Advertisement

ಪ್ರವಾಸಿ ತಾಣ ಬೀದರಗೆ ಗೈಡ್‌ ಕೊರತೆ

12:32 PM Nov 15, 2019 | Naveen |

„ಶಶಿಕಾಂತ ಬಂಬುಳಗೆ
ಬೀದರ:
ಗಡಿ ನಾಡು ಬೀದರ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ಪ್ರವಾಸಿ ನಗರ. ಇಲ್ಲಿನ ವೈಭವ ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲ ವಿದೇಶಿಗರು ಭೇಟಿ ನೀಡುತ್ತಾರೆ. ಆದರೆ, ಗೈಡ್‌ ಗಳ ಕೊರತೆಯಿಂದ ಸೂಕ್ತ ಮಾಹಿತಿ ಸಿಗದಿರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟು ಮಾಡುತ್ತಿದೆ.

Advertisement

ಕರುನಾಡಿನ ಮುಕುಟ ಬೀದರ ಎಂದಾಕ್ಷಣ ಅದ್ಭುತ ಪ್ರವಾಸಿ ತಾಣವೆಂದು ನೆನಪಾಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಒಂದಿಲ್ಲೊಂದು ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ಅರಸರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರತಿ ತಾಣಗಳು ತನ್ನದೇಯಾದ ಕಥೆ ಹೇಳುತ್ತವೆ. ಇದನ್ನು ಅರಿತುಕೊಳ್ಳಲು ದೇಶ-ವಿದೇಶದ ಸಂಶೋಧನಾ ವಿದ್ಯಾರ್ಥಿಗಳು, ತಜ್ಞರು ಮತ್ತು ಪ್ರವಾಸಿಗರು ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಇವರಿಗೆ ಮಹತ್ವ, ಹಿನ್ನೆಲೆಯನ್ನು ತಿಳಿಸುವವರು ಯಾರೂ ಇಲ್ಲದಂತಾಗಿದೆ.

ಕೇಂದ್ರ ಪುರಾತತ್ವ ಇಲಾಖೆಯ ಅಧಿಧೀನದ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿರುವ ಬೀದರನ ಬಹುಮನಿ ಕೋಟೆಯು ದಕ್ಷಿಣ ಭಾರತದಲ್ಲೇ ಸುಭದ್ರ ಹಾಗೂ ಭವ್ಯ ಕೋಟೆ. ಕೋಟೆ ಒಳಾಂಗಣದಲ್ಲಿ ಅದ್ಭುತ ಉದ್ಯಾನ ಹಸಿರು ಹೊದಿಸಿದಂತಾಗಿದ್ದು, ಮತ್ತಷ್ಟು ಮೆರಗನ್ನು ಹೆಚ್ಚಿಸಿದೆ. ಆದರ್ಶ ಸ್ಮಾರಕ ಪಟ್ಟಿ ಹಾಗೂ ವರ್ಲ್ಡ್ ಮೋನುಮೆಂಟ್‌ ಫಂಡ್‌ಗೆ ಆಯ್ಕೆಯಾಗಿರುವ ಬಹುಮನಿ ಕೋಟೆ ಹಲವು ಸ್ಮಾರಕಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ.

ಅಷ್ಟೇ ಅಲ್ಲ ಗವಾನ್‌ ಮದರಸಾ, ಬರೀದಶಾಹಿ ಗುಂಬಜ್‌ಗಳು, ಚೌಬಾರಾ, ಚೌಕಂಡಿ, ಅಷ್ಟೂರಿನ ಪಾಳು ಬಿದ್ದ ಗುಂಬಜ್‌ಗಳು, ಜಲಸಂಗಿ, ಉಮಾಪೂರ ಮತ್ತು ನಾರಾಯಣಪೂರದ ದೇವಸ್ಥಾನ ಸೇರಿದಂತೆ ಅನೇಕ ತಾಣಗಳು ತನ್ನದೇಯಾದ ಪರಂಪರೆ ಹೊಂದಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಇವುಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರು ವೀಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ. ಹೈದ್ರಾಬಾದ್‌ ಸಮೀಪದಲ್ಲಿರುವುದರಿಂದ ಅಲ್ಲಿನ ಮತ್ತು ಅಲ್ಲಿಗೆ ಬರುವ ವಿದೇಶಿಗರು ಬೀದರಗೆ ಭೇಟಿ ನೀಡುತ್ತಾರೆ. ಅಮೆರಿಕ, ಫ್ರಾನ್ಸ್‌, ಬೆಲ್ಜಿಯಂ, ಶ್ರೀಲಂಕಾ ಸೇರಿ ಹಲವು ದೇಶದ ಪ್ರವಾಸಿಗರ ತಂಡ ಬರುತ್ತದೆ.

ಕೈಯಲ್ಲೊಂದು ಮಾಹಿತಿ ಪುಸ್ತಕ, ಕೊರಳಲ್ಲಿ ಕ್ಯಾಮೆರಾ ಹಾಕಿಕೊಂಡು ನಗರದಲ್ಲಿ ಸುತ್ತಾಡುವ ಪ್ರವಾಸಿಗರಿಗೆ ಮಾಹಿತಿ ಕೊಡಬಲ್ಲ ಗೈಡ್‌ಗಳು ಇಲ್ಲದ ಕಾರಣ ಏನು ನೋಡಬೇಕೆಂಬ ಗೊಂದಲದಿಂದ ಪರದಾಡಿ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ಹೈದರಾಬಾದನಿಂದ ಗೈಡ್‌ಗಳನ್ನು ಜತೆಯಲ್ಲಿ ಕರೆದುಕೊಂಡು ಬಂದರೂ ತಪ್ಪು ಮಾಹಿತಿ ನೀಡುತ್ತಿರುವ ಮಾತುಗಳು ಕೇಳಿಬಂದಿವೆ.

Advertisement

ಹಿಂದೆ ಜಿಲ್ಲಾ ಧಿಕಾರಿಯಾಗಿದ್ದ ಡಾ| ಪಿ.ಸಿ. ಜಾಫರ್‌ ಅವರು ಗೈಡ್‌ಗಳ ಕೊರತೆ ನೀಗಿಸಲು ಮುಂದಾಗಿದ್ದರು. ಎಸ್‌ಸಿ-ಎಸ್‌ಟಿಯ 50 ಯುವಕರಿಗೆ ಗೈಡ್‌ಗಳ ತರಬೇತಿ ಕಲ್ಪಿಸಿಕೊಟ್ಟು, ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ತರಬೇತಿ ಪಡೆದವರಲ್ಲಿ ಯಾರೂ ಗೈಡ್‌ಗಳಾಗಿ ವೃತ್ತಿ ನಡೆಸಲು ಆಸಕ್ತಿ ತೋರಲೇ ಇಲ್ಲ. ನಂತರ ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಆಗಲಿ ಇಂಥ ಯಾವುದೇ ಪ್ರಯತ್ನಕ್ಕೆ ಮುಂದಾಗಲಿಲ್ಲ. ಹಾಗಾಗಿ ಗೈಡ್‌ಗಳ ಕೊರತೆ ಹಾಗೆಯೇ ಮುಂದುವರೆದಿದೆ.

ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶ ಹೊಂದಿರುವ ಬೀದರನಲ್ಲಿ ಗೈಡ್‌ಗಳ ಕೊರತೆಯೂ ಸಹ ತೊಡಕಾಡುತ್ತಿದೆ. ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಬೀದರ ಕುರಿತು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಈಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದ ಇತರ ಪಾರಂಪರಿಕ ತಾಣಗಳಂತೆ ಬೀದರನಲ್ಲೂ ಗೈಡ್‌ಗಳನ್ನು ನೇಮಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next