Advertisement

ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಯೋಜನೆ

10:12 AM Jun 09, 2019 | Team Udayavani |

ಬೀದರ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.

Advertisement

ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಜುಲೈ 3ರ ವರೆಗೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 12ರೊಳಗಾಗಿ ಸಲ್ಲಿಸಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40,000 ರೂ.ಗಳು, ಪಟ್ಟಣ ಪ್ರದೇಶದವರಿಗೆ 55,000 ರೂ.ಗಳ ಮಿತಿಯಲ್ಲಿರಬೇಕು. 18ರಿಂದ 55 ವರ್ಷಗಳ ವಯೋಮಿತಿ ಹೊಂದಿರಬೇಕು. ಆಧಾರ್‌ ಕಾರ್ಡ್‌, ಚುನವಣಾ ಗುರುತಿನ ಚೀಟಿ, ಪಾನ್‌ ಕಾರ್ಡ್‌ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಐಎಫ್‌ಎಸ್‌ಸಿ ಕೋಡ್‌ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು.

ರಾಜ್ಯ ಸರ್ಕಾರದ ಯೋಜನೆಗಳು: ಚೈತನ್ಯ ಸಹಾಯಧನ ಯೋಜನೆಯಡಿ ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ ಅವಲಬಿಂತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ 25,000 ರೂ.ಗಳಿಂದ 5 ಲಕ್ಷ ರೂ.ಗಳ ವರೆಗೆ ಘಟಕಗಳಿಗೆ ಶೇ.20ರಷ್ಟು ಗರಿಷ್ಟ 25000 ರೂ.ಗಳ ಸಹಾಯಧನ ಮಂಜೂರು ಮಾಡಲಾಗುತ್ತದೆ. ಉಳಿಕೆ ಮೊತ್ತ ಬ್ಯಾಂಕ್‌ ಪಾಲಿನ ಸಾಲವಾಗಿರುತ್ತದೆ.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಚಟುವಟಿಕೆ ಅನುಸಾರ ಗರಿಷ್ಠ 2,00,000 ರೂ.ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ ಗರಿಷ್ಠ ಶೇ.15ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ.

Advertisement

ಕಿರುಸಾಲ ಯೋಜನೆಯಲ್ಲಿ ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ, ಹಾಲು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಗರಿಷ್ಠ 10,000 ರೂ.ಗಳ ಸಾಲ ಹಾಗೂ 5,000 ರೂ.ಗಳ ಸಹಾಯಧನ. ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ ಯೋಜನೆಯಡಿ ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ 2,00,000 ರೂ.ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ ಗರಿಷ್ಠ ಶೇ.15ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.2ರ ಬಡ್ಡಿದರದಲ್ಲಿ ಸಾಲ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ, ವಾರ್ಷಿಕ 3.50 ಲಕ್ಷ ರೂ.ಗಳಂತೆ, 3 ವರ್ಷಗಳ ಕೋರ್ಸ್‌ನ ಅವಧಿಗೆ, ಗರಿಷ್ಠ 10 ಲಕ್ಷಗಳ ಬಡ್ಡಿರಹಿತ ಸಾಲ ಸೌಲಭ್ಯ. ಅಭ್ಯರ್ಥಿಗಳು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ 3.50 ಲಕ್ಷಗಳನ್ನು ಮೀರಿರಬಾರದು ಹಾಗೂ ಅರ್ಹತಾ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು.

ವೈಯಕ್ತಿಕ ಕೊಳವೆಬಾವಿ ಯೋಜನೆಯಡಿ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ 2.50 ಲಕ್ಷಗಳಲ್ಲಿ 2 ಲಕ್ಷ ರೂ.ಗಳ ಸಹಾಯಧನ ಹಾಗೂ 50,000 ರೂ.ಗಳ ಶೇ.4ರ ಬಡ್ಡಿದರದಲ್ಲಿ ಸಾಲ.

ಸಾಮೂಹಿಕ ನೀರಾವರಿ ಯೋಜನೆಯಡಿ ಅರ್ಜಿ ಸಲ್ಲಿಸುವವರು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಕನಿಷ್ಠ 3 ಜನರು ಹೊಂದಿರುವ 8 ರಿಂದ 15 ಎಕರೆ ಜಮೀನಿಗೆ 4 ಲಕ್ಷಗಳ ವೆಚ್ಚದಲ್ಲಿ 2 ಕೊಳವೆ ಬಾವಿ, 15 ಎಕರೆಗಿಂತ ಹೆಚ್ಚಿನ ಜಮೀನಿಗೆ 6 ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿ ಕೊರೆಯಿಸಿ ಪಂಪ್‌ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ 50,000 ರೂ.ಗಳನ್ನು ವಿದ್ಯುತ್‌ ಸರಬರಾಜು ಕಂಪನಿಗೆ ಪಾವತಿಸಲಾಗುವುದು. ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ.

ವಿವಿಧ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಮೈಲೂರ ಕ್ರಾಸ್‌, ಬಸವನಗರ ಬೀದರ‌ ಕಚೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next