Advertisement

ಕೆಸರುಗದ್ದೆಯಾದ ಬೇಳೂರು ಯಳಹಕ್ಲು -ಮಧುವನ ಸಂಪರ್ಕ ರಸ್ತೆ

06:00 AM Oct 12, 2018 | Team Udayavani |

ತೆಕ್ಕಟ್ಟೆ : ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೇಳೂರು ಯಳಹಕ್ಲು -ಮಧುವನ ಗ್ರಾಮಾಂತರ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೆಸರುಗದ್ದೆಯಂತಾಗಿದೆ.  

Advertisement

ಬೇಸಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ಈ ಮಾರ್ಗದಲ್ಲಿ ಬೇಳೂರು ದೇಲಟ್ಟುವಿನಿಂದ ಯಳಹಕ್ಲು ವರೆಗೆ ಡಾಮರು ಆಗಿದೆ. ಬಳಿಕ ಸುಳಿಗುಂಡಿಯಿಂದ ಮಧುವನದವರೆಗೆ ಡಾಮಾರು ಆಗಿದೆ. ಅದರ ಮಧ್ಯದ ಸುಮಾರು 300 ಮೀ. ಮಾತ್ರ ಡಾಮರು ಹಾಕದೇ ಬಿಟ್ಟಿದ್ದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆಯಲ್ಲಿ ಈ ರಸ್ತೆ ಇಡೀ ಧೂಳುಮಯವಾಗಿದ್ದರೆ, ಮಳೆಗಾಲದಲ್ಲಿ ಕೆಸರಿನಿಂದ ತುಂಬಿ ಸಂಚಾರಕ್ಕೆ ಕಷ್ಟಕರವಾಗಿದೆ. ಘನವಾಹನಗಳು ಸಂಚರಿಸುವುದರಿಂದ ಸಾಮಾನ್ಯ ವಾಹನದವರಿಗೆ, ಪಾದಚಾರಿಗಳಿಗೆ ನಡೆದಾಡಲೂ ಕಷ್ಟವಾಗಿದೆ ಎಂದು  ಗ್ರಾಮಸ್ಥರು ದೂರಿದ್ದಾರೆ.

5 ವರ್ಷಗಳಿಂದ ರಿಪೇರಿ ಭಾಗ್ಯವಿಲ್ಲ 
ಯಳಹಕ್ಲುವಿನಲ್ಲಿ ಐದು ವರ್ಷಗಳ ಹಿಂದೆ ಸೇತುವೆ ನಿರ್ಮಾಣವಾಗಿದ್ದು, ಈ ಸಂದರ್ಭ ಯಳಹಕ್ಲು – ಮಧುವನ ಮಧ್ಯೆ ಡಾಮಾರು ಹಾಕುವುದಾಗಿ ಭರವಸೆ ಸಿಕ್ಕಿತ್ತು. ಆದರೆ ಇಲ್ಲಿ ಡಾಮಾರು ಇದುವರೆಗೂ ಹಾಕಿಲ್ಲ. ಪಂಚಾಯತ್‌ನವರೂ ಈ ಹಿಂದೆಯೂ ಇದರ ನಿರ್ವಹಣೆಯನ್ನೂ ಮಾಡದ್ದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿಯೇ ಮುಂದುವರಿದಿದೆ.
 
ರಸ್ತೆ ಅಭಿವೃದ್ಧಿಗೆ ಆಗ್ರಹ
ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾರ್ಗವಾಗಿ ಸಾಗುವ ತಾಲೂಕಿನ ಬಹುಗ್ರಾಮ ಸಂಪರ್ಕ ರಸ್ತೆ ಇದಾಗಿದ್ದು. ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳು  ಮಧುವನ ಮಾರ್ಗವಾಗಿ ಕೋಟ, ಬ್ರಹ್ಮಾವರ ಸೇರಿದಂತೆ ವಿವಿಧ ವಿದ್ಯಾ ಸಂಸ್ಥೆಗಳಿಗೆ ಇದೇ ಮಾರ್ಗವನ್ನು ಬಳಸಬೇಕಾಗಿದೆ. ರಸ್ತೆ ಅಭಿವೃದ್ಧಿ ಸಂಬಂಧಪಟ್ಟ ಜನಪ್ರತಿನಿಧಿಗಳು , ಇಲಾಖಾ ಅಧಿಕಾರಿಗಳು ತತ್‌ಕ್ಷಣವೇ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.  

ಮನವಿ ಮಾಡಲಾಗಿದೆ
ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಹೊಂದಿದ ರಸ್ತೆ ಇದಾಗಿದ್ದು .ಗ್ರಾ.ಪಂ. ಸತತ ಮೂರು ವರ್ಷಗಳಿಂದಲೂ ರಸ್ತೆ ಅಭಿವೃದ್ಧಿಗಾಗಿ ಲಿಖೀತ ರೂಪದಲ್ಲಿ ಮನವಿ ಮಾಡಿದ್ದೇವೆ ಆದರೆ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಈ ರಸ್ತೆ ಸಂಪೂರ್ಣ ಕಾಂಕ್ರಿಟೀಕರಣವಾದರೇ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಗ್ರಾ.ಪಂ. ಮೂಲಕ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸುವ ಚಿಂತನೆ ಇದೆ. 
– ಬಿ.ಕರುಣಾಕರ ಶೆಟ್ಟಿ ಅಧ್ಯಕ್ಷರು, ಗ್ರಾ.ಪಂ.ಬೇಳೂರು

ತೀವ್ರ ತೊಂದರೆ
ಈ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಮ್ಮ ಸ್ವಂತ ಜಾಗವನ್ನೇ ನೀಡಿದ್ದೇವೆ. ಹೋರಾಟದ ಫಲವಾಗಿ ಸೇತುವೆ ನಿರ್ಮಾಣವಾಯಿತ್ತಾದರೂ ಕೂಡಾ ಅದಕ್ಕೆ ಪೂರಕವಾದ ಡಾಮರು ರಸ್ತೆ ನಿರ್ಮಾಣವಾಗದೆ ಇರುವುದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಚರಂಡಿಗಳೂ ಇಲ್ಲದಿರುವುದರಿಂದ ಕೃತಕ ನೆರೆ ಸೃಷ್ಟಿಯಾಗಿ ಮನೆ ಜಲಾವೃತಗೊಳ್ಳುತ್ತಿದೆ.  
– ರಘುರಾಮ್‌ ಸೋಮಯಾಜಿ
ಸುಳಿಗುಂಡಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next