Advertisement

BJP; ಸೋಮಣ್ಣ ಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದು ಸರಿಯಲ್ಲ: ರೇಣುಕಾಚಾರ್ಯ

08:33 PM Nov 26, 2023 | Team Udayavani |

ದಾವಣಗೆರೆ: ಮಾಜಿ ಸಚಿವ ವಿ. ಸೋಮಣ್ಣ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದು ಸರಿ ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮಣ್ಣ ಅವರು ಬಿಜೆಪಿಯ ವಿಚಾರಗಳನ್ನು ಮಠದಲ್ಲಿ ಮಾತನಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಖಾರವಾಗಿ ಪ್ರಶ್ನಿಸಿದರು. ಜ.16 ರ ನಂತರ ದೆಹಲಿಗೆ ಹೋಗುವುದಾಗಿ ಸೋಮಣ್ಣ ಅವರು ಹೇಳುತ್ತಿದ್ದಾರೆ. ಹೋಗುವುದಾದರೆ ಹೋಗಲಿ. ಅಲ್ಲಿ ನಾಯಕರಿಗೆ ಅದೇನು ಚಾಡಿ ಹೇಳುತ್ತಾರೋ ಹೇಳಲಿ. ಅವರೊಬ್ಬರಿಗೆ ಅಲ್ಲ ನಮಗೂ ದೆಹಲಿ ನಾಯಕರು ಗೊತ್ತು. ನಾವೂ ಸಹ ದೆಹಲಿಗೆ ಹೋಗುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿಯನ್ನೇ ಕೇಳದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಸೈಕಲ್‌ನಲ್ಲಿ ರಾಜ್ಯವನ್ನೆಲ್ಲ ಸುತ್ತಾಡಿ ಪಕ್ಷ ಕಟ್ಟಿ ಬೆಳೆಸಿದವರು. ಅವರು ನನಗೆ ಹೊಡೆದರೂ ಪರವಾಗಿಲ್ಲ. ಯಾರೇ ಆಗಲಿ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದರೆ ಸಹಿಸುವ ಮಾತೇ ಇಲ್ಲ. ನಾನೂ ಮಾತನಾಡುತ್ತೇನೆ. ವಿನಾಕಾರಣ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವುದನ್ನ ಸಹಿಸುವುದೇ ಇಲ್ಲ ಎಂದು ಗುಡುಗಿದರು.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನ ಅಧಿಕಾರಕ್ಕೆ ತಂದವರೇ ಯಡಿಯೂರಪ್ಪ ಅವರು. ಅವರೇನು ರೆಡಿಮೇಡ್ ಫುಡ್ ಅಲ್ಲ. ಪಕ್ಷವನ್ನ ಕಟ್ಟಿ, ಬೆಳೆಸಿರುವಂತಹವರು ಎಂದು ತಿಳಿಸಿದರು.

ಸೋಮಣ್ಣ ಕಾಂಗ್ರೆಸ್‌ನಲ್ಲಿ ಇದ್ದಂತಹವರು. ಅವರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ಬಿಟ್ಟು ಬಂದಿದ್ದರೂ ಅವರನ್ನ ಎರಡು ಬಾರಿ ಮಂತ್ರಿ ಮಾಡಲಾಯಿತು. ಸೋತಾಗ ಪರಿಷತ್ತು ಸದಸ್ಯರನ್ನಾಗಿ ಮಾಡಿದ್ದು ಯಡಿಯೂ ರಪ್ಪ ಅವರು ಮಾಡಿರುವ ತಪ್ಪಾ, ನಿರಂತರವಾಗಿ ಅಽಕಾರ ಅನುಭವಿಸಿ ಈಗ ಯಡಿಯೂರಪ್ಪ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತೀರಾ ಎಂದು ಪ್ರಶ್ನಿಸಿದರು.

Advertisement

ಕಳೆದ ವಿಧಾನ ಸಭಾ ಚುನಾವಣೆಯಲ್ಲಿನ ಸೋಲು ಕಂಡೇ ದೆಹಲಿ ನಾಯಕರು ವಿಜಯೇಂದ್ರ ಅವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿದ್ದಕ್ಕೆ ರಾಜ್ಯವ್ಯಾಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗಿದೆ ಎಂದು ತಿಳಿಸಿದರು.

ಸೋಮಣ್ಣ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿರುವುದನ್ನ ಅವಮಾನಿಸುತ್ತಿದ್ದಾರೆ. ಅವರು ನನಗೆ ಹಿರಿಯಣ್ಣನ ಸಮಾನ. ಈಗಲೂ ಬಾರಲೇ… ತಮ್ಮ ಅಂತಲೇ ಮಾತನಾಡುವ ಸೋಮಣ್ಣ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮನೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು, ಹಾದಿ ರಂಪ, ಬೀದಿ ರಂಪ ಮಾಡುವುದು ಸರಿಯಲ್ಲ. ಮನೆಯನ್ನು ಕೂಡಿಸುವ ಕೆಲಸ ಮಾಡಲಿ. ಮನೆ ಒಡೆಯುವ ಕೆಲಸ ಬೇಡ ಎಂದು ಸೋಮಣ್ಣಗೆ ಮನವಿ ಮಾಡುವುದಾಗಿ ತಿಳಿಸಿದರು.

ಜಾತಿಗಣತಿಗೆ ವಿರೋಧ : ಗಂಭೀರವಾಗಿ ಪರಿಗಣಿಸಬೇಕು

ಜಾತಿಗಣತಿ ಬಗ್ಗೆ ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿದಂತೆ ವಿವಿಧ ಸಮಾಜ ಮತ್ತು ಅನೇಕ ಸಚಿವರು, ಶಾಸಕರು ಪಕ್ಷಾತೀತವಾಗಿ ವಿರೋಧಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ವೈಯಕ್ತಿಕವಾಗಿಯೂ ನನ್ನ ವಿರೋಧ ಇದೆ. ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿರುವ ಜಾತಿ ಗಣತಿ ಕೈಬಿಟ್ಟು, ಹೊಸದಾಗಿ ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಜಾತಿ ಗಣತಿ ಕಾರ್ಯ ನಡೆಸಲಿ. ಅವಸರದಲ್ಲಿ ವರದಿ ಅಂಗೀಕರಿಸುವ ದುಸ್ಸಾಹಸ ಮಾಡಬಾರದು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿದಂತೆ ಎಲ್ಲ ಜಾತಿ, ಜನಾಂಗಗಳಲ್ಲೂ ಆರ್ಥಿಕವಾಗಿ ಹಿಂದುಳಿದವರು, ಕಡು ಬಡವರು ಇದ್ದಾರೆ. ತರಾತುರಿಯಲ್ಲಿ ಜಾತಿಗಣತಿ ವರದಿ ಅಂಗೀಕರಿಸುವ ಕೆಲಸವನ್ನ ಸರ್ಕಾರ ಮಾಡ ಬಾರದು. ಗಾಜಿನ ಮನೆಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ. ಇನ್ನೂ ಐದಾರು ತಿಂಗಳಾಗಲಿ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ, ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next