Advertisement

ವಿಜಯನಗರ 3ನೇ ಬಾರಿ ಉಪಚುನಾವಣೆಗೆ ಅಣಿ

01:39 PM Nov 15, 2019 | Naveen |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರ ಮೂರನೇ ಬಾರಿಗೆ ಉಪ ಚುನಾವಣೆಗೆ ಅಣಿಯಾಗಿದೆ. ಹಿಂದಿನ ಎರಡು ಉಪಚುನಾವಣೆಗಳಲ್ಲೂ ಸಿಂಗ್‌ ಕುಟುಂಬದವರೇ ಜಯ ಗಳಿಸಿದ್ದು, ಇದೀಗ ನಡೆಯುತ್ತಿರುವ ಉಪಚುನಾವಣೆಯಲ್ಲೂ ಸಿಂಗ್‌ ಕುಟುಂಬದ ನಾಗಾಲೋಟ ಮುಂದುವರಿಯಲಿದೆಯೇ ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.

Advertisement

ರಾಜ್ಯ ವಿಧಾನಸಭೆಗೆ 1967ರಲ್ಲಿ ನಡೆದ ಮೂರನೇ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಆರ್‌ .ನಾಗನಗೌಡ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದರು. ಪಿ.ನಾಗಲಿಂಗಯ್ಯ, ಜಂಬಣ್ಣ ಕೋರಿಶೆಟ್ಟಿ ಎಂಬುವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಅಂದು 67,576 ಮತಗಳಿದ್ದು, ಚುನಾವಣೆಯಲ್ಲಿ 36,544 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 2580 ಮತಗಳು ತಿರಸ್ಕೃತವಾಗಿದ್ದವು.

ಚುನಾವಣೆಯಲ್ಲಿ 19,718 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ನ ಆರ್‌. ನಾಗನಗೌಡ, ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಪಿ. ನಾಗಲಿಂಗಯ್ಯ (12736) ವಿರುದ್ಧ 6982 ಮತಗಳ ಅಂತರದಿಂದ ಜಯ ಗಳಿಸಿದ್ದರು. ಮೂರನೇ ಸ್ಥಾನ ಪಡೆದಿದ್ದ ಜಂಬಣ್ಣ ಕೋರಿಶೆಟ್ಟಿ ಕೇವಲ 1510 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದರು. ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಜಯ ಗಳಿಸಿದ್ದ ಆರ್‌. ನಾಗನಗೌಡ, 1970ರಲ್ಲಿ ಅಕಾಲಿಕ ನಿಧನ ಹೊಂದಿದ್ದರಿಂದ ಹೊಸಪೇಟೆ (ವಿಜಯನಗರ) ಕ್ಷೇತ್ರ ಮೊದಲ ಬಾರಿಗೆ ಉಪ ಚುನಾವಣೆ ಎದುರಿಸಬೇಕಾಯಿತು.

ಮೊದಲನೇ ಉಪ ಚುನಾವಣೆ: ಆರ್‌.ನಾಗನಗೌಡ ನಿಧನ ಬಳಿಕ ಹೊಸಪೇಟೆ ಕ್ಷೇತ್ರಕ್ಕೆ 1970ರಲ್ಲಿ ಉಪಚುನಾವಣೆ ನಡೆಯಿತು. ಆಗಲೇ ರಾಜಕೀಯವಾಗಿ ಗುರುತಿಸಿಕೊಂಡಿದ್ದ ಸಿಂಗ್‌ ಕುಟುಂಬ ಉಪಚುನಾವಣೆಯಲ್ಲಿ ಬಿ . ಸತ್ಯನಾರಾಯಣ ಸಿಂಗ್‌ ಎನ್‌ಸಿಜೆ ಪಕ್ಷದಿಂದ ಸ್ಪರ್ಧಿಸಿದರೆ, ಪ್ರತಿಸ್ಪರ್ಧಿಯಾಗಿ ಪಿ. ಭೀಮಸೇನ ಶೆಟ್ಟಿ ಎನ್ನುವವರು ಎನ್‌ ಸಿಎನ್‌ ಪಕ್ಷದಿಂದ ಕ್ಕಿಳಿದಿದ್ದರು .

ಆಗ ಕ್ಷೇತ್ರದಲ್ಲಿ ನೋಂದಣಿಯಾಗಿದ್ದ 76,177 ಮತಗಳ ಪೈಕಿ 47,759 ಮತಗಳು ಚಲಾವಣೆಯಾಗಿದ್ದು, 2035 ಮತಗಳು ತಿರಸ್ಕೃತಗೊಂಡಿದ್ದವು. ಎನ್‌ಸಿಜೆ ಪಕ್ಷದ ಬಿ. ಸತ್ಯನಾರಾಯಣಸಿಂಗ್‌ 28,218 ಮತ ಪಡೆದು, ಪ್ರತಿಸ್ಪರ್ಧಿ ಎನ್‌ಸಿಎನ್‌ ಪಕ್ಷದ ಪಿ. ಭೀಮಸೇನಶೆಟ್ಟಿ (17506) ವಿರುದ್ಧ 10,712 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದರು. ಈ ಮೂಲಕ ರಾಜಕೀಯ ಸ್ಥಿರತೆ ಕಂಡುಕೊಂಡಿದ್ದ ಸಿಂಗ್‌ ಕುಟುಂಬ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದರು. ಬಳಿಕ 1972ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಬಿ.ಸತ್ಯನಾರಾಯಣಸಿಂಗ್‌, 26,717 ಮತ ಪಡೆದು ಪ್ರತಿಸ್ಪರ್ಧಿ ಐಎನ್‌ಒ ಪಕ್ಷದ ಜಿ.ಶಂಕರಗೌಡ (17305) ವಿರುದ್ಧ 9412 ಮತಗಳ ಅಂತರದಿಂದ ಎರಡನೇ ಬಾರಿಗೆ ಗೆಲುವು ದಾಖಲಿಸಿದರು.

Advertisement

ನಂತರ ನಡೆದ 1978, 1983, 1985, 1989 ನಾಲ್ಕೂ ಚುನಾವಣೆಗಳಲ್ಲಿ ಸಿಂಗ್‌ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧಿಸಿಲ್ಲ. 1989ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನತಾದಳ ಪಕ್ಷದ ಅಭ್ಯರ್ಥಿ ಗುಜ್ಜಲ ಹನುಮಂತಪ್ಪ 63,805 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್‌. ಅಬ್ದುಲ್‌ ವಹಾಬ್‌ (31603) ವಿರುದ್ಧ 32,202 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದರು. ಈ ವೇಳೆಗಾಗಲೇ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಪೈಕಿ 1,06,279 ಮತಗಳು ಚಲಾವಣೆಯಾಗಿ 6272 ಮತಗಳು ತಿರಸ್ಕೃತಗೊಂಡಿದ್ದವು.

1991ರ 2ನೇ ಉಪ ಚುನಾವಣೆ: ಗುಜ್ಜಲ ಹನುಮಂತಪ್ಪ ಶಾಸಕರಾದ ಕೆಲವೇ ವರ್ಷಗಳಲ್ಲಿ ನಿಧನರಾದರು. ಇದರಿಂದ ಹೊಸಪೇಟೆ ವಿಧಾನಸಭೆ ಕ್ಷೇತ್ರಕ್ಕೆ 1991ರಲ್ಲಿ ಎರಡನೇ ಬಾರಿಗೆ ಉಪ ಚುನಾವಣೆ ನಡೆದಿದ್ದು, ಆಗ ಸಿಂಗ್‌ ಕುಟುಂಬದ ರತನ್‌ಸಿಂಗ್‌ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದರು. ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಶಂಕರಗೌಡ, ಜನತಾದಳದಿಂದ ಗುಂಡಿ ಭರಮಪ್ಪ ಕಣಕ್ಕಿಳಿದಿದ್ದರು.

ಕಾಂಗ್ರೆಸ್‌ನ ರತನ್‌ಸಿಂಗ್‌ 27,021 ಮತಗಳನ್ನು ಪಡೆದು, ಬಿಜೆಪಿಯ ಶಂಕರಗೌಡ (26588) ವಿರುದ್ಧ ಕೇವಲ 433 ಮತಗಳ ಅಂತರದಿಂದ ಜಯ ಗಳಿಸಿದರು. ಜನತಾದಳದ ಗುಂಡಿ ಭರಮಪ್ಪ 18,908 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕಿಳಿದರು. ಕ್ಷೇತ್ರದಲ್ಲಿ 1,63,474 ಮತಗಳ ಪೈಕಿ 82,730 ಮತಗಳು ಚಲಾವಣೆಯಾಗಿದ್ದು, 6555 ಮತಗಳು ತಿರಸ್ಕೃತಗೊಂಡಿದ್ದವು.

3ನೇ ಉಪಚುನಾವಣೆ: ಅನರ್ಹ ಶಾಸಕ ಆನಂದ್‌ಸಿಂಗ್‌ ರಾಜೀನಾಮೆಯಿಂದ ವಿಜಯನಗರ ಕ್ಷೇತ್ರ ಇದೀಗ ಮೂರನೇ ಉಪ ಚುನಾವಣೆಗೆ ಅಣಿಯಾಗಿದೆ. ಬಿಜೆಪಿಯಿಂದ ಆನಂದ್‌ ಸಿಂಗ್‌ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯ ಕೊರತೆ, ಕ್ಷೇತ್ರದಲ್ಲಿ ಸಿಂಗ್‌ ವರ್ಚಸ್ಸು ಸೇರಿ ಮೂರನೇ ಉಪ ಚುನಾವಣೆಯಲ್ಲೂ ‘ಸಿಂಗ್‌’ ಕುಟುಂಬದ ಗೆಲುವಿನ ಪರ್ವ ಮುಂದುವರಿಯಲಿದೆಯೇ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next