Advertisement

ಬರದಲ್ಲಿ ರೆಸಾರ್ಟ್‌ ರಾಜಕೀಯಕ್ಕೆ ಜನಾಕ್ರೋಶ

10:11 AM Jul 17, 2019 | Naveen |

ದುರ್ಯೋಧನ ಹೂಗಾರ
ಬೀದರ:
ಚುನಾವಣೆಯಲ್ಲಿ ಮತಕ್ಕಾಗಿ ಗ್ರಾಮೀಣ ಜನರ ಮನೆಬಾಗಿಲಿಗೆ ತೆರಳಿ ಮತದಾರರ ಕಾಲಿಗೆ ಬೀಳುವ ರಾಜಕಾರಣಿಗಳು ಇದೀಗ ಬರಕ್ಕೆ ತುತ್ತಾಗಿರುವ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಜನರ ಕಷ್ಟ ಆಲಿಸುವ ಬದಲು ಅಧಿಕಾರಕ್ಕಾಗಿ ರೆಸಾರ್ಟ್‌ ರಾಜಕೀಯದಲ್ಲಿ ತೊಡಗಿರುವುದು ಜಿಲ್ಲೆಯ ಜನರ ಆಕ್ರೋಷಕ್ಕೆ ಕಾರಣವಾಗಿದೆ.

Advertisement

ಮುಂಗಾರು ಮಳೆ ಇಲ್ಲದೇ ಬೆಳೆಗಳು ನೆಲಕಚ್ಚುವ ಲಕ್ಷಣಗಳು ಗೋಚರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ‌, ಜನಸಾಮಾನ್ಯರಿಗೆ ಧೈರ್ಯ-ಸ್ಥೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಐಷಾರಾಮಿ ರೆಸಾರ್ಟ್‌ ಕಡೆಗೆ ಮುಖ ಮಾಡಿರುವ ಜಿಲ್ಲೆಯ ಜನರು ರಾಜಕಾರಣಿಗಳ ನಡೆಗೆ ಛೀಮಾರಿ ಹಾಕುವಂತಾಗಿದೆ. ಬರದಿಂದ ತತ್ತರಿಸಿರುವ ಗ್ರಾಮಗಳ ಕಡೆಗೆ ಸಚಿವರು, ಶಾಸಕರು ಭೇಟಿ ನೀಡಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿತ್ತು. ಆದರೆ, ಇಂದು ಯಾರೂ ಯಾರ ಕೈಗೂ ಸಿಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಕಳೆದ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಅಲ್ಲದೆ, ಪ್ರಸಕ್ತ ಬೇಸಿಗೆಯಲ್ಲಿ ಔರಾದ, ಭಾಲ್ಕಿ ಹಾಗೂ ಬೀದರ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಇದೀಗ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಕೂಡ ನಿಗದಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಧಿಕಾರಿಗಳ ಪ್ರಕಾರ ಮುಂದಿನ 15 ದಿನಗಳಲ್ಲಿ ಉತ್ತಮ ಮಳೆ ಆಗದಿದ್ದರೆ ಇನ್ನೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಸದ್ಯ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿರುವ ಗ್ರಾಮಗಳಲ್ಲಿ ನೀರನ ಬವಣೆ ಹೆಚ್ಚಲಿದೆ ಎಂದು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಪೂರೈಸಿದ ಸಾಕಾಗುತ್ತಿಲ್ಲ ನೀರು: ಸದ್ಯ ಜಿಲ್ಲೆಯ ಐದು ತಾಲೂಕುಗಳಲ್ಲಿ 133 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು, ಪ್ರತಿನಿತ್ಯ 134 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 508 ಟ್ರಿಪ್‌ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಅಧಿಕಾರಿಗಳು ಪೂರೈಕೆ ಮಾಡುತ್ತಿರುವ ನೀರು ಜನರಿಗೆ ಸಾಕಾಗುತ್ತಿಲ್ಲ ಎಂಬ ಗೋಳು ಜನರಿಂದ ಕೇಳಿಬರುತ್ತಿವೆ. ಬೇಸಿಗೆಯಲ್ಲಿ ಒಬ್ಬ ವ್ಯಕ್ತಿಗೆ ಕನಿಷ್ಠ 40 ಲೀಟರ್‌ ನೀರು ಪೂರೈಕೆ ಮಾಡುತ್ತಿದ ಗ್ರಾಮೀಣ ಕುಡಿಯುವ ನೀರು ಇಲಾಖೆ ಇದೀಗ ಮಳೆಗಾಲದಲ್ಲಿ ಒಬ್ಬ ವ್ಯಕ್ತಿಗೆ 25ರಿಂದ 30 ಲೀ. ನೀರು ಪೂರೈಕೆ ಮಾಡುತ್ತಿದೆ. ಗ್ರಾಮೀಣ ಭಾಗದ ಬಹುತೇಕ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ನೀರು ಬತ್ತುತ್ತಿದ್ದು, ಜನರು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕುವಾರು ವಿವರ: ಔರಾದ ತಾಲೂಕಿನ 60 ಗ್ರಾಮಗಳಲ್ಲಿ 41 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ದಿನಕ್ಕೆ ಸರಾಸರಿ 215 ಟ್ರೀಪ್‌ ನೀರು ಸರಬರಾಜು ಮಾಡಲಾಗುತ್ತಿದೆ. 91 ಗ್ರಾಮಗಳಲ್ಲಿ 121 ಖಾಸಗಿ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಈ ವರೆಗೆ 68,15,176 ರೂ. ನೀರಿಗಾಗಿ ಖರ್ಚು ಮಾಡಲಾಗಿದ್ದು, ಇನ್ನು 31,76,895 ರೂ. ಬಾಕಿ ಪಾವತಿಸ‌ಬೇಕಾಗಿದೆ. ಬೀದರ ತಾಲೂಕಿನಲ್ಲಿ 16 ಗ್ರಾಮಗಳಲ್ಲಿ 21 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ 60 ಟ್ರಿಪ್‌ ನೀರು ಸರಬರಾಜು ಆಗುತ್ತಿದ್ದು, 19 ಗ್ರಾಮಗಳಲ್ಲಿ 32 ಖಾಸಗಿಯಿಂದ ನೀರು ಪೂರೈಸಲಾಗುತ್ತಿದೆ. ಈ ವರೆಗೆ ಒಟ್ಟಾರೆ 8,29,900 ಹಣ ಖರ್ಚು ಮಾಡಲಾಗಿದ್ದು, ಇನ್ನೂ 1,20,000 ರೂ. ಬಾಕಿ ಉಳಿದಿದೆ. ಭಾಲ್ಕಿ ತಾಲೂಕಿನ 24 ಗ್ರಾಮಗಳಲ್ಲಿ 32 ಟ್ಯಾಂಕರ್‌ ಮೂಲಕ ದಿನಕ್ಕೆ 140 ಟ್ರಿಪ್‌ ನೀರು ಪೂರೈಕೆ ಮಾಡಲಾಗುತ್ತಿದ್ದು, 59 ಗ್ರಾಮಗಳಲ್ಲಿ 114 ಖಾಸಗಿ ಕಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟಾರೆ ಈ ವರೆಗೆ 62,32,240 ರೂ. ಖರ್ಚು ಮಾಡಲಾಗಿದೆ. ಬಸವಕಲ್ಯಾಣ ತಾಲೂಕಿನ 28 ಗ್ರಾಮಗಳಲ್ಲಿ 37 ಟ್ಯಾಂಕರ್‌ ಮೂಲಕ ದಿನಕ್ಕೆ 84 ಟ್ರಿಪ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 43 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ, ತೆರೆದ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಈ ವರೆಗೆ 32,51,014 ರೂ. ಖರ್ಚು ಮಾಡಲಾಗಿದ್ದು, ಇನ್ನು 10,28,545 ರೂ. ಬಾಕಿ ಉಳಿದುಕೊಂಡಿದೆ. ಹುಮನಾಬಾದ ತಾಲೂಕಿನ 5 ಗ್ರಾಮಗಳಲ್ಲಿ 3 ಟ್ಯಾಂಕರ್‌ ಮೂಲಕ ದಿನಕ್ಕೆ 9 ಟ್ರಿಪ್‌ ನೀರು ಪೂರೈಸಲಾಗುತ್ತಿದ್ದು, 9 ಗ್ರಾಮಗಳಲ್ಲಿ 11 ಖಾಸಗಿ ನೀರಿನ ಮೂಲಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಈ ವರೆಗೆ 1,33,000 ಹಣ ಖುರ್ಚ ಮಾಡಲಾಗಿದ್ದು, ಇನ್ನು 1,05,400 ರೂ. ಬಾಕಿ ಪಾವತಿಸಬೇಕಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಮೋಡ ಬಿತ್ತನೆ ಕಾರ್ಯ ಮಾಡಿ: ಮುಂಗಾರು ಆರಂಭಾಗಿ ಒಂದೂವರೆ ತಿಂಗಳು ಕಳೆದಿದ್ದು, ಜಿಲ್ಲೆಯ ರೈತರು ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡುವಂತೆ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.60ರಷ್ಟು ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಮುಂದಿನ 15 ದಿನಗಳಲ್ಲಿ ಮಳೆ ಸುರಿಯದಿದ್ದರೆ ರೈತರು ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಮೋಡದ ವಾತಾವರಣ ಇದೆ. ಜಿಲ್ಲಾಡಳಿತ, ಜಿಲ್ಲೆಯ ಸಚಿವರು ಮೋಡ ಬಿತ್ತನೆ ಕಾರ್ಯ ಮಾಡಿದರೆ ಕುಡಿವ ನೀರು, ರೈತರ ಕೃಷಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆಡಳಿತ ಮುಂದಾಗಬೇಕು ಎಂಬ ಅನಿಸಿಕೆಯನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಕುಡಿಯುವ ನೀರಿನ ಭೀಕರತೆ ಹೆಚ್ಚಲಿದೆ. ಈಗಾಗಲೇ ಟ್ಯಾಂಕರ್‌ ಮೂಲಕ ಪೂರೈಕೆ ಮಾಡುತ್ತಿರುವ ಕಡೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಟ್ಯಾಂಕರ್‌ ನೀರು ಪೂರೈಕೆಗೂ ಸಮಸ್ಯೆ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಭಾವಿ ವ್ಯಕ್ತಿಗಳ ಬಾವಿಗಳನ್ನು ಸರ್ಕಾರದಿಂದ ವಶಕ್ಕೆ ಪಡೆದು ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವ ಗ್ರಾಮದಲ್ಲಿ ಯಾರ ಭೂಮಿಯಲ್ಲಿ ನೀರು ಇದೇಯೊ ಎಂದು ಗುರುತಿಸುವ ಕಾರ್ಯ ನಡೆದಿದ್ದು, ಅವುಗಳನ್ನು ವಶಕ್ಕೆ ಪಡೆದು ಜನರಿಗೆ ನೀರು ಪೂರೈಸಲಾಗುವುದು.
ರಾಚಪ್ಪಾ ಪಾಟೀಲ,
   ಗ್ರಾಮೀಣ ಕುಡಿಯುವ ನೀರು ಅಧಿಕಾರಿ

ಜಿಲ್ಲೆಯಲ್ಲಿ ಬರದಿಂದ ಜನ, ಜಾನುವಾರು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಉಳಿಯುವ ಶಾಸಕರು, ಸಚಿವರು ಜಿಲ್ಲೆಗೆ ಆಗಮಿಸಿ ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಜನರ ಹಣೆ ಬರಹ ಬದಲಿಸಬೇಕಾದ ಸರ್ಕಾರ ಇಂದು ಅಧಿಕಾರದ ಆಸೆಗಾಗಿ ಜನರ ಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಕ್ಷೇತ್ರದ ಜನರ ಕಷ್ಟಕ್ಕಿಂತ ಶಾಸಕರಿಗೆ ಅವರ ಅಧಿಕಾರವೇ ಮುಖ್ಯವಾಗಿದ್ದು ದುರದುಷ್ಟಕರ ಸಂಗತಿಯಾಗಿದೆ. ದುಡ್ಡು, ಅಧಿಕಾರದ ಆಸೆಗೆ ಶಾಸಕರು ಹೆಚ್ಚು ಒತ್ತು ನೀಡುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಜನರ ಕಷ್ಟಗಳು ಹೆಚ್ಚಾಗಲಿವೆ ಎಂಬ ಭಯ ಕಾಡುತ್ತಿದೆ. ಸಧ್ಯ ಎರಡು ವರ್ಷಗಳಿಂದ ಬರದ ಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಮೋಡದ ವಾತಾವರಣ ಇದೆ. ಜಿಲ್ಲೆಯಲ್ಲಿ ಮೂರು ಜನ ಸಚಿವರು ಇದ್ದಾರೆ. ಸರ್ಕಾರದಿಂದ ಮೋಡ ಬಿತ್ತನೆ ಮಾಡಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ, ಈ ಕಾರ್ಯ ಮಾಡಲು ನಮ್ಮ ಜಿಲ್ಲೆಯ ಸಚಿವರಿಗೆ ಆಗುತ್ತಿಲ್ಲ. ಪದೆಪದೆ ಬರಕ್ಕೆ ತುತ್ತಾಗುತ್ತಿರುವ ಹಾಗೂ ಹಿಂದುಳಿದ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.
ಮಲ್ಲಿಕಾರ್ಜುನ ಸ್ವಾಮಿ,
 ರೈತ ಸಂಘದ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next