Advertisement

ಕುಡಿವ ನೀರು ಯೋಜನೆಯಡಿ ತಪ್ಪೆಸಗಿದರೆ ಸೂಕ್ತ ಕ್ರಮ

05:07 PM Mar 02, 2020 | Naveen |

ಬಳ್ಳಾರಿ: ತಾಲೂಕಿನ ನೆಲ್ಲುಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ವಿಷಯದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಪಂ ಸಿಇಒಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಲ್ಲುಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಖರ್ಚು ವೆಚ್ಚ ಕುರಿತ ವಿವರವಾದ ವರದಿ ಸಲ್ಲಿಸಿ, ಪರಿಶೀಲಿಸಿ ಶೀಘ್ರ ಈ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು.

ನೆಲ್ಲುಡಿ ಪ್ರೊಜೆಕ್ಟ್ ಕುರಿತು ಆಕ್ಷೇಪಣೆ ವ್ಯಕ್ತವಾಗಿದೆ ಎಂಬುದನ್ನು ಜಿಪಂ ಸಿಇಒ ನಿತೀಶ್‌ ಅವರು ಸಭೆಯ ಗಮನಕ್ಕೆ ತಂದರು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬರುತ್ತಲೇ ತಕ್ಷಣ ಕಾರ್ಯಪ್ರವೃತ್ತರಾಗಿ ನೀರು ಒದಗಿಸಲು ಮುಂದಾಗಬೇಕು. ಈ ವಿಷಯದಲ್ಲಿ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಬಳ್ಳಾರಿ-9, ಹಡಗಲಿ-26, ಹರಪನಹಳ್ಳಿ-59, ಹಗರಿಬೊಮ್ಮನಹಳ್ಳಿ-20, ಹೊಸಪೇಟೆ-32,ಕೂಡ್ಲಿಗಿ-83, ಸಂಡೂರು -47, ಸಿರಗುಪ್ಪ-32 ಸೇರಿದಂತೆ ಒಟ್ಟು 308 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ನಿತೀಶ್‌ ಸಚಿವರಿಗೆ ವಿವರಿಸಿದರು.

ಜಿಲ್ಲೆಯಲ್ಲಿ 1129 ಶುದ್ಧ ಕುಡಿಯುವ ನೀರಿನ ಘಟಕಗಳಿ (ಆರ್‌ ಒ ಪ್ಲಾಂಟ್‌)ದ್ದು ಅದರಲ್ಲಿ ಗ್ರಾಪಂ, ಕೆಕೆಆರ್ಡಿಬಿಗಳು 432 ಆರ್‌ಒ ಪ್ಲಾಂಟ್‌ಗಳು ನಿರ್ವಹಣೆ ಮಾಡುತ್ತಿವೆ. ಉಳಿದ 697 ಪ್ಲಾಂಟ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಎರಡು ಏಜೆನ್ಸಿಗಳನ್ನುಫಿಕ್ಸ್‌
ಮಾಡಲಾಗಿದ್ದು, ಈಗಾಗಲೇ ಅವುಗಳಿಗೆ 587 ಹಸ್ತಾಂತರಿಸಲಾಗಿದೆ. ಉಳಿದವುಗಳನ್ನು ಈ ವಾರದಲ್ಲಿ ಹಸ್ತಾಂತರಿಸಲಾಗುವುದು ಎಂದರು.

Advertisement

ಈ ಏಜೆನ್ಸಿಗಳು ನಿರ್ವಹಣೆಗೆ ಪ್ರತಿ 20ಲೀಟರ್‌ಗೆ 5 ರೂ.ಪಡೆದುಕೊಳ್ಳುತ್ತಿವೆ. ಗ್ರಾಪಂ ಮತ್ತು ಕೆಕೆಆರ್ಡಿಬಿ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಗಳು 2 ರೂ. ಪಡೆಯುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ 73 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿರುವುದನ್ನು ಸಚಿವರ ಗಮನಕ್ಕೆ ತಂದರು.

ನರೇಗಾದಲ್ಲಿ ಮಾನವ ದಿನಗಳ ಸೃಷ್ಟಿ ಮತ್ತು ಗುಣಮಟ್ಟದ ಕೆಲಸ ಹಾಗೂ ಬಳ್ಳಾರಿಗೆ ಪ್ರಶಸ್ತಿಗೆ ಸಂದಿರುವುದು, ಎಕೋಪಾರ್ಕ್‌ಗಳ ನಿರ್ಮಾಣದ ವಿವರವನ್ನು ಸಹ ಜಿಪಂ ಸಿಇಒ ನಿತೀಶ್‌ ಅವರು ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕ ಸೋಮಲಿಂಗಪ್ಪ, ಸಚಿವರ ವಿಶೇಷ ಕರ್ತವ್ಯ ಅಧಿ ಕಾರಿಗಳು, ಜಿಪಂ ಉಪಕಾರ್ಯದರ್ಶಿಗಳು, ತಾಪಂ ಇಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next