Advertisement

ಬೆಂಗ್ಳೂರು-ಹುಬ್ಳಿ-ತಿರುಪತಿ ವಿಮಾನ ಶುರು

11:31 AM Jan 26, 2019 | Team Udayavani |

ಹುಬ್ಬಳ್ಳಿ: ಬೆಂಗಳೂರು, ಹುಬ್ಬಳ್ಳಿ ಹಾಗೂ ತಿರುಪತಿ ವಿಮಾನಯಾನ ಸೇವೆಯನ್ನು ಸಂಜಯ ಘೋಡಾವತ್‌ ಗ್ರೂಪ್‌ನ ಸ್ಟಾರ್‌ ಏರ್‌ ಕಂಪೆನಿ ಶುಕ್ರವಾರದಿಂದ ಆರಂಭಗೊಳಿಸಿತು.

Advertisement

ಸ್ಟಾರ್‌ ಏರ್‌ ವಿಮಾನಯಾನ ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ, ವಿಮಾನಯಾನ ಆರಂಭದಿಂದ ಕೃಷಿ ಉತ್ಪನ್ನಗಳ ರಫ್ತಿಗೆ ಅವಕಾಶ ದೊರೆತು ಉತ್ತಮ ಮೌಲ್ಯ ದೊರೆಯಲಿದೆ. ಅದೇ ರೀತಿ ಉದ್ಯಮ ವಲಯ ಬೆಳವಣಿಗೆಗೂ ಸಹಕಾರಿ ಆಗಲಿದೆ. ಕಲಬುರಗಿ, ಕೊಪ್ಪಳ ಇನ್ನಿತರ ಕಡೆ ಉದ್ಯಮ ಬರುತ್ತಿಲ್ಲ, ಬೆಳೆಯುತ್ತಿಲ್ಲ ಎಂಬ ಕೂಗು ಇದೆ. ಮೂಲಸೌಕರ್ಯಗಳೇ ಇಲ್ಲವೆಂದಾದರೆ ಉದ್ಯಮಗಳು ಬರುವುದಾದರೂ ಹೇಗೆ? ಮೂಲಸೌಲಭ್ಯಗಳು ಅಭಿವೃದ್ಧಿಯ ಕೀಲಿ ಕೈ ಆಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಹುಬ್ಬಳ್ಳಿಯಲ್ಲಿ ವಿಮಾನಯಾನ ಹೆಚ್ಚಳದಿಂದ ಉದ್ಯಮ ಉತ್ತಮ ಬೆಳವಣಿಗೆಯತ್ತ ಸಾಗುತ್ತಿದೆ. ಅದೇ ರೀತಿ ಬೆಳಗಾವಿಯಿಂದಲೂ ವಿಮಾನಯಾನ ಇನ್ನಷ್ಟು ಹೆಚ್ಚಳವಾಗಬೇಕಾಗಿದೆ. ಸ್ಟಾರ್‌ ಏರ್‌ ಶೀಘ್ರವೇ ಬೆಳಗಾವಿಗೂ ಸಂಪರ್ಕ ಕಲ್ಪಿಸಲಿ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಸುಮಾರು 650 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿ ಹುಬ್ಬಳ್ಳಿಯಂತಹ ನಗರಗಳಲ್ಲೂ ವಿಮಾನಯಾನ ಹೆಚ್ಚಳವಾಗಿದೆ. ಸ್ಟಾರ್‌ ಏರ್‌ನ ವಿಮಾನಗಳು ಅತ್ಯುತ್ತಮವಾಗಿದ್ದು, ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನಯಾನಕ್ಕೆ ಕಂಪನಿ ಮುಂದಾಗಿರುವುದು ಉತ್ತಮ. ಹೈದರಾಬಾದ್‌ – ಕರ್ನಾಟಕಕ್ಕೂ ವಿಮಾನಯಾನ ಸೌಲಭ್ಯ ದೊರೆಯಬೇಕಾಗಿದೆ ಎಂದರು.

ವಿಆರ್‌ಎಲ್‌ ಸಮೂಹ ಸಂಸ್ಥೆ ಚೇರ್ಮನ್‌ ಡಾ| ವಿಜಯ ಸಂಕೇಶ್ವರ ಮಾತನಾಡಿ, ಬ್ರಿಟಿಷರ ಕಾಲದಲ್ಲೇ ಹುಬ್ಬಳ್ಳಿ ಹಾಗೂ ಕ್ಯಾಲಿಕಟ್ ಅತ್ಯುತ್ತಮ ವಿಮಾನಯಾನ ಕೇಂದ್ರಗಳಾಗಲಿವೆ ಎಂದು ಗುರುತಿಸಲಾಗಿತ್ತು. ಹುಬ್ಬಳ್ಳಿಯಲ್ಲಿ ಸುಮಾರು 3,600 ಎಕರೆ ಭೂಮಿ ಅಗತ್ಯವೆಂದು ಹೇಳಲಾಗಿತ್ತು. ಆದರೆ ಸ್ವಾತಂತ್ರ್ಯ ನಂತರದಲ್ಲಿ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣಕ್ಕೆ ಆದ್ಯತೆ ದೊರೆಯಲಿಲ್ಲ. ಉದ್ಯಮದಲ್ಲಿ ಬಹುತೇಕ ಯೋಜನೆಗಳನ್ನು ನಕಲು ಮಾಡಲಾಗುತ್ತಿದೆ. ವಿಮಾನಕ್ಕೂ ಇದು ತಪ್ಪಿಲ್ಲ. ಯಾವುದೇ ಕ್ಷೇತ್ರವಾಗಲಿ ಆರ್ಥಿಕ ಅಶಿಸ್ತು ಇದ್ದಲ್ಲಿ ಅದು ಬೆಳವಣಿಗೆ ಸಾಧ್ಯವಿಲ್ಲ ಎಂದರು.

ಸ್ಟಾರ್‌ ಏರ್‌ ಮಾಲೀಕ ಸಂಜಯ ಘೋಡಾವತ ಮಾತನಾಡಿ, 1992ರಲ್ಲಿ ಕೇವಲ 2ಲಕ್ಷ ರೂ.ನಿಂದ ಆರಂಭಿಸಿದ್ದ ಉದ್ಯಮ ಇಂದು ವಿವಿಧ ವಿಭಾಗದಲ್ಲಿ ಬೃಹತ್‌ ರೂಪದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಪರಿಶ್ರಮ, ಸಿಬ್ಬಂದಿ ತಂಡ ಸ್ಫೂರ್ತಿ ಕಾರಣವಾಗಿದೆ. ವಿಶ್ವದ ಟಾಪ್‌ 5 ಉದ್ಯಮಗಳಲ್ಲೊಂದಾಗಲು ಯತ್ನದಲ್ಲಿದ್ದೇವೆ. ಉಡಾನ್‌-3ರಡಿ ಹುಬ್ಬಳ್ಳಿಯಿಂದ ವಿಶ್ವದ ವಿವಿಧೆಡೆ ಸಂಪರ್ಕ, ಪ್ರಮುಖ ವಿಮಾನಯಾನ ಕಂಪೆನಿಗಳೊಂದಿಗೆ ಸರಕು ಸಾಗಣೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಎಂದರು.

Advertisement

ಶ್ರೀನಿಧಿ ಘೋಡಾವತ ಪ್ರಾಸ್ತಾವಿಕ ಮಾತನಾಡಿ, ಘೋಡಾವತ ಗ್ರೂಪ್‌ ವಿವಿಧ ಉದ್ಯಮ ನಿರ್ವಹಿಸುತ್ತಿದೆ. ಸುಮಾರು 400 ಎಕರೆ ತೋಟದಲ್ಲಿ ಹೂ ಬೆಳೆಯುಲಾಗುತ್ತಿದ್ದು, ನಿತ್ಯ 5 ಲಕ್ಷ ಹೂ ರಫ್ತಾಗುತ್ತಿದೆ. 15 ಸಾವಿರ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಓದುತ್ತಿದ್ದಾರೆ. ವಿಮಾನ ಸೇವೆಯಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಬೆಳೆಯಬೇಕಾಗಿದೆ ಎಂದರು.

ಪ್ರಸ್ತುತ ಶೇ.2-3 ಜನರು ಮಾತ್ರ ವಿಮಾನಯಾನ ಕೈಗೊಳ್ಳುತಿದ್ದು, ಇದು ಶೇ. 20ಕ್ಕೆ ಹೆಚ್ಚಿದರೆ ಇನ್ನೂ 700-800 ವಿಮಾನಗಳು ಬೇಕಾಗುತ್ತವೆ. ಎರಡನೇ-ಮೂರನೇ ಹಂತದ ನಗರಗಳಿಗೆ ವಿಮಾನಯಾನ ಸಂಪರ್ಕಕ್ಕೆ ಒತ್ತು ನೀಡುತ್ತೇವೆ. ದೊಡ್ಡ ವಿಮಾನಯಾನ ಕಂಪೆನಗಳೊಂದಿಗೆ ದರ ಪೈಪೋಟಿಗೆ ಇಳಿಯುವುದಿಲ್ಲ ಎಂದರು.

ಉದ್ಯಮಿ ಗಣೇಶ ಶಾಮನೂರು ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಮುಖಂಡರಾದ ಎ.ಎಂ.ಹಿಂಡಸಗೇರಿ, ಮಹೇಂದ್ರ ಸಿಂಘಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next