Advertisement

Bengaluru: ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ: ಡಿ.ಕೆ.ಶಿವಕುಮಾರ್‌

09:46 PM Jul 24, 2024 | Team Udayavani |

ಬೆಂಗಳೂರು: ಜಲಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವಿಧಾನಸಭೆ ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ ಬಗ್ಗೆ ಮಂಡಳಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಜಲಮಂಡಳಿ, ಜಲಮಂಡಳಿಯ ನೌಕರರ ಸಂಘ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ  ಕಳೆದ 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿಯ ಮೇಲೆ ಬಹಳಷ್ಟು ಒತ್ತಡ ಉಂಟಾಗಿದೆ. ಸದ್ಯ ನೀರಿನ ಬೆಲೆ ಹೆಚ್ಚಿಸಬೇಕೆಂಬ ಒತ್ತಡವಿದೆ. ಇದರ ಬಗ್ಗೆ ಸದ್ಯದಲ್ಲೇ ಸರ್ಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಏಕಾಏಕಿ ದರ ಹೆಚ್ಚಿಸಿದರೆ ವಿರೋಧ ಪಕ್ಷದವರು ಟೀಕಿಸುತ್ತಾರೆ. ಅವರು ಟೀಕಿಸಿದರೂ ಪರವಾಗಿಲ್ಲ, ನಮಗೆ ಮಂಡಳಿ ಉಳಿಯಬೇಕು ಎಂದು ತಿಳಿಸಿದರು.

ಸಿಬ್ಬಂದಿ ನೇಮಕಾತಿಗೆ ಕ್ರಮ:
ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣದಿಂದಾಗಿ ಹಲವು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ಬಳಿಕ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಿಬ್ಬಂದಿ ನೇಮಕಾತಿ ಹಾಗೂ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ ಎಂದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರಿನಲ್ಲಿ ಮುಂದಿನ 20 ವರ್ಷಗಳಲ್ಲಿ ಇನ್ನು 1 ಕೋಟಿ ಜನಸಂಖ್ಯೆ ಹೆಚ್ಚಾಗಬಹುದು. ಅಂದು 2.5 ಕೋಟಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಎದುರಾಗುವ ಜ್ವಲಂತ ಸಮಸ್ಯೆಗಳ ನಿವಾರಣೆಗೂ ನಾವು ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌, ಎಂಎಲ್‌ಸಿ ಎಸ್‌.ರವಿ, ಖ್ಯಾತ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಜಲಮಂಡಳಿ ಮುಖ್ಯ ಆಡಳಿತಾಧಿಕಾರಿ ಮದನ್‌ ಮೋಹನ್‌ ಸಿ, ಆರ್ಥಿಕ ಸಲಹೆಗಾರರಾದ ಸುಬ್ರಮಣ್ಯ, ಮುಖ್ಯ ಅಭಿಯಂತರ ಬಿ.ಸುರೇಶ್‌, ಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ ಕೆ ಮರಿಯಪ್ಪ,ಸಿದ್ದಪ್ಪ, ಸದಾಶಿವ ಕಾಂಬಳೆ ಇತರರಿದ್ದರು.

Advertisement

ಗ್ರೇಟರ್‌ ಬೆಂಗಳೂರು ಬಿಲ್‌ಗೆ 70 ಸಾವಿರ ಸಲಹೆ ಪರಿಗಣನೆ
ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ 4 ಗೋಪುರಗಳನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಸಮರ್ಪಕ ನಿರ್ವಹಣೆಗೆ ಗ್ರೇಟರ್‌ ಬೆಂಗಳೂರು ಬಿಲ್‌ ಮಂಡಿಸಲಾಗಿದೆ. ಸುಮಾರು 70 ಸಾವಿರ ಸಲಹೆಗಳನ್ನು ಕ್ರೋಢೀಕರಿಸುವ ಮೂಲಕ ಅಂತಿಮವಾದ ಬಿಲ್‌ ಅನ್ನು ಪ್ರಸ್ತುತಪಡಿಸಲಾಗುತ್ತಿದೆ.

ಬೆಂಗಳೂರು ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರೇಟರ್‌ ಬೆಂಗಳೂರು ಬಿಲ್‌ ಅನ್ನ ಸಿದ್ಧಪಡಿಸಲಾಗಿದೆ. ಭವಿಷ್ಯಕ್ಕೆ ನಮ್ಮ ನಗರ ಸಜ್ಜಾಗಿರಬೇಕು ಎನ್ನುವ ದೂರದೃಷ್ಟಿಯನ್ನು ಇಲ್ಲಿ ಹೊಂದಿದ್ದೇವೆ ಎಂದರು. ನೂತನ ಬಿಲ್‌ನಲ್ಲಿ ಬಿಡಿಎ, ಜಲಮಂಡಳಿಯನ್ನು ವಿಲೀನ ಮಾಡಬೇಕು ಎನ್ನುವ ಸಲಹೆ ಬಂದಿತ್ತು. ನಾನು ಒಪ್ಪಿಗೆ ನೀಡಲಿಲ್ಲ. ನಿಮ್ಮನ್ನು ರಾಜಕಾರಣಕ್ಕೆ ಎಳೆಯುವುದು ಬೇಡ ಇಲಾಖೆಯ ಸ್ವಾಯತ್ತತೆ ಉಳಿಯಲಿ ಎಂದು ತೀರ್ಮಾನ ಮಾಡಿದೆ. ವಿಲೀನವಾದಷ್ಟು ಕಷ್ಟವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next