Advertisement

ಪಬ್‌ ನಲ್ಲಿ ಕನ್ನಡ ಹಾಡು ಹಾಕಿ ಎಂದಿದಕ್ಕೆ ಮಹಿಳೆ ಮೇಲೆ ಡಿ.ಜೆ.ಯಿಂದ ಹಲ್ಲೆ

09:46 PM Feb 06, 2022 | Team Udayavani |

ಬೆಂಗಳೂರು: ಕನ್ನಡ ಹಾಡು ಪ್ರಸಾರ ಮಾಡುವಂತೆ ಹೇಳಿದಕ್ಕೆ ಡಿ.ಜೆಯೊಬ್ಬ ಮಹಿಳಾ ಗ್ರಾಹಕಿ ಹಾಗೂ ಆಕೆಯ ಸಹೋದರನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದ ಪಬ್‌ವೊಂದರಲ್ಲಿ ನಡೆದಿದ್ದು, ಡಿ.ಜೆ. ಸಿದ್ದಾರ್ಥ್ ಮಲ್ಹೋತ್ರಾ ಎಂಬಾತನ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕೋರಮಂಗಲದ 80 ಅಡಿ ರಸ್ತೆಯ “ಬದ್ಮಾಶ್‌’ ಹೆಸರಿನ ಪಬ್‌ನಲ್ಲಿ ಶನಿವಾರ ತಡರಾತ್ರಿ ವಿವೇಕನಗರದ ನಿವಾಸಿ ಸುಮಿತಾ ಎಂಬ ಯುವತಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸಹೋದರ ನಂದಕಿಶೋರ್‌ ಸೇರಿದಂತೆ ಸುಮಾರು 15 ಜನ ಸ್ನೇಹಿತರು ಪಾರ್ಟಿಗೆ ಹೋಗಿದ್ದರು. ಈ ವೇಳೆ ಪಬ್‌ನ ಡಿ.ಜೆ. ಸಿದ್ಧಾರ್ಥ್ ನಿರಂತರವಾಗಿ  ಹಿಂದಿ, ಇಂಗ್ಲಿಷ್‌, ತೆಲುಗು, ತಮಿಳು ಹಾಡುಗಳನ್ನು ಪ್ಲೇ ಮಾಡುತ್ತಿದ್ದ. ಈ ವೇಳೆ ಸುಮಿತಾ ಮತ್ತು ಅವರ ಸ್ನೇಹಿತರು ಕನ್ನಡ ಹಾಡು ಪ್ಲೇ ಮಾಡುವಂತೆ ಡಿ.ಜೆ.ಗೆ ಕೇಳಿಕೊಂಡಿದ್ದಾರೆ. ತಡರಾತ್ರಿ 12.30ರ ವರೆಗೂ ಸುಮಿತಾ ಸೇರಿ ಸ್ನೇಹಿತರು ಹತ್ತಾರು ಬಾರಿ ಒಂದೇ ಒಂದು ಕನ್ನಡ ಹಾಡು ಪ್ಲೇ ಮಾಡುವಂತೆ ಮನವಿ ಮಾಡಿದ್ದಾರೆ. ಕನ್ನಡ ಹಾಡು ಹಾಕುವುದಾಗಿ ಹೇಳಿದ್ದ ಸಿದ್ಧಾರ್ಥ್ ತಡರಾತ್ರಿಯಾದರೂ ಹಾಕಿಲ್ಲ. ಬಹಳ ಹೊತ್ತಾದರೂ ಹಾಡು ಹಾಕದ ಹಿನ್ನೆಲೆಲ್ಲಿ ನಂದಕಿಶೋರ್‌ ಕನ್ನಡ ಹಾಡು ಹಾಕುವಂತೆ ಕೇಳಿದ್ದಾರೆ. ಆಗ ಕೋಪಗೊಂಡ ಡಿ.ಜೆ. ಕನ್ನಡ ಹಾಡು ಹಾಕಲು ಸಾಧ್ಯವಿಲ್ಲ. ಕನ್ನಡ ಹಾಡು ಬೇಕೆಂದರೆ ಮತ್ತೂಮ್ಮೆ ನಮ್ಮ ಪಬ್‌ಗ ಬರಬೇಡಿ, ಹೊರಗೆ ಹೋಗಿ ಎಂದು ನಿಂದಿಸಿದ್ದಾನೆ. ಅಷ್ಟೇ ಅಲ್ಲದೇ, ನಂದಕಿಶೋರ್‌ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ. ಈ ವೇಳೆ ಡಿ.ಜೆ ಸಿದ್ದಾರ್ಥ್ ಹಾಗೂ ಸುಮಿತಾ ಸ್ನೇಹಿತರ ನಡುವೆ ಕೆಲ ವಾಗ್ವಾದ ನಡೆದಿದೆ. ಬಳಿಕ ಪಬ್‌ ಸಿಬ್ಬಂದಿ ಡಿ.ಜೆ.ಯನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ನಂದಕಿಶೋರ್‌ ಹಾಗೂ ಆತನ ಸಹೋದರಿ ಸುಮಿತಾ ಅವರಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ದೂರು ನೀಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮತ್ತೂಂದೆಡೆ ಘಟನೆ ಖಂಡಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಭಾನುವಾರ ಕೋರಮಂಗಲದ ಬದ್ಮಾಶ್‌ ಪಬ್‌ ಬಳಿ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಹಾಡು ಹಾಕಲು ನಿರಾಕರಿಸಿದ ಡಿ.ಜೆ. ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಮುಂದೆ ಕನ್ನಡ ಹಾಡು ಹಾಕದಿದ್ದರೆ, ಸರಿಯಾದ ಪಾಠ ಕಲಿಸುವುದಾಗಿ ಪಬ್‌ನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಪಬ್‌ನ ಸಿಬ್ಬಂದಿ ಕ್ಷಮೆ ಕೇಳಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next