Advertisement

ಮೋದಿಯಿಂದ ಜನರಿಗೆ ದ್ರೋಹ

08:04 AM Mar 08, 2019 | Team Udayavani |

ಚಿತ್ರದುರ್ಗ: ರಫೇಲ್‌ ಯುದ್ಧ ವಿಮಾನಗಳಿಗೆ ಸಂಬಂಧಿಸಿದ ಕಡತ ಕಳುವಾಗಿವೆ ಎನ್ನುವ ಮೂಲಕ ಪ್ರಧಾನಿ ಮೋದಿ ಬಹು ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಆರೋಪಿಸಿದರು.

Advertisement

ಕೇಂದ್ರ ನಿಧಿಯ ವಿಶೇಷ ಯೋಜನೆಯಡಿ ಮಂಜೂರಾದ 9.17 ಕೋಟಿ ರೂ., ಎಸ್‌ಎಚ್‌ ಡಿಪಿಯ 7 ಕೋಟಿ ರೂ., ಎಸ್‌ಸಿಪಿಯ 1 ಕೋಟಿ ರೂ., ಟಿಎಸ್‌ಪಿ ಯೋಜನೆಯಡಿ 50 ಲಕ್ಷ ರೂ. ಸೇರಿದಂತೆ ಒಟ್ಟು 20 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ತಾಲೂಕಿನ ಹಾಯ್ಕಲ್‌ ಗ್ರಾಮದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಫೇಲ್‌ ಹಗರಣದ ಬಗ್ಗೆ ದೇಶದ ಜನತೆಗೆ ತಿಳಿಸಬೇಕಿದೆ. ಬಿಜೆಪಿ ನುಡಿದಂತೆ ನಡೆದಿದ್ದರೆ ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ರೂ. ಸಿಗುತ್ತಿತ್ತು. ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸಿದ ಬಿಜೆಪಿ ಈ ದೇಶಕ್ಕೆ ಮಾರಕ. ನರೇಂದ್ರ ಮೋದಿ ಚೆನ್ನಾಗಿ ಮಾತನಾಡಬಲ್ಲ ವ್ಯಕ್ತಿ, ಆದರೆ ನುಡಿದಂತೆ ನಡೆಯಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. 

ನಂತರ ಪಕೋಡ ಮಾರಿ ಜೀವನ ಮಾಡಿ ಎಂದು ಕರೆ ಕೊಟ್ಟರು. ಮೋದಿ ಅವರು ದೇಶದ 130 ಕೋಟಿ ಜನರಿಗೆ ಆಡಳಿತ ಮಾಡದೆ ಕೇವಲ ಕಾಪೋರೇಟ್‌ ಕಂಪನಿಗಳು ಮತ್ತು ಕೆಲವು ಕುಟುಂಬಗಳಿಗೆ ಮಾತ್ರ ಆಡಳಿತ ನಡೆಸಿದರು ಎಂದು ಟೀಕಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಿಲ್ಲ. ರೈತರ ಸಾಲವನ್ನೂ ಮನ್ನಾ ಮಾಡಲಿಲ್ಲ. ಕಾರ್ಮಿಕರು, ರೈತ ವಿರೋಧಿ ನೀತಿ ಅನುಸರಿಸುವ ಮೂಲಕ ದ್ರೋಹ ಎಸಗಿತು ಎಂದು ವಾಗ್ಧಾಳಿ ನಡೆಸಿದರು.

Advertisement

ರಾಜ್ಯದಿಂದ ಬಿಜೆಪಿಯ 17 ಸಂಸದರು ಆಯ್ಕೆಯಾಗಿದ್ದರೂ ಒಂದೇ ಒಂದು ಯೋಜನೆಯನ್ನೂ ಜಾರಿಗೆ ತರಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿಲ್ಲ. ಡಾ| ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 72 ಸಾವಿರ ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಒಂದೇ ಒಂದು ರೂ. ಸಾಲ ಮನ್ನಾ ಮಾಡದೆ ರೈತರಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಸರ್ಕಾರ ಸುಳ್ಳಿನ ಸರ್ಕಾರ, ರಾಜ್ಯ ಸರ್ಕಾರ ಅಭಿವೃದ್ಧಿ ಸರ್ಕಾರ ಎಂಬ ಅಂಶವನ್ನು ಜನತೆಯ ಮುಂದೆ ಇಟ್ಟು ಲೋಕಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡಲಿದ್ದೇವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣ, ಕಳಂಕವಿಲ್ಲದೆ ಜನರು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎನ್ನುವ ತೃಪ್ತಿ ಇದೆ. ಈ ಬಾರಿಯೂ ಮತದಾರರು ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಐದು ಜನ ಶಾಸಕರು ಪರಾಭವಗೊಂಡಿರಬಹದು. ಆದರೆ ಮತ ಗಳಿಕೆಯಲ್ಲಿ ಕಾಂಗ್ರೆಸ್‌ ಮುಂದಿದೆ. ಅಲ್ಲದೆ ಜೆಡಿಎಸ್‌ ನ 3.25 ಲಕ್ಷಗಳಿವೆ. ಹಾಗಾಗಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಚಳ್ಳಕೆರೆ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಮಾತನಾಡಿ, ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತುಂಗಭದ್ರಾ ಹಿನ್ನೀರು ಯೋಜನೆಯಡಿ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳನ್ನು ಒಳಗೊಂಡಂತೆ ಐದು ಕ್ಷೇತ್ರಗಳ ಜನರಿಗೆ ಕುಡಿಯುವ ನೀರು ಪೂರೈಕೆಗೆ 2380 ಕೋಟಿ ರೂ. ಬಿಡುಗಡೆಯಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್‌. ಆಂಜನೇಯ ಅವರೇ ಕಾರಣ ಎಂದರು.

ಕಳೆದ ಬಾರಿ ಕಾಂಗ್ರೆಸ್‌ ಪಕ್ಷದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಬಿ.ಎನ್‌. ಚಂದ್ರಪ್ಪ ಹಲವಾರು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ. ಈ ಬಾರಿ ಕೂಡ ವರಿಷ್ಠರು ಅವರನ್ನೇ ಅಭ್ಯರ್ಥಿಯನ್ನಾಗಿ ಸಲಿದ್ದಾರೆ ಮಾಡಲಿದ್ದಾರೆ ಎನ್ನುವ ಆಶಾಭಾವನೆ ಇದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಚಿತ್ರಮ್ಮ, ಸದಸ್ಯರಾದ ರಮೇಶ್‌, ಕನ್ವೀರಪ್ಪ, ರಮೇಶ್‌, ಲೋಕೇಶ್‌, ತಾಪಂ ಸದಸ್ಯೆ ಚೌಡಮ್ಮ ಇದ್ದರು.

ವಿರೋಧ ಪಕ್ಷವಾಗಿ ಬಿಜೆಪಿ ವಿಫಲ ಅಧಿಕಾರದ ದುರಾಸೆಯಿಂದ ಬಿಜೆಪಿ, ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕರ ಖರೀದಿಗೆ ಮುಂದಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ತೀವ್ರ ಬರ ಇದ್ದು, ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕು ಎಂಬುದರ ಕಡೆ ಯೋಚಿಸದೆ ಶಾಸಕರ ಖರೀದಿಯಂತಹ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಚಂದ್ರಪ್ಪ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next