Advertisement

ಠಾಕ್ರೆ ಬಣಕ್ಕೆ ಮತ್ತೆ “ಶಿಂಧೆ ಶಾಕ್‌’: ಶಿವಸೇನೆಯ 12 ಸಂಸದರು ಶಿಂಧೆ ಬಣಕ್ಕೆ ಶಿಫ್ಟ್?

09:10 PM Jul 18, 2022 | Team Udayavani |

ಮುಂಬೈ: ಶಿವಸೇನೆಯಿಂದ ಹೊರಬಂದು ಮುಖ್ಯಮಂತ್ರಿಯಾಗಿರುವ ಶಿಂಧೆ ಹಾಗೂ ಅವರ ಬಣ, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರಿಗೆ ಮತ್ತೊಂದು ಆಘಾತ ನೀಡಿದೆ.

Advertisement

ಠಾಕ್ರೆಯ ಬಣದಲ್ಲಿರುವ 12 ಸಂಸದರು ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಈ ಎಲ್ಲಾ ಸಂಸದರು ಸೋಮವಾರದಂದೇ ದೆಹಲಿಗೆ ಹೊರಡಲು ಸಿದ್ಧತೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ.

ಇದಕ್ಕೆ ಪುಷ್ಠಿ ನೀಡುವಂತೆ, ಮುಖ್ಯಮಂತ್ರಿ ಶಿಂಧೆ ಕೂಡ ಸೋಮವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿಯಾದ ನಂತರ ಇದು ಶಿಂಧೆಯವರ ಎರಡನೇ ದೆಹಲಿ ಭೇಟಿ.

ಮುಖ್ಯಮಂತ್ರಿಯಾದ ಹೊಸತರದಲ್ಲಿ ಅವರು ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಸಂಪರ್ಕದಲ್ಲಿರುವ ಸಂಸದರ್ಯಾರು?
ಶಿವಸೇನೆಯಲ್ಲಿ ಸದ್ಯಕ್ಕೆ 18 ಸಂಸದರಿದ್ದಾರೆ. ಇವರಲ್ಲಿ ಶಿಂಧೆ ಬಣದೊಂದಿಗೆ ಸಂಪರ್ಕದಲ್ಲಿರುವವರೆಂದರೆ, ಧೈರ್ಯಶೀಲ್‌ ಸಂಭಾಜಿರಾವ್‌ ಮಾನೆ, ಸದಾಶಿವ ಲೋಖಂಡೆ, ಹೇಮಂತ್‌ ಗೋಡ್ಸೆ, ಹೇಮಂತ್‌ ಪಾಟೀಲ್‌, ರಾಜೇಂದ್ರ ಗವಿತ್‌, ಸಂಜಯ್‌ ಮಾಂಡಲಿಕ್‌, ಶ್ರೀಕಾಂತ್‌ ಶಿಂಧೆ, ಶ್ರೀರಂಗ್‌ ಬಾರ್ನೆ, ರಾಹುಲ್‌ ಶೆವಾಲೆ, ಪ್ರತಾಪರಾವ್‌, ಗಣಪತ್‌ರಾವ್‌ ಜಾಧವ್‌, ಕೃಪಾಲ್‌ ತುಮನೆ, ಭಾವನಾ.

Advertisement

ಪಕ್ಷದಿಂದ ಉಚ್ಚಾಟನೆ
ಶಿಂಧೆ ಬಣದ ಪರವಾಗಿ ಕೆಲಸ ಮಾಡಿದ ಆರೋಪದಡಿ ಠಾಕ್ರೆಯವರು, ಮಹಾರಾಷ್ಟ್ರದ ಮಾಜಿ ಪ್ರವಾಸೋದ್ಯಮ ಸಚಿವ ವಿಜಯ್‌ ಶಿವತಾರೆ, ಹಿಂಗೋಲಿ ಜಿಲ್ಲೆಯ ಶಿವಸೇನೆ ಅಧ್ಯಕ್ಷ ಶಾಸಕ ಸಂತೋಷ್‌ ಬಂಗಾರ್‌, ಥಾಣೆಯ ಶಿವಸೇನೆಯ ಜಿಲ್ಲಾ ಪ್ರಮುಖ್‌ ಆದ ನರೇಶ್‌ ಮ್ಹಾಸ್ಕೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next