Advertisement

BJP ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ: ಜಗದೀಶ ಶೆಟ್ಟರ್ ಹರ್ಷ

11:56 PM Mar 24, 2024 | Team Udayavani |

ಹುಬ್ಬಳ್ಳಿ: ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಪಕ್ಷದ ವರಿಷ್ಠರು ನನಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಬೆಳಗಾವಿಯಲ್ಲಿ ಕೆಲಸ ಮಾಡಲು ಪಕ್ಷದ ಹೈಕಮಾಂಡ್ ಅವಕಾಶ ಕೊಟ್ಟಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹರ್ಷ ವ್ಯಕ್ತಪಡಿಸಿದರು.

Advertisement

ಟಿಕೆಟ್ ಘೋಷಣೆಯಾದ ನಂತರ ರವಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಬೆಳಗಾವಿಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲಿದೆ. ಮಾಜಿ ಸಚಿವ ದಿ. ಸುರೇಶ ಅಂಗಡಿಯವರು ಮಾಡಿದ ಕೆಲಸಗಳು ಇನ್ನೂ ಬೆಳಗಾವಿ ಜನರಿಗೆ ನೆನಪಿದೆ. ಅವರ ಪತ್ನಿ ಮಂಗಳಾ ಅಂಗಡಿ ಕೂಡ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಕಳೆದ ಒಂದು ವಾರದಿಂದ ಬೆಳಗಾವಿಯ ಸ್ಥಳೀಯ ನಾಯಕರ ಜತೆ ಮಾತನಾಡಿದ್ದೇನೆ. ಯಾವುದೂ ಅಸಮಾಧಾನ ಇಲ್ಲ. ಅಲ್ಪಸ್ವಲ್ಪ ಇದ್ದರೂ ಸರಿ ಮಾಡಲಾಗುವುದು. ಪಕ್ಷದ ನಾಯಕರು ಹೆಚ್ಚಿನ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ನಾನು ನಾಳೆ ಅಥವಾ ನಾಡಿದ್ದು ಬೆಳಗಾವಿಗೆ ಹೋಗುತ್ತೇನೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದರು.

ನಾನು ವಿಪಕ್ಷ ನಾಯಕನಿದ್ದಾಗ ಬೆಳಗಾವಿಯಲ್ಲಿ ತಳಮಟ್ಟದ ಸಂಘಟನೆ ಮಾಡಿದ್ದೇನೆ. ಕೇವಲ ಹಣದ ಮೇಲೆ ಚುನಾವಣೆ ನಡೆಯಲ್ಲ. ಇದು ಮೋದಿಯವರ, ದೇಶದ ಚುನಾವಣೆ. ಹೀಗಾಗಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೆಟ್ಟರ್ ಅವರಿಗೂ ಬೆಂಬಲ ನೀಡಲು ಕಾರ್ಯಕರ್ತರಿಗೆ ಮನವಿ

Advertisement

ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ದೂರವಾಣಿ ಕರೆ ಮಾಡಿ ಹೇಳಿದ್ದಾರೆ ಎಂದು ಬೆಳಗಾವಿಯಲ್ಲಿ ಸಂಸದೆ ಮಂಗಲಾ ಅಂಗಡಿ ಹೇಳಿಕೆ ನೀಡಿದ್ದಾರೆ.

ಭಾನುವಾರ ಸಂಜೆ ಕರೆ ಮಾಡಿದ್ದ ನಡ್ಡಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದಾರೆ. ನಾವೂ ಸಹ ಅವರಿಗೆ ಭರವಸೆ ಕೊಟ್ಡಿದ್ದೇವೆ ಎಂದರು.

ಇದುವರೆಗೆ ನಮ್ಮ ಕುಟುಂಬಕ್ಕೆ ಬೆಂಬಲ ನೀಡಿದಂತೆ ಶೆಟ್ಟರ್ ಅವರಿಗೂ ಬೆಂಬಲ ನೀಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ನಮ್ಮ ಗುರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next