Advertisement

ಫಲಾನುಭವಿಗಳಿಗೆ ಯೋಜನೆ ತಲುಪಲಿ

06:30 PM Feb 14, 2020 | Naveen |

ಬಳ್ಳಾರಿ: ಸರ್ಕಾರದ ವಿವಿಧ ಇಲಾಖೆಯ ಸೌಲಭ್ಯಗಳನ್ನು ಕಾರ್ಯ ಸುಲಭಗೊಳಿಸುವಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು (ಸಿಎಸ್‌ಸಿ) ಮಾಧ್ಯಮವಾಗಿ ಬಳಸಲಾಗುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗ್ರಾಮೀಣ ಮಟ್ಟದ ಸ್ವಉದ್ಯಮ ವ್ಯವಸ್ಥಾಪಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಅಭಿಪ್ರಾಯ ಪಟ್ಟರು.

Advertisement

ನಗರದ ಬಿಡಿಎಎ ಫುಟ್ಬಾಲ್‌ ಮೈದಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿಎಸ್‌ಸಿಯ ವಿಎಲ್‌ಇಗಳಿಗೆ ಸೇವಾಸಿಂಧು ಯೋಜನೆಯಡಿ ಒಳಪಡುವ ಆನ್‌ಲೈನ್‌ ಸೇವೆಗಳ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸೇವಾಸಿಂಧು ಯೋಜನೆಯಡಿಯಲ್ಲಿ ಸೇವೆ ನೀಡುವ ಜಿಲ್ಲೆಯಲ್ಲಿ ಬಳ್ಳಾರಿ ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರದ ಎಲ್ಲ ಸೇವೆಗಳನ್ನು 45 ಇಲಾಖೆಗಳ 415 ವಿವಿಧ ಯೋಜನೆಗಳನ್ನು ಸೇವಾಸಿಂಧುವಿನಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆನ್‌ ಲೈನ್‌ ಅರ್ಜಿ ಸ್ವೀಕಾರ ಸಂದರ್ಭದಲ್ಲಿ ದಾಖಲೆ ನೀಡುವ ವಿಚಾರದಲ್ಲಿ ಕೆಲ ಗೊಂದಲ ಉಂಟಾಗಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಜನರಲ್ಲಿ ತಪ್ಪು ಭಾವನೆ ಉಂಟಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಆದ್ದರಿಂದ ಸೇವಾ ಕೇಂದ್ರದ ವ್ಯವಸ್ಥಾಪಕರು ಕಾರ್ಯಾಗಾರದಲ್ಲಿ ಸೂಕ್ತ ತರಬೇತಿ ಹಾಗೂ ಮಾಹಿತಿ ಪಡೆದುಕೊಂಡು ಸರಿಯಾದ ಸೇವೆಗಳನ್ನು ನೀಡಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ ಸರ್ಕಾರದ ಆಶಯ ಈಡೇರಿಸಬೇಕು ಎಂದರು.

ಕಾರ್ಮಿಕ ಇಲಾಖೆ ಅಧಿಕಾರಿ ಚಂದ್ರಶೇಖರ ಐಲಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳು ಎಲ್ಲ ವರ್ಗದವರಿಗೂ ತಲುಪಿಸುವ ಉದ್ದೇಶದಿಂದ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೇವಾ ಸಿಂಧುವಿನ ಯೋಜನೆಯಲ್ಲಿ ಕಾರ್ಮಿಕ ಸಚಿವರಾದ ಸುರೇಶ್‌ ಕುಮಾರ್‌ ಅವರು ಸಹ ಇಲಾಖೆಯ ಸೌಲಭ್ಯ ಸಾರ್ವಜನಿಕರಿಗೆ ತಲುಪಿಸುವಲ್ಲಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇಲಾಖೆ ಸೌಲಭ್ಯಗಳ ಅನುಷ್ಠಾನಕ್ಕೆ 31 ಕಾರ್ಮಿಕ ಬಂಧು ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ನೇಮಿಸಲಾಗಿದ್ದು ವಿಎಲ್‌ಇ ಮತ್ತು ಕಾರ್ಮಿಕ ಬಂಧು ಸಿಬ್ಬಂದಿ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಜನರಿಗೆ ಸೂಕ್ತ ಸೇವೆಗಳನ್ನು ನೀಡಿ ಎರಡನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಬರುವಲ್ಲಿ ಯಶಸ್ವಿಯಾಗಬಹುದು ಎಂದರು.

ಕಾರ್ಯಾಗಾರದಲ್ಲಿ ಅಂಗವಾಗಿ ಆಯ್ದ ಅತ್ಯುತ್ತಮ ವಿಎಲ್‌ಇಗಳಿಗೆ ಪದಕ ವಿತರಣೆ ಹಾಗೂ ಪ್ರಧಾನ ಮಂತ್ರಿ ಶ್ರಮ ಯೋಜನೆ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಂಗವಿಕಲ ಕಲ್ಯಾಣಾ ಧಿಕಾರಿ ಮಹಾಂತೇಶ್‌,
ಹೊಸಪೇಟೆ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರಾದ ಲಿಯಾಖತ್‌ ಅಲಿ, ಸಿಟಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣಪ್ಪ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳ ಸಿಎಸ್‌ಸಿಯ ವಿಎಲ್‌ಇಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next