Advertisement

ಹಾಗಲಕಾಯಿ ಕಹಿ ಎಂದು ದೂರದಿರಿ

02:56 PM Feb 21, 2017 | Team Udayavani |

ಹಾಗಲಕಾಯಿ ಸಮೃದ್ಧವಾದ ತರಕಾರಿ. ಹತ್ತು ಹಲವು ಕಾಯಿಲೆಗಳಿಗೆ ಉಪಶಮನ ನೀಡಬಲ್ಲಂಥ ಔಷಧೀಯ ಅಂಶಗಳು ಇದರಲ್ಲಿವೆ..

Advertisement

ಹಾಗಲಕಾಯಿ ಎಂದಾಕ್ಷಣ ಅದು ಮಧುಮೇಹಿಗಳಿಗೆ, ನಾವು ಏಕೆ ತಿಂದು ಬಾಯಿ ಕಹಿ ಮಾಡಿಕೊಳ್ಳಬೇಕು ಎಂದು ಆಲೋಚಿಸದಿರಿ. ಯಾಕೆಂದರೆ, ಕಡು ಕಹಿಯಾದ ಹಾಗಲಕಾಯಿಯನ್ನು ಸ್ವಲ್ಪ ಪ್ರಮಾಣವಾದರೂ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಖಚಿತ.

ಮೊಮೊರ್ಡಿಕಾ ಚರಾಂತಿಯ, ಬಿಟರ್‌ಗಾರ್ಡ್‌ ಎಂದೆಲ್ಲ ಕರೆಯಲ್ಪಡುವ ಹಾಗಲಕಾಯಿಯು ಕ್ಯಕುರ್ಬಿಟೇಸಿಯ ಜಾತಿಗೆ ಸೇರಿದ ತರಕಾರಿ. ಹೆಚ್ಚಾಗಿ ಹಾಗಲಕಾಯಿಯು ಉಷ್ಣ ವಲಯಗಳಲ್ಲಿ ಬೆಳೆಯುತ್ತವೆ.  ಇದರ ಪ್ರತಿ ಸಸ್ಯವು ಪ್ರತ್ಯೇಕವಾದ ಹಳದಿ  ಕಂದು ಬಣ್ಣಗಳ ಹೂವು ಹೊಂದಿರುತ್ತದೆ. 

ಇದು ಸೌತೆಕಾಯಿ, ಹಸುರು ದಪ್ಪ ಮೆಣಸಿಕಾಯಿಯ ಮಾದರಿಯನ್ನು ಹೋಲುತ್ತದೆಯಾದರೂ, ಬಹಳ ಕಹಿ. ಕಾಯಿಯ ಹೊರಭಾಗವೂ ತೆಳುವಾಗಿರುವುದರ ಜತೆಗೆ ಖಾದ್ಯವಾಗಿ ಬಳಸಬಹುದು. ಅದರ ಕಹಿ ಸ್ವಾದಕ್ಕಾಗಿ ಸಾಮಾನ್ಯವಾಗಿ ಚೈನೀಸ್‌ ಅಡುಗೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ  ಹುರಿದ ತಿನಿಸುಗಳ ತಯಾರಿಯಲ್ಲಿ ಬಳಕೆ ಹೆಚ್ಚು. ಮಾತ್ರವಲ್ಲದೇ ಇದನ್ನು ಸೂಪ್‌ನಲ್ಲಿ ಹಾಗೂ ಟೀನಂತೆಯೂ ಬಳಸಲಾಗುತ್ತದೆ. ಅದರ ಎಳೆಯದಾದ ಚಿಗುರು ಬಳ್ಳಿ ಹಾಗೂ ಎಲೆಗಳನ್ನೂ ಸೇವಿಸಬಹುದು.

ಔಷಧೀಯ ಗುಣಗಳು
ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್‌ ಹಾಗೂ ಆಫ್ರಿಕನ್‌ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸುತ್ತಾರೆ.

Advertisement

ರಕ್ತ ಶುದ್ಧೀಕರಣ
ರಕ್ತಕ್ಕೆ ಸಂಬಂಧಿಸಿದ  ಅನೇಕ ತೊಂದರೆಗಳನ್ನು ನೀಗಿಸುವಲ್ಲಿ  ಹಾಗಲಕಾಯಿ ತುಂಬಾ ಸಹಕಾರಿ. ಕೆಟ್ಟ ರಕ್ತದಿಂದ  ಉಂಟಾಗುವ ಹುಣ್ಣು, ಚರ್ಮದ ತುರಿಕೆ  ಮತ್ತು ಕೀವು ಸೋರುವುದು ತಡೆಯುತ್ತದೆ. ನಿಂಬೆ ಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ  ಇದನ್ನು ಸೇವಿಸುತ್ತಾ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.

ಮಧುಮೇಹ
ಇದರಲ್ಲಿನ ಹೈಪೊಗೈಸಮಿಕ್‌ ಎಂಬ ನೈಸರ್ಗಿಕ ಇನ್ಸುಲಿನ್‌  ರಕ್ತದಲ್ಲಿನ  ಸಕ್ಕರೆ ಅಂಶವನ್ನು  ತಗ್ಗಿಸುವಲ್ಲಿ ಸಹಕಾರಿ. ಜತೆಗೆ  ರಕ್ತಕ್ಕೆ ಗ್ಲೂಕೋಸ್‌ ನೀಡಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಜೀರ್ಣಿಸಲು ಸಹಕಾರಿ
ಕಹಿ ರುಚಿಯಿರುವ ಇತರ ಆಹಾರಗಳ ರೀತಿ, ಹಾಗಲಕಾಯಿಯು ಆಹಾರ ಪಚನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಅಜೀರ್ಣ ಹಾಗೂ ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿ. ಆದಾಗ್ಯೂ ಅತಿ ಬಳಕೆಯಿಂದ ಇದು ಎದೆ ಉರಿ  ಹಾಗೂ ಹುಣ್ಣುಗಳಿಗೆ ಕಾರಣವಾದೀತೆಂದು ಭಾವಿಸಲಾಗುತ್ತದೆ. 

ಲಾಡಿಹುಳ ನಿರೋಧಕ
ಹಾಗಲಕಾಯಿಯನ್ನು ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊ ನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ.

ಕ್ಯಾನ್ಸರ್‌ಗೆ ಬಳಕೆ
ಹಾಗಲಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಕ್ಯಾನ್ಸರ್‌ ವಿರುದ್ಧ ಹೋರಾಡಲು ಈ ಅಂಶಗಳು ಸಹಕಾರಿಯಾಗುತ್ತವೆ.

ಮಲೇರಿಯಾ ನಿರೋಧಕ 
ಹಾಗಲಕಾಯಿಗೆ ಕಹಿಯು ಕ್ವಿನೈನ್‌ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಇದು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. 

ವೈರಸ್‌ ನಿರೋಧಕ 
ಸಿಡುಬು ಹಾಗೂ ದಡಾರದಂತಹ ರೋಗಗಳ  ವಿರುದ್ಧ ಈ ಸಸ್ಯವನ್ನು  ಬಳಸಲಾಗುತ್ತದೆ. ಇದರ  ಸಂಯುಕ್ತಗಳು ಎಚ್‌ಐವಿ ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು  ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ.
ಕಾಲರಾ, ಜಾಂಡಿಸ್‌ನಂತಹ ಅಪಾಯಕಾರಿ ರೋಗಗಳ ತಡೆಗೆ  ಇದು ರಾಮಬಾಣ. ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರ, ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ಗಂಟಲಿನ ತೊಂದರೆ, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಸ್ರಾವ,  ತುರಿಗಜ್ಜಿ, ತೂಕ ನಿಯಂತ್ರಣಕ್ಕೆ ಹಾಗೂ ಚರ್ಮದ ಇತರ ಸಮಸ್ಯೆಗನ್ನು ಒಳಗೊಂಡಂತೆ  ಹಲವು ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್‌, ಮೂಲವ್ಯಾಧಿ, ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು.

- ವಿನೋದ್‌ ರಾಜ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next