Advertisement

‘8 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ’: ಮಾದಕ ದ್ರವ್ಯ ಜಾಲ ತಡೆಗೆ ಯೋಗೀಶ್‌ ಭಟ್‌ ವರದಿ

03:30 AM Sep 02, 2020 | Hari Prasad |

ಮಂಗಳೂರು: ಮಾದಕ ವಸ್ತುಗಳ ಜಾಲ ಹೇಗೆ ಹರಡಿದೆ ಮತ್ತು ವ್ಯಾಪಿಸುತ್ತಿದೆ, ಇದರ ಹಿಂದಿನ ಮಾಫಿಯಾ ಯಾವ ರೀತಿ ಕಾರ್ಯಾಚರಿಸುತ್ತಿದೆ, ಯುವ ಜನಾಂಗ ಇದಕ್ಕೆ ಹೇಗೆ ಬಲಿಯಾಗುತ್ತಿದೆ ಮತ್ತು ಇದನ್ನು ಮಟ್ಟ ಹಾಕಲು ಸರಕಾರ ಮತ್ತು ಪೊಲೀಸ್‌ ಇಲಾಖೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಾನು ವಿಧಾನ ಸಭಾ ಉಪ ಸಭಾಪತಿಯಾಗಿದ್ದ ಸಂದರ್ಭ, 8 ವರ್ಷಗಳ ಹಿಂದೆಯೇ ಸರಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿ ಎಚ್ಚರಿಸಿದ್ದೆ ಎಂದಿದ್ದಾರೆ ಕರಾವಳಿಯ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌.

Advertisement

ಮಾದಕ ವಸ್ತು ಜಾಲ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿ ಬೆಳೆಯುತ್ತಿರುವುದನ್ನು ಮನಗಂಡು ಯೋಗೀಶ್‌ ಭಟ್‌ ಅವರು 2012ರಲ್ಲಿ ಈ ವಿಚಾರವನ್ನು ಸ್ವಯಂ ಆಗಿ ಕೈಗೆತ್ತಿಕೊಂಡು ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು, ಪೊಲೀಸ್‌ ಇಲಾಖೆ, ಮಾನಸಿಕ ಚಿಕಿತ್ಸಾ ತಜ್ಞರು, ಸಮಾಜ ಸೇವಾ ಸಂಸ್ಥೆಗಳ ಸಹಿತ ವಿವಿಧ ಮಟ್ಟದ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಿದ್ದರು. ಆ ವಿಚಾರಗಳನ್ನು ಅವರು ‘ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಸಮಗ್ರ ಮಾಹಿತಿ ಕಲೆ ಹಾಕಿದೆ
ಸರಕಾರದ, ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೂಡ ಭಾಗವಹಿಸಿದ್ದರು. ಸಮಗ್ರ ವಿವರ ಕಲೆಹಾಕಿದ್ದಲ್ಲದೆ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಮಾದಕ ವಸ್ತು ವ್ಯಸನದಿಂದ ಮುಕ್ತರಾಗಲು ಬಯಸಿ ಬರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ಪಡೆದೆ.

ವಿಧಾನಸಭೆಯಲ್ಲಿ ವರದಿ ಮಂಡನೆ
ಸಮಾಜದ ವಿವಿಧ ಸ್ತರಗಳ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ವಿವರವಾದ ವರದಿ ಸಿದ್ಧಪಡಿಸಿ ವಿಧಾನಸಭೆಗೆ ಮಂಡಿಸಿದೆ. ಸುಮಾರು 17 ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದೆ. ವರದಿಯ ಆಧಾರದಲ್ಲಿ ಆರಂಭದಲ್ಲಿ ಸರಕಾರದ ಮಟ್ಟದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಅನಂತರದಲ್ಲಿ ಇದರ ಬಗ್ಗೆ ಗಮನ ಕಡಿಮೆಯಾಯಿತು.

ಇದೊಂದು ಭಯಾನಕ ಜಾಲ
ಭಯೋತ್ಪಾದನೆ, ನಕಲಿ ನೋಟು ಜಾಲದಂತೆಯೇ ಮಾದಕ ವಸ್ತು ಜಾಲ ಕೂಡ ಭಯಾನಕವಾದುದು. ಇದರ ಹಿಂದೆ ಒಂದು ಮಾಫಿಯಾವೇ ಕಾರ್ಯಾಚರಿಸುತ್ತದೆ. ಯುವ ಪೀಳಿಗೆಯನ್ನು ನಿಷ್ಕ್ರಿಯಗೊಳಿಸುವ ದೊಡ್ಡ ಸಂಚು ಇದರ ಹಿಂದಿದೆ. ಇದರಿಂದ ಬರುವ ಹಣ ಸಮಾಜಘಾತಕ ಕೃತ್ಯಗಳಿಗೆ ಬಳಕೆಯಾಗುತ್ತದೆ. ಇದರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಯಬೇಕಾಗಿದೆ.

Advertisement

ಹಲವು ದೂರು ಬಂದಿದ್ದವು
ವಿಧಾನಸಭಾ ಉಪಸಭಾಪತಿಯಾಗಿದ್ದ ವೇಳೆ ಹಲವಾರು ವಿಚಾರಗಳ ಬಗ್ಗೆ ಅರ್ಜಿಗಳು ಬರುತ್ತಿದ್ದವು. ಮಾದಕ ವಸ್ತುಗಳ ವಿಚಾರವೂ ಸೇರಿತ್ತು. ಅನೇಕ ಕಾಲೇಜುಗಳ ಉಪನ್ಯಾಸಕರು ಕೂಡ ಕೆಲವು ವಿದ್ಯಾರ್ಥಿಗಳ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಗಮನಕ್ಕೆ ತಂದಿದ್ದರು. ಮಂಗಳೂರಿನ ಇಬ್ಬರು ಉಪನ್ಯಾಸಕರು ಲಿಖಿತ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ವಿವರ ಪಡೆಯಲು ನಿರ್ಧರಿಸಿದೆ ಎಂದು ಯೋಗೀಶ್‌ ಭಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next