Advertisement

2021: ಬಳ್ಳಾರಿ ಜಿಲ್ಲೆಯ ವಿಭಜನೆಯ ನೋವು-ಪದ್ಮಶ್ರೀಯ ನಲಿವು

11:17 AM Jan 01, 2022 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಅ ಧಿಕೃತ ವಿಭಜನೆಯ ನೋವು-ನಲಿವಿನೊಂದಿಗೆ ಮತ್ತೂಂದು ವರ್ಷ “2021′ ಕಾಲಗರ್ಭ ಸೇರಲಿದೆ. ಹೊಸವರ್ಷ “2022′ ಉದಯಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷದಲ್ಲಿ ಜಿಲ್ಲೆಯ ಸಿಹಿ-ಕಹಿ ಪಟ್ಟಿ ಮಾಡಿದರೆ ಕಳೆದುಕೊಂಡಿದ್ದೇ ಹೆಚ್ಚು. ಕೋವಿಡ್‌ ಎರಡನೇ ಅಲೆ ಹೆಚ್ಚು ಸದ್ದು ಮಾಡಿದ್ದು, ಸಾವು, ನೋವುಗಳ ಸಂಖ್ಯೆ ಹೆಚ್ಚಾಗಿತ್ತು. ಮೊದಲ ಬಾರಿಗೆ ಅವಿಭಜಿತ ಜಿಲ್ಲೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ ಎಂದು ಖುಷಿ ಪಡುವಷ್ಟರಲ್ಲಿ ವರುಣನ “ಕೃಪೆ ಮತ್ತು ಅವಕೃಪೆ’ಯಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದ್ದು, ರೈತರು ಸಂಕಷ್ಟಕ್ಕೀಡಾದರು. ಇದರಿಂದಾಗಿ ನಾಲ್ಕೈದು ರೈತರು ಆತ್ಮಹತ್ಯೆ ಮಾಡಿಕೊಂಡು ಬದುಕೇ ಮುಗಿಸಿದರು. ಇನ್ನು ಮಾರ್ಚ್‌ ತಿಂಗಳಲ್ಲಿ ಬಳ್ಳಾರಿಯಿಂದ ವಿಭಜನೆಯಾದ ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಘೋಷಿಸಿರುವುದು ಅಲ್ಲಿನ ಜನರಿಗೆ ಖುಷಿ ನೀಡಿತು. ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಒಂದಷ್ಟು ಅಸಮಾಧಾನ ಮೂಡಿಸಿತು. ಆದರೆ ವಿಜಯನಗರ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವುದರ ಜತೆಗೆ ಜಿಲ್ಲೆಗೆ ಅ ಧಿಕೃತ ಚಾಲನೆ ಹಾಗೂ ವರ್ಷವಿಡೀ ಹರಿದ ತುಂಗಭದ್ರೆಗೆ “2021’ನೇ ವರ್ಷ ಸಾಕ್ಷಿಯಾಗಿದೆ.

Advertisement

ವಿಜಯನಗರಕ್ಕೆ ಅಧಿಕೃತ ಮುದ್ರೆ
ರಾಜ್ಯದಲ್ಲೇ ಎರಡನೇ ಅತಿದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿ ಜಿಲ್ಲೆ ವಿಭಜಿಸಿ 2019-2020 ರಲ್ಲಿ ಹೊರಡಿಸಿದ್ದ ಆದೇಶಕ್ಕೆ ಪೂರಕವಾಗಿ 2021 ಮಾರ್ಚ್‌ ತಿಂಗಳಲ್ಲಿ ವಿಜಯನಗರ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿದ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿತು. ಸರ್ಕಾರದ ಈ ನಿರ್ಣಯವನ್ನು ವಿರೋಧಿ ಸಿ ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಸುಮಾರು ಒಂದು ತಿಂಗಳು ಅನಿರ್ದಿಷ್ಟಾವ ಧಿ ಧರಣಿ ನಡೆಸಿದವಾದರೂ, ಯಾವುದೇ ಪ್ರಯೋಜನವಾಗಿಲ್ಲ. ಮೇಲಾಗಿ ನೂತನ ವಿಜಯನಗರ ಜಿಲ್ಲೆಗೆ ವಿಶೇಷಾಧಿ ಕಾರಿಯನ್ನಾಗಿ ಅನಿರುದ್ಧ ಶ್ರವಣ್‌ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತು. ಬಳಿಕ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ತೆರೆಯಲಾಯಿತು. ಅ. 2,3ರಂದು ವಿಜಯನಗರ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ ನೀಡಿದರು. ಉತ್ಸವಕ್ಕೂ ಎರಡು ದಿನ ಮುನ್ನ ವಿಶೇಷಾ ಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್‌ ಅವರನ್ನೇ ಮೊದಲ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ ಸರ್ಕಾರ, ಅದೇ ದಿನ ನೂತನ ಎಸ್‌ಪಿ, ಜಿಪಂ ಸಿಇಒ ಅವರನ್ನು ನಿಯೋಜಿಸಿದ್ದು ಇದೀಗ ಇತಿಹಾಸ.

ವರುಣನ ಕೃಪೆ-ಅವಕೃಪೆ
ಕಳೆದ ಕೆಲ ವರ್ಷಗಳಿಂದ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಅದೇ ರೀತಿ ಪ್ರಸಕ್ತ 2021ರಲ್ಲೂ ಜೂನ್‌ ತಿಂಗಳಲ್ಲೇ ಮುಂಗಾರು ಆರಂಭವಾಗಿ ಉತ್ತಮ ಮಳೆಯಾಗಿತ್ತು. ತುಂಗಭದ್ರ ಜಲಾಶಯಕ್ಕೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಬಲದಂಡೆ, ಎಡದಂಡೆ ಎಚ್‌ಎಲ್‌ಸಿ, ಎಲ್‌ಎಲ್‌ಸಿ, ರಾಯ, ಬಸವ, ವಿಜಯನಗರ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದು ರೈತರಲ್ಲೂ ಸಂತಸ ಮೂಡಿಸಿತ್ತು. ಉಭಯ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯವುಳ್ಳ ಬಹುತೇಕ ಪ್ರದೇಶದಲ್ಲಿ ಭತ್ತ ಬೆಳೆದಿದ್ದರೆ, ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಕಂಪ್ಲಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿತ್ತು. ಫಸಲು ಉತ್ತಮವಾಗಿ ಬಂದಿದೆ ಎಂದು ಸಂತಸಪಟ್ಟ ರೈತರು ಕಟಾವು ಮಾಡುವಷ್ಟರೊಳಗಾಗಿ ನವೆಂಬರ್‌ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣ ಬೆಳೆನಷ್ಟವಾಗಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿತು.

ರೈತರ ಆತ್ಮಹತ್ಯೆ
ಹಿಂದಿನ ವರ್ಷಗಳಲ್ಲಿ ಮೆಣಸಿನಕಾಯಿಗೆ ಉತ್ತಮ ಬೆಲೆ ಬಂದಿದೆ ಎಂದು ನಂಬಿದ್ದ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಕಂಪ್ಲಿ ಭಾಗದ ಬಹುತೇಕ ರೈತರು, ಈ ಬಾರಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರು. ಬೇಡಿಕೆ ಹೆಚ್ಚಾಗಿ ಮೆಣಿಸಿನಕಾಯಿ ಬೀಜ ಸಿಗದ ಹಿನ್ನೆಲೆಯಲ್ಲಿ ತೋಟಗಾರಿಕೆ ಕಚೇರಿ ಎದುರು ಧರಣಿ, ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಿ, ಪೊಲೀಸರಿಂದ ಲಾಠಿಏಟು ತಿಂದು, ಕಾಳಸಂತೆಯಲ್ಲಿ ಬೀಜ ಖರೀದಿಸಿ ಮೆಣಸಿನಕಾಯಿ ನಾಟಿ ಮಾಡಿದರು. ಕೆಲ ರೈತರು ಗುತ್ತಿಗೆ ಪಡೆದು ನಾಟಿ ಮಾಡಿದ್ದರು. ಆದರೆ ಅಕಾಲಿಕ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆ ಬಹುತೇಕ ನಷ್ಟವಾಗಿದ್ದು, ರೈತರನ್ನು ಸಂಕಷ್ಟಕ್ಕೆ ನೂಕಿದೆ. ಸಾಲ ಮಾಡಿ ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದ ರೈತರು, ನಷ್ಟ ಅನುಭವಿಸಿದರು. ಸಾಲಕ್ಕೆ ಹೆದರಿ ಐವರು ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಳ್ಳಾರಿ ಡಿಸಿ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ
2020 ರಲ್ಲಿ ಕೋವಿಡ್‌ ಸೋಂಕು ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾ ಧಿಕಾರಿ ಎಸ್‌.ಎಸ್‌. ನಕುಲ್‌ ಅವರು, 2021 ವರ್ಷಾರಂಭದಲ್ಲೇ ಭಡ್ತಿಯಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ತೆರಳಿದರು. ಜ. 11ರಂದು ನೂತನ ಜಿಲ್ಲಾ ಧಿಕಾರಿಯಾಗಿ ಪವನ್‌ಕುಮಾರ್‌ ಮಾಲಪಾಟಿ ಅ ಧಿಕಾರ ವಹಿಸಿಕೊಂಡರು. ಜ. 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವಿಭಜಿತ ಜಿಲ್ಲೆಯ ಹಂಪಿ, ನೆರೆಯ ಕೊಪ್ಪಳದ ಆನೆಗುಂದಿ ಸ್ತಬ್ಧ ಚಿತ್ರಗಳು ಪ್ರದರ್ಶನ ಕಂಡವು.

Advertisement

‌ರ್ಷವಿಡೀ ಹರಿದ ತುಂಗಭದ್ರೆ
ಕರ್ನಾಟಕ-ಆಂಧ್ರ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರೆ ಪ್ರಸಕ್ತ ವರ್ಷ ವರ್ಷವಿಡೀ ಹರಿದು ರೈತರ ಹೊಲಗಳನ್ನು ಹಸಿರಾಗಿಸಿದ್ದಲ್ಲದೆ ಜನರ ದಾಹ ನೀಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಟಿಬಿ ಬೋರ್ಡ್‌ನ ಅಂಕಿ ಸಂಖ್ಯೆಗಳ ಪ್ರಕಾರ ಪ್ರಸಕ್ತ ವರ್ಷ 383.35 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಸದ್ಯ 95.24 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿದೆ. ಉಳಿದ 288.11 ಟಿಎಂಸಿ ನೀರನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಕಾಲುವೆ, ನದಿ ಮೂಲಕ ಹರಿಸಲಾಗಿದೆ. ಈ ಪೈಕಿ ಸುಮಾರು 160ಕ್ಕೂ ಹೆಚ್ಚು ಟಿಎಂಸಿ ನೀರನ್ನು ನದಿಗೆ ಹರಿಸಿರುವುದು ವಿಶೇಷ. ಆದರೆ ಬಿಸಿಲನಾಡು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಇಷ್ಟೆಲ್ಲ ಮಳೆ ಬಂದು, ತುಂಗಭದ್ರಾ ಜಲಾಶಯ ಭರ್ತಿಯಾಗಿ ಹರಿದರೂ, ಬೆಳೆ ಕೈಗೆಟುಕದೆ ರೈತರು ನಷ್ಟಕ್ಕೀಡಾಗಿರುವುದು ಖೇದಕರ.

ಸೋಂಕು ಪತ್ತೆಯಲ್ಲಿ ಬಳ್ಳಾರಿ ಪ್ರಥಮ
2020 ರಲ್ಲಿ ಕಾಡಿದ್ದ ಕೋವಿಡ್‌ ಸೋಂಕು ಸತತ ಎರಡನೇ ವರ್ಷ 2021ರಲ್ಲೂ ಅ ಧಿಕ ಪ್ರಮಾಣದಲ್ಲಿ ಕಾಡಿತು. ಸಾವಿನ ಸಂಖ್ಯೆ ಹೆಚ್ಚುವುದರ ಜತೆಗೆ ಸೋಂಕು ಪತ್ತೆ ಪ್ರಮಾಣವೂ ಅಧಿಕವಾಗಿದ್ದು, ರಾಜ್ಯದಲ್ಲೇ ಬಳ್ಳಾರಿ ಪ್ರಥಮ ಸ್ಥಾನಕ್ಕೆ ಬಂದಿತ್ತು. ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಿವಾರ್ಯವಾಗಿ ಲಾಕ್‌ಡೌನ್‌ ಮಾಡಬೇಕಾಯಿತು. ಮೊದಲ ಅಲೆಯಲ್ಲಿ 597 ಜನ ಸೋಂಕಿಗೆ ಮೃತಪಟ್ಟಿದ್ದರೆ, ಎರಡನೇ ಅಲೆಯಲ್ಲಿ ಸುಮಾರು 1090 ಜನ ಮೃತಪಟ್ಟಿದ್ದು, ಒಟ್ಟು ಈ ವರೆಗೆ 1687 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಪ್ರತಿದಿನ 2500ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು.

ಸಾಲು ಸಾಲು ಚುನಾವಣೆಗಳು
2021ನೇ ವರ್ಷ ಬಳ್ಳಾರಿ ಮಹಾನಗರ ಪಾಲಿಕೆ, ಕನ್ನಡ ಸಾಹಿತ್ಯ ಪರಿಷತ್‌, ವಿಧಾನ ಪರಿಷತ್‌ ಚುನಾವಣೆಗಳಿಗೆ ಸಾಕ್ಷಿಯಿತು. ಏ. 27ರಂದು ಬಳ್ಳಾರಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯುವ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಬಿಜೆಪಿಗೆ ಮುಖಭಂಗ ಎದುರಾಯಿತು. ಬಳಿಕ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯ ಪ್ರಚಾರವೂ ಎಲ್ಲೆಡೆ ಜೋರು ಪಡೆದುಕೊಂಡಿತ್ತಾದರೂ, ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಯಿತು. ಕೊನೆಗೆ ನವೆಂಬರ್‌ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ನಿಷ್ಠಿರುದ್ರಪ್ಪ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕರಾದರು. ಇನ್ನು ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್‌ ಚುನಾವಣೆಯೂ ಅತ್ಯಂತ ಬಿರುಸಿನ ವಾತಾವರಣ ಕಂಡುಬಂದಿದ್ದು, ವರ್ಷವಿಡೀ ಪ್ರಚಾರ ನಡೆಸಿದರೂ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯರನ್ನು ಮಣಿಸಿ, ವೈ.ಎಂ.ಸತೀಶ್‌ರನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇನ್ನು ವರ್ಷಾಂತ್ಯದಲ್ಲಿ ನಡೆದ ಬಳ್ಳಾರಿ/ವಿಜಯನಗರ ಜಿಲ್ಲೆಗಳ 5 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುರುಗೋಡು, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಪಂನಲ್ಲಿ ಕಾಂಗ್ರೆಸ್‌ ತೆಕ್ಕೆಗೆ ವಾಲಿದ್ದು, ಕುರೇಕುಪ್ಪ ಪುರಸಭೆ, ಹೊಸಪೇಟೆ ನಗರಸಭೆಯಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ವರ್ಷಾಂತ್ಯದಲ್ಲಿ ಬಿಜೆಪಿಗೆ ರಾಜಕೀಯ ಹಿನ್ನಡೆಯಾಯಿತು.

ಡಿಸಿ ಗ್ರಾಮ ವಾಸ್ತವ್ಯ
ಫೆಬ್ರವರಿ ತಿಂಗಳಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ರ ಗ್ರಾಮ ವಾಸ್ತವ್ಯದ ಭಾಗವಾಗಿ ಜಿಲ್ಲಾ ಧಿಕಾರಿ, ತಹಶೀಲ್ದಾರ್‌ಗಳು ಗ್ರಾಮಗಳಿಗೆ ಭೇಟಿ ನೀಡಿ, ಅಹವಾಲು ಆಲಿಸಿದರು. ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿ ಕಾರ ವಹಿಸಿಕೊಂಡ ಆನಂದ್‌ ಸಿಂಗ್‌ ಜಿಲ್ಲೆ ವಿಭಜನೆ ಕಾರಣಕ್ಕೆ ಬಳ್ಳಾರಿಗೆ ಬಂದಾಗಲೆಲ್ಲಾ ಪ್ರತಿಭಟನೆ ಎದುರಿಸಿದರು. ಕೊರೊನಾ ನಡುವೆಯೂ ಇಂಧನ ಸೇರಿದಂತೆ ವಿವಿಧ ಬೆಲೆ ಏರಿಕೆ ಖಂಡಿಸಿ ನಿರಂತರ ಹೋರಾಟ ನಡೆದವು.ಮಾರ್ಚ್‌ ತಿಂಗಳಲ್ಲಿ ಜಿಲ್ಲೆಯ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರಣಿಕ ದಿನವೇ ತ್ರಿಶೂಲ ನೆಲಕ್ಕುರುಳಿತು.

ಜಿಲ್ಲೆಗೆ ಒಲಿದ ಪದ್ಮಶ್ರೀ ಪ್ರಶಸ್ತಿ
ಪ್ರಸಕ್ತ 2021ರಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಗೆ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿರುವುದು ಹೆಮ್ಮೆಯ ಸಂಗತಿ. ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ನಿವಾಸಿಯಾದ ಜೋಗತಿ ಕುಣಿತ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದ್ದು, ಈಚೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಗುಂತಕಲ್ಲುಗೆ ರೈಲು ವಿಸ್ತರಣೆ
ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿ ಬಹುತೇಕ ರೈಲುಗಳು ಸ್ಥಗಿತಗೊಂಡಿವೆಯಾದರೂ, ಬಡವರ ಸಂಚಾರಕ್ಕೆ ಪ್ಯಾಸೆಂಜರ್‌ ರೈಲು ಇರಲಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಹುಬ್ಬಳ್ಳಿ-ಬಳ್ಳಾರಿ ಅತ್ಯಾಧುನಿಕ ಪ್ಯಾಸೆಂಜರ್‌ ರೈಲು ಸಂಚಾರ ಆರಂಭವಾಗಿದ್ದು ಅದನ್ನು ಸ್ಥಳೀಯರ ಬೇಡಿಕೆಯಂತೆ ನೆರೆಯ ಆಂಧ್ರದ ಗುಂತಕಲ್ಲುವರೆಗೆ ವಿಸ್ತರಿಸಲಾಗಿದೆ. ಈ ರೈಲಿನಿಂದ ಬಳ್ಳಾರಿ, ಹೊಸಪೇಟೆ, ಗುಂತಕಲ್ಲು ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬಳ್ಳಾರಿಯಲ್ಲೇ ಇರಲು ಜನಾರ್ದನ ರೆಡ್ಡಿಗೆ ಅವಕಾಶ
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆದೇಶದಿಂದ ಸರಿಸುಮಾರು ಒಂದು ದಶಕದಿಂದ ತವರು ಜಿಲ್ಲೆ ಬಳ್ಳಾರಿಯಿಂದ ಹೊರಗುಳಿದಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಈಚೆಗೆ ಬಳ್ಳಾರಿಯಲ್ಲೇ ಉಳಿಯಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಲ್ಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ವೃದ್ಧಾಶ್ರಮದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಆಶ್ರಮದಲ್ಲಿನ ಮಹಿಳೆಯರಿಗೆ ಬಟ್ಟೆಗಳನ್ನು ಸಹ ಉಚಿತವಾಗಿ ವಿತರಿಸಿದರು.

ತಾತ್ಕಾಲಿಕ ಕೋವಿಡ್‌ ಆಸ್ಪತ್ರೆ ನಿರ್ಮಾಣ
ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ಮೇ ತಿಂಗಳಲ್ಲಿ ಹೆಚ್ಚಿದ ಹಿನ್ನೆಲೆಯಲ್ಲಿ ಎಲ್ಲೆಡೆ ಬೆಡ್‌ ಗಳ ಕೊರತೆ ಎದುರಾಯಿತು. ಖಾಸಗಿಯವರ ನೇತೃತ್ವದಲ್ಲಿ ಜಿಲ್ಲೆಯ ಹಲವೆಡೆ ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ತೆರೆದರೂ, ನಿಭಾಯಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಜಿಲ್ಲಾಡಳಿತವೇ ಮುಂದೆ ಬಂದು ಜಿಂದಾಲ್‌ ಸಹಯೋಗದಲ್ಲಿ 1 ಸಾವಿರ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆ ತೆರೆದು, ನಿಗದಿತ ಅವ ಧಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರು, ನರ್ಸ್‌ಗಳನ್ನು ನಿಯೋಜಿಸಿ, ನಿಭಾಯಿಸಲಾಯಿತು. ಆದರೆ, ಆಸ್ಪತ್ರೆ ನಿರ್ಮಾಣವಾಗಿ ಬಳಕೆಯಾಗುವುದರೊಳಗೆ ಕೋವಿಡ್‌ ಸೋಂಕು ಪತ್ತೆ ಪ್ರಮಾಣ ಒಂದಷ್ಟು ಇಳಿಯುತ್ತಿರುವ ಲಕ್ಷಣಗಳು ಕಂಡುಬಂದಿದ್ದವು. ಇದೇ ವೇಳೆ ತಾಲೂಕಿನ ಮೋಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬ ಬೆಡ್‌ ಕೊರತೆಯಿಂದ ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.

ಬುಡಾ ವಿವಾದ
ಕಳೆದ ವರ್ಷದಂತೆ ಪ್ರಸಕ್ತ 2021ರಲ್ಲೂ ಬುಡಾ ಅಧ್ಯಕ್ಷ ಗಾದಿ ವಿವಾದಕ್ಕೀಡಾಗಿತ್ತು. ಹಿಂದಿನ ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಅವರ ನೇಮಕವನ್ನು ವಿರೋಧಿ ಸಿದ್ದ ಬಿಜೆಪಿ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪರನ್ನು ಜ. 27ರಂದು ಬುಡಾ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಸುಮ್ಮನಾಗದ ದಮ್ಮೂರು ಶೇಖರ್‌ ಅವರು, 48 ಗಂಟೆ ಕಳೆಯುವುದರೊಳಗೆ ಆದೇಶವನ್ನೇ ಬದಲಾಯಿಸಿ ಬುಡಾ ಅಧ್ಯಕ್ಷರಾಗಿ ಮರು ನೇಮಕವಾಗುವಲ್ಲಿ ಯಶಸ್ವಿಯಾಗಿದ್ದು ಆಗ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ಕೇವಲ ಎರಡು ದಿನಗಳ ಮಟ್ಟಿಗೆ ಬುಡಾ ಅಧ್ಯಕ್ಷರಾಗಿದ್ದ ಕೆ.ಎ.ರಾಮಲಿಂಗಪ್ಪರನ್ನು ವಾಡಾ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತಾದರೂ ಆ ಹುದ್ದೆಯನ್ನು ಅವರು ಸ್ವೀಕರಿಸದೆ ತ್ಯಜಿಸಿ ಗಮನ ಸೆಳೆದಿದ್ದರು.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next