Advertisement

ಗ್ರಾಮೀಣಾಭಿವೃದ್ಧಿಯ ವಿಶಿಷ್ಟ ಚಿಂತಕ ಎ.ಜಿ. ಕೊಡ್ಗಿ

01:49 AM Jun 14, 2022 | Team Udayavani |

ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಓರ್ವ ಬಹುಮುಖ ಪ್ರತಿಭೆಯ ಆಗರವಾಗಿದ್ದರು. ಅಂದರೆ ಯಾವುದೇ ವಿಷಯದ ಕುರಿತು ಕೇಳಿದರೂ ಅದರ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿ ಪರಿಪೂರ್ಣ ಮಾಹಿತಿ ಹೊಂದಿದ್ದರು. ಆದ್ದರಿಂದ ಕೊಡ್ಗಿ ಅಂದರೆ ಜ್ಞಾನ ಮತ್ತು ಅನುಭವದ ಕಣಜವೇ ಆಗಿದ್ದರು.

Advertisement

ಕೊಡ್ಗಿಯವರ ಆಸಕ್ತಿ ವೈದ್ಯರಾಗಿ ಜನಸೇವೆ ಮಾಡುವುದಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಅದು ಕೈಗೂಡಲಿಲ್ಲ. ಹಾಗಾಗಿ ಕಾನೂನು ಪದವೀಧರರಾದರು. ಬೆಂಗಳೂರಿನಲ್ಲಿ ಕೆಲ ಸಮಯ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿ ಅನಂತರ ಊರಿಗೆ ಬಂದು ಕೃಷಿ ಮತ್ತು ಸಮಾಜಸೇವೆಯತ್ತ ಗಮನ ಹರಿಸಿದರು. ಜತೆಗೇ ರಾಜಕೀಯದ ಆಸಕ್ತಿಯೂ ಬೆಳೆಯಿತು.

ತಂದೆ ಪ್ರಗತಿಪರ ಕೃಷಿಕರಾಗಿದ್ದರೆ, ಎ.ಜಿ. ಕೊಡ್ಗಿಯವರು ಅದಕ್ಕೆ ಹೊಸತನದ ಸ್ಪರ್ಶ ನೀಡಿದರು. ಅನೇಕ ಪ್ರಯೋಗಗಳನ್ನು ನಡೆಸಿ ಪ್ರಯೋಗಶೀಲ ಕೃಷಿಕ ಎಂಬ ರಾಜ್ಯಮಟ್ಟದ ಪ್ರಶಸ್ತಿಯನ್ನೂ ಸಿಂಡಿಕೇಟ್‌ ಪ್ರತಿ ಷ್ಠಾನದಿಂದ ಪಡೆದರು. ಭತ್ತ, ಅಡಿಕೆ, ತೆಂಗು, ಕಬ್ಬು ಮೊದಲಾದ ಬಹುಮುಖೀ ಬೆಳೆಗಳನ್ನು ಬೆಳೆಸಿ ಕೃಷಿ ಕ್ಷೇತ್ರವನ್ನು ಲಾಭದಾಯಕ ವಾಗಿರಿಸಲು ಅನೇಕ ಕ್ರಮಗಳನ್ನು ತಮ್ಮ ಸಂಶೋಧನಾ ಪದ್ಧತಿಯಲ್ಲಿ ಅಳವಡಿಸಿ ಕೊಂಡರು.

ಕೃಷಿಯನ್ನು ಲಾಭದಾಯಕವಾಗಿರಿಸಲು ಯುವಕರಿಗೆ ತಾವೇ ಮಾದರಿಯಾಗಿ ನಿಂತರು. ಸ್ವತಃ ತಾವೇ ಗದ್ದೆಗಳಲ್ಲಿ ದುಡಿದು ಇತರ ಕೃಷಿಕರಿಗೆ ಮಾದರಿ ಯಾದರು. ಕೃಷಿಕನ ಕುರಿತ ಕೊಡ್ಗಿಯವರ ವ್ಯಾಖ್ಯಾನ ವಿಶಿಷ್ಟವಾದುದು. ಎಕರೆಗಟ್ಟಲೆ ಕೃಷಿ ಇದ್ದ ಮಾತ್ರಕ್ಕೆ ಆತ ಕೃಷಿಕನಲ್ಲ. ಕೃಷಿಯ ಕಾಯಕದಲ್ಲಿ ಆತ ದುಡಿಯಬೇಕು. ಹಾಗಿದ್ದಲ್ಲಿ ಮಾತ್ರ ಕೃಷಿಕ. ವಿದ್ಯಾವಂತ ಯುವಕರು ಸರಕಾರಿ ಕೆಲಸವನ್ನು ಕೇಳಿ ಬಂದಾಗ ಕೊಡ್ಗಿಯವರು ಅವರಿಗೆ ಕೃಷಿಯನ್ನು ಕೈಗೆತ್ತಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಕೃಷಿಯನ್ನು ತ್ಯಜಿಸಿ ನಗರದತ್ತ ವಲಸೆ ಹೋಗುವುದಕ್ಕೆ ಕೊಡ್ಗಿಯವರ ಅಸಮಾಧಾನವಿತ್ತು. ತಮ್ಮ ಮಕ್ಕಳನ್ನು ಕೂಡ ಕೃಷಿಯಲ್ಲಿ ತೊಡಗಿಸಿ ನೈತಿಕತೆಯನ್ನು ಮೆರೆದರು. ಹೈನುಗಾರಿಕೆಯ ಅಭಿವೃದ್ಧಿಗಾಗಿ ಭಾಷಣ ಮಾಡಲಿಲ್ಲ. ಗ್ರಾಮ ಗ್ರಾಮಗಳನ್ನು ಸುತ್ತಿದರು. ಡಾ| ಟಿ.ಎ. ಪೈಯವರು ಕೊಡ್ಗಿಯವರಿಗೆ ಬೆಂಬಲ ನೀಡಿದರು. ಹಳ್ಳಿಗರ ಮನವೊಲಿಸಿ ಹಳ್ಳಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಂಘದ ಸ್ಥಾಪನೆಗೆ ಕಾರಣರಾದರು. ಅವರೇ ಹೈನುಗಾರರಾಗಿ ಅದರ ಅನುಭವ ಪಡೆದರು.

ರಾಜಕೀಯ ಸೆಳೆತ
ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಕೊಡ್ಗಿಯವರು 1960ರಲ್ಲಿ ರಾಜಕೀಯ ಪ್ರವೇಶಿಸಿದರು. ಹಾಲಾಡಿ ಕ್ಷೇತ್ರದಿಂದ ತಾಲೂಕು ಬೋರ್ಡಿನ ಸದಸ್ಯರಾಗಿ ಆಯ್ಕೆಯಾದರು. 1972 ಹಾಗೂ 1978ರಲ್ಲಿ ಎರಡು
ಬಾರಿ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಮೂರನೇ ಹಣಕಾಸು ಅಯೋಗದ ಅಧ್ಯಕ್ಷ ರಾಗಿಯೂ 2009ರಲ್ಲಿ ಮೂರನೇ ಹಣಕಾಸು ಅಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದರು.

Advertisement

ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌
ಕೊಡ್ಗಿಯವರ ಗ್ರಾಮೀಣ ಅಭಿವೃದ್ಧಿಯ ಚಿಂತನೆ ವಿಶಿಷ್ಟವಾದುದು. ತಮ್ಮ ಚಿಂತನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಅವರು ಆಯ್ಕೆ ಮಾಡಿಕೊಂಡುದು ಅಮಾಸೆಬೈಲು ಗ್ರಾಮವನ್ನು. ಈ ಉದ್ದೇಶಕ್ಕಾಗಿ ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಸ್ತಿತ್ವಕ್ಕೆ ಬಂದಿತು. ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ಇದರ ಗೌರವಾಧ್ಯಕ್ಷರು. ಇಡೀ ಗ್ರಾಮವನ್ನು ಸೋಲಾರ್‌ ಗ್ರಾಮವನ್ನಾಗಿ ಪರಿವರ್ತಿಸಿ ರಾಷ್ಟ್ರಕ್ಕೆ ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದರು. ಅವರ ಈ ಸಾಧನೆಗಾಗಿ 2019ರಲ್ಲಿ ರಾಷ್ಟ್ರೀಯ ಸೂರ್ಯಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಟ್ರಸ್ಟಿನ ಮೂಲಕ ಅಮಾಸೆಬೈಲು ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದರು. ಗ್ರಾಮೀಣಾಭಿವೃದ್ಧಿಗೊಂದು ದಿಕ್ಸೂಚಿಯನ್ನು ಈ ಮೂಲಕ ತೋರಿಸಿದರು.

ಕೊಡ್ಗಿಯವರ ಜ್ಞಾನಗಳೆಲ್ಲವೂ ಅನುಭವಾಧಾರಿತ. ಅದಕ್ಕೆ ಪ್ರಾಯೋಗಿಕತೆಯ ಸ್ಪರ್ಶವಿದೆ. ಎಲ್ಲ ಕ್ಷೇತ್ರಗಳಿಗೆ ಅಗತ್ಯವಾದ ಚಿಂತನೆಗಳಿವೆ. ಹಾಗಾಗಿ ಕೊಡ್ಗಿಯವರು ನಮ್ಮ ನಡುವಿದ್ದ ಅಪೂರ್ವ ವ್ಯಕ್ತಿ ಎನ್ನಬಹುದು.

– ಡಾ| ಶ್ರೀಕಾಂತ ರಾವ್‌, ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next