Advertisement

ಬೆಳ್ಮಣ್‌ಗೆ ಬೇಕು ಪ್ರಥಮ ದರ್ಜೆ ಕಾಲೇಜು

10:16 PM Jun 10, 2019 | Team Udayavani |

ಬೆಳ್ಮಣ್‌: ಅಭಿವೃದ್ಧಿ ಹೊಂದುತ್ತಿರುವ ಬೆಳ್ಮಣ್‌ನಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗ ಬೇಕೆಂಬ ಬೇಡಿಕೆ ಬಹುದಿನಗಳಿಂದ ಇದ್ದು, ಬೇಡಿಕೆ ಈಡೇರಿಕೆಗಾಗಿ ಇಲ್ಲಿನ ಜನ ಕಾಯುತ್ತಿದ್ದಾರೆ.

Advertisement

ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನ
ಬೆಳ್ಮಣ್‌, ಬೋಳ, ಮುಂಡ್ಕೂರು, ಕಾಂತಾವರ, ನಂದಳಿಕೆ, ಕಲ್ಯಾ, ಇನ್ನಾ ಗ್ರಾಮ ಪಂಚಾಯತ್‌ ಸಹಿತ ಅಕ್ಕ ಪಕ್ಕದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಪದವಿ ಪಡೆಯಲು ದೂರದ ಶಿರ್ವ, ನಿಟ್ಟೆ, ಐಕಳದ ಪ್ರಥಮ ದರ್ಜೆ ಕಾಲೇಜುಗಳಿಗೆ ಹೋಗಬೇಕಿದೆ. ಆರ್ಥಿಕ ಸಂಕಷ್ಟ ದಲ್ಲಿರುವ ವಿದ್ಯಾರ್ಥಿಗಳಿಗೆ ವಾಹನ ಗಳಲ್ಲಿ ಹೋಗುವುದರೊಂದಿಗೆ ಖಾಸಗಿ ಕಾಲೇಜುಗಳಿಗೆ ಫೀಸು ಕಟ್ಟುವುದಕ್ಕೂ ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಅಗತ್ಯ ಹೆಚ್ಚಾಗಿದೆ.

ಬೆಳ್ಮಣ್‌ ಪ.ಪೂ. ಕಾಲೇಜು ವೇದಿಕೆಯಾಗಲಿ
ಈಗಾಗಲೇ ಉತ್ತಮ ಫಲಿತಾಂಶ ದಾಖಲಿಸುತ್ತಿರುವ ಬೆಳ್ಮಣ್‌ ಸರಕಾರಿ ಪ.ಪೂ.ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗವಿದೆ. ಇದೇ ಕಾಲೇಜಿನಲ್ಲಿ ಕಲೆ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪದವಿ ತರಗತಿ ಆರಂಭಿಸಬಹುದು ಎಂಬ ಸಲಹೆಗಳು ಕೇಳಿಬರುತ್ತಿವೆ. ಆದರೆ ಇಲ್ಲಿ ಕಟ್ಟಡ, ಆಟದ ಮೈದಾನ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ಕೊರತೆ ಇದೆ. ಜತೆಗೆ ಪ.ಪೂ. ಕಾಲೇಜಿನಲ್ಲಿ ವಾಣಿಜ್ಯ ಉಪನ್ಯಾಸಕರು, ಕಂಪ್ಯೂಟರ್‌ ಸಿಬಂದಿ ಹಾಗೂ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಆದ್ದರಿಂದ ಇಲ್ಲೇ ಕಾಲೇಜು ಆರಂಭದ ಬೇಡಿಕೆಗೆ ಸ್ಪಂದನೆ ಸಿಕ್ಕೀತೇ..? ಎನ್ನುವ ಯಕ್ಷ ಪ್ರಶ್ನೆ ಈ ಭಾಗದ ಶಿಕ್ಷಣ ಚಿಂತಕರದ್ದು.

ಮುಂಡ್ಕೂರು, ಬೆಳ್ಮಣ್‌ ಪ.ಪೂ. ಕಾಲೇಜುಗಳಿಂದ 200 ವಿದ್ಯಾರ್ಥಿಗಳು
ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜಿನಿಂದ 100 ಹಾಗೂ ಬೆಳ್ಮಣ್‌ ಪ.ಪೂ. ಕಾಲೇಜಿನಿಂದ 100 ವಿದ್ಯಾರ್ಥಿಗಳು ವರ್ಷವೂ ಹೊರಬರುತ್ತಿದ್ದು ಈ ಸಂಖ್ಯೆ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಸಾಕು ಎನ್ನುವ ಲೆಕ್ಕಾಚಾರವಿದೆ. ಉಳಿದಂತೆ ಕಾಂತಾವರ, ಬೋಳ, ಕಲ್ಯಾ, ಇನ್ನಾ, ನಂದಳಿಕೆ ಭಾಗದಿಂದ ದೂರದ ಪ್ರದೇಶಗಳಿಗೆ ಹೋಗುವ ವಿದ್ಯಾರ್ಥಿಗಳೂ ಬಂದಲ್ಲಿ 300 ವಿದ್ಯಾರ್ಥಿಗಳು ಆಗಬಹುದು ಎಂಬ ನಿರೀಕ್ಷೆ ಇದೆ.

ದಾನಿಗಳ ಕೊರತೆ
ಈಗಾಗಲೇ ಬೆಳ್ಮಣ್‌ನ ಸರಕಾರಿ ಪ.ಪೂ.ಕಾಲೇಜಿಗೆ ಎಸ್‌ಡಿಎಂಸಿಯ ನೆರವು ಬಿಟ್ಟರೆ ದಾನಿಗಳ ನೆರವು ದೊರಕುತ್ತಿಲ್ಲ ಎನ್ನುವುದು ಸಂಸ್ಥೆಯ ವಿದ್ಯಾರ್ಥಿಗಳ ಹೆತ್ತವರ ಅಳಲು. ಹೀಗಿರುವಾಗ ಸರಕಾರ ಅಥವಾ ಇಲಾಖೆಯೇ ಮುಂದೆ ಬಂದು ಇಲ್ಲಿ ಪ್ರಥಮದರ್ಜೆ ಕಾಲೇಜು ಪ್ರಾರಂಭಿಸಲು ಹೊಣೆ ಹೊರಬೇಕಾಗುತ್ತದೆ.

Advertisement

ಬೆಳ್ಮಣ್‌ ಪ್ರಥಮ ಆದ್ಯತೆ
ಬೆಳ್ಮಣ್‌ ಭಾಗದ ಶಿಕ್ಷಣ ಪ್ರೇಮಿಗಳ ಆಶಯವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಸರಕಾರ ನನ್ನ ವಿಧಾನ ಸಭಾ ಕ್ಷೇತ್ರಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದಲ್ಲಿ ಪ್ರಥಮ ಆದ್ಯತೆ ಬೆಳ್ಮಣ್‌ ಹಾಗೂ ಪಿಯು ಕಾಲೇಜು ಮಂಜೂರು ಮಾಡಿದರೆ ಮೊದಲ ಆದ್ಯತೆ ಹೊಸ್ಮಾರು. ಖಂಡಿತಾ ಪ್ರಯತ್ನ ಮುಂದುವರಿಯಲಿದೆ.
-ವಿ. ಸುನಿಲ್‌ ಕುಮಾರ್‌ , ಶಾಸಕರು ಕಾರ್ಕಳ

ಹೆತ್ತವರು ಇಲಾಖೆಯ ಗಮನಕ್ಕೆ ತನ್ನಿ
ಬೆಳ್ಮಣ್‌ನಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿದರೆ ಒಳ್ಳೆಯದು. ಇದನ್ನು ವಿದ್ಯಾರ್ಥಿಗಳ ಹೆತ್ತವರೇ ಸರಕಾರ ಮತ್ತು ಇಲಾಖೆಯ ಗಮನಕ್ಕೆ ತರಬೇಕು.
-ಕಿಶೋರಿ, ಪ್ರಭಾರ ಪ್ರಾಂಶುಪಾಲೆ, ಸರಕಾರಿ ಪ.ಪೂ.ಕಾಲೇಜು, ಬೆಳ್ಮಣ್‌

ಶಾಸಕರ ಭರವಸೆ
ಈ ಬಗ್ಗೆ ಕಾರ್ಕಳ ಶಾಸಕರ ಮೂಲಕ ಪ್ರಯತ್ನಿಸಲಾಗುತ್ತಿದೆ. ಶಾಸಕರು ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಗತ್ಯವಾಗಿ ಬೇಕು.
 -ರೇಷ್ಮಾ ಉದಯ ಶೆಟ್ಟಿ,
ಜಿಲ್ಲಾ ಪಂಚಾಯತ್‌ ಸದಸ್ಯೆ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next