ಬಂಟ್ವಾಳ : ಪ್ರಧಾನಿ ಮೋದಿ ಅವರು ನೂರಕ್ಕೂ ಅಧಿಕ ಜನಪರ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ಅದರಲ್ಲಿ 60ಕ್ಕಿಂತಲೂ ಅಧಿಕ ಯೋಜನೆಗಳು ಮಹಿಳೆಯರಿಗೆ ಸಂಬಂಧಪಟ್ಟಂತಹ ಯೋಜನೆಗಳು. ಉಜ್ವಲ ಯೋಜನೆ ಭಾರೀ ಮಹತ್ವವನ್ನು ಪಡೆದಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲು ಹೇಳಿದರು.
ಅವರು ಫೆ. 27ರಂದು ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಉಜ್ವಲ ಫಲಾನುಭವಿ ಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಿಸಿ, ಮಹಿಳೆಯರಿಗೆ ಸ್ಥೈರ್ಯ ನೀಡುವಂತಹ ಕೆಲಸವನ್ನು ಕಳೆದ 5 ವರ್ಷಗಳ ಅವಧಿಯಲ್ಲಿ ಮೋದಿ ಮಾಡಿದ್ದಾರೆ. ಹೊಗೆಮುಕ್ತ ದೇಶದ ನಿರ್ಮಾಣಕ್ಕಾಗಿ ಉಜ್ವಲ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂದರು.
ಮೂರು ಹಂತಗಳಲ್ಲಿ ಇಲ್ಲಿಯವರೆಗೆ ಒಟ್ಟು 70 ಫಲಾನುಭವಿಗಳಿಗೆ ಉಜ್ವಲ ಅನಿಲ ಕಿಟ್ ವಿತರಿಸಲಾಯಿತು. ಕಳ್ಳಿಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ಕಮಲ ದೀಪ ನೆರವೇರಿಸಿದರು.
ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ, ಕಳ್ಳಿಗೆ ಬಿಜೆಪಿ ಪ್ರಭಾರಿ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಮುಖರಾದ ಮೋನಪ್ಪ ದೇವಸ್ಯ, ಪಂ. ಸದಸ್ಯೆ ಯಶೋದಾ ಜಾರಂದಗುಡ್ಡೆ, ರೇವತಿ ಮಾಡಂಗೆ, ಸರಸ್ವತಿ ನೆತ್ರಕೆರೆ, ಸ್ಥಳೀಯ ನೇತಾರ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಹರಿಣಾಕ್ಷಿ ಜಾರಂದಗುಡ್ಡೆ, ಶಶಿಪ್ರಭಾ ಗುತ್ತೆತ್ತಿಲ್, ಮನೋಜ್ ವಳವೂರು, ಗಣೇಶ್ ಪಚ್ಚಿನಡ್ಕ, ವಿಕ್ಟರ್ ಡಿ’ಸೋಜಾ, ರಾಹುಲ್ ಪಚ್ಚಿನಡ್ಕ ಉಪಸ್ಥಿತರಿದ್ದರು. ದೇವಿಪ್ರಸಾದ್ ಎಂ. ಸ್ವಾಗತಿಸಿ, ಮನೋಹರ ಕಂಜತ್ತೂರು ವಂದಿಸಿದರು.
ಸಮರ್ಥ ನಾಯಕತ್ವ
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಕಿಟ್ ವಿತರಿಸಿ, ದೇಶಕ್ಕೆ ಸಮರ್ಥ ನಾಯಕತ್ವ ದೊರೆತಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ ನಿರ್ಮಾಣವಾಗಿದೆ. ಜನರ ತೆರಿಗೆ ಹಣ ಸದ್ವಿನಿಯೋಗವಾಗುತ್ತಿದೆ. ಹೀಗಾಗಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಕಳೆದ ಐದು ವರ್ಷಗಳ ಮೋದಿ ಅವರ ಆಡಳಿತ ಭಾರತವನ್ನು ಅಭಿವೃದ್ಧಿಯಲ್ಲಿ ನಂ. 5ನೇ ಸ್ಥಾನಕ್ಕೆ ತಂದಿದೆ. ಮುಂದಿನ ಐದು ವರ್ಷಗಳಿಗೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಪ್ರಗತಿಯಲ್ಲಿ ಭಾರತ ಜಗತ್ತಿನ ನಂ. 1 ದೇಶವಾಗಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.