Advertisement

ತಳ ಕಾಣುತ್ತಿದೆ ಬೀದರ್‌ನ ಜಲಪಾತ್ರೆ

10:04 AM Jul 21, 2019 | Team Udayavani |

ದುರ್ಯೋಧನ ಹೂಗಾರ
ಬೀದರ:
ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆ ಕುಡಿಯುವ ನೀರು ಪೂರೈಕೆ ಮಾಡುವ ಕಾರಂಜಾ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗುತ್ತಿದ್ದು, ಸದ್ಯ ಜಲಾಶಯದಲ್ಲಿ 0.917 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ಎರಡು ವರ್ಷಗಳಿಂದ ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಔರಾದ, ಭಾಲ್ಕಿ, ಬೀದರ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಹೆಚ್ಚಿದೆ. ಅಲ್ಲದೆ ಬಸವಕಲ್ಯಾಣ, ಹುಮನಾಬಾದ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಈ ವರ್ಷ ಬೇಸಿಗೆಯ ಮುನ್ನದಿಂದ ಔರಾದ ಹಾಗೂ ಭಾಲ್ಕಿ ತಾಲೂಕಿನಲ್ಲಿ ನೀರಿನ ಬರ ಹೆಚ್ಚಿತ್ತು. ಮಳೆಗಾಲ ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಕೂಡ ನಿಗದಿತ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ಇಂದಿಗೂ ಆ ತಾಲೂಕುಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದ ರೈತರ ಹೊಲಗಳಿಗೆ ನೀರು ಹರಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಕಾರಂಜಾ ಜಲಾಶಯ ಇಂದು ಜಿಲ್ಲೆಗೆ ಜಲ ಪಾತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಆದರೆ ಬೀದರ, ಭಾಲ್ಕಿ, ಹುಮನಾಬಾದ ತಾಲೂಕುಗಳಲ್ಲಿ ಭಾರಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಹನಿ ನೀರಿಗೂ ಮೂರು ತಾಲೂಕಿನ ಜನರು ತತ್ತರಿಸುವ ಸಾಧ್ಯತೆ ಇದೆ.

ನೀರು ಸಂಗ್ರಹ ಸಾಮರ್ಥ್ಯ: ಕಾರಂಜಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 7.691 ಟಿಎಂಸಿಯಾಗಿದ್ದು, ಸದ್ಯ 1.292 ಟಿಎಂಸಿಯಷ್ಟು ಮಾತ್ರ ನೀರಿದೆ. ಈ ಪೈಕಿ 0.375 ಟಿಎಂಸಿ ನೀರು (ಡೆಡ್‌ ಸ್ಟೋರೆಜ್‌) ಬಳಕೆಗೆ ಯೋಗ್ಯವಲ್ಲದ ನೀರಾಗಿದ್ದು, 0.917 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಮನಾಬಾದ, ಚಿಟಗುಪ್ಪ ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ಪ್ರತಿವರ್ಷ 0.300 ಟಿಎಂಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಭಾಲ್ಕಿ ಪಟ್ಟಣ ಸೇರಿದಂತೆ ಇತರೆ ಗ್ರಾಮಗಳಿಗೆ 0.300 ಟಿಎಂಸಿ ನೀರು, ಬೀದರ ನಗರಕ್ಕೆ 0.387 ಟಿಎಂಸಿ ಹಾಗೂ ಇತರೆ ಗ್ರಾಮಗಳಿಗೆ 0.183 ಟಿಎಂಸಿ ನೀರನ್ನು ಪೂರೈಸಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಕನಿಷ್ಟ 1.17 ಟಿಎಂಸಿಯಷ್ಟು ನೀರು ಜಲಾಶಯದಿಂದ ಜಿಲ್ಲೆಯ ಜನರಿಗೆ ಪೂರೈಸಲಾಗುತ್ತಿದೆ. ಆದರೆ, ಸದ್ಯಕ್ಕೆ 0.917 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿರುವುದು ನೋಡಿದರೆ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರದ ಭಾರಿ ಹೊಡೆತ ಬೀಳುವ ಸಾಧ್ಯತೆ ಕಂಡು ಬರುತ್ತಿದೆ.

Advertisement

ಒಳ ಹರಿವಿನ ಪ್ರಮಾಣ ಕಡಿಮೆ: ಮುಂಗಾರು ಆರಂಭಗೊಂಡ ನಂತರ ಈ ವರೆಗೆ ಕಾರಂಜಾ ಜಲಾಶಯಕ್ಕೆ ಕೇವಲ 0.088 ಟಿಎಂಸಿ ನೀರು ಒಳ ಹರಿವು ಬಂದಿದೆ. ಈ ಜಲಾಶಯಕ್ಕೆ ಶೇ.60ರಷ್ಟು ಒಳ ಹರಿವು ತೆಲಂಗಾಣದಿಂದ ಬರುತ್ತದೆ. ಇನ್ನುಳಿದ ಶೇ.40ರಷ್ಟು ಜಿಲ್ಲೆಯ ವಿವಿಧೆಡೆಯಿಂದ ನೀರು ಹರಿದು ಜಲಾಶಯಕ್ಕೆ ಸೇರುತ್ತದೆ. ಆದರೆ, ಮಳೆ ಕೊರತೆ ಹಿನ್ನೆಲೆಯಲ್ಲಿ ತೆಲಂಗಾಣದಿಂದ ಅಥವಾ ಜಿಲ್ಲೆಯಿಂದ ಭಾರಿ ಪ್ರಮಾಣದ ಒಳ ಹರಿವು ಬಂದಿಲ್ಲ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತರ್ಜಲ ಮಟ್ಟ ಕುಸಿತ: 2 ವರ್ಷದಿಂದ ಮಳೆ ಕೊರತೆ ಕಾಣರ ಜಿಲ್ಲೆಯಲ್ಲಿನ ಕೊಳವೆಬಾವಿ ಹಾಗೂ ತೆರೆದ ಭಾವಿಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದ ಕೃಷಿ ಹಾಗೂ ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಹುತೇಕ ಕೆರೆಗಳು ಕೂಡ ಒಣಗಿ, ಹನಿ ನೀರಿಗಾಗಿ ಬಾಯ್ತೆರೆದು ಕಾದಿವೆ. ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿ ರಾಚಪ್ಪ ಪಾಟೀಲ ಅವರ ಪ್ರಕಾರ ಈ ವರ್ಷ ಜಿಲ್ಲೆಯ ವಿವಿಧೆಡೆ ಸುಮಾರು 500ರಷ್ಟು ಕೊಳವೆ ಭಾವಿಗಳನ್ನು ಕೊರೆಸಿದ್ದು, ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇದೆ. ಅಲ್ಲದೆ, ಹೆಚ್ಚು ಆಳದಲ್ಲಿ ನೀರು ಇದ್ದರೂ ಕೂಡ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಾರಂಜಾ ಜಲಾಶಯದಲ್ಲಿ ಸಧ್ಯ 0.917 ಟಿಎಂಸಿ ನೀರು ಜಿಲ್ಲೆಯ ಜನರಿಗೆ ಉಪಯೋಗಕ್ಕೆ ಸಾಧ್ಯವಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಂದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ನೀರು ಪೂರೈಕೆ ಸಾಧ್ಯವಾಗುತ್ತದೆ. ದೇವರ ಕೃಪೆಯಿಂದ ಉತ್ತಮ ಮಳೆ ಆದರಷ್ಟೇ ಜಿಲ್ಲೆಯ ಜನರಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗುವುದಿಲ್ಲ.
ಆನಂದಕುಮಾರ,
ಕಾರಂಜಾ ಜಲಾಶಯದ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next