Advertisement

Bhatkal:ಮಲ್ಲಿಗೆ ತಳಿಗಳ ಸಂರಕ್ಷಣೆಗೆ ಸ್ಟೋರೇಜ್ ಸ್ಥಾಪಿಸುವ ಯೋಚನೆ: ಸಚಿವ ವೈದ್ಯ

11:37 PM Nov 19, 2023 | Team Udayavani |

ಭಟ್ಕಳ: ಭಟ್ಕಳ ಮಲ್ಲಿಗೆ, ಮೈಸೂರು ಮಲ್ಲಿಗೆ, ಮಟ್ಟು ಮಲ್ಲಿಗೆಗಳು ಅಪರೂಪದ ತಳಿಗಳಾಗಿದ್ದು ಅವುಗಳ ಸಂರಕ್ಷಣೆಯೊಂದಿಗೆ ದಾಸ್ತಾನು ಮಾಡಿಕೊಳ್ಳಲು ಸ್ಟೋರೇಜ್ ಸ್ಥಾಪಿಸುವ ಯೋಚನೆ ಇದೆ ಎಂದು ಮೀನುಗಾರಿಕಾ, ಬಂದರು, ಒಳನಾಡು ಜಲಸಾರಿಗೆ ಹಾಗೂ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ತನಕವೂ ಮಲ್ಲಿಗೆ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಸ್ಟೋರೇಜ್ ವ್ಯವಸ್ಥೆ ಇಲ್ಲ. ಬೆಳೆಗಾರರು ಅಂದಿನ ದರಕ್ಕೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಹೂವು ಮಾರಾಟವಾಗದೇ ಇದ್ದಾಗ ಸಂಪೂರ್ಣ ಹಾಳಾಗುವ ಸಾಧ್ಯತೆಯೂ ಕೂಡಾ ಇದೆ. ಇದನ್ನೆಲ್ಲಾ ತಪ್ಪಿಸಲು ಹಾಗೂ ಬೆಲೆಯಿದ್ದಾಗ ಮಾರುಕಟ್ಟೆಗೆ ತರಲು ಸ್ಟೋರೇಜ್ ವ್ಯವಸ್ಥೆಯೊಂದೇ ಪರಿಹಾರವಾಗಿದ್ದು ಆ ಕುರಿತು ಚಿಂತನೆ ನಡೆಸಲಾಗಿದೆ ಎಂದೂ ಅವರು ಹೇಳಿದರು.

ಭಟ್ಕಳ ಗ್ರಾಮ ಪಂಚಾಯತ್‌ಗಳಲ್ಲಿ ಕಸ ವಿಲೇವಾರಿಯದ್ದೇ ಸಮಸ್ಯೆಯಾಗಿದ್ದು ಎಲ್ಲೆಂದರಲ್ಲಿ ಕಸ ಬಿದ್ದುಕೊಂಡಿರುತ್ತದೆ. ಇದರಿಂದ ಗ್ರಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಪತ್ರಕರ್ತರು ಸಚಿವರ ಗಮನ ಸೆಳೆದಾಗ ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್‌ಗಳ ಕಸ ವಿಲೇವಾರಿಗೆ 5 ಎಕರೆ ಜಾಗಾ ಮಂಜೂರಿ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಯ ತನಕ ಗ್ರಾಮ ಪಂಚಾಯತ್‌ಗಳಲ್ಲಿ ಎಲ್ಲಿ ವ್ಯವಸ್ಥೆ ಇಲ್ಲವೋ ಅವರು ಪುರಸಭಾ ಡಂಪಿಂಗ್ ಯಾರ್ಡನಲ್ಲಿಯೇ ಕಸ ವಿಲೇವಾರಿ ಮಾಡಲು ಸೂಚನೆ ನೀಡಿದ್ದು ಇಷ್ಟರಲ್ಲಿಯೇ ಅದು ಕಾರ್ಯಾರಂಭವಾಗಲಿದೆ ಎಂದರು.

ಅರಣ್ಯ ಅತಿಕ್ರಮಣದಾರರ ಕುರಿತು ಕೇಳಿದ ಪ್ರಶ್ನೆಗುತ್ತರಿಸಿದ ಅವರು ಈ ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರಕಾರವಿದ್ದಾಗ ಅತಿಕ್ರಮಣ ಸಕ್ರಮ ಮಾಡುವ ಸಲುವಾಗಿ ಸಮಿತಿ ರಚನೆ ಮಾಡಲಾಗಿದ್ದು ಅವುಗಳು ನಮ್ಮ ಸರಕಾರದ ಅವಧಿಯಲ್ಲಿ ಕಾರ್ಯಾರಂಭ ಮಾಡಿದ್ದವು. ಕೆಲವೊಂದು ಪ್ರಕರಣ ಇತ್ಯರ್ಥ ಕೂಡಾ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು ೬೫ ಸಾವಿರ ಅತಿಕ್ರಮಣದಾರರನ್ನು ಗುರುತಿಸಲಾಗಿದ್ದು, ತಾಲೂಕಿನಲ್ಲಿ 25 ಸಾವಿರ ಅತಿಕ್ರಮಣದಾರರನ್ನು ಗುರುತಿಸಲಾಗಿತ್ತು. ಆದರೆ ನಂತರ ಬಂದ ಬಿ.ಜೆ.ಪಿ. ಸರಕಾರ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ಹಾಗೂ ಗ್ರಾಮ ಮಟ್ಟದ ಒಂದೇ ಒಂದು ಸಭೆಯನ್ನು ಮಾಡದೇ ಕಾಲಹರಣ ಮಾಡಿದೆ. ಈ ಬಾರಿ ನಮ್ಮ ಸರಕಾರ ಬಂದ ತಕ್ಷಣ ಅತಿಕ್ರಮಣದಾರರ ಸಮಸ್ಯೆ ಪರಿಹರಿಸಲು ಅಕ್ರಮ-ಸಕ್ರಮ ಸಮಿತಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ .ಕೇಂದ್ರ ಸರಕಾರದ ನೀತಿಯಂತೆ ಸಭೆ ನಡೆಸಲು ಜಿಲ್ಲಾ ಪಂಚಾಯತ್ ಸದಸ್ಯರು ಕಡ್ಡಾಯ. ಆದರೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯೇ ಆಗಿಲ್ಲವಾದ್ದರಿಂದ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲಿಯೇ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಚುನಾವಣೆಯಾಗಲಿದ್ದು ನಂತರದಲ್ಲಿ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಯುವನಿಧಿ ಆರಂಭವಾಗದ ಕುರಿತು ಕೇಳಿದ ಪ್ರಶ್ನೆಗುತ್ತರಿಸಿದ ಅವರು ನಾವು ಡಿಸೆಂಬರ್ ತನಕ ಯುವನಿಧಿಗೆ ಸಮಯಾವಕಾಶವನ್ನು ತೆಗೆದುಕೊಂಡಿದ್ದೆವು. ಹೊಸ ವರ್ಷದಿಂದ ಯುವನಿಧಿ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದರು. ರಾಜ್ಯದಲ್ಲಿ ೪ ಗ್ಯಾರೆಂಟಿಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದ್ದು ಅವುಗಳು ಅಭಿವೃದ್ಧಿ ಯೋಜನೆಗಳಾಗಿವೆ. ಪ್ರತಿಯೊಂದು ಮನೆಯಲ್ಲಿಯೂ ಕೂಡಾ ಗ್ರಹ ಲಕ್ಷ್ಮೀ , ಭಾಗ್ಯ ಜ್ಯೋತಿಯೊಂದಾಗಿ ಅಭಿವೃದ್ಧಿಯಾಗಿದೆ. ಮುಂದಿನ ಐದು ರಾಜ್ಯಗಳನ್ನು ಕಾಂಗ್ರೆಸ್ ಗೆಲ್ಲಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿಯೂ ಸರಕಾರ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮತ್ಸ್ಯ ವಾಹಿನಿ: 150 ಮಂದಿ ನಿರುದ್ಯೋಗಿ ಯುವ ಜನರಿಗೆ ಪರಿಸರ ಸ್ನೇಹಿ ತ್ರಿಚಕ್ರ ವಾಹನ

ನ.21 ರಂದು ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಬೆಂಗಳೂರಿನ150 ಜನ ನಿರುದ್ಯೋಗಿ ಯುವ ಜನರಿಗೆ ಪರಿಸರ ಸ್ನೇಹಿ ತ್ರಿಚಕ್ರ ವಾಹನ ಮತ್ಸ್ಯ ವಾಹಿನಿ ಹಸ್ತಾಂತರಿಸುವ ಕಾರ್ಯಕ್ರಮ ಬೆಂಗಳೂರಿನ ವಿಧಾನ ಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ವಿಶ್ವ ಮೀನುಗಾರಿಕಾ ದಿನಾಚರಣೆ-2023 ಹಾಗೂ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಥಮ ಬಾರಿಗೆ ಮೀನುಗಾರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ವಿಶೇಷವಾಗಿ ದಕ್ಷಿನ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಮೀನುಗಾರರು ಕಾರ್ಯಕ್ರಮಕ್ಕೆ ಆಗಮಿಸುವಂತೆಯೂ ಅವರು ಕೋರಿದರು.
ಕೆ.ಎಫ್.ಡಿ.ಸಿ.ಯ ಸಹಯೋಗದೊಂದಿಗೆ ಅಂದು 300 ತ್ರಿಚಕ್ರ ವಾಹನ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು ಪ್ರಥಮ ಹಂತವಾಗಿ 150 ತ್ರಿಚಕ್ರ ವಾಹನವನ್ನು ಬೆಂಗಳೂರು ವ್ಯಾಪ್ತಿಯಲ್ಲಿ ವಿತರಿಸಲಾಗುತ್ತಿದೆ. ಫಲಾನುಭವಿಯು ಕೇವಲ 2ಲಕ್ಷವನ್ನು ಠೇವಣಿಯಾಗಿಟ್ಟರೆ ಸಾಕು ಅವರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನವನ್ನು ಹಸ್ತಾಂತರಿಸುವುದಲ್ಲದೇ ಕೆ.ಎಫ್.ಡಿ.ಸಿ.ವತಿಯಿಂದ ದಿನಾಲೂ ತಾಜಾ ಮೀನು ಸರಬರಾಜು ಮಾಡಲೂ ಕೂಡಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ವಾಹನಕ್ಕೆ ಪ್ರತಿ ತಿಂಗಳೂ 3 ಸಾವಿರ ರೂಪಾಯಿ ನಿರ್ವಹಣಾ ವೆಚ್ಚ ತುಂಬಬೇಕಾಗಿದ್ದು ಬೇರೆ ಯಾವುದೇ ರೀತಿಯ ಹಣ ಕಟ್ಟಬೇಕಾಗಿಲ್ಲ. ವಾಹನ ಕೆ.ಎಫ್.ಡಿ.ಸಿ. ಹೆಸರಿನಲ್ಲಿರುತ್ತಿದ್ದು ಅವರಿಗೆ ಯಾವಾಗ ಬೇಡಾ ಅಂತಾದರೂ ಸಹ ವಾಪಾಸು ನೀಡಿ ತಮ್ಮ ಠೇವಣಿ ಹಣವನ್ನು ವಾಪಾಸು ಪಡೆಯುವ ಅವಕಾಶವಿದೆ ಎಂದೂ ಅವರು ಹೇಳಿದರು.
ವಾಹನವನ್ನು ಮೀನುಗಾರರು ಮತ್ತು ಇತರೇಯವರೂ ಕೂಡಾ ಪಡೆಯಬಹುದು. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹತೆಯ ಮೇರೆಗೆ ನೀಡಲಾಗುವುದು ಎಂದರು. ವಾಹನದಲ್ಲಿ ಕೇವಲ ಮೀನು ಮಾರಾಟ ಮಾತ್ರವಲ್ಲ ಮೀನು ಖಾದ್ಯ ತಯಾರಸಿಕೊಡಲೂ ಕೂಡಾ ಅವಕಾಶವಿದೆ ಎಂದೂ ಅವರು ಹೇಳಿದರು.

ಪ್ರಥಮ ಹಂತದಲ್ಲಿ ಬೆಂಗಳೂರಿಗರಿಗೆ ತಾಜಾ ಮೀನು ಸರಬರಾಜ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದೂ ಹೇಳಿದ ಸಚಿವರು ಒಂದೇ ಯೋಜನೆಯಲ್ಲಿ ಎರಡು ಉದ್ದೇಶವನ್ನು ಇಟ್ಟಿಕೊಳ್ಳಲಾಗಿದೆ. ಬೆಂಗಳೂರಿಗರಿಗೆ ಕರಾವಳಿಯ ತಾಜಾ ಮೀನು, ಮೀನು ಖಾದ್ಯ ನೀಡುವುದಲ್ಲದೇ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠಲ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next