Advertisement

ಬೀದರ:ಭೂರಮೆಗೆ ಚರಗ ಚೆಲ್ಲಿ ರೈತರ ಪ್ರಾರ್ಥನೆ

05:24 PM Jan 13, 2021 | Team Udayavani |

ಬೀದರ: ತಲೆ ಮೇಲೆ ಭಕ್ಷ್ಯ ಭೋಜನದ ಬುಟ್ಟಿ ಹೊತ್ತು ಹೊಲದತ್ತ ಹೆಜ್ಜೆ ಹಾಕಿದ ರೈತ ಕುಟುಂಬಗಳು… “ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ? ಎಂದು ಕೂಗುತ್ತ ಭೂರಮೆಗೆ ಚರಗ ಚೆಲ್ಲಿ ಭೂತಾಯಿಗೆ  ಪ್ರಾರ್ಥಿಸಿದ ಅನ್ನದಾತರು… ಬಂಧು-ಬಳಗ- ಸ್ನೇಹಿತರಿಗೆ ದಾಸೋಹ ಸೇವೆ ಮಾಡಿದ ನೇಗಿಲ ಯೋಗಿಗಳು…!

Advertisement

ಇದು ಜಿಲ್ಲೆಯ ವಿವಿಧೆಡೆ ಮಂಗಳವಾರ ಎಳ್ಳಮಾವಾಸ್ಯೆ ಹಿನ್ನೆಲೆ ಕಂಡು ಬಂದ ದೃಶ್ಯ. ಹೆಮ್ಮಾರಿ ಕೊರೊನಾ ಮತ್ತು ಪ್ರಕೃತಿ ವಿಕೋಪದ ಹೊಡೆತದಿಂದ ಅನ್ನದಾತರು ಆರ್ಥಿಕವಾಗಿ ತತ್ತರಿಸಿದ್ದರು. ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಜಾತಿ, ಮತ ಎಂಬ ಭೇದ-ಭಾವ ಎನ್ನದೇ ಎಲ್ಲೆಡೆ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು..

ಎಳ್ಳಮಾವಾಸ್ಯ ಹಬ್ಬ ಭೂತಾಯಿಯ ಆರಾಧನೆ ಪ್ರತೀಕವಾಗಿದೆ. ಪ್ರತಿ ಹಬ್ಬಗಳನ್ನು ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಸಿದ್ಧಪಡಿಸಿ ಸವಿದು, ಆಚರಿಸಿದರೆ ಎಳ್ಳ ಅಮಾವಾಸ್ಯೆ ದಿನದಂದು ಮಾತ್ರ ಹೊಲದಲ್ಲಿ ಆಚರಿಸುವುದು ಈ ಹಬ್ಬದ ವಿಶೇಷ. ಎಳ್ಳ ಅಮವಾಸ್ಯೆ ಹಬ್ಬ ಗ್ರಾಮೀಣ ಭಾಗದ ಸೊಗಡನ್ನು ಇಂದಿಗೂ
ಜೀವಂತವಾಗಿಡುತ್ತಿದೆ.

ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಬೆಳಗ್ಗೆ ಬುಟ್ಟಿಯಲ್ಲಿ ತುಂಬಿಕೊಂಡು ರೈತರು ಹೊಲಗಳಿಗೆ ಬಂದು, ಅಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸುವ ಗುಡಿಸಿಲು ಮತ್ತು ಪಾಂಡವರಿಗೆ ಪೂಜೆ ಸಲ್ಲಿಸಿದರು. ನಂತರ ಜೋಳದ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಪೈರುಗಳ ಮಧ್ಯೆ ನಿಂತು ಚರಗಾ ಚೆಲ್ಲುವ ಮೂಲಕ “ಭೂತಾಯಿಗೆ ನಮಿಸುತ್ತ ಒಳ್ಳೆಯ ಬೆಳೆ ಕೊಡಮ್ಮಾ’ ಎಂದು ಕಾಯಕ ಜೀವಿಗಳು ಪ್ರಾರ್ಥಿಸಿದರು.

ಇತರ ಹಬ್ಬಗಳಿಗಿಂತ ಎಳ್ಳ ಅಮಾವಾಸ್ಯೆ ವಿಶೇಷವಾಗಿರುವಂತೆ ಮಾಡುವ ಭಕ್ಷ್ಯ ಭೋಜನಗಳಲ್ಲೂ ಸಹ ಡಿಫರೆಂಟ್‌. ಈ ಹಬ್ಬಕ್ಕಾಗಿ ವಿವಿಧ ಕಾಳು ಮತ್ತು
ತರಕಾರಿಗಳಿಂದ ತಯಾರಿಸಿದ ಭಜ್ಜಿ ವಿಶೇಷ. ಜತೆಗೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಬಗೆ ಬಗೆಯ ಅನ್ನ, ಅಂಬಲಿ ಮತ್ತು ಹುಗ್ಗಿ ಸೇರಿದಂತೆ ವಿವಿಧ ಭಕ್ಷ್ಯ ಅಲ್ಲಿರುತ್ತೆ. ಬಂಧು-ಬಾಂಧವರು ಹಸಿರು ಪರಿಸರದ ಮಧ್ಯ ಊಟದ ಸವಿಯನ್ನು ಸವಿದರು. ಜಿಲ್ಲೆಯ ಕೆಲವೆಡೆ ಬುಧವಾರ ಸಹ ಹಬ್ಬವನ್ನು ಅಚರಿಸಲಾಗುತ್ತಿದ್ದು, ರೈತರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Advertisement

ಉದ್ಯಾನದಲ್ಲಿ ಕಿಕ್ಕಿರಿದು ಸೇರಿದ್ದ ಜನ ಇಂದಿನ ಯಾಂತ್ರಿಕಮಯ ಜೀವನದಲ್ಲಿ ಒತ್ತಡಗಳ ಮಧ್ಯೆ ಕಾಲ ಕಳೆಯುವ ನಗರ ವಾಸಿಗರು ಎಳ್ಳ ಅಮಾವಾಸ್ಯೆ ಹಬ್ಬದಂದು ತಮ್ಮ ತಮ್ಮ ಊರುಗಳಿಗೆ ಅಥವಾ ಸಂಬಂಕರ ಜಮೀನುಗಳಿಗೆ ತೆರಳುತ್ತಾರೆ. ಇನ್ನೂ ಕೆಲವರು ನಗರದ ಪ್ರಸಿದ್ಧ ದೇವಸ್ಥಾನ ಮತ್ತು ಉದ್ಯಾನವನ, ವಿಹಾರಧಾಮಕ್ಕೆ ಹೋಗಿ ಊಟ ಮಾಡಿ ಹಬ್ಬವನ್ನು ಆಚರಿಸಿದರು. ಇಂತಹ ಹಬ್ಬಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next