Advertisement

ಬಿಜೆಪಿ: ಹೊಸ ಅಧ್ಯಕ್ಷರ ಆಯ್ಕೆನಡ್ಡ ಮುಂದಿರುವ ಸವಾಲುಗಳು

12:39 AM Jan 21, 2020 | mahesh |

ಜಗತ್‌ ಪ್ರಕಾಶ್‌ ನಡ್ಡ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಔಪಚಾರಿಕತೆ ಪೂರ್ಣಗೊಂಡಿದೆ.ಒಬ್ಬನಿಗೆ ಒಂದೇ ಹುದ್ದೆ ನೀತಿಯನ್ನು ಪಕ್ಷ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಅಮಿತ್‌ ಶಾ ಗೃಹ ಸಚಿವರಾದಾಗಲೇ ಬಿಜೆಪಿಗೆ ಹೊಸ ಅಧ್ಯಕ್ಷರ ಅಗತ್ಯ ತಲೆದೋರಿತ್ತು. ಆದರೆ ತತ್‌ಕ್ಷಣವೇ ಅಮಿತ್‌ ಶಾರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಜೂನ್‌ನಲ್ಲಿ ನಡ್ಡ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಶಾ ಮೇಲಿದ್ದ ಕೆಲವು ಹೊರೆಗಳನ್ನು ಅವರಿಗೆ ವರ್ಗಾಯಿಸಲಾಗಿತ್ತು. ಇದೀಗ ನಡ್ಡ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿದ್ದಾರೆ.

Advertisement

ಪದಾಧಿಕಾರಿಗಳ ಆಯ್ಕೆ ಮಟ್ಟಿಗೆ ಬಿಜೆಪಿ ಉಳಿದ ಪಕ್ಷಗಳಿಗೆ ಮಾದರಿ. ಈ ಪಕ್ಷದಲ್ಲಿ ಅನುವಂಶೀಯವಾಗಿ ಅಧ್ಯಕ್ಷರಾಗುವ ಪದ್ಧತಿ ಇಲ್ಲ. ಇದುವೇ ಉಳಿದ ಪಕ್ಷಗಳು ನಿರ್ದಿಷ್ಟವಾಗಿ ಹೇಳುವುದಾದರೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ. ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆ ಹೀನಾಯ ಸೋಲಿನ ಬಳಿಕ ರಾಹುಲ್‌ ಗಾಂಧಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದಾಗ ಗಾಂಧಿ-ನೆಹರು ಪರಿವಾರದಿಂದ ಹೊರತಾದವರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವ ಅವಕಾಶವಿತ್ತು. ಆದರೆ ಆ ಪಕ್ಷ ಮರಳಿ ಸೋನಿಯಾ ಗಾಂಧಿಯವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿ ತನ್ನ ಮಿತಿಯನ್ನು ಸಾರಿತು. ಇದೀಗ ಮರಳಿ ರಾಹುಲ್‌ ಗಾಂಧಿಯನ್ನೇ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ನ ಒಂದು ಲಾಬಿ ಭಾರೀ ಪ್ರಯತ್ನಗಳನ್ನು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗೆ ಪ್ರಮುಖ ವಿರೋಧ ಪಕ್ಷ ನಾಯಕತ್ವದ ಕೊರತೆಯಿಂದ ಬಳಲುತ್ತಿರಬೇಕಾದರೆ ಬಿಜೆಪಿ ಹೊಸಮುಖಗಳಿಗೆ ಅವಕಾಶ ಕೊಟ್ಟು ಮುಂದೆ ತರುತ್ತಿದೆ.

ನಡ್ಡ ವಿದ್ಯಾರ್ಥಿ ಕಾಲದಿಂದಲೇ ನಾಯಕತ್ವ ಗುಣ ರೂಢಿಸಿಕೊಂಡವರು.ಕಾಲೇಜ್‌ ಯೂನಿಯನ್‌ ಕಾರ್ಯದರ್ಶಿಯಾಗಿ, ಎಬಿವಿಪಿ ಕಾರ್ಯದರ್ಶಿಯಾಗಿ, ಪಕ್ಷದ ಕಾರ್ಯದರ್ಶಿಯಾಗಿ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸುವ ಮೂಲಕ ಸಂಘಟನೆಯ ಧಾರಾಳ ಅನುಭವಗಳನ್ನು ಹೊಂದಿದ್ದಾರೆ. ಶಾಸಕನಾಗಿ, ಸಂಸದನಾಗಿ, ಸಚಿವನಾಗಿ ರಾಜಕೀಯ ಅನುಭವಗಳೂ ಇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡು 62 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜೊತೆಗೆ ಅವರೊಬ್ಬ ನಿಷ್ಠಾವಂತ ಕಾರ್ಯಕರ್ತ ಹಾಗೂ ನಿಷ್ಕಳಂಕ ವ್ಯಕ್ತಿತ್ವದ ರಾಜಕಾರಣಿ.ಆರ್‌ಎಸ್‌ಎಸ್‌ಗೆ ನಿಕಟರಾಗಿರುವವರು. ಎಲ್ಲ ರೀತಿಯಲ್ಲೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಲು ಯೋಗ್ಯತೆಯುಳ್ಳ ನಾಯಕ ಎನ್ನುವುದರಲ್ಲಿ ಸಂಶಯವಿಲ್ಲ.

ಆದರೆ ನಡ್ಡ ಎದುರು ಭಾರೀ ದೊಡ್ಡ ಸವಾಲುಗಳು ಇವೆ. ಅದರಲ್ಲೂ ಅಮಿತ್‌ ಶಾ ಸ್ಥಾನವನ್ನು ತುಂಬುವುದು ಯಾವ ನಾಯಕನಿಗಾದರೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಗುವ ಅವಕಾಶ. ಬಿಜೆಪಿ ಇತಿಹಾಸದಲ್ಲಿ ಶಾ ಅತ್ಯಂತ ಯಶಸ್ವಿ ಅಧ್ಯಕ್ಷ. ಸತತ ಎರಡು ಸಲ ಪಕ್ಷವನ್ನು ನಿಚ್ಚಳ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿಸಿದ್ದು ಬಹಳ ದೊಡ್ಡ ಸಾಧನೆ. ಅದರಲ್ಲೂ ಎರಡನೇ ಅವಧಿಯಲ್ಲಿ ಹಿಂದಿನ ಸಲಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಿದ್ದರೆ ಅದಕ್ಕೆ ಅಮಿತ್‌ ಶಾ ಅವರ ತಂತ್ರಗಾರಿಕೆಯೇ ಕಾರಣ. ಮಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರಿಂದಲೂ ಈ ಮಾದರಿಯ ಸಾಧನೆಯನ್ನು ನಿರೀಕ್ಷಿಸುವುದು ಸಹಜ.

ನಡ್ಡ ಎದುರು ತತ್‌ಕ್ಷಣಕ್ಕೆ ಇರುವುದು ದಿಲ್ಲಿ ವಿಧಾನಸಭೆ ಚುನಾವಣೆಯ ಸವಾಲು. ಸುಮಾರು ಎರಡು ದಶಕಗಳಿಂದ ಇಲ್ಲಿ ಬಿಜೆಪಿ ಅಧಿಕಾರ ವಂಚಿತವಾಗಿದ್ದು, ಈ ಸಲ ಹೇಗಾದರೂ ಮಾಡಿ ದಿಲ್ಲಿ ಗದ್ದುಗೆಯನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದರಲ್ಲಿ ನಡ್ಡ ಯಶಸ್ವಿಯಾದರೆ ಮೊದಲ ಪರೀಕ್ಷೆಯನ್ನು ಗೆದ್ದಂತೆ. ಆದರೆ ನಡ್ಡಗೆ ನಿಜವಾದ ಅಗ್ನಿಪರೀಕ್ಷೆ ಇರುವುದು ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ. ಈ ಚುನಾವಣೆಯ ಸಂಪೂರ್ಣ ಹೊಣೆ ನಡ್ಡ ಮೇಲಿರಲಿದೆ. ಲೋಕಸಭೆಯ ಚುನಾವಣೆಯಲ್ಲಿ ತೃಪ್ತಿಕರ ನಿರ್ವಹಣೆ ನೀಡಿರುವ ಬಿಜೆಪಿ 2021ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೇರುವ ಗುರಿ ಇರಿಸಿಕೊಂಡಿದೆ. ಇದರಲ್ಲಿ ಯಶಸ್ವಿಯಾದರೆ ನಡ್ಡ ನಾಯಕತ್ವ ಪರೀಕ್ಷೆಯಲ್ಲಿ ಗೆದ್ದಂತೆ. ಲೋಕಸಭೆ ಚುನಾವಣೆ ನಡೆದ ಬಳಿಕ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಪಕ್ಷದ ಕೇಂದ್ರ ನಾಯಕತ್ವ ಬಲಿಷ್ಠವಾಗಿದ್ದರೂ ರಾಜ್ಯಗಳಲ್ಲಿ ಸಂಘಟನೆ ಹಿಂದಿನಷ್ಟು ಬಲಿಷ್ಠವಾಗಿಲ್ಲ. ಸ್ಥಳೀಯ ನಾಯಕತ್ವವನ್ನು ಬಲಿಷ್ಠಗೊಳಿಸುವ ಮೂಲಕ 2024ರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಹೊಣೆ ಈಗ ನಡ್ಡ ಮೇಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next