ಆಗ್ರಾ: ಬಿಜೆಪಿ ನಾಯಕ, ಸಂಸದ ರಾಮ್ ಶಂಕರ್ ಕಥೇರಿಯಾ ಅವರಿಗೆ 2011 ರಲ್ಲಿ ಹಲ್ಲೆ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆಗ್ರಾದ ಸಂಸದ/ಶಾಸಕ ನ್ಯಾಯಾಲಯದ ವಿಶೇಷ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಕಟಿಸಿದ್ದಾರೆ.
ಜೈಲು ಶಿಕ್ಷೆಯೊಂದಿಗೆ, ಕಥೇರಿಯಾ ಅವರು ಲೋಕಸಭೆಯಿಂದ ಅನರ್ಹರಾಗಿ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಮಾಲ್ನಲ್ಲಿನ ‘ಟೊರೆಂಟ್ ಪವರ್’ ಕಚೇರಿಯನ್ನು ಧ್ವಂಸಗೊಳಿಸಿದ ಮತ್ತು ನವೆಂಬರ್ 16, 2011 ರಂದು ಟೊರೆಂಟ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಕಥೇರಿಯಾ ಎದುರಿಸುತ್ತಿದ್ದಾರೆ.
ಶಿಕ್ಷೆ ಪ್ರಕಟವಾದ ಬಳಿಕ ANI ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಇಟಾವಾ ಲೋಕಸಭಾ ಕ್ಷೇತ್ರದ ಸಂಸದ ಕಥೇರಿಯಾ, ತಮ್ಮ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತೇನೆ ಮತ್ತು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.
“ನ್ಯಾಯಾಲಯವು ಇಂದು ನನ್ನ ವಿರುದ್ಧ ತೀರ್ಪು ನೀಡಿದೆ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ, ನನಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ ಮತ್ತು ನಾನು ಅದನ್ನು ಚಲಾಯಿಸುತ್ತೇನೆ” ಎಂದು ಹೇಳಿದ್ದಾರೆ.