Advertisement

ನೂತನ ಕಾಯ್ದೆಯಿಂದ ನಲುಗಿದ ಎಪಿಎಂಸಿ

05:26 PM Feb 26, 2021 | Team Udayavani |

ಬಳ್ಳಾರಿ: ಪ್ರತಿವರ್ಷ ಕೋಟ್ಯಾಂತರ ರೂ. ಆದಾಯ ಕಾಣುತ್ತಿದ್ದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಕಾಯ್ದೆಯಿಂದಾಗಿ ಆದಾಯಕ್ಕೆ ಆರ್ಥಿಕ ಗ್ರಹಣ ಹಿಡಿದಿದೆ. ಪರಿಣಾಮ ಇಲಾಖೆಯಲ್ಲಿನ ಗುತ್ತಿಗೆ ಸಿಬ್ಬಂದಿಗಳನ್ನು ಕೈಬಿಡಲಾಗಿದ್ದು, ಬರುವ ಅತ್ಯಲ್ಪ ಆದಾಯದಲ್ಲೇ ನಿರ್ವಹಣೆಯ ಸವಾಲು ಎದುರಿಸುತ್ತಿದೆ.

Advertisement

ನಗರದ ಹೃದಯಭಾಗದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೇಂಗಾ, ಜೋಳ, ಮೆಕ್ಕೆಜೋಳ, ಸಜ್ಜೆ,ನವಣೆ ಪ್ರತಿವರ್ಷ ಹೆಚ್ಚಿನ ಪ್ರಮಾಣದಲ್ಲಿ ಬರುವ ಪ್ರಮುಖ ಕೃಷಿ ಉತ್ಪನ್ನಗಳು. ಎಪಿಎಂಸಿ ಹೊರಗಡೆಯೇ ಖರೀದಿಯಾದರೂ ಒಳಮೆಣಸಿನಕಾಯಿ ಮತ್ತು ಭತ್ತ ಈ ಎರಡು ಬೆಳೆಗಳಿಂದಲೇ ಪ್ರತಿವರ್ಷ ಸುಮಾರು ಆರು ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಈ ಎಲ್ಲ ಬೆಳೆಗಳಿಂದ ಸುಮಾರು 10 ಕೋಟಿ ರೂ.ಗಳಷ್ಟು  ಶುಲ್ಕ ಸಂಗ್ರಹವಾಗುತ್ತಿತ್ತು. ಆದರೆ, ಕಳೆದ 2020ರ ಆಗಸ್ಟ್‌ ತಿಂಗಳಿಂದ ಜಾರಿಗೆ ಬಂದ ನೂತನ ಎಪಿಎಂಸಿ ಕಾಯ್ದೆ ಮತ್ತು 1.50 ರೂಪಾಯಿ ಇದ್ದ ಮಾರುಕಟ್ಟೆ ಶುಲ್ಕವನ್ನು ಕೇವಲ 35 ಪೈಸೆಗೆ ಇಳಿಸಿರುವುದು ಎಪಿಎಂಸಿಯ ಬಹುಪಾಲು ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ಕೋಟ್ಯಾಂತರ ಶುಲ್ಕ ಸಂಗ್ರಹಕ್ಕೆ ಪೆಟ್ಟು: ಕಳೆದ 2019ನೇ ಸಾಲಿನ ಆಗಸ್ಟ್‌ ತಿಂಗಳಲ್ಲಿ 46,11,412 ರೂ. ಸಂಗ್ರಹವಾಗಿದ್ದ ಮಾರುಕಟ್ಟೆ ಶುಲ್ಕ, 2020ನೇ ಸಾಲಿನ ಆಗಸ್ಟ್‌ ತಿಂಗಳಲ್ಲಿ 40,29,344 ರೂ.ಗಳಿಗೆ ಕುಸಿದಿದೆ. ಅದೇ ರೀತಿ 2019 ಸೆಪ್ಟೆಂಬರ್‌ನಲ್ಲಿ 36.20 ಲಕ್ಷ ರೂ., ಅಕ್ಟೋಬರ್‌ನಲ್ಲಿ 62.05 ಲಕ್ಷ ರೂ., ನವೆಂಬರ್‌ನಲ್ಲಿ 1.30 ಕೋಟಿ ರೂ., ಡಿಸೆಂಬರ್‌ ನಲ್ಲಿ 1.8 ಕೋಟಿ ರೂ, 2020 ಜನವರಿಯಲ್ಲಿ 1.13 ಕೋಟಿ ರೂ. ಸೇರಿ ಒಟ್ಟು 4.99 ಕೋಟಿ ರೂ. ಸಂಗ್ರಹವಾಗಿದ್ದ ಮಾರುಕಟ್ಟೆ ಶುಲ್ಕ, 2020 ಆಗಸ್ಟ್‌ ತಿಂಗಳಲ್ಲಿ 40 ಲಕ್ಷ ರೂ., ಸೆಪ್ಟೆಂಬರ್‌ನಲ್ಲಿ 29 ಲಕ್ಷ ರೂ, ಅಕ್ಟೋಬರ್‌ನಲ್ಲಿ 15 ಲಕ್ಷ ರೂ., ನವೆಂಬರ್‌ನಲ್ಲಿ 20 ಲಕ್ಷ ರೂ, ಡಿಸೆಂಬರ್‌ ನಲ್ಲಿ 17 ಲಕ್ಷ ರೂ., 2021 ಜನವರಿಯಲ್ಲಿ 21 ಲಕ್ಷ ರೂ. ಸೇರಿ ಒಟ್ಟು 1.44 ಕೋಟಿ ರೂ.ಗಳು ಮಾತ್ರ ಸಂಗ್ರಹವಾಗಿದೆ. ಸುಮಾರು 3.5 ಕೋಟಿ ರೂ.ಗಳಷ್ಟು ಆದಾಯ ಸಂಗ್ರಹಕ್ಕೆ ಎಪಿಎಂಸಿ ಖಾಸಗೀಕರಣ ನೀತಿ ಪೆಟ್ಟು ನೀಡಿದೆ.

60 ಪೈಸೆಗೆ ಏರಿಕೆ: ಈ ಮೊದಲು ಎಪಿಎಂಸಿ ಶುಲ್ಕವನ್ನು 1.50 ರೂಪಾಯಿ ಸಂಗ್ರಹಿಸಲಾಗುತ್ತಿತ್ತು. ಇದರಲ್ಲಿ ಒಂದು ರೂಪಾಯಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಉಳಿದ 50 ಪೈಸೆಯನ್ನು ಎಪಿಎಂಸಿ ನಿರ್ವಹಣೆಗೆ  ಬಳಸಿಕೊಳ್ಳಲಾಗುತ್ತಿತ್ತು. ಆಗ ಪ್ರತಿವರ್ಷ ಸುಮಾರು 5 ಕೋಟಿ ರೂ.ಗೂ ಶುಲ್ಕ ಸಂಗ್ರಹವಾಗುತ್ತಿತ್ತು.   ಆದರೆ, ಕಳೆದ ವರ್ಷ ರಾಜ್ಯ ಸರ್ಕಾರ ಮಾರುಕಟ್ಟೆ ಶುಲ್ಕವನ್ನು 1.50 ರೂಪಾಯಿಯಿಂದ 35 ಪೈಸೆಗೆ ಇಳಿಸಿತು. ಈ 35 ಪೈಸೆಯಲ್ಲಿ ಸರ್ಕಾರಕ್ಕೆ ಸಲ್ಲಿಸುವುದರ ಜತೆಗೆ ಎಪಿಎಂಸಿ ನಿರ್ವಹಣೆ ಕಷ್ಟವಾಗುತ್ತಿತ್ತು. ವರ್ತಕರ ಒತ್ತಡದಿಂದ ಶುಲ್ಕವನ್ನು ಪರಿಷ್ಕರಿಸಿದ ಸರ್ಕಾರ 2020 ನವೆಂಬರ್‌ ತಿಂಗಳಲ್ಲಿ 35 ಪೈಸೆಯಿಂದ 60 ಪೈಸೆಗೆ ಏರಿಕೆ ಮಾಡಿತು. ಇದರಲ್ಲಿ 30 ಪೈಸೆ ಸರ್ಕಾರಕ್ಕೆ ಸಲ್ಲಿಸಿ ಇನ್ನುಳಿದ 30 ಪೈಸೆಯನ್ನು ಎಪಿಎಂಸಿ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ.

ಸಿಬ್ಬಂದಿ ಕಡಿತ: ಎಪಿಎಂಸಿ ಮಾರುಕಟ್ಟೆ ಶುಲ್ಕ ಸಂಗ್ರಹ ಕಡಿಮೆಯಾದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಕಡಿತಗೊಳಿಸಲಾಗಿದೆ. 20 ಜನರಿದ್ದ ಭದ್ರತಾ ಸಿಬ್ಬಂದಿ 6ಕ್ಕೆ ಇಳಿಸಲಾಗಿದ್ದು, 14 ಜನರನ್ನು ತೆಗೆಯಲಾಗಿದೆ. 16 ಪೌರ ಕಾರ್ಮಿಕರಲ್ಲಿ 8 ಜನರನ್ನು, 9 ಕಂಪ್ಯೂಟರ್‌ ಆಪರೇಟರ್‌ಗಳಲ್ಲಿ 3 ಜನರನ್ನು ತೆಗೆಯಲಾಗಿದೆ. ರೈತರ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿ ಸಿ ಅದರಿಂದ ಬರುತ್ತಿದ್ದ ಆದಾಯದಿಂದಲೇ ಎಪಿಎಂಸಿಯನ್ನು ನಿರ್ವಹಿಸಲಾಗುತ್ತಿತ್ತು. ನೂತನ ಎಪಿಎಂಸಿ ಕಾಯ್ದೆಯಿಂದಾಗಿ ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಿಬೇಕಾದರೂ ಮಾರಾಟ ಮಾಡಿಕೊಳ್ಳಬಹುದಾಗಿದೆ. ಇದರಿಂದ ವರ್ತಕರು ಸಹ ಹೊರಗಡೆಯೇ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಎಪಿಎಂಸಿ ಶುಲ್ಕವನ್ನು ಕಟ್ಟುತ್ತಿಲ್ಲ. ಎಪಿಎಂಸಿಗೆ ಬರದಿದ್ದರೂ ಒಣಮೆಣಸಿನಕಾಯಿ, ಭತ್ತ ಈ ಎರಡು ಬೆಳೆಯಿಂದಲೇ ಪ್ರತಿವರ್ಷ ಅಂದಾಜು 6 ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿತ್ತು. ಇನ್ನುಳಿದ ಮೆಕ್ಕೆಜೋಳ, ಸಜ್ಜೆ, ಜೋಳ ಬೆಳೆಗಳಿಂದಲೂ ಗರಿಷ್ಠ ಪ್ರಮಾಣದಲ್ಲಿ ಶುಲ್ಕ ಸಂಗ್ರಹವಾಗುತ್ತಿತ್ತು. ಈ ಎಲ್ಲ ಉತ್ಪನ್ನಗಳು ಹೊರಗಡೆಯೇ ಖರೀದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಪಿಎಂಸಿಯ ಈ ಎಲ್ಲ ಆದಾಯಕ್ಕೆ ಪೆಟ್ಟು ಬಿದ್ದಿದೆ. ಹೀಗಾಗಿ ನಿರ್ವಹಣೆ ವೆಚ್ಚಕ್ಕೂ ಕತ್ತರಿ ಹಾಕಲಾಗಿದೆ ಎಂದು ಸಿಬ್ಬಂದಿ ಸ್ಪಷ್ಟಪಡಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next