Advertisement

Cynodon; ಗಣಪತಿಗೆ ಪ್ರಿಯವಾದ ಗರಿಕೆಯಲ್ಲಿದೆ ಹಲವು ಔಷಧೀಯ ಗುಣಗಳು

06:04 PM Feb 01, 2024 | Team Udayavani |

ಗರಿಕೆ ಹುಲ್ಲು ಇದು ಸಾಮಾನ್ಯವಾಗಿ ಎಲ್ಲಾ ಸ್ಥಳೀಯ ಪ್ರದೇಶಗಳಲ್ಲಿ ಹೇರಳವಾಗಿ ಕಾಣಸಿಗುವಂತಹ ಹುಲ್ಲು. ನಮ್ಮ ಸನಾತನ ಸಂಸ್ಕ್ರತಿಯಲ್ಲಿ ಈ ಹುಲ್ಲಿಗೆ ವಿಶಿಷ್ಟವಾದ ಮಹತ್ವವಿದೆ ಜೊತೆಗೆ ಸ್ಥಾನವೂ ಇದೆ. ಪುರಾಣಗಳಲ್ಲಿ ಈ ಹುಲ್ಲಿನ ಬಗೆಗೆ ಹಲವಾರು ಉಲ್ಲೇಖವೂ ಇದೆ.

Advertisement

ಎಲ್ಲಾ ದೇವ ದೇವತೆಗಳಿಗೂ ಪ್ರಿಯವಾದ ಪುಷ್ಪ, ಮರ, ಹುಲ್ಲು, ಎಲೆ ಹೀಗೆ ಹಲವಾರು ರೀತಿಯ ಇಷ್ಟ ವಸ್ತುಗಳಿರುತ್ತದೆ. ಅಂತಹ ಪ್ರಿಯವಸ್ತುಗಳ ಸ್ಥಾನದಲ್ಲಿ ಇದೂ ಕೂಡಾ ಒಂದು. ಗರಿಕೆ ಹುಲ್ಲು ಗಣಪತಿ ದೇವರಿಗೆ ಶ್ರೇಷ್ಠ ಮತ್ತು ತುಂಬಾ ಪ್ರಿಯವಾದುದು ಗರಿಕೆ ಹುಲ್ಲಿಲ್ಲದೆ ಗಣಪತಿ ದೇವರ ಆರಾಧನೆ ಅಪೂರ್ಣ. ಇದನ್ನು ಗರಿಕೆ  ಮಾತ್ರವಲ್ಲದೆ ದೂರ್ವಾ ಹುಲ್ಲು ಎಂದು ಕರೆಯುತ್ತಾರೆ.

ಅಧ್ಯಾತ್ಮಿಕ ಹಿನ್ನೆಲೆ

ಗರಿಕೆಯು ಪುರಾಣದ ಕಾಲದಿಂದಲ್ಲೇ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಪುರಾಣದ ಪ್ರಕಾರ ಗಣಪತಿ ದೇವರಿಗೂ ಹಾಗೂ ಗರಿಕೆ ಹುಲ್ಲಿಗೂ ಅವಿನಾಭಾವ ನಂಟಿದೆ.

ಅನಲಾಸುರ ಎಂಬ ದುಷ್ಟ ರಾಕ್ಷಸನೊಬ್ಬನಿದ್ದನು. ಆತನ ಕಣ್ಣಿಂದ ಬೆಂಕಿಯ ಉಂಡೆಗಳೇ ಬರುತ್ತಿದ್ದವು. ದುಷ್ಟ ರಾಕ್ಷಸನು ಭೂಲೋಕ ಮತ್ತು ಸ್ವರ್ಗ ಲೋಕದಲ್ಲಿ ತೊಂದರೆ ನೀಡುತ್ತಿದ್ದನು. ದುಷ್ಟ ರಾಕ್ಷಸನ ಹಿಂಸೆ ತಾಳಲಾರದೆ ದೇವತೆಗಳೆಲ್ಲ ತಮ್ಮ ರಕ್ಷಣೆಗೆ ಮಹಾದೇವನಿಗೆ ಪ್ರಾರ್ಥಿಸುತ್ತಾರೆ. ಆಗ ಶಿವನು ದುಷ್ಟ ಅನಲಾ ಸುರನ ಸಂಹಾರವು ಗಣಪತಿಯಿಂದ ಮಾತ್ರ ಸಾಧ್ಯ ಎಂದು ಗಣಪತಿಗೆ ದುಷ್ಟ ರಾಕ್ಷಸನನ್ನು ಸಂಹರಿಸಲು ಆದೇಶ ನೀಡುತ್ತಾನೆ. ತಂದೆಯ ಆಜ್ಞೆಯಂತೆ ಗಣಪತಿ ದೇವರು ದುಷ್ಟರಕ್ಕಸನೊಂದಿಗೆ ಯುದ್ಧಕ್ಕೆ ಇಳಿಯುತ್ತಾರೆ. ದುಷ್ಟರಾಕ್ಷಸ ರಕ್ಷಣೆಗೆ ತನ್ನ ಕಣ್ಣಿಂದ ಬೆಂಕಿ ಉಂಡೆಗಳನ್ನು ಗಣಪತಿ ದೇವರ ಕಡೆಗೆ ಪ್ರಹರಿಸಲು ಪ್ರಯತ್ನಿಸುತ್ತಾನೆ. ಆಗ ಗಣಪತಿ ದೇವರು ಭಯಾಂಕರವಾಗಿ ಉಗ್ರದೈತ್ಯ ರೂಪ ತಾಳಿ ರಕ್ಕಸನನ್ನು ನುಂಗುತ್ತಾರೆ. ಬೆಂಕಿಯ ಉಂಡೆಗಳನ್ನು ಹೊತ್ತಂತಹ ದುಷ್ಟರಕ್ಕಸನನ್ನು ನುಂಗಿದ ಪರಿಣಾಮ ಗಣಪತಿ ದೇವರ ದೇಹದ ಉಷ್ಣದ ತಾಪ ಹೆಚ್ಚಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ಗಣಪತಿ ದೇವರು ಹೊಟ್ಟೆ ಉರಿಯನ್ನು ಅನುಭವಿಸುತ್ತಾರೆ. ಗಣಪತಿ ದೇವರ ಹೊಟ್ಟೆ ಉರಿಯ ಒದ್ದಾಟವನ್ನು ನೋಡಲಾರದೆ ಋಷಿಮುನಿಗಳೆಲ್ಲರೂ ಸೇರಿ ಹೊಟ್ಟೆ ಉರಿ ಪರಿಹಾರವಾಗಲೆಂದು 21 ಗರಿಕೆ ಹುಲ್ಲನ್ನು ಕಟ್ಟುಗಳಾಗಿ ಕಟ್ಟಿ ಗಣಪತಿ ದೇವರ ತಲೆಯ ಮೇಲಿರಿಸುತ್ತಾರೆ. ಇದರಿಂದಾಗಿ ಗಣಪತಿ ದೇವರ ಹೊಟ್ಟೆ ಉರಿ ಶಮನವಾಗಿ ತಂಪಾಗಿಬಿಡುತ್ತದೆ. ಆದ್ದರಿಂದ ಗರಿಕೆಯನ್ನು “ತಂಪುಕಾರಕ” ಎಂದು ಕರೆಯುತ್ತಾರೆ.

Advertisement

ಈ ಪುರಾಣದ ಕಥೆಯ ಉಲ್ಲೇಖದಿಂದಾಗಿ ಇಂದಿಗೂ ಗಣಪತಿ ದೇವರ ಆರಾಧನೆ ಸಮಯದಲ್ಲಿ 7 ಗರಿಕೆಗಳನ್ನು ಅರ್ಪಿಸಬೇಕು. ಹೂ ಬಿಟ್ಟಿರುವಂತಹ ಗರಿಕೆಯನ್ನು ಅರ್ಪಿಸಬಾರದು. ಗರಿಕೆ ಮೂರು ಅಥವಾ ಐದು ಎಲೆಯನ್ನು ಹೊಂದಿರಬೇಕು. ಇದರ ಅರ್ಥ ಗರಿಕೆಯಲ್ಲಿ ಮಧ್ಯದೆಲೆ ಗಣಪತಿ ದೇವರಿಗೆ ಅರ್ಪಿತವಾದರೆ ಇನ್ನುಳಿದ ಎರಡೆಲೆ ಶಿವ ಹಾಗೂ ಪಾರ್ವತಿಗೆ ಅರ್ಪಿತವಾಗುತ್ತದೆ.  ಇದರಿಂದಾಗಿ ಗಣಪತಿ, ಶಿವ ಮತ್ತು ಶಕ್ತಿ ಈ ಮೂವರನ್ನು ಗರಿಕೆಯಲ್ಲೇ ಕಾಣುವುದು ಪ್ರತೀತಿ. ಯಾರು ಗಣಪತಿ ದೇವರನ್ನು 21 ಗರಿಕೆಯಲ್ಲಿ ಆರಾಧಿಸುತ್ತಾರೋ ಅಂತಹ ಭಕ್ತರನ್ನು ಗಣಪತಿ ದೇವರು ಸದಾ ಅನುಗ್ರಹಿಸುತ್ತಾರೆ ಎಂಬ ನಂಬಿಕೆಯೂ ಇದೆ.

ಮತ್ತೊಂದು ಪುರಾಣದ ಕಥೆಯ ಪ್ರಕಾರ, ಸಮುದ್ರ ಮಥನದ ಸಮಯದಲ್ಲಿ ದೇವತೆಗಳ ಹಾಗೂ ರಕ್ಕಸರ ನಡುವೆ ಅಮೃತಕ್ಕಾಗಿ ಜಗಳ ನಡೆಯುತ್ತದೆ. ಆ ಸಂದರ್ಭದಲ್ಲಿ ಅಮೃತದ ಕೆಲವು ಹನಿಗಳು ಅಲ್ಲೇ ಬೆಳೆದ ಗರಿಕೆ ಹುಲ್ಲಿನ ಮೇಲೆ ಬೀಳುತ್ತದೆ. ಆಗ ಗರಿಕೆಯೂ ಅಮೃತಕ್ಕೆ ಸಮಾನವಾದ ಶಕ್ತಿಯನ್ನು ಪಡೆದುಕೊಳ್ಳುತ್ತದೆ.  ಈ ಕಥೆ ಉಲ್ಲೇಖದಿಂದಾಗಿ ನಾವು ಎಷ್ಟೇ ಬಾರಿ ಗರಿಕೆಯನ್ನು ಕಿತ್ತರು ಅದು ಮರಳಿ ಹುಟ್ಟಿ ಬೆಳೆಯುತ್ತದೆ. ಗರಿಕೆಯ ವಿಶೇಷವೆಂದರೆ ಮನುಷ್ಯರು ಕಾಲಿರಿಸುವಂತಹ ಜಾಗದಲ್ಲಿ ಮಾತ್ರ ಗರಿಕೆ ಹುಲ್ಲು ಬೆಳೆಯುತ್ತದೆ. ಆದ್ದರಿಂದ ಗಣಪತಿ ದೇವರಿಗೆ ಗರಿಕೆ ಹುಲ್ಲು ಎಂದರೆ ಅತ್ಯಂತ ಪವಿತ್ರ ಮತ್ತು ಪ್ರಿಯವಾದುದಾಗಿದೆ.

ಆರೋಗ್ಯದ ಸಂಜೀವಿನಿ

ಇದರ ವೈಜ್ಞಾನಿಕ ಹೆಸರು ಸೈನೋ ಡಾನ್ ಡ್ಯಾಕ್ಟಿಲಾನ್‌. ವೈಜ್ಞಾನಿಕತೆಯ ಪ್ರಕಾರ ಈ ಸಸ್ಯದಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್, ಪೊಟ್ಯಾಸಿಯಂ, ಪ್ರೊಟೀನ್, ಪಾಸ್ಫರಸ್, ಮ್ಯಾಂಗನೀಸ್ ಮತ್ತು ಕಾರ್ಬೋಹೈಡ್ರೇಟ್ ನಂತಹ ರಾಸಾಯನಿಕ ಅಂಶಗಳಿವೆ. ಗರಿಕೆ ಹುಲ್ಲನ್ನು ಆಯುರ್ವೇದ ಔಷಧಿಯಾಗಿಯೂ ಬಳಸುತ್ತಾರೆ.

ಗರಿಕೆ ಹುಲ್ಲು ಹೆಂಗಸರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಹೆಂಗಸರಲ್ಲಿ ಕಾಣಿಸಿಕೊಳ್ಳುವಂತಹ ಗರ್ಭಕೋಶದ ಸಮಸ್ಯೆ, ಗರ್ಭಶಯದ ರಕ್ತಸ್ರಾವದ ಸಮಸ್ಯೆ, ಮೂತ್ರದ ಸೋಂಕು, ಪಿಸಿಓಡಿ ಮತ್ತು ಪಿಸಿಓಎಸ್, ಬಾಣಂತಿಯರಲ್ಲಿ ಹಾಲಿನ ಕೊರತೆ ಇಂತಹ ಸಮಸ್ಯೆಗಳಿಗೆ  ಪರಿಹಾರವಾಗಿದೆ.

ಗರಿಕೆ ಸೇವೆನೆಯಿಂದಾಗಿ ಆಮ್ಲೀಯತೆ, ಪದೇ ಪದೇ ಶೀತ, ಕಫ, ಕೊಬ್ಬು, ಗಾಯಗಳಿಗೆ, ತುರಿಕೆ, ದದ್ದು, ಕುಷ್ಟರೋಗ, ನಂಜು, ಉರಿಯೂತ, ಶುಷ್ಕತೆ, ಪೋಷಕಾಂಶಗಳ ಕೊರತೆ ಇಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಅನಿಯಂತ್ರಣವಾದ ಮಧುಮೇಹಗಳಿಗೆ ಮತ್ತು ಇನ್ಸುಲಿನ್ ಪ್ರತಿರೋಧವಾಗಿ ಸಹಕರಿಸುತ್ತದೆ. ಇದು ನೈಸರ್ಗಿಕವಾಗಿ ರಕ್ತ ಶುದ್ಧೀಕಾರಕವಾಗಿದೆ ಮತ್ತು ರಕ್ತ ಕಣಗಳನ್ನು ಆರೋಗ್ಯವಾಗಿರುವಂತೆ ಕಾಪಾಡುತ್ತದೆ ಹಾಗೂ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಿ, ರಕ್ತ ಹೀನತೆ ಕಡಿಮೆಗೊಳಿಸುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ನಿದ್ರಾ ಹೀನತೆ, ಆಯಾಸ, ನರ ದೌರ್ಬಲ್ಯ, ಹುಣ್ಣುಗಳಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ, ದಿನ ನಿತ್ಯ ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ.

ಇಂತಹ ಅನೇಕ ಸಸ್ಯಗಳು ಅದೆಷ್ಟೊ ಕಾಯಿಲೆಗಳಿಗೆ ಔಷಧಿಗಳಾಗಿರುತ್ತದೆ, ಆದರೆ ನಾವೇ ಇಂತಹ ಸಸ್ಯಗಳು ಉಪಯೋಗಿಸಿಕೊಳ್ಳದೆ, ದೇಹಕ್ಕೆ ನಕಾರಾತ್ಮಕವಾಗಿ ಪರಿಣಾಮ ಬೀರುವಂತಹ ಔಷಧಿಗಳನ್ನು ಸೇವಿಸುತ್ತೇವೆ. ನಾವು ದೇಹಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಇಂತಹ ಸಸ್ಯಗಳ ಔಷಧಿಯುಕ್ತ ಗುಣದಿಂದಾಗಿ ರಕ್ಷಣೆ ಮಾಡಬಹುದಾಗಿದೆ. ಆದ್ದರಿಂದ ದೇಹಕ್ಕೆ ಕಷ್ಟ ಬಂದಾಗ ಒಂದು ಹುಲ್ಲು ಕೂಡ ಉಪಯೋಗಕ್ಕೆ ಬಾರದು ಎಂಬ ಮಾತು ಈ ಸಸ್ಯ ಸುಳ್ಳು ಮಾಡಿದೆ

ವಿದ್ಯಾಪ್ರಸಾದ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next