Advertisement

ಬೆಳ್ತಂಗಡಿ : 35 ವರ್ಷಗಳಿಂದ ಸೇವೆ, 5 ಬಾರಿ ಶಾಸಕ

02:41 PM Mar 16, 2018 | |

ಬೆಳ್ತಂಗಡಿ: ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಕಳೆದ 35 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಸುಮಾರು 1 ಸಾವಿರ ಕೋ. ರೂ.ಗೂ ಮಿಕ್ಕಿ ಅನುದಾನಗಳನ್ನು ಮಂಜೂರು ಮಾಡಿಸಿದ್ದು, ಕ್ಷೇತ್ರದ ಚಿತ್ರಣವನ್ನು ಬದಲಿಸಿದ್ದೇನೆ ಎನ್ನುತ್ತಾರೆ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ.

Advertisement

ಮೊದಲ ಬಾರಿ ಶಾಸಕನಾದಾಗ ತಾಲೂಕಿನ ಬಹುತೇಕ ಕುಗ್ರಾಮಗಳಿದ್ದವು. ಈಗ ಬಹುತೇಕ ಕಡೆ ರಸ್ತೆ, ವಿದ್ಯುತ್‌, ಶಾಲೆ, ಕಾಲೇಜು, ಆಸ್ಪತ್ರೆ, ಮನೆ, ಸೇತುವೆ ಮೊದಲಾದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎನ್ನುತ್ತಾರೆ ಅವರು.

ರಾತ್ರಿ-ಹಗಲು ಜನಸೇವೆ ಮಾಡಿದ ಫಲವಾಗಿ ಸತತವಾಗಿ ಆಯ್ಕೆ ಮಾಡುತ್ತಿದ್ದಾರೆ. ಯಾವುದೇ ಆರೋಪಗಳು ತನ್ನ ಮೇಲಿಲ್ಲ. ತಾಲೂಕಿನಲ್ಲಿ 81 ಗ್ರಾಮಗಳಿದ್ದು, ಎಲ್ಲ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಕುಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೂ ವಿದ್ಯುತ್‌ ಮೊದಲಾದ ಸೌಲಭ್ಯ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.

ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಮಂಜೂರಾಗುವ ಸಾಧ್ಯತೆಯಿದ್ದು, ಇದು ಬೆಳ್ತಂಗಡಿ ತಾಲೂಕಿನಲ್ಲಿಯೇ ನಿರ್ಮಾಣವಾಗಬೇಕೆಂಬ ಮಹದಾಸೆ ತನ್ನದು. ಈಗಾಗಲೇ ಸರಕಾರಿ ಡಿಪ್ಲೊಮಾ ಕಾಲೇಜು ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ತಣ್ಣೀರುಪಂತ ಬಳಿ 10 ಎಕರೆ ಜಾಗ ಗುರುತಿಸಲಾಗಿದ್ದು, ಮಂಜೂರಾದ ಕೂಡಲೇ ಕಾಲೇಜು ನಿರ್ಮಾಣ ಕಾರ್ಯ ಮಾಡಲಾಗುತ್ತದೆ ಎಂದಿದ್ದಾರೆ.

ರಸ್ತೆ ಅಭಿವೃದ್ಧಿಗೆ ಒತ್ತು
ತಾಲೂಕಿನಲ್ಲಿ 4 ಸಾವಿರಕ್ಕೂ ಹೆಚ್ಚು ಗ್ರಾಮೀಣ ರಸ್ತೆಗಳಿವೆ, ಇವುಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಇನ್ನಷ್ಟು ಗ್ರಾಮೀಣ ರಸ್ತೆ ಗಳು ಅಭಿವೃದ್ಧಿ ಕಾಣಬೇಕಿದೆ. ಉಪ್ಪಿನಂಗಡಿ- ಬೆಳ್ತಂಗಡಿ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣವಾಗಿದೆ. ಪ.ಜಾತಿ, ಪಂಗಡ ಕಾಲನಿಗಳ 600 ರಸ್ತೆಗಳಿಗೆ ಕಾಂಕ್ರೀಟೀಕರಣ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ ಶಾಸಕ ಬಂಗೇರ.

Advertisement

ಅತಿಹೆಚ್ಚು ವಸತಿ ಶಾಲೆ
ತಾಲೂಕಿನಲ್ಲಿ 4 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ವಿದ್ಯಾ ಭ್ಯಾಸಕ್ಕೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ 29 ಹಾಸ್ಟೆಲ್‌ಗ‌ಳನ್ನು ನಿರ್ಮಾಣ ಮಾಡಲಾಗಿದೆ. ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಉತ್ತಮ ನಿರ್ವಹಣೆ ತೋರುತ್ತಿವೆ ಎನ್ನುತ್ತಾರೆ ಅವರು.

ಹಕ್ಕುಪತ್ರ ವಿತರಣೆ
ತಾಲೂಕಿನಲ್ಲಿ 42 ಸಾವಿರ ಅರ್ಜಿಗಳು ಬಂದಿದ್ದು, ಕೇವಲ 7 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಜಿಲ್ಲೆಯಲ್ಲಿಯೇ ಅತಿಹೆಚ್ಚು 94ಸಿ, 94ಸಿಸಿ ಹಕ್ಕುಪತ್ರ ವಿತರಣೆ ಮಾಡಿದ ಹೆಗ್ಗಳಿಕೆ ತಾಲೂಕಿನದ್ದು, ಬೇಡಿಕೆ ಇನ್ನೂ ಇದೆ ಎನ್ನುತ್ತಾರೆ ಶಾಸಕರು.

ಒಂದೇ ಸೂರಿನಡಿ ಎಲ್ಲ ಸೇವೆ
ಮಿನಿ ವಿಧಾನ ಸೌಧ ಉದ್ಘಾಟನೆ ಆಗಿದೆ. ಕಟ್ಟಡಕ್ಕೆ 8 ಕೋ. ರೂ. ಮಂಜೂರಾಗಿದ್ದು, ಉಳಿದ ಹಣ ಬಿಡುಗಡೆಯಾದ ಕೂಡಲೇ ಎಲ್ಲ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ ಎನ್ನುತ್ತಾರೆ ಅವರು.

ಕಿಂಡಿ ಅಣೆಕಟ್ಟು, ಚೆಕ್‌ ಡ್ಯಾಂ
ಜನತಾದಳ ಸರಕಾರವಿದ್ದ ಸಂದರ್ಭ 1994ರಲ್ಲಿಯೇ ದ.ಕ., ಉಡುಪಿಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಪ್ರಸ್ತಾಪ ಮಾಡಿದ್ದೆ. ಕಿಂಡಿ ಅಣೆಕಟ್ಟು, ಚೆಕ್‌ ಡ್ಯಾಂ ನಿರ್ಮಾಣದಿಂದ ನೀರು ಬಳಕೆಯಾಗುತ್ತದೆ; ನಡೆದು ಹೋಗಲು, ವಾಹನ ತೆರಳಲು ಅನುಕೂಲ ವಾಗುತ್ತದೆ; ಅಂತರ್ಜಲ ಹೆಚ್ಚುತ್ತದೆ ಎಂಬ ಉದ್ದೇಶದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ 400ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದೇ ವರ್ಷದಲ್ಲಿ 29 ಸೇತುವೆ ಮಂಜೂರು ಮಾಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ರಾಮಕೃಷ್ಣ ಹೆಗಡೆ ನೆನಪು
1983ರಲ್ಲಿ ಶಾಸಕನಾಗಿ ಆಯ್ಕೆಯಾದಾಗ 10 ಸಾವಿರ ಜನರನ್ನು ಮಂಗನ ಕಾಯಿಲೆ ಬಾಧಿಸಿತ್ತು. ಕೆಲವರು ನಾನು ಶಾಸಕನಾಗಿದ್ದಕ್ಕೆ ಮಂಗನ ಕಾಯಿಲೆ ಬಂದಿದೆ ಎಂದು ಅಪಪ್ರಚಾರ ಮಾಡಿದರು. ರೋಗಕ್ಕೆ ತುತ್ತಾದವರನ್ನು ಅವರ ಮನೆಯವರೂ ಮುಟ್ಟುವ ಪರಿಸ್ಥಿತಿ ಇರಲಿಲ್ಲ. ಈ ಸಂದರ್ಭ ನಾನು ನನ್ನ ಜೀಪಿನಲ್ಲಿ ಅವರನ್ನು ಕರೆದೊಯ್ದೆ. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಹಕರಿಸಿದ ರೀತಿ ಎಂದಿಗೂ ಮರೆಯುವಂತಿಲ್ಲ. ಅವರಿಂದಾಗಿ ಆಸ್ಪತ್ರೆ, ವೈದ್ಯರು, ಸಿಬಂದಿ, ಆ್ಯಂಬುಲೆನ್ಸ್‌ ಮೊದಲಾದ ಸೌಲಭ್ಯ ದೊರಕಿತು. 1 ವರ್ಷದಲ್ಲಿ ರೋಗ ಹತೋಟಿಗೆ ಬಂತು. ರೋಗದಿಂದ ಸಾವನ್ನಪ್ಪಿದವರ ಕುಟುಂಬಕ್ಕೂ ಪರಿಹಾರ ನೀಡಲಾಯಿತು ಎಂದು ನೆನಪು ಮೆಲುಕು ಹಾಕುತ್ತಾರೆ ಶಾಸಕ ಬಂಗೇರ.

ಪ್ರಮುಖ ರಸ್ತೆ ಅಭಿವೃದ್ಧಿ  ಕನಸು
ದಿಡುಪೆಯಿಂದ-ಎಳನೀರು -ಸಂಸೆ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿವೆ. ಈ ರಸ್ತೆ ಇನ್ನಷ್ಟು ಅಭಿವೃದ್ಧಿಪಡಿಸುವ ಆಸೆ ಇದೆ. ಇದಕ್ಕಾಗಿ ಪ್ರಯತ್ನಗಳೂ ನಿರಂತರವಾಗಿ ನಡೆಯುತ್ತಿವೆ. 20 ಕೋಟಿ ರೂ.ಗಳ ಯೋಜನೆ ಈಗಾಗಲೇ ರೂಪಿಸಲಾಗಿದೆ. ಆದರೆ ಸ್ಪಂದನೆ ದೊರೆತಿಲ್ಲ. ಶಿಶಿಲ- ಭೈರಾಪುರ ರಸ್ತೆ ನಿರ್ಮಾಣ ಮಾಡಬೇಕೆಂಬ ಹಂಬಲವೂ ಇದೆ. ಇದು ನಿರ್ಮಾಣವಾದಲ್ಲಿ ಕೇವಲ 9 ಕಿ.ಮೀ.ಗಳಲ್ಲಿ ಘಾಟಿ ದಾಟಲು ಸಾಧ್ಯವಿದೆ. ಸತತ ಪಯತ್ನ ನಡೆಯುತ್ತಿದೆ. ರಸ್ತೆ ಈಗಾಗಲೇ ಇದ್ದು, ಸರ್ವೇ ಕಾರ್ಯ ನಡೆದಿದೆ. ಇದನ್ನು ಅಭಿವೃದ್ಧಿಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಮ್ಮ ಯೋಜನೆ ಬಿಚ್ಚಿಟ್ಟಿದ್ದಾರೆ ಶಾಸಕ ಬಂಗೇರ.

ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ
ಶಾಸಕರು ಹೇಳುವ ಪ್ರಕಾರ, ತಾಲೂಕಿನ ಫಸ್ಟ್‌ಗ್ರೇಡ್‌ ಕಾಲೇಜು ಬಳಿ ಕೈಗಾರಿಕೆಗಳ ಸ್ಥಾಪನೆಗಾಗಿ 9 ಎಕರೆಗೂ ಹೆಚ್ಚು ಜಾಗ ಗುರುತಿಸಲಾಗಿದ್ದು, ಇದನ್ನು ಕೈಗಾರಿಕಾಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಈ ಜಾಗದಲ್ಲಿ ಕೈಗಾರಿಕೆಗೆ ಆದ್ಯತೆ ನೀಡಲಾಗುತ್ತದೆ. ಇದನ್ನು ತನ್ನ ಅವಧಿಗೆ ಮುನ್ನ ಪೂರ್ಣಗೊಳಿಸಲು ಪ್ರಯತ್ನ ನಡೆಯುತ್ತಿದೆ. ತಾಲೂಕಿನಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳು ಇಲ್ಲದ ಕಾರಣ, ತಾಲೂಕಿನವರಿಗೆ ಪ್ರೋತ್ಸಾಹ -ಪ್ರೇರಣೆ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಸಣ್ಣ ಕೈಗಾರಿಕೆಯಾಗಲಿ, ದೊಡ್ಡ ಕೈಗಾರಿಕೆಯಾಗಲಿ; ಯುವಕರು ತೊಡಗಿಸಿಕೊಂಡಲ್ಲಿ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ನೀರು, ವಿದ್ಯುತ್‌ ಇತ್ಯಾದಿ ಮೂಲ ಸೌಲಭ್ಯಗಳ ಜತೆ ಸಾಲವನ್ನೂ ಒದಗಿಸಲಾಗುತ್ತದೆ. ಇದರಿಂದ ತಾಲೂಕಿನ ಅಭಿವೃದ್ಧಿಯಾಗುತ್ತದೆ.

„ಹರ್ಷಿತ್‌ ಪಿಂಡಿವನ 

Advertisement

Udayavani is now on Telegram. Click here to join our channel and stay updated with the latest news.

Next