Advertisement

ಬಿಜೆಪಿ ವರಿಷ್ಠರ ತಾಕೀತು; ವಿವಾದಾತ್ಮಕ ವಿಚಾರಗಳ ಬದಲಿಗೆ ಅಭಿವೃದ್ಧಿಗೆ ಒತ್ತು ನೀಡಿ

01:16 AM Apr 10, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಲವು ವಿವಾದಾತ್ಮಕ ವಿದ್ಯಮಾನಗಳು ನಡೆ ಯುತ್ತಿರುವ ಬೆನ್ನಲ್ಲೇ ಬಿಜೆಪಿಯ ವರಿಷ್ಠರು ಈ ಬಗ್ಗೆ ಮಾಹಿತಿ ಪಡೆದಿದ್ದು, ಧಾರ್ಮಿಕ ವಿಚಾರಗಳನ್ನು ವಿವಾದವಾಗಿಸದೆ ಸೂಕ್ಷ್ಮವಾಗಿ ನಿರ್ವಹಿಸುವಂತೆ ರಾಜ್ಯ ಮುಖಂಡರಿಗೆ ತಾಕೀತು ಮಾಡಿದ್ದಾರೆ.

Advertisement

ಹಿಜಾಬ್‌, ಹಲಾಲ್‌ ಕಟ್‌, ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿಷೇಧ, ಆಜಾನ್‌ ಮತ್ತಿತರ ವಿವಾದಗಳಿಂದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರತಿ ಕೂಲ ಪರಿಣಾಮ ಉಂಟಾಗಬಹುದು. ಪಕ್ಷದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವರಿಷ್ಠರು ಇಂಥ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ವಿವಾದಾತ್ಮಕ ವಿಚಾರಗಳ ಬದಲಿಗೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಿ. ಎಲ್ಲ ವರ್ಗಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಡಿಯಿಡಿ ಎಂದು ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ವಿಚಾರಗಳಿಂದ ಹಿಂದೂ ಮತ ಕ್ರೋಡೀಕರಣ ಆಗಬಹುದು. ಆದರೆ ಅದರಿಂದ ಬೇರೆ ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯೂ ಇರುವ ಕಾರಣ ಅದಕ್ಕೆ ಅವಕಾಶ ಕೊಡುವುದು ಬೇಡ ಎಂದು ಸೂಚನೆ ನೀಡಲಾಗಿದೆ.

ಕೆಂಗಣ್ಣಿಗೆ ಗುರಿಯಾಗದಿರಿ
ಇನ್ನೊಂದೆಡೆ ರಾಜ್ಯದಲ್ಲಿ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಉದ್ಯಮಿಗಳು ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಕೈಗಾರಿಕೆ ಮತ್ತು ವಾಣಿಜ್ಯ ವಲಯದ ಕೆಂಗಣ್ಣಿಗೆ ಗುರಿಯಾಗುವುದು ಬೇಡ. ಇದರಿಂದ ಬಂಡವಾಳ ಹೂಡಿಕೆಗೆ ತೊಂದರೆಯಾಗಬಹುದು. ಜಾಗತಿಕವಾಗಿಯೂ ವ್ಯತಿರಿಕ್ತ ಸಂದೇಶ ರವಾನೆಯಾಗಬಹುದು. ಹೀಗಾಗಿ ಇಂಥ ಅತಿರೇಕಗಳನ್ನು ನಿಯಂತ್ರಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶದ ಅನಂತರ ಜನರಲ್ಲಿ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಕರ್ನಾ ಟಕದಲ್ಲಿ ಧಾರ್ಮಿಕ ವಿಚಾರಗಳು, ಆಚ ರಣೆಗಳು ಮತ್ತಿತರ ಸಮುದಾಯ ಕೇಂದ್ರಿತ ವಿಷಯಗಳ ಬಗ್ಗೆ ನಡೆಯು ತ್ತಿರುವ ಬೆಳವಣಿಗೆಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ವಿಪಕ್ಷಗಳು ಇದನ್ನೇ ಅಸ್ತ್ರವಾಗಿಸಿಕೊಳ್ಳಬಹುದು. ಇದಕ್ಕೆ ಅವಕಾಶ ನೀಡಬೇಡಿ ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement

ಸಮತೋಲಿತ ಹೇಳಿಕೆ
ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್‌. ಅಶೋಕ್‌, ಡಾ| ಕೆ. ಸುಧಾಕರ್‌ ಮತ್ತಿ ತರರು ಸಮತೋಲಿತ ಹೇಳಿಕೆ ನೀಡ ಲಾರಂಭಿಸಿದ್ದಾರೆ. ರಾಜ್ಯದಲ್ಲಿ ಕೋಮುಸಾಮರಸ್ಯಕ್ಕೆ ಧಕ್ಕೆಯಾಗುವ ವಿದ್ಯ ಮಾನಗಳು ನಡೆಯುತ್ತಿಲ್ಲ. ಎಲ್ಲರೂ ಸಮಾನರು, ಯಾರಿಗೂ ಎಲ್ಲಿಯೂ ಪ್ರವೇಶ ನಿಷಿದ್ಧ ಎಂಬ ಮಾತು ಇಲ್ಲ ಎಂಬರ್ಥದ ಹೇಳಿಕೆ ನೀಡಿ ಸಮಾಧಾನ ಪಡಿಸಲು ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲೂ ವಿವಾದಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತು ಕೊಡಬಾರದು. ಪ್ರಾರಂಭದಲ್ಲೇ ಅಂಥ ವಿಚಾರಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮ, ಐಟಿ- ಬಿಟಿ, ರಫ್ತು ವಲಯದ ಮೇಲೆ ಪರಿಣಾಮ ಬೀರುವಂತಹ ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಣೆ ಮಾಡಿ ಎಂದು ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಹಿತ ಸಚಿವರು ಹೇಳಿಕೆಗಳ ಮೂಲಕ ವಿವಾದ ತಣ್ಣಗಾಗಿಸುತ್ತಿದ್ದಾರೆ ಎನ್ನಲಾಗಿದೆ.

ಎಲ್ಲರೂ ಸಮಾನರು
ನಮ್ಮ ಸರಕಾರದಲ್ಲಿ ಎಲ್ಲರೂ ಸಮಾನರು. ಆಯಾ ಧರ್ಮಗಳು ತಮ್ಮ ಸಂಪ್ರದಾಯ ಪಾಲಿಸುತ್ತವೆ. ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಮುಸ್ಲಿಂ ಚಾಲಕರ ಬಹಿಷ್ಕಾರ ವಿಚಾರ ಸರಕಾರ ಒಪ್ಪುವುದಿಲ್ಲ. ಸರ್ವಧರ್ಮ ಸಮನ್ವಯ ಸರಕಾರದ ಧ್ಯೇಯ. ಕಾನೂನಿನಂತೆ ನಡೆದು, ಶಾಂತಿ-ಸುವ್ಯವಸ್ಥೆ ಕಾಪಾಡು ವುದು ನಮ್ಮ ಕೆಲಸ. – ಬಸವರಾಜ ಬೊಮ್ಮಾಯಿ, ಸಿಎಂ

ಸರಕಾರ ನಿಷೇಧಿಸಿಲ್ಲ
ರಾಜ್ಯದಲ್ಲಿ ಯಾರಿಗೂ ಎಲ್ಲಿಯೂ ಪ್ರವೇಶ ನಿಷೇಧ ಮಾಡಿಲ್ಲ. ಇಂತಹವರ ಬಳಿಯೇ ವ್ಯಾಪಾರ ಮಾಡಬೇಕು ಎಂದು ಸರಕಾರ ಎಲ್ಲೂ ತಿಳಿಸಿಲ್ಲ. ಯಾರು, ಯಾರ ಬಳಿ; ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದು. ಜಾತ್ರೆ ಸೇರಿದಂತೆ ಎಲ್ಲ ಕಡೆ ಎಲ್ಲ ಧರ್ಮೀಯರಿಗೂ ಪ್ರವೇಶ ಇದೆ.
– ಆರ್‌. ಅಶೋಕ್‌, ಕಂದಾಯ ಸಚಿವ

ನಮ್ಮದು ಎಲ್ಲರ ಸರಕಾರ
ನಮ್ಮ ಸರಕಾರ ಎಲ್ಲ ಧರ್ಮಗಳನ್ನು ಸಮಾನವಾಗಿಕಾಣುತ್ತಿದೆ. ಪ್ರತಿಯೊಬ್ಬರೂ ಅವರ ಧರ್ಮಾನುಸಾರ ಆಚರಣೆಗಳನ್ನು ನಡೆಸಲು ಸಮಾನ ಅವಕಾಶ ಇದೆ. ಧಾರ್ಮಿಕ ಭಾವೈಕ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಅಂಥ ಆಲೋಚನೆಯೂ ಸರಕಾರಕ್ಕಿಲ್ಲ. ಇದು ಯಾವುದೇ ಒಂದು ಧರ್ಮದ ಸರಕಾರ ಅಲ್ಲ, ಇದು ಎಲ್ಲರ ಸರಕಾರ.
-ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next