Advertisement

ಶಿವಣ್ಣನ ಚಿತ್ರಕ್ಕೆ ಭಟ್ಟರ ನಿರ್ದೇಶನ

10:55 AM Jun 27, 2018 | Team Udayavani |

ಯೋಗರಾಜ್‌ಭಟ್‌ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಚಿತ್ರಕ್ಕೆ ಶಿವರಾಜಕುಮಾರ್‌ ಹೀರೋ ಅನ್ನೋದೇ ವಿಶೇಷ. ಹೌದು, ಇದೇ ಮೊದಲ ಬಾರಿಗೆ ಯೋಗರಾಜ್‌ಭಟ್‌ ಅವರು ಶಿವರಾಜಕುಮಾರ್‌ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವಾಗ ಚಿತ್ರ ಬರುತ್ತೆ ಎಂಬ ಪ್ರಶ್ನೆ ಸದಾ ಗಿರಕಿ ಹೊಡೆಯುತ್ತಲೇ ಇತ್ತು.

Advertisement

ಈ ಹಿಂದೆ ಹಲವು ಸಲ ಶಿವರಾಜಕುಮಾರ್‌ ಜೊತೆಗೆ ಯೋಗರಾಜ್‌ಭಟ್‌ ಅವರು ಚಿತ್ರ ನಿರ್ದೇಶನ ಮಾಡಬೇಕು ಅಂತ ಪ್ರಯತ್ನಿಸಿದ್ದು ನಿಜ. ಆದರೆ, ಅದೇಕೋ ಏನೋ ಕಾಲ ಕೂಡಿ ಬರಲಿಲ್ಲ. ಹಾಗಾಗಿ, ಶಿವರಾಜಕುಮಾರ್‌ ಮತ್ತು ಯೋಗರಾಜ್‌ಭಟ್‌ ಕಾಂಬಿನೇಷನ್‌ ಚಿತ್ರ ಈ ಹಿಂದೆ ಸೆಟ್ಟೇರಲೇ ಇಲ್ಲ. ಈಗ ಒಳ್ಳೇ ಕಾಲ ಕೂಡಿಬಂದಿದೆ. ಬರುವ ಸೆಪ್ಟೆಂಬರ್‌ನಲ್ಲಿ ಶಿವರಾಜಕುಮಾರ್‌ ಅವರಿಗಾಗಿ ಯೋಗರಾಜ್‌ಭಟ್‌ ಅವರು ಚಿತ್ರವೊಂದನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

ಸೋಮವಾರ ಸಂಜೆಯಷ್ಟೇ ಶಿವರಾಜಕುಮಾರ್‌ ಅವರೊಂದಿಗೆ ಸಿನಿಮಾ ಮಾಡುವ ಕುರಿತು ಮಾತುಕತೆ ನಡೆದಿದೆ. ಹಾಗಾಗಿ ಯೋಗರಾಜ್‌ಭಟ್‌ ನಿರ್ದೇಶನದಲ್ಲಿ ಶಿವರಾಜಕುಮಾರ್‌ ಅವರು ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಅಂದಹಾಗೆ, ಇವರಿಬ್ಬರ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರವನ್ನು ರಾಶಿ ಫಿಲಂಸ್‌ ಬ್ಯಾನರ್‌ನಡಿ ಭಾಸ್ಕರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ.

ನಿರ್ಮಾಪಕ ಭಾಸ್ಕರ್‌ ಅವರು ಈ ಹಿಂದೆ ಶಿವರಾಜಕುಮಾರ್‌ ಅಭಿನಯದಲ್ಲಿ “ಅಂದರ್‌ ಬಾಹರ್‌’ ಚಿತ್ರವನ್ನು ನಿರ್ಮಿಸಿದ್ದರು. ಇತ್ತೀಚೆಗಷ್ಟೇ ಧನಂಜಯ್ ಅಭಿನಯದ “ಭೈರವ ಗೀತ’ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕೆ ಈಗ ಯೋಗರಾಜ್‌ಭಟ್‌ ಅವರು ಶಿವರಾಜಕುಮಾರ್‌ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಪಕ್ಕಾ ಆಗಿದೆ. ಆದರೆ, ಈ ಚಿತ್ರಕ್ಕೆ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯಬೇಕಿದೆ. ಇಷ್ಟರಲ್ಲೇ ಉಳಿದ ವಿಷಯ ಹೊರಬೀಳಲಿದೆ.

ಇನ್ನು, ಯೋಗರಾಜ್‌ಭಟ್‌ ಅವರು “ಪಂಚತಂತ್ರ’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಎಂಟು ದಿನಗಳ ಕಾಲ ಚಿತ್ರೀಕರಿಸಿದರೆ, “ಪಂಚತಂತ್ರ’ ಚಿತ್ರ ಮುಗಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next