Advertisement

ಶಾಸಕ ಹರೀಶ್ ಪೂಂಜ ಬಂಧನ ಹೈಡ್ರಾಮ: ಪೊಲೀಸರ ಮೇಲೆ ರಾಜಕೀಯ ಒತ್ತಡ ಆರೋಪ

04:58 PM May 22, 2024 | Team Udayavani |

ಬೆಳ್ತಂಗಡಿ: ಶಾಸಕರೊಬ್ಬರ ಬಂಧನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕು ಹೈಡ್ರಾಮ ಕ್ಷೇತ್ರವಾಗಿ ಮಾರ್ಪಟ್ಟಿದೆ.

Advertisement

ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಬಂಧನಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಪೊಲೀಸರ ನಡುವೆ ಉಂಟಾದ ಮಾತಿನ ಚಕಮಕಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎರಡು ಪ್ರಕರಣಗಳ ವಿಚಾರವಾಗಿ ಮುಂಜಾನೆಯಿಂದ ಸಂಜೆವರೆಗೆ ಬಂಧನ ಪ್ರಹಸನ ಏರ್ಪಟ್ಟಿದೆ.

ಮೇ 21 ರಂದು ಸಂಜೆ ಪ್ರಕರಣ ದಾಖಲಿಸಿದ ಪೊಲೀಸರು, ಮೇ 22 ರಂದು ಮುಂಜಾನೆ ಬೆಳಗ್ಗೆ ನೋಟಿಸ್ ಜಾರಿ ಮಾಡದೆ ಶಾಸಕರ ಮನೆಗೆ ಪೊಲೀಸರು ಆಗಮಿಸಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದು ಶಾಸಕರ ಪರ ವಕೀಲರು ಹಾಗೂ ಜಿಲ್ಲೆಯ ಶಾಸಕರು, ಮುಖಂಡರು, ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು.

ಪೊಲೀಸರು ಹಾಗೂ ನ್ಯಾಯವಾದಿಗಳ ನಡುವೆ ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಲಾಗಿದೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಸಾಧ್ಯತೆ ಕುರಿತು ಕಾರ್ಯಕರ್ತರು ಆಕ್ರೋಶ ಹೊರ ಹಾಕಿ ಶಾಸಕರ ಮನೆಮುಂದೆ ಘೋಷಣೆ ಕೂಗಿದರು.

ಶಾಸಕರನ್ನು ಬಂಧಿಸಿಯೇ ಸಿದ್ದ ಎಂಬಂತೆ ನಾಲ್ಕು ಕೆ.ಎಸ್.ಆರ್.ಪಿ. ತಯಕಡಿಯನ್ನು ಗರ್ಡಾಡಿ ಪ್ರದೇಶದಲ್ಲಿ ಇರಿಸಲಾಗಿದೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಎಸ್.ಐ., ವೃತ್ತ ನಿರೀಕ್ಷಕರನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ದ.ಕ.ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಆಗಮಿಸುತ್ತಿದ್ದಾರೆ.

Advertisement

ಬಂಧನಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದ್ದು, ಬಂಧನ ವಾರಂಟ್ ಇಲ್ಲದೆ ಬಂದ ಪೊಲೀಸರು ಇದೀಗ ಬಂಧನಕ್ಕೆ ಪೂರಕ ದಾಖಲೆ ಸಿದ್ಧಪಡಿಸಲು ಮುಂದಾಗಿದ್ದಾರೆ.

ಇತ್ತ ಶಾಸಕರ ಮನೆಯಲ್ಲಿ ಕ್ಯಾ. ಬ್ರಿಜೇಶ್ ಚೌಟ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್,ರಾಜೇಶ್ ನಾಯ್ಕ್,  ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಪ್ರತಾಪಸಿಂಹ ನಾಯಕ್, ಗಣೇಶ್ ಕಾರ್ಣಿಕ್,  ಶ್ರೀನಿವಾಸ ಪುಟಾಣಿ, ಪ್ರಸಾದ್ ಕುಮಾರ್, ಕುಶಾಲಪ್ಪ ಗೌಡ ಸ್ಥಳದಲ್ಲಿ ಹಾಜರಿದ್ದಾರೆ.

ವಕೀಲರಾದ ಶಂಭು ಶರ್ಮ ಮಂಗಳೂರು, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಅನಿಲ್ ಕುಮಾರ್ ವಾದವಿವಾದದಲ್ಲಿ ತೊಡಗಿದ್ದಾರೆ.

ಒಟ್ಟಾರೆಯಾಗಿ ರಾಜ್ಯ ರಾಜಕರಣದಲ್ಲಿ ಓರ್ವ ಶಾಸಕನನ್ನು ಬಂಧಿಸಲು ಮುಂದಾಗುವ ಮೂಲಕ ಹೈಡ್ರಾಮ ಕ್ಷೇತ್ರವಾಗಿ ಬೆಳ್ತಂಗಡಿ ಗೋಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next