Advertisement

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

08:21 AM Jul 22, 2024 | Team Udayavani |

ಬೆಂಗಳೂರು: ಮೈಸೂರು ರಸ್ತೆಯ ಬಿಜಿಎಸ್‌ ಮೇಲು ಸೇತುವೆಯ ಡೌನ್‌ ರ್‍ಯಾಂಪ್‌ನಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

Advertisement

ವಾಲ್ಮೀಕಿನಗರದ ವಿಘ್ನೇಶ್ (26) ಮೃತ ಸವಾರ. ಕೆಂಗೇರಿಯ ಶ್ರೀನಿಧಿ ಗಾಯಗೊಂಡಿರುವ ಹಿಂಬದಿ ಸವಾರ.

ಸದ್ಯ ಶ್ರೀನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಬಿಜಿಎಸ್‌ ಮೇಲು ಸೇತುವೆಯಲ್ಲಿ ಡೌನ್‌ ರ್‍ಯಾಂಪ್‌ನಲ್ಲಿ ಸಿಟಿ ಮಾರ್ಕೆಟ್‌ ಕಡೆಯಿಂದ ಕೆಂಗೇರಿ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಮೃತ ಸವಾರ ವಿಘ್ನೇಶ್ ಹಾಗೂ ಈತನ ಸ್ನೇಹಿತ ಶ್ರೀನಿಧಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.

ಶನಿವಾರ ತಡರಾತ್ರಿ ಇಬ್ಬರು ಸಿಟಿ ಮಾರ್ಕೆಟ್‌ನಲ್ಲಿ ಊಟ ಮಾಡಿದ್ದಾರೆ. ಮುಂಜಾನೆ ಸುಮಾರು 1.30ಕ್ಕೆ ದ್ವಿಚಕ್ರ ವಾಹನದಲ್ಲಿ ಬಿಜಿಎಸ್‌ ಮೇಲು ಸೇತುವೆಯಲ್ಲಿ ಸಿಟಿ ಮಾರ್ಕೆಟ್‌ ಕಡೆಯಿಂದ ಕೆಂಗೇರಿ ಕಡೆಗೆ ಹೊರಟ್ಟಿದ್ದಾರೆ. ಮಾರ್ಗ ಮಧ್ಯೆ ಮೇಲು ಸೇತುವೆಯ ಡೌನ್‌ ರ್‍ಯಾಂಪ್‌ನಿಂದ ರಸ್ತೆಗೆ ಇಳಿಯುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ಇಬ್ಬರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸವಾರರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದ ಸವಾರ ವಿಘ್ನೇಶ್ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಶ್ರೀನಿಧಿ ಕೈ ಹಾಗೂ ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

ಈ ಸಂಬಂಧ ಚಿಕ್ಕಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next