Advertisement

ಪಾಲಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

12:40 AM Apr 30, 2019 | Team Udayavani |

ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಬಿಎಂಪಿಯು 4261 ಕೋಟಿ ರೂ. ಮೊತ್ತದ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸದೆ ಕೆಆರ್‌ಐಡಿಎಲ್‌ಗೆ ವಹಿಸಲು ಮುಂದಾಗಿರುವುದು ಕಾನೂನುಬಾಹಿರ ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Advertisement

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಸಹ ವಕ್ತಾರ ಎ.ಎಚ್‌.ಆನಂದ್‌, ಮುಖಂಡರಾದ ದತ್ತಗುರು ಹೆಗಡೆ, ಛಲವಾದಿ ನಾರಾಯಣಸ್ವಾಮಿ, ಬಿ.ಎನ್‌.ರಾಘವೇಂದ್ರ ನಿಯೋಗ ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿತು.

ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಮೇ 25ರವರೆಗೆ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಪ್ರಕೃತಿ ವಿಕೋಪದಂತಹ ಅನಿವಾರ್ಯ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿಯನ್ನು ಆರಂಭಿಸುವಂತಿಲ್ಲ ಎಂದು ನಿಯಮದಲ್ಲಿ ಸ್ಪಷ್ಟವಾಗಿದೆ.

ಹಾಗಿದ್ದರೂ ಬಿಬಿಎಂಪಿಯು ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ 4261 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಆಹ್ವಾನಿಸದೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್‌) ವಹಿಸಲು ಅನುಮತಿ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂ ಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರಡು ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸದೆ ನೇರವಾಗಿ ಯಾವುದೇ ವ್ಯಕ್ತಿ, ಸಂಸ್ಥೆಗೆ ವಹಿಸುವಂತಿಲ್ಲ ಎಂಬ ನಿಯಮವೂ ಉಲ್ಲಂಘನೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸದೆ ಕೆಆರ್‌ಐಡಿಎಲ್‌ಗೆ ವಹಿಸಿರುವುದು ಕಾನೂನುಬಾಹಿರ.

Advertisement

ವಿಶೇಷ ಆಯುಕ್ತ ಮನೋಜ್‌ ಕುಮಾರ್‌ ಮೀನಾ ಅವರ ಗಮನಕ್ಕೆ ಬಂದರೂ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅನುಮತಿ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೂಡಲೇ ಕಾಮಗಾರಿ ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಕೋರಿದೆ.

ದೂರು ಸಲ್ಲಿಕೆ ಬಳಿಕ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕುಡಿಯುವ ನೀರು, ಮಳೆ ಅವಾಂತರ ತಡೆಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ಪಡೆದಿದ್ದಾರೆ. ಆದರೆ ನೀತಿ ನಿರೂಪಣೆ ಬದಲಾವಣೆಗೆ ಅವಕಾಶ ನೀಡಿಲ್ಲ.

ಇಷ್ಟು ದೊಡ್ಡ ಮೊತ್ತದ ಕಾಮಗಾರಿಯನ್ನು ತರಾತುರಿಯಲ್ಲಿ ಕೈಗೊಳ್ಳುವ ಅಗತ್ಯವೇನಿತ್ತು. ಯಾರನ್ನು ತೃಪ್ತಿಪಡಿಸಲು, ಯಾರಿಗೆ ಹಣ ಸಂದಾಯ ಮಾಡಲು, ಯಾರಿಗೆ ಲಾಭ ಮಾಡಿಕೊಡಲು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಕೆಆರ್‌ಐಡಿಎಲ್‌ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಬಗ್ಗೆ ಪಾಲಿಕೆ, ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಈ ಸಂಸ್ಥೆಗೆ ಕಾಮಗಾರಿ ವಹಿಸುವುದರಿಂದ ಶೇ.15ರಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ಇತರೆ ತೆರಿಗೆ ಸೇರಿ ಶೇ.45ರಷ್ಟು ಪರ್ಸೆಂಟ್‌ ಹೆಚ್ಚಾಗಲಿದೆ.

ಗುತ್ತಿಗೆದಾರರ ಲಾಭಾಂಶವೆಲ್ಲಾ ಸೇರಿದರೆ ಶೇ.20ರಷ್ಟು ಹಣವಷ್ಟೇ ಕಾಮಗಾರಿಗೆ ವಿನಿಯೋಗವಾಗುತ್ತದೆ. ಪಾಲಿಕೆ ಸಭೆಯಲ್ಲಿ ಮತಕ್ಕೂ ಹಾಕದೆ ಏಕಾಏಕಿ ಅಂಗೀಕಾರ ನೀಡಿ ನಿಯಮ ಉಲ್ಲಂ ಸಲಾಗಿದೆ. ಯಾರದೋ ಚುನಾವಣಾ ಖರ್ಚಿಗಾಗಿ ಈ ಹಣ ಬಳಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಮನವಿಗೆ ಸ್ಪಂದಿಸಿದ ಮುಖ್ಯ ಚುನಾವಣಾಧಿಕಾರಿಗಳು, “ಪ್ರತಿಯೊಂದನ್ನು ಪರಿಶೀಲಿಸಿ ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆಯೇ ಹೊರತು ಉಳಿದ ಯಾವ ಕಾಮಗಾರಿಗೂ ಅನುಮತಿ ನೀಡಿಲ್ಲ.

ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ನಿರೂಪಣೆ ಬದಲಾವಣೆಗೆ ಅವಕಾಶವಿಲ್ಲ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮುಂದುವರಿದರೆ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವರದಿಯನ್ನೂ ಕೇಳಲಾಗುವುದು ಎಂದು ಹೇಳಿದ್ದಾರೆ. ಅವರ ಭರವಸೆಯಿಂದ ತೃಪ್ತಿ ಸಿಕ್ಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next