Advertisement

ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿದ ಬಿಜೆಪಿ: ಡಿಕೆಶಿ

12:51 PM May 26, 2022 | Team Udayavani |

ಬೆಳಗಾವಿ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸರ್ಕಾರಿ ಹುದ್ದೆ ಪಡೆಯಲು, ಅಭಿವೃದ್ಧಿ ಕೆಲಸಕ್ಕಾಗಿ ಸರ್ಕಾರಕ್ಕೆ ಕಮಿಷನ್‌ ನೀಡಬೇಕಾಗಿದೆ. ಹಣ ಇಲ್ಲದೇ ಯಾವ ಕೆಲಸವೂ ಆಗುವುದಿಲ್ಲ. ಪಿಎಸ್‌ಐ-ಉಪನ್ಯಾಸಕರ ನೇಮಕಾತಿ ಹಗರಣ, 40 ಪರ್ಸೆಂಟ್‌ ಕಮಿಷನ್‌ ಸರ್ಕಾರದ ಅಭ್ಯರ್ಥಿಗಳಿಗೆ ವೋಟ್‌ ಕೊಡಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದರು.

Advertisement

ನಗರದ ಮರಾಠಾ ಮಂದಿರ ಸಭಾಭವನದಲ್ಲಿ ಬುಧವಾರ ವಾಯವ್ಯ ಶಿಕ್ಷಕರ ಕ್ಷೇತ್ರದ ಪ್ರಕಾಶ ಹುಕ್ಕೇರಿ, ವಾಯವ್ಯ ಪದವೀಧರ ಕ್ಷೇತ್ರದ ಸುನೀಲ ಸಂಕ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರ ಹಗರಣಗಳಲ್ಲಿ ಮುಳುಗಿದೆ ಎಂದು ವಾಗ್ಧಾಳಿ ನಡೆಸಿದರು.

ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕ ದೇಶದ ನಾಲ್ಕು ಆಧಾರ ಸ್ತಂಭಗಳು. ಶಿಕ್ಷಣ ವ್ಯವಸ್ಥೆಯಲ್ಲಿಯೂ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಶಿಕ್ಷಣ ಕ್ಷೇತ್ರ ಸದೃಢಗೊಳಿಸಲು ಸಜ್ಜನತೆ, ಪ್ರಾಮಾಣಿಕತೆಗೆ ಹೆಸರಾದ ಅಭ್ಯರ್ಥಿಗಳನ್ನು ನಿಮಗೆ ಕೊಟ್ಟಿದ್ದೇವೆ. ಅವರನ್ನು ಬಹುಮತದಿಂದ ಗೆಲ್ಲಿಸಿ, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಧಾರವಾಡ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದ್ದಕ್ಕೆ ಬಸವರಾಜ ಹೊಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ಕೊಟ್ಟಿದ್ದಾರೆ. ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಅವರ ಪಕ್ಷದ ನಾಯಕರು ಆಯ್ಕೆಯಾಗುವುದಿಲ್ಲ ಎಂಬ ಆತಂಕದಿಂದಲೇ ಹಾಲಿ ವಿಧಾನ ಪರಿಷತ್‌ ಸದಸ್ಯನಿಗೆ ಟಿಕೆಟ್‌ ನೀಡದೇ ಬೇರೆಯವರಿಗೆ ಕೊಡಲಾಗಿದೆ ಎಂದು ವ್ಯಂಗ್ಯವಾಡಿದರು.

ಶಿಕ್ಷಕರ ಕ್ಷೇತ್ರದಲ್ಲಿ ತಮ್ಮ ಸೇವೆ ಮಾಡಲು ಹುಕ್ಕೇರಿ ಕಣಕ್ಕಿಳಿದಿದ್ದಾರೆ. ಜತೆಗೆ ಯುವ ಉತ್ಸಾಹಿ ಸಂಕ ಅವರು ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದ ಅವರು, ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ರಾಜಕಾರಣದಲ್ಲಿ ಎಲ್ಲವನ್ನೂ ಸಾ ಧಿಸುವ ಕಲೆ ಇರುತ್ತದೆ. ಸರ್ಕಾರ ಎಷ್ಟೇ ಪ್ರಬಲವಾಗಿದ್ದರೂ ಜನಾಭಿಪ್ರಾಯವೇ ಅಂತಿಮ. ಯಾರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಪ್ರತಿ ಕ್ಷೇತ್ರಕ್ಕೂ ವೀಕ್ಷಕರ ನೇಮಕ ಮಾಡಲಾಗುವುದು ಎಂದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಕೇವಲ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿದ್ದಾರೆ ಎಂದು ಭಾವಿಸದೇ ಎಲ್ಲರೂ ಸಕ್ರಿಯರಾಗಿ ಕೆಲಸ ಮಾಡಬೇಕು. ಇನ್ನೂ ಕಾಲಾವಕಾಶವಿದೆ. ಶಿಕ್ಷಣ ಕ್ಷೇತ್ರ ಬದಲಾವಣೆ ಹಂತ ನಮ್ಮಿಂದಲೇ ಆರಂಭವಾಗಲಿ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ಎರಡು ಮತಕ್ಷೇತ್ರಗಳಲ್ಲಿ ಮೂರು ಜಿಲ್ಲೆಗಳಿವೆ. ಹಿರಿಯರು ಮತ್ತು ಯುವಕರಿಗೆ ತಲಾ ಒಂದು ಟಿಕೆಟ್‌ ನೀಡಲಾಗಿದೆ. ಇಬ್ಬರನ್ನೂ ಗೆಲ್ಲಿಸಿ ಕೊಡುವ ಹೊಣೆ ಕಾಂಗ್ರೆಸ್‌ ಕಾರ್ಯಕರ್ತರದ್ದಾಗಿದೆ. ಭ್ರಷ್ಟಾಚಾರ ಬಗ್ಗೆ ಟೀಕಿಸಲು ಈಗ ಸಮಯವಿಲ್ಲ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆ ಮತದಾರರಿಗೆ ತಲುಪಿಸಿದರೆ ಗೆಲುವು ನಮ್ಮದೇ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಶಿಕ್ಷಕರ ಕ್ಷೇತ್ರ ಅತ್ಯಂತ ಸೂಕ್ಷ್ಮವಾದ, ಬುದ್ಧಿವಂತಿಕೆಯ ಚುನಾವಣೆ. ಬುದ್ಧಿವಂತರಿಗೆ ಬುದ್ಧಿ ಕಲಿಸಿ ಕೊಡುವಷ್ಟು ದೊಡ್ಡವರು ನಾವಲ್ಲ. ಕಾಂಗ್ರೆಸ್‌ 70 ವರ್ಷದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದೆ. ದೇಶದ ಈ ಹಿಂದಿನ ಶಿಕ್ಷಣ ನೀತಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಭಾರತ ಇಷ್ಟೊಂದು ಸಾಧನೆ ಮಾಡಿದೆ ಎಂದರು.

ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತನಾಡಿ, ಕೆಪಿಸಿಸಿ ಹಾಗೂ ಮೂರು ಜಿಲ್ಲೆಯ ಎಲ್ಲ ಮುಖಂಡರು ಸೇರಿ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ನೀವೆಲ್ಲ ಗೆಲ್ಲಿಸಿ, ತಮ್ಮ ಸೇವೆಗೆ ಅವಕಾಶ ನೀಡಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಸಚಿವರಾದ ಎ.ಬಿ. ಪಾಟೀಲ, ಡಿ.ಬಿ. ಇನಾಮದಾರ, ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ, ಉಮಾಶ್ರೀ, ಮಾಜಿ ಶಾಸಕರಾದ ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಫಿರೋಜ ಸೇಠ, ಮುಖಂಡರಾದ ರಾಜು ಸೇಠ, ಲಕ್ಷ್ಮಣರಾವ ಚಿಂಗಳೆ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಉಮೇಶ ಬಾಳಿ ಸೇರಿದಂತೆ ಇತರರು ಇದ್ದರು.

ಪ್ರಕಾಶ ಹುಕ್ಕೇರಿ ಹಿರಿಯ ನಾಯಕರು. ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಜಿಲ್ಲಾ ಪಂಚಾಯಿತಿಯಿಂದ ಹಿಡಿದು ಸಂಸತ್‌ವರೆಗಿನ ಎಲ್ಲ ಹಂತಗಳಲ್ಲೂ ಕ್ರಿಯಾಶೀಲವಾಗಿ ಪಾಲ್ಗೊಂಡು ಅಭಿವೃದ್ಧಿ ಸಾಧಿಸಿದ ಅನುಭವ ಇದೆ. ಚಿಕ್ಕೋಡಿ ಕ್ಷೇತ್ರವನ್ನು ಮಾದರಿ ಮಾಡಿರುವ ಹೆಗ್ಗಳಿಕೆ ಹುಕ್ಕೇರಿಯವರದ್ದು. -ಡಿ.ಕೆ. ಶಿವಕುಮಾರ, ಅಧ್ಯಕ್ಷರು, ಕೆಪಿಸಿಸಿ

ಪ್ರಕಾಶ ಹುಕ್ಕೇರಿ ಮುತ್ಸದ್ಧಿ, ಅನುಭವಿ ರಾಜಕಾರಣಿ. ಬೆಳಗಾವಿಯಲ್ಲಿ ಬಿಮ್ಸ್‌ ಆಗಲು ಹುಕ್ಕೇರಿ ಕಾರಣ. ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ ಇದೆ. 25 ವರ್ಷದ ಯುವಕನ ತರಹ ಆಸಕ್ತಿ, ಉತ್ಸಾಹ ಇದೆ. ಶಿಕ್ಷಕರ ಕಲ್ಯಾಣ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸಲಿದ್ದಾರೆ. -ಲಕ್ಷ್ಮೀ ಹೆಬ್ಟಾಳಕರ, ಶಾಸಕಿ, ಬೆಳಗಾವಿ ಗ್ರಾಮೀಣ

ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿಯ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಎರಡೂ ಕ್ಷೇತ್ರ ಗೆಲ್ಲಲು ಸಕ್ರಿಯರಾಗಿ ದುಡಿಯಬೇಕು. –ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷರು, ಕೆಪಿಸಿಸಿ

Advertisement

Udayavani is now on Telegram. Click here to join our channel and stay updated with the latest news.

Next