Advertisement

Bengaluru: ಬಟ್ಟೆ ಮಾರಾಟಕ್ಕೆ ಬಂದು ಶ್ರೀಗಂಧದ ಮರ ಕದ್ದರು!

11:55 AM Aug 17, 2024 | Team Udayavani |

ಬೆಂಗಳೂರು: ಬೆಡ್‌ ಶೀಟ್‌ ಮಾರಾಟಕ್ಕೆಂದು ಬಂದು 7 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರ ಕದ್ದು ಕೇವಲ 65 ಸಾವಿರ ರೂ.ಗೆ ಮಾರಾಟ ಮಾಡಿದ್ದ ಕಳ್ಳರನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಪಾಂಡವಪುರ ಮೂಲದ ಮಂಜುನಾಥ್‌, ವೆಂಕಟೇಶ್‌ ಹಾಗೂ ಮಂಜುನಾಥ್‌ ಬಂಧಿತರು. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ 26 ಕೆ.ಜಿ. ತೂಕದ ಶ್ರೀಗಂಧದ ಮರ ಜಪ್ತಿ ಮಾಡಲಾಗಿದೆ.

ವ್ಯಾಪಾರಿಗಳಾಗಿದ್ದ ಆರೋಪಿಗಳು ಬೆಡ್‌ ಶೀಟ್‌ ಮಾರಾಟಕ್ಕೆಂದು ದೊಡ್ಡ ತೋಗೂರಿಗೆ ಬಂದಿದ್ದರು. ಮಾರ್ಗ ಮಧ್ಯೆ ಚೆನ್ನಾರೆಡ್ಡಿ ಎಂಬುವರ ಜಮೀನಿನಲ್ಲಿದ್ದ 20 ವರ್ಷದ ಹಳೆಯ ಸುಮಾರು 20 ಅಡಿ ಉದ್ದದ ಶ್ರೀಗಂಧದ ಮರ ಗಮನಿಸಿದ್ದರು. ಜುಲೈ 6ರಂದು ರಾತ್ರಿ ಮತ್ತೆ ಇದೇ ಜಾಗಕ್ಕೆ ಬಂದ ಆರೋಪಿಗಳು ಮರವನ್ನು ಕಡಿದು ಅದನ್ನು ಸಣ್ಣ ಸಣ್ಣ ತುಂಡು ಮಾಡಿ ತಮ್ಮ ವಾಹನದಲ್ಲಿ ತುಂಬಿ ಪರಾರಿಯಾಗಿದ್ದರು. ಗಂಧದ ಮರದ ಮಾರುಕಟ್ಟೆ ಬೆಲೆಯ ಬಗ್ಗೆ ಆರೋಪಿಗಳಿಗೆ ಸೂಕ್ತ ಮಾಹಿತಿ ಇರಲಿಲ್ಲ.

ಮರ ಮಾರಾಟಕ್ಕೆ ಗಿರಾಕಿಗಳನ್ನು ಹುಡುಕು ತಿದ್ದಾಗ ಹಾಸನದ ವ್ಯಾಪಾರಿ ಇದನ್ನು ಖರೀದಿಸಲು ಮುಂದಾಗಿದ್ದರು. ಆರೋಪಿಗಳಿಗೆ ಕೇವಲ 65 ಸಾವಿರ ರೂ. ಕೊಟ್ಟು ಶ್ರೀಗಂಧದ ತುಂಡುಗಳನ್ನು ವ್ಯಾಪಾರಿ ಖರೀದಿಸಿದ್ದರು. ಇತ್ತ ಚೆನ್ನಾರೆಡ್ಡಿ ಮರುದಿನ ಜಮೀನಿನಲ್ಲಿದ್ದ ಮರ ಕಡಿದಿರುವುದನ್ನು ಗಮನಿಸಿ ದ್ದರು. ಈ ಬಗ್ಗೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next