Advertisement

BJP ನಾಯಕರಿಗೆ ನಾನು ಹೇಳಿದ್ದು ಇಂದು ಅರಿವಾಗಿದೆ: ದಿಂಗಾಲೇಶ್ವರ ಸ್ವಾಮೀಜಿ

03:27 PM May 15, 2023 | Team Udayavani |

ಹುಬ್ಬಳ್ಳಿ: ನಾನು ಹಿಂದೆ ಯಡಿಯೂರಪ್ಪ ಕಣ್ಣೀರನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗುತ್ತೆ ಎಂದಿದ್ದೆ‌. ಇಂದು ಆ ಪಕ್ಷದ ನಾಯಕರಿಗೆ ಇದು ಅರಿವಾಗಿದೆ ಎಂದು ಶಿರಹಟ್ಟಿ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ನೂಲ್ವಿ ಕ್ರಾಸ್ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ ಎಂದರು.

ನಾನು ಅಂದು ಒಬ್ಬ ವ್ಯಕ್ತಿ ಉದ್ದೇಶಿಸಿ ಹೇಳಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೆ ಬೇಕಾದ ನಾಯಕರು. ಅವತ್ತು ಎಲ್ಲಾ ಸಮಾಜದ ನಾಯಕರು ಅವರನ್ನು ಮುಂದುವರೆಸಬೇಕು ಎಂದಿದ್ದರು. ಯಾವುದೋ ಕೆಟ್ಟ ಉದ್ದೇಶ ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಹಾಗೂ ಯಡಿಯೂರಪ್ಪ ಬದಲಾಯಿಸಿದ್ದೇ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣ ಎಂದರು.

ಸ್ವಾಮೀಜಿ ಗಂಭೀರ ಹೇಳಿಕೆ ನೀಡಿದಾಗ ಆ ಬಗ್ಗೆ ಚಿಂತನ‌ ಮಂಥನ ಮಾಡಬೇಕು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಖಾವಿಧಾರಿಗಳು ಪಾಠ ಮಾಡಿದರೂ ಅವರು ಪಾಠ ಕಲಿಯಲಿಲ್ಲ ಎಂದರು.

ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ, ಈಶ್ವರಪ್ಪ ಸೇರಿದಂತೆ ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ‌ ಇಂದಿನ ಸ್ಥಿತಿಗೆ ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತು ಕೇಳಬೇಕು ಅಂದ್ರೆ ಏನು? ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ ವಿರುದ್ಧ ಹರಿಹಾಯ್ದ ಸ್ವಾಮೀಜಿ, ಯಡಿಯೂರಪ್ಪ ಸಿಎಂ ಇದ್ದಾಗ ಹೀಗೆ ಮಾಡಿದರು. ಅವರನ್ನು ಕೆಳಗಿಳಿಸುವಾಗ ಹೇಗೆ ನಡೆಕೊಂಡರು ರಾಜ್ಯಕ್ಕೆ ಗೊತ್ತಿದೆ ಎಂದರು.

Advertisement

ಬಿಜೆಪಿಯು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಚುನಾವಣೆ ‌ಒಂದೇ ಮಾಡಿದರು. ಕಾಂಗ್ರೆಸ್ ನವರು ಜಗದೀಶ ಶೆಟ್ಟರ, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ರಾಜ್ಯದಲ್ಲಿ ಏನಾಗಿದೆ ಅನ್ನುವ ದಾಖಲೆ ಇವೆ. ಬ್ರಾಹ್ಮಣರ ಬಗ್ಗೆ ಮಾತನಾಡುವುದಕ್ಕೆ ನನಗೆ ಭಯವಿಲ್ಲ. ಯಾರ ಅಂಕುಶವೂ ನನಗಿಲ್ಲ. ಬಹಳ ಮಾತನಾಡಿ ಉಪಯೋಗವಿಲ್ಲ ಎಂದರು.

ಬಿಜೆಪಿಯವರು ರಾಜ್ಯದ ನಾಯಕರನ್ನು ಬಹಳ‌ ಕೆಟ್ಟ ರೀತಿಯಲ್ಲಿ ‌ನೋಡಿಕೊಂಡರು. ಅವರದು ಅವರೇ ಉಂಡರು. ದಕ್ಷಿಣ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ. ಕರ್ನಾಟಕದ ನಾಯಕರನ್ನು ಬಿಟ್ಡು ಏನಾದರೂ ಮಾಡುತ್ತೀವಿ ಅಂದುಕೊಂಡಿದ್ದರು. ರಾಜ್ಯದ ಮತದಾರರು ಬುದ್ಧಿಗೇಡಿಗಳಾ, ರಾಷ್ಟ್ರ ನಾಯಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

ರಾಜ್ಯವನ್ನು ಸರಿಯಾದ ರೀತಿ ನಡೆಸುವ ಸಮರ್ಥ, ಯೋಗ್ಯ ಹಾಗೂ ಕರ್ನಾಟಕ‌ ಒಂದು ದೃಷ್ಟಿಕೋನದಲ್ಲಿ ನೋಡುವ ವ್ಯಕ್ತಿ ಸಿಎಂ ಆಗಬೇಕು. ಉತ್ತರ ಕರ್ನಾಟಕದ ಲಿಂಗಾಯತ ನಾಯಕರಲ್ಲಿ ಸಾಕಷ್ಟು ಬುದ್ಧಿಜೀವಿಗಳು ಇದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ನಮ್ಮಅಭಿಪ್ರಾಯ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next