Advertisement

ಬಿಚ್ಚಿದರೂ ಬಿಚ್ಚದ ಗಂಟು

03:45 AM Jan 22, 2017 | Harsha Rao |

ಪಿ. ಲಂಕೇಶ್‌ರ ಕವಿತೆ ದೇಶಭಕ್ತ ಸೂಳೆಮಗನ ಗದ್ಯಗೀತೆ ಕುರಿತು ಯೋಚಿಸುತ್ತಿ¨ªೆ. 1967ರಲ್ಲಿ ಪ್ರಕಟವಾದ ಅವರ “ಬಿಚ್ಚು’ ಕವನ ಸಂಕಲನದಲ್ಲಿ ಬಂದ ಕವನ ಇದು. ಇಂದಾದರೆ ಈ ಕವಿತೆಯನ್ನು ಯಾವ ಪತ್ರಿಕೆಯಾದರೂ ಪ್ರಕಟಿಸುವ ಧೈರ್ಯ ತೋರೀತೇ ಎಂದು ಆಶ್ಚರ್ಯವಾಗುತ್ತದೆ. “ದೇಶಭಕ್ತ ಸೂಳೆಮಗ’ ಎಂಬ ಮಾತೇ ಹಲವು ಜನರನ್ನು ರೊಚ್ಚಿಗೆಬ್ಬಿಸುವಂಥದು. ಕವಿತೆ ಪೂರ್ತಿ ಇಂಥ ಬಯುYಳ ಪದಗಳಿವೆ. ಆದರೆ, ನಿಜವಾದ ದೇಶಭಕ್ತರನ್ನೇನೂ ಲಂಕೇಶ್‌ ನಿಂದಿಸುವುದಿಲ್ಲ; ಸೋಗಲಾಡಿ ದೇಶಭಕ್ತರನ್ನು ನಿಂದಿಸುತ್ತಾರೆ. ಮೊದಲು ಬರುವುದು ಕ್ರಾಂತಿ, ನಂತರ ಬರುವುದು ಅದರ ಅಣಕ ಎನ್ನುವ ಮಾರ್ಕ್ಸ್ನ ಮಾತನ್ನು ಸಾಧಿಸಿ ತೋರಿಸುವಂತೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿಂದೆಯೇ ಬಂದ ಬೂಟಾಟಿಕೆಯ ಕಾಲಘಟ್ಟವನ್ನು ಲಂಕೇಶ್‌ ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅವರಿಗೆ ಗೋಪಾಲಕೃಷ್ಣ ಅಡಿಗರ ಕವಿತೆಗಳ ಪ್ರೇರಣೆಯೂ ಇದ್ದಿರಬಹುದು. ಅಡಿಗರು ಕೂಡ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಧುರೀಣರ ಕಡು ವಿರೋಧಿಗಳಾಗಿದ್ದರು. ಇದು ಯಾವುದೂ ವ್ಯಕ್ತಿ ನಿಂದನೆ ಅಲ್ಲ, ಬದಲು ಆದರ್ಶವೊಂದು ಬಂದು ತಲಪಿದ ಅಧೋಗತಿಯ ಟೀಕೆ ಎಂದು ತಿಳಿಯಬೇಕು. ಲಂಕೇಶ್‌ ತಮ್ಮ ಕವಿತೆಯಲ್ಲಿ ಹೊರಹಾಕಿದ್ದು ಇಂಥ ದುರವಸ್ಥೆಯ ಕುರಿತಾದ ಧಿಕ್ಕಾರದ, ವ್ಯಂಗ್ಯದ, ಆತ್ಮಾವಹೇಳನದ ಧ್ವನಿಯಾಗಿತ್ತು. ಅದೊಂದು ರೊಚ್ಚಿನ, ರೇಗಾಟದ, ಹತಾಶೆಯ, ಅಸಹಾಯಕತೆಯ ಕೂಗಿನಂತೆ ಕಂಡುದರಲ್ಲಿ ಆಶ್ಚರ್ಯವಿಲ್ಲ. ನವ್ಯ ಸಾಹಿತ್ಯ ಒಟ್ಟಾರೆಯಾಗಿ ಈ ನೆಲೆಯಲ್ಲಿ ಮೂಡಿ ಬಂದುದು. ನಮಗೆ ಕಡಿವಾಣ ಹಾಕುತ್ತಿದ್ದವರು ಯಾರೂ ಇರಲಿಲ್ಲ: ಯಾಕೆಂದರೆ ಎಲ್ಲರೂ ಬಯಸಿದ ಸ್ವಾತಂತ್ರÂದ ಆ ಘೋಷದ ಇನ್ನೊಂದು ಆಯಾಮವೇ ನಮ್ಮದಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೇಶಭಕ್ತ ಸೂಳೆಮಗನ ಗದ್ಯಗೀತೆಯಲ್ಲಿ ಕವಿ ಸ್ವತಃ ತಮ್ಮನ್ನೂ ಈ ಕೆಟಗರಿಯಲ್ಲಿ ಸೇರಿಸಿಕೊಳ್ಳುತ್ತಾರೆ ಎನ್ನುವುದು.

Advertisement

ಆದ್ದರಿಂದ ಇಲ್ಲಿ ನೀವು-ನಾವು ಎನ್ನುವ ವ್ಯತ್ಯಾಸವಿಲ್ಲ, ಎಲ್ಲರೂ ಬಾಧ್ಯಸ್ಥರೇ. ಅದು ಯಾವುದೇ ಮೌಲ್ಯದ ವಿರುದ್ಧವಾಗಿರದೆ, ಅಪಮೌಲ್ಯದ ವಿರುದ್ಧದ ಆಕ್ರೋಶವಾಗಿತ್ತು. ಮೊತ್ತದಲ್ಲಿ, ನವ್ಯವೆಂದರೆ ಅದೊಂದು ಆತ್ಮಾವಲೋಕನ ಯುಗ. 
ಆಹಾ! ದೇಶಬಾಂಧವ ನಿನ್ನ ಅಪ್ಪಿ ಕೊಂಡಾಡಲೆ|
ನಿನ್ನ ಕೂದಲ ಬಾಚಿ ಹೂಮಾಲೆ ಹಾಕಲೆ!
ವೀರಮಾತೆಯ ಆರ್ಯಸಂಸ್ಕƒತಿಯ ಕುಸುಮ! ಅನ್ನಲೆ!
ತಿಲಕವಿಟ್ಟು ಸಂತೋಷಪಡಲೆ!
ಸೂಳೆಮಗನೆ, ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತೆ.
ನೀನೆಂದೊಡನೆ ನಿನ್ನ ಅಮ್ಮನ ನೆನಪಾಗುತ್ತೆ.
ನನ್ನ ಅಮ್ಮನ ನೆನಪಾಗುತ್ತೆ.
ಸುಳ್ಳು ಶುರುವಾದೊಡನೆ ಯಾರೋ ಗೊಳ್ಳನೆ ನಕ್ಕು ಬೆವೆಯುತ್ತೆ.
ಈ ಗಂಟಿಗೇನನ್ನುವುದು? 
    (ದೇಶಭಕ್ತ ಸೂಳೆಮಗನ ಗದ್ಯಗೀತೆ)

ನಿನ್ನ ಕರೆದರೆ ನನ್ನನೇ ಕರೆದಂತಾಗುತ್ತೆ ಎಂಬ ಮಾತನ್ನು ಗಮನಿಸಿ; ಹಾಗೆಯೇ ಮುಂದೆ ಓದುಗನನ್ನು “ಅನುಜ’ ಎಂದು ಸಂಬೋಧಿಸಲಾಗುತ್ತೆ. ಇÇÉೊಂದು ಅನನ್ಯತೆಯಿದೆ. 

ಆದರೆ, ನವ್ಯಕ್ಕೆ ಬರೇ ಆಂತರಿಕ ಪ್ರೇರಣೆ ಮಾತ್ರವೇ ಇದ್ದುದಲ್ಲ, ಬಾಹ್ಯ ಪ್ರೇರಣೆಯೂ ಇತ್ತು: ಮುಖ್ಯವಾಗಿ ಇಂಗ್ಲಿಷ್‌ ಮತ್ತು ಇತರ ಯುರೋಪಿಯನ್‌ ಸಾಹಿತ್ಯದ ಪ್ರಭಾವ. ಎಝಾÅ ಪೌಂಡ್‌ ಹೇಳುವಂತೆ: The age demanded an image of its accelerated grimace. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಸುಮತೀಂದ್ರ ನಾಡಿಗರಂತೆ ಲಂಕೇಶ್‌ ಕೂಡ ಇಂಗ್ಲಿಷ್‌ ಮೇಷ್ಟ್ರು. ಆಧುನಿಕ ಪಾಶ್ಚಾತ್ಯ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದವರು. ನಂತರ 19ನೆಯ ಶತಮಾನದ ಫ್ರೆಂಚ್‌ ಕವಿ ಚಾರ್ಲ್ಸ್‌ ಬಾದಿಲೇರ್‌ನ Les Fleurs du mal ಎಂಬ ಕವಿತಾಸರಣಿಯನ್ನು ಪಾಪದ ಹೂವುಗಳು ಎಂಬುದಾಗಿ ಕನ್ನಡಕ್ಕೆ ಅನುವಾದಿಸಿದವರು. ದೇಶಭಕ್ತ ಬರೆಯುವ ಕಾಲಕ್ಕೆ ಅದಿನ್ನೂ ಪ್ರಕಟವಾಗಿರಲಿಲ್ಲ.

ಆದರೆ, ದೇಶಭಕ್ತ ಮತ್ತು ಇತರ ಕವಿತೆಗಳಲ್ಲಿ ಬಾದಿಲೇರ್‌ನ ಪ್ರಭಾವ ಬಿದ್ದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. Les Fleurs du mal ಕೃತಿಯ ಆರಂಭದ ಕವಿತೆ ಓದುಗನನ್ನು ಉದ್ದೇಶಿಸಿದೆ; ಅದರ ಕೊನೆಯಲ್ಲಿ ಕವಿ ಈ ಓದುಗನನ್ನು ಹಿಪೊಕ್ರೀಟ್‌ ಎಂದೂ ತನ್ನ ಹೋಲಿಕೆಯವ, ಅವಳಿಜವಳಿ ಎಂದೂ ಜರೆಯುತ್ತಾನೆ. ಲಂಕೇಶರ ದೇಶಭಕ್ತ ಕೂಡ ಅಂಥವನು. 

Advertisement

ಬಾದಿಲೇರನ ಈ ಸಾಲನ್ನು ಟಿ. ಎಸ್‌. ಎಲಿಯಟ್‌ ದ ವೇಸ್ಟ್‌ ಲ್ಯಾಂಡ್‌ ನಲ್ಲಿ ಯಥಾವತ್ತಾಗಿ ಬಳಸಿಕೊಳ್ಳುತ್ತಾನೆ. ನಮಗೆ ಹಲವರಿಗೆ ಬಾದಿಲೇರ್‌, ಮಲಾಮೆರ್‌, ಲಫೋರ್ಗ್‌, ರಿಂಬೋ ಮುಂತಾದ ಫ್ರೆಂಚ್‌ ಲೇಖಕರು ಪರಿಚಯವಾದದ್ದು ಪೌಂಡ್‌, ಎಲಿಯಟ್‌ ಮುಂತಾದ ಇಂಗ್ಲಿಷ್‌ ಲೇಖಕರ ಮೂಲಕವೇ. ಅವರ ಕವಿತೆಗಳು, ಬರಹಗಳು ವಿಭಿನ್ನವಾದ ಲೋಕವೊಂದನ್ನು ತೋರಿಸಿಕೊಟ್ಟುವು, ಎಂದರೆ ವಿಭಿನ್ನವಾದ ಒಂದು ಸಾಧ್ಯತೆಯನ್ನು. ಜೊತೆಗೆ ಫ್ರೆಂಚ್‌ ಅಸ್ತಿತ್ವವಾದವೂ ಕನ್ನಡವನ್ನು ಪ್ರವೇಶಿಸಿತು. ಕಮೂ, ಬೆಕೆಟ್‌ ಮೊದಲಾದವರ ಪರಿಚಯವಾಯಿತು; ಹಲವು ಕೃತಿಗಳು ಅನುವಾದಗೊಂಡುವು. ದೇಶಭಕ್ತರ‌ ಬೈಗುಳಗಳ ಪಟ್ಟಿಯಲ್ಲಿ ಎಕ್ಸಿಸ್ಟೆನ್ಶಿಯಲಿಸಂ (ಅಸ್ತಿತ್ವವಾದ) ಕೂಡ ಸೇರಿದೆ ಎನ್ನುವುದೊಂದು ಸ್ವಾರಸ್ಯ. 

ಬಾದಿಲೇರ್‌ನ ಬಗ್ಗೆ ಹೇಳುವುದಾದರೆ, ಮಾಡರ್ನಿಟಿಗೂ (ನವ್ಯ) ಅವನಿಗೂ ಹತ್ತಿರದ ನಂಟು. ಮಾಡರ್ನಿಟಿ ಎಂಬ ಪದವನ್ನು ಹುಟ್ಟುಹಾಕಿದವನೇ ಆತ. ಆಧುನಿಕ ಯುಗದಲ್ಲಿ ಎಲ್ಲವೂ ಕ್ಷಣಭಂಗುರವಾಗಿವೆ, ಅವನ್ನು ಹಿಡಿದಿಡುವುದು ಕಲೆಯ ಕರ್ತವ್ಯ ಎನ್ನುವುದು ಅವನ ಮಾಡರ್ನಿಟಿಯ ಕಲ್ಪನೆ. ಆದರೆ ಕ್ರಮೇಣ ಈ ಪದ ಇತರ ಹಲವಾರು ಅರ್ಥವೈಶಿಷ್ಟ್ಯತೆಗಳನ್ನೂ ಪಡೆದುಕೊಂಡಿತು. ನವ್ಯ ಸಾಹಿತ್ಯ ಸಂಕೀರ್ಣವು ವಿರೋಧಾಭಾಸಗಳಿಂದ ಕೂಡಿದ್ದೂ ಆಗಿರುವುದಕ್ಕೆ ಇದೆಲ್ಲವೂ ಕಾರಣ. ಅದುವರೆಗೆ ಅಪವಿತ್ರ ಎಂಬ ಕಾರಣಕ್ಕೆ ಕವಿತೆಯನ್ನು ಪ್ರವೇಶಿಸದ ವಸ್ತುವಿವರಗಳನ್ನು ಬಾದಿಲೇರ್‌ ಕವಿತೆಗೆ ತಂದ ಎನ್ನುವುದೂ ಚಾರಿತ್ರಿಕವಾಗಿ ಬಹಳ ಮಹತ್ವವಾದದ್ದು. ಆಧುನಿಕ ಕನ್ನಡ ಕವಿಗಳೂ ಅದನ್ನೇ ಮಾಡಿದರು; ಅವರಲ್ಲಿ ಲಂಕೇಶ್‌ ಪ್ರತ್ಯೇಕ ಉÇÉೇಖಕ್ಕೆ ಅರ್ಹರಾಗುತ್ತಾರೆ. ಇದು ಸಾಹಿತ್ಯಕ್ಕೆ ಹೊಸತೊಂದು ದೃಷ್ಟಿಕೋನವನ್ನು ನೀಡಿತು ಮತ್ತು ಸಮಾಜದಲ್ಲಿ ಸದ್ದಿಲ್ಲದ ಕ್ರಾಂತಿಗೆ ಕಾರಣವಾಯಿತು. ಬಿಚ್ಚುವಿನಲ್ಲಿ ಬರುವ ಅವ್ವ  ಕವಿತೆ ಇದಕ್ಕೆ ಮಹತ್ವದ ಉದಾಹರಣೆ. ಇಲ್ಲಿ ತಾಯಿಯ ಕುರಿತಾದ ಪವಿತ್ರ ಭಾವನೆಗಿಂತ ಅವಳ ಪ್ರೀತಿಯ ಒರಟು ವಾಸ್ತವತೆಯೇ ಹೆಚ್ಚಿನದಾಗುತ್ತದೆ. ಅವ್ವ ಅಲ್ಲದೆ ಬಿಚ್ಚು, ಅಡಿಗರು, ನನ್ನ ಸುತ್ತಾ ಮುಂತಾದ ಲಂಕೇಶರ ಪ್ರಾತಿನಿಧಿಕ ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. 

ಲಂಕೇಶರ ಬರಹಗಳ ಕುರಿತಾದ ಕೆಲವು ವಿವರಗಳಿಗೋಸ್ಕರ ನಾನು ಈಚೆಗೆ ವಿಕಿಪೀಡಿಯಾದಲ್ಲಿ ಹುಡುಕಿದೆ. ಲಂಕೇಶ್‌ ಬಗ್ಗೆ ಸಾಕಷ್ಟು ಮಾಹಿತಿಪೂರ್ಣವಾದ ಲೇಖನವೊಂದು ಅದರಲ್ಲಿ ಇದೆ. ಅವರ ಮರಣಾನಂತರ ಯಾರೋ ಬರೆದು ಅಪ್‌ಲೋಡ್‌ ಮಾಡಿದ ಲೇಖನ ಇದು. ನನ್ನನ್ನು ಚಕಿತಗೊಳಿಸಿದ್ದು ಬಿಚ್ಚು ಕವನಸಂಕಲನದ ಪ್ರಸ್ತಾಪ ಅದರಲ್ಲಿ ಇಲ್ಲದೇ ಇರುವುದು! ಇದೊಂದು ಆಶ್ಚರ್ಯಕರವಾದ ಲೋಪ ಎನ್ನುವುದರಲ್ಲಿ ಎರಡು ಮಾತಿರಲಾರದು. ಬಿಚ್ಚು ಲಂಕೇಶರ ಮೊದಲ ಕವನಸಂಕಲನ ಹಾಗೂ ಸಾಹಿತ್ಯವಲಯದಲ್ಲಿ ಒಂದು ಪ್ರಮುಖ ಘಟ್ಟವೆಂದು ಮಾನ್ಯವಾದುದು. ಯಾಕೆ ಇದರ ಪ್ರಸ್ತಾಪ ವಿಕಿಪೀಡಿಯಾದಲ್ಲಿ ಇಲ್ಲ? ಬಹುಶಃ ಪರಮೋಶಿಯಿಂದ ಎಂದುಕೊಂಡು ಲಂಕೇಶರೇ ಸಂಪಾದಿಸಿದ ಅಕ್ಷರ ಹೊಸ ಕಾವ್ಯ ಕವಿತಾ ಸಂಕಲನದಲ್ಲಿನ (1993ರ ಆವೃತ್ತಿ) ಕವಿಗಳ ಪರಿಚಯ ನೋಡಿದರೆ, ಅದರಲ್ಲೂ ಬಿಚ್ಚುವಿನ ಉÇÉೇಖವಿಲ್ಲ. ಅಕ್ಷರ ಹೊಸ ಕಾವ್ಯದಲ್ಲಿ ಲಂಕೇಶ್‌ ಆರಿಸಿದ ತಮ್ಮ ಒಟ್ಟು ಆರು ಕವಿತೆಗಳಲ್ಲಿ ಮೂರು, ನನ್ನ ಸುತ್ತಾ, ನಮ್ಮ ಕಡೆಯ ಜನ ಮತ್ತು ಅವ್ವ ಬಿಚ್ಚುವಿನಿಂದಲೇ ತೆಗೆದುಕೊಂಡದ್ದು; ಆದರೆ ಬಿಚ್ಚುವಿನ ಪ್ರಮುಖ ಕವನಗಳಾದ ಬಿಚ್ಚು, ದೇಶಭಕ್ತ ಸೂಳೆಮಗನ ಗದ್ಯಗೀತೆ, ಅಡಿಗರು ಇತ್ಯಾದಿಗಳನ್ನು ಅಕ್ಷರ ಹೊಸ ಕಾವ್ಯಕ್ಕಾಗಿ ಲಂಕೇಶರು ಆರಿಸಿಕೊಳ್ಳಲಿಲ್ಲ ಎನ್ನುವುದು ಅವರ ಮಾನದಂಡದ ಕುರಿತು ಕುತೂಹಲ ಹುಟ್ಟಿಸುತ್ತದೆ. ಯಾವ ಕಾರಣದಿಂದ ಬಿಚ್ಚು ನೇಪಥ್ಯ ಸೇರಿತು?

ಇವೆಲ್ಲ ಸ್ವಲ್ಪ ಅತಿಯಾದುವು ಎಂದು ಕವಿಗೆ ಅನಿಸಿರಬಹುದೆ? ಅವ್ವ  ಬರೆದ ಲಂಕೇಶ್‌ ಹಲವು ವರ್ಷಗಳ ನಂತರ (1989) ಅವ್ವ-2ನ್ನೂ ಬರೆದರು. ಅವ್ವ , ಬಿಚ್ಚು ಸಂಕಲನದಲ್ಲಿ ಸೇರಿದೆ; ಅವ್ವ-2 ತಾಯಿ ಸತ್ತು ಇಪ್ಪತ್ತೈದು ವರ್ಷ ಕಳೆದು ಬರೆದುದು, ಅಕ್ಷರ ಹೊಸ ಕಾವ್ಯದಲ್ಲಿ ಸೇರಿದೆ. ಅದರ ಕೊನೆಯ ಭಾಗ ಹೀಗಿದೆ:
ಸ್ಪಷ್ಟತೆ, ವೈಚಾರಿಕತೆಯೇ ಆಧುನಿಕ ಮನುಷ್ಯನ
ನಿರ್ದಿಷ್ಟ ಲಕ್ಷಣ ಎಂದು ಹೇಳುವ ನನಗೆ
ಕೊಂಚ ತಾಯ್ತನದ ವಿನಯ ಮತ್ತು ಮೌನ.
ಕಾಲು ಶತಮಾನದ ಬಳಿಕ;
ಜಗಳಗಂಟಿಯಾಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.

ಈ ಸಾಲುಗಳಲ್ಲಿ ನಮ್ಮ ಸಂದೇಹಕ್ಕೆ ಪರಿಹಾರವಿದೆಯೆಂದು ನನಗೆ ಅನಿಸುತ್ತದೆ. ಮುಂದೆ ಲಂಕೇಶರ ಕಾವ್ಯ ಬಿಚ್ಚುವಿಗಿಂತ ತೀರಾ ವಿಭಿನ್ನ ರೀತಿಯಲ್ಲಿ ಮುಂದುವರಿಯುತ್ತದೆ ಎನ್ನುವುದೂ ಇಲ್ಲಿ ಪ್ರಸ್ತುತ. 

– ಕೆ. ವಿ. ತಿರುಮಲೇಶ್‌

Advertisement

Udayavani is now on Telegram. Click here to join our channel and stay updated with the latest news.

Next