ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ರವಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಮಿಸಿ ರೋಡ್ಶೋ ನಡೆಸಿ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದರು.
ಹೆಲಿಪ್ಯಾಡ್ನಲ್ಲಿ ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಜೆ.ಪಿ.ನಡ್ಡಾ ಅವರನ್ನು ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಮೊದಲಾದವರು ಯುವ ಮೆರಿಡಿಯನ್ ಹೆಲಿಪ್ಯಾಡ್ನಲ್ಲಿ ಬರಮಾಡಿಕೊಂಡರು.
ರೋಡ್ ಶೋ ಮುಗಿದರೂ ಜನ
ಬಳಿಕ ನಡ್ಡಾ ಅವರು ಸಾಲಿಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಸಾಲಿಗ್ರಾಮ ಬಸ್ ನಿಲ್ದಾಣದಿಂದ ಶ್ರೀ ಗುರು ನರಸಿಂಹ ದೇವಸ್ಥಾನ ಬಳಿಯವರೆಗೆ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಸಮಾರಂಭ ಮುಗಿದ ಬಳಿಕವೂ ಸಭೆಗೆ ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದುದು ಬಿಜೆಪಿ ಸಭೆಯ ಕುರಿತಾಗಿ ಜನರಿಗೆ ಇದ್ದ ಉತ್ಸಾಹ, ಆಸಕ್ತಿಯನ್ನು ತೋರಿಸುತ್ತಿತ್ತು. ಹಳೆಕೋಟೆ ಮೈದಾನದಲ್ಲಿ ನಡೆಸಲುದ್ದೇಶಿಸಿದ್ದ ಸಭೆಯನ್ನು ಬಿಸಿಲಿನ ಕಾರಣದಿಂದ ಜನರಿಗೆ ತೊಂದರೆಯಾಗದಂತೆ ಜಾಥಾವನ್ನು ಮೊಟಕುಗೊಳಿಸಿ ಹೆದ್ದಾರಿಯಿಂದ ದೇವಸ್ಥಾನಕ್ಕೆ ತಿರುಗುವಲ್ಲಿಯೇ ಸಭೆ ನಡೆಸಲಾಯಿತು.
ದೊಡ್ಡ ಅಂತರದ ಗೆಲುವು
ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಈಗಾಗಲೇ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯ ನಡೆದಿದ್ದು ಎಲ್ಲ ಕಡೆಯೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಸಭೆಗೂ ಜನ ಅತ್ಯುತ್ಸಾಹದಿಂದ ಬಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
Related Articles
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುವ ಭರವಸೆಯಿದೆ. ಈ ಒಂದು ಅವಕಾಶ ಜನ ನನಗಿತ್ತರೆ ಐದು ವರ್ಷ ಪ್ರಾಮಾಣಿಕವಾಗಿ ಅವರ ಜತೆಗೆ ಇರುತ್ತೇನೆ. ಸಾಮಾಜಿಕ ನ್ಯಾಯ ಕಾಪಾಡುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ಸದಾ ಜನರ ಜತೆ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದರು.
ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರ ದಂಡೇ ಬಿಜೆಪಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಈ ಉತ್ಸಾಹವನ್ನು ಗಮನಿಸಿದರೆ ಹಾಲಾಡಿಯವರು ಈ ಹಿಂದೆ ಗಳಿಸಿಕೊಟ್ಟ ಮತಗಳ ಅಂತರ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಬಹಳ ದೊಡ್ಡ ಅಂತರದಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದೊರೆಯಲಿದೆ ಎಂದರು.
ವೇದಿಕೆಯೇರದ ಶಾಸಕ ಹಾಲಾಡಿ
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿದ್ದ ಪ್ರಚಾರ ವಾಹನ ಏರಲು ಆಹ್ವಾನಿಸಲಾಗುತ್ತಿತ್ತು. ಆದರೆ ಅವರು ವಾಹನವೇರದೇ ಜನರ ಜತೆ ನಡೆದುಬಂದು ಬಳಿಕ ಬಿಸಿಲಲ್ಲಿ ಸಾರ್ವಜನಿಕರ ಜತೆಗೇ ನಿಂತು ನಡ್ಡಾ ಅವರ ಭಾಷಣ ಆಲಿಸಿದರು. ನಡ್ಡಾ ಅವರು ಗಮನಿಸಿ ಖುದ್ದು ಆಹ್ವಾನಿಸಿದರೂ ಹಾಲಾಡಿ ಹೋಗಲಿಲ್ಲ. ಬಾಷಣದ ಕೊನೆಗೆ ಹಾಲಾಡಿ ಅವರು ಹೊಸಬರಿಗೆ ಅವಕಾಶ ಮಾಡಿಕೊಟ್ಟದನ್ನು ಉಲ್ಲೇಖೀಸಿದ ನಡ್ಡಾ ಹಾಲಾಡಿ ಅವರಿಗೆ ಧನ್ಯವಾದ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ದ.ಕ. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಜಾಥಾ ವಾಹನದಲ್ಲಿದ್ದರು.