲ್ಲಿ ನಡೆದ ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಹಿರಿಯ ನಾಯಕರ ಸಣ್ಣಪುಟ್ಟ ವಿರಸಗಳ ಕಾರಣದಿಂದ ಬಿಜೆಪಿ ಅಧಿಕಾರ ಕಳೆದುಕೊಂಡಿದೆಯೇ ಹೊರತು ಉತ್ತಮ ಅಭಿವೃದ್ಧಿ ಕಾರ್ಯ ಮಾಡಲಿಲ್ಲವೆಂದಲ್ಲ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಬೇಕಾಯಿತು.  ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಜನೀತಿಯನ್ನು ಜನರ ಪರಿವರ್ತನೆಗಾಗಿ ಬಳಸಿದರು. ಸಾಮಾಜಿಕ ಜೀವನದಲ್ಲಿ ವ್ಯಕ್ತಿಗತ ಭದ್ರತೆ ದೊರಕಿತು. ಕಳೆದ 7 ದಶಕಗಳಲ್ಲಿ ಇದ್ದ ಒಡೆದು ಆಳುವ ನೀತಿ, ಕೌಟುಂಬಿಕ ರಾಜಕಾರಣ ಅಂತ್ಯಗೊಳಿಸಿದ ಬಿಜೆಪಿ ಸರಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯವನ್ನು ತಲುಪಿಸುವ ಸಾಧನೆ ಮಾಡಿದೆ ಎಂದರು.

ನಾವಿದ್ದೇವೆ
ಬಂಟ್ವಾಳದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ಭಯಭೀತರಾಗುವ ಆವಶ್ಯಕತೆಯಿಲ್ಲ. ಅವರ ಜತೆ ನಾವಿದ್ದೇವೆ ಅನ್ನುವುದಕ್ಕಾಗಿಯೇ ನಾನು ಎರಡು ದಿನಗಳ ಕಾಲ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ಸುತ್ತಾಡುತ್ತಿದ್ದೇನೆ. ಸಚಿವ ರಮಾನಾಥ ರೈ ಅವರಿಂದಾಗಿ ಜಿಲ್ಲೆಯಲ್ಲಿ ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಅನ್ಯಾಯಕ್ಕೊಳಗಾಗುತ್ತಿದ್ದರು ಎಂದು ಸದಾನಂದ ಗೌಡ  ಆರೋಪಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು  ಅವರು ಮಾತನಾಡಿ,  ಪಂಡಿತ್‌ ದೀನದಯಾಳ್‌ ಅವರು ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಭಾವನೆಯನ್ನು ಕಾರ್ಯಕರ್ತರಲ್ಲಿ ಮೂಡಿಸಿ, ಸಂತನಂತೆ ಮಾರ್ಗದರ್ಶನ ಮಾಡಿದರು. ಅವರ ಜನ್ಮಶತಾಬ್ದ ನೆನಪಿಗಾಗಿ ಬಿಜೆಪಿ ಕಾರ್ಯಕರ್ತರು 15 ದಿನಗಳ ಕಾಲ ಮನೆ ಬಿಟ್ಟು ಬೇರೆ ಗ್ರಾಮಗಳಲ್ಲಿ ಮನೆ  ಮನೆಗೆ ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಯನ್ನು ತಿಳಿಸುವ ಕೆಲಸ ಮಾಡಬೇಕು. ಸ್ವಾತಂತ್ರಾÂ ಅನಂತರ ಈಗಿನ ಬಿಜೆಪಿ ಅಧಿಕಾರ ಕಾಲದಲ್ಲಿ ಅತ್ಯಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ. 12 ದಿನಕ್ಕೊಂದು ಯೋಜನೆ ಅನುಷ್ಠಾನಕ್ಕೆ ಬಂದಿದೆ. ಕತ್ತಲಲ್ಲಿದ್ದ 15 ಸಾವಿರ ಗ್ರಾಮಗಳು ವಿದ್ಯುದೀಕರಣಗೊಂಡಿವೆ. 12 ಕೋಟಿ ಶೌಚಾಲಯ ನಿರ್ಮಾಣಗೊಂಡಿವೆ. 11 ಕೋಟಿ ಮಂದಿಗೆ ಗ್ಯಾಸ್‌ ಸೌಲಭ್ಯ ದೊರೆತಿದೆ. ದ.ಕ.ಜಿಲ್ಲೆಯ 51 ಸಾವಿರ ಮಂದಿಗೆ ಮುದ್ರಾ ಬ್ಯಾಂಕ್‌ ಮೂಲಕ 800 ಕೋಟಿ ರೂ.ಗಳ ಸಾಲ ಒದಗಿಸಲಾಗಿದೆ. ದ.ಕ ಜಿಲ್ಲೆ ರಸ್ತೆ ಅಭಿವೃದ್ಧಿಗೆ ಈಗಾಗಲೇ 15 ಸಾವಿರ ಕೋ. ರೂ. ಕೇಂದ್ರ ಒದಗಿಸಿದ್ದು, ಮುಂದಿನ ದಿನಗಳಲ್ಲಿ 1.18 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮಂಗಳೂರು-ಬೆಂಗಳೂರು ಸೂಪರ್‌ ಎಕ್ಸ್‌ಪ್ರೆಸ್‌ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದರು.

Advertisement

ಹುಲಿಯನ್ನು ಕಾಡಿಗೆ ಕಳುಹಿಸಿಕೊಡಿ 
ನಳಿನ್‌ ಅವರು ಸಚಿವ ರಮಾನಾಥ ರೈ ಅವರನ್ನು ಉದ್ದೇಶಿಸಿ, ಮಾತನಾಡಿ ರೈ ಅವರು ಹುಲಿಯಂತೆ. ಈ ಹುಲಿಗೆ ವಯಸ್ಸಾಗಿದೆ. ಅದನ್ನು ಕಾಡಿಗೆ ಕಳುಹಿಸಿಕೊಡಿ. ಬಿಜೆಪಿ ಆಡಳಿತದಲ್ಲಿ ಜಿಲ್ಲೆಯಲ್ಲಿ ಕೋಮು ಗಲಭೆಗಲಾಗಿಲ್ಲ. ರೈ ಅವರು ಸಚಿವರಾಗಿದ್ದಾಗ ಮಾತ್ರ ಕೋಮುಸಂಘರ್ಷಗಳಾಗಿವೆ ಎಂದು ಆರೋಪಿಸಿದರು.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಉದಯ ಕುಮಾರ್‌ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಜಿಲ್ಲೆ ಬಿಜೆಪಿ ವಕ್ತಾರ ಜಿತೇಂದ್ರ ಎಸ್‌.ಕೊಟ್ಟಾರಿ, ತಾ.ಪಂ.ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಜಿಲ್ಲಾ ಬಿಜೆಪಿ ಪ.ಜಾ./ಪ.ಪಂ.ಮೋರ್ಚಾ ಅಧ್ಯಕ್ಷ ದಿನೇಶ್‌ ಅಮೂrರು, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಮಹಮ್ಮದ್‌ ಮುಸ್ತಫಾ, ಜಿಲ್ಲೆ ಬಿಜೆಪಿ ಹಿಂದುಳಿದ ವರ್ಗದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕೊಳ್ನಾಡು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು. ಇತ್ತೀಚೆಗೆ ಹತ್ಯೆಗೊಳಗಾದ ಶರತ್‌ ಮಡಿವಾಳ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.  ನಿವೃತ್ತ ಸೈನಿಕರಿಗೆ ಹಾಗೂ ಗ್ರಾ.ಪಂ. ಅಧ್ಯಕ್ಷರುಗಳನ್ನು ಗೌರವಿಸಲಾಯಿತು. 

ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವದಾಸ ಶೆಟ್ಟಿ ಬಂಟ್ವಾಳ ಸ್ವಾಗತಿಸಿ, ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರ್ವಹಿಸಿದರು. ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು.

ರಮಾನಾಥ ರೈ ಬಂಟ್ವಾಳ ಬಿಟ್ಟು ಕದಲಲಿಲ್ಲ 
ಸಚಿವ ರೈ ಅವರು ಆರೇಳು ಬಾರಿ ಬಂಟ್ವಾಳದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಒಂದು ಬಾರಿ ಬಿಜೆಪಿ ಅಭ್ಯರ್ಥಿ ನಾಗರಾಜ ಶೆಟ್ಟಿ ಎದುರು ಸೋತಿದ್ದಾರೆ. ಇದೀಗ ಅವರು ಡಿವಿ ಮತ್ತು ಶೋಭಾ ಅವರಿಗೆ ಸವಾಲು ಹಾಕಿದ್ದಾರೆ. ಡಿವಿಯವರು ಪುತ್ತೂರಿನಲ್ಲಿ  2 ಬಾರಿ, ಉಡುಪಿ, ಬೆಂಗಳೂರಿನಲ್ಲಿ   ಸ್ಪರ್ಧಿಸಿ ಗೆದ್ದಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದಾರೆ. ರೈ ಮಾತ್ರ ಬಂಟ್ವಾಳ ಬಿಟ್ಟು ಕದಲಲಿಲ್ಲ. ಅವರು ಬಂಟ್ವಾಳ ಬಿಟ್ಟು ಬೇರೆಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ?  ಅವರು ಮೂಡುಬಿದಿರೆಯಲ್ಲಿ ನಿಲ್ಲಲಿ, ನಮ್ಮ ಕಾರ್ಯಕರ್ತರನ್ನು ನಿಲ್ಲಿಸಿ ಅವರನ್ನು ಸೋಲಿಸುತ್ತೇವೆ ಎಂದು ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next