Advertisement

ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ: ಪೆರೆರ

12:06 AM Jun 06, 2019 | Team Udayavani |

ಕಾರ್ಡಿಫ್: ಶ್ರೀಲಂಕಾ ಪರಿಪೂರ್ಣ ನಿರ್ವಹಣೆ ನೀಡಲು ಮತ್ತೂಮ್ಮೆ ವಿಫ‌ಲವಾಗಿದೆ. ಅಫ್ಘಾನಿಸ್ಥಾನ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ತಂಡದ ಬ್ಯಾಟಿಂಗ್‌ ನಾಟಕೀಯ ರೀತಿಯಲ್ಲಿ ಕುಸಿದಿದೆ. ಆದರೂ ಅನುಭವಿ ಬೌಲಿಂಗ್‌ ಪಡೆಯಿಂದ ತಂಡ ಗೆಲುವು ದಾಖಲಿಸುವ ನಂಬಿಕೆ ತಂಡಕ್ಕಿದೆ ಎಂದು ಆಲ್‌ರೌಂಡರ್‌ ತಿಸರ ಪೆರೆರ ಹೇಳಿದ್ದಾರೆ.

Advertisement

ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದ ಶ್ರೀಲಂಕಾ ತಂಡ ಅಫ್ಘಾನಿಸ್ಥಾನ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡಿದ್ದರೂ ಉತ್ತಮ ಬೌಲಿಂಗ್‌ನಿಂದಾಗಿ ಜಯ ಸಾಧಿಸಲು ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ ಮಳೆಯಿಂದ ತೊಂದರೆಗೊಳಗಾಗಿ 41 ಓವರಿಗೆ ಸೀಮಿತಗೊಂಡ ಈ ಪಂದ್ಯಲ್ಲಿ 36.5 ಓವರ್‌ಗಳಲ್ಲಿ 201 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಅಫ್ಘಾನಿಸ್ಥಾನದ ಗೆಲುವಿಗೆ 41 ಓವರ್‌ಗಳಲ್ಲಿ 187 ರನ್‌ ಗಳಿಸುವ ಗುರಿ ನೀಡಲಾಗಿತ್ತು. ಆದರೆ ಅದು 32.4 ಓವರ್‌ಗಳಲ್ಲಿ 152 ರನ್ನಿಗೆ ಕುಸಿದು 34 ರನ್ನುಗಳಿಂದ ಸೋತಿತು.

ಅನುಭವಿ ಬೌಲಿಂಗ್‌ ಪಡೆ
“ನಮ್ಮ ಬಗ್ಗೆ ನಮಗೆ ನಂಬಿಕೆಯಿದೆ. ನಮ್ಮದು ಅತ್ಯಂತ ಅನುಭವಿ ಬೌಲಿಂಗ್‌ ಪಡೆ. ಈ ಕಾರಣಕ್ಕಾಗಿ ನಮ್ಮಲ್ಲಿ 5 ಮಂದಿ ವೇಗಿಗಳಿದ್ದಾರೆ’ ಎಂದು ಪೆರೆರ ಹೇಳಿದರು.
“ನಾವು ವಿಕೆಟ್‌ ಪಡೆಯುತ್ತಿರಬೇಕು. ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿ ನಮ್ಮ ಮೂಲ ಯೋಜನೆಯಂತೆ ಆಡುವುದು ಮುಖ್ಯವಾಗಿದೆ ‘ ಎಂದು ಪೆರೆರ ಹೇಳಿದರು.
ಕಿವೀಸ್‌ ವಿರುದ್ಧ 136 ರನ್ನಿಗೆ ಆಲೌಟಾಗಿದ್ದ ಶ್ರೀಲಂಕಾ, ಅಫ್ಘಾನಿಸ್ಥಾನದೆದುರು ಉತ್ತಮ ಆರಂಭ ಪಡೆದಿತ್ತು. ಕುಸಲ್‌ ಪೆರೆರ 78 ರನ್‌ ಹೊಡೆದಿದ್ದರು. ಆದರೆ ಮತ್ತೆ ಬ್ಯಾಟಿಂಗ್‌ ದುರಂತ ಕಂಡ ಶ್ರೀಲಂಕಾ 88 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿಸಿಕೊಂಡಿತು. ಬ್ಯಾಟಿಂಗ್‌ನಲ್ಲಿ ನಾವು ನಿರಾಶಾದಾಯಕ ನಿರ್ವಹಣೆ ನೀಡಿದ್ದೇವೆ. ಒಳ್ಳೆಯ ಆರಂಭ ಪಡೆದ ಬಳಿಕ ನಾವು ಇಸ್ಪೀಟ್‌ ಎಲೆಗಳಂತೆ ವಿಕೆಟ್‌ ಕಳೆದುಕೊಂಡೆವು ಎಂದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-36.5 ಓವರ್‌ಗಳಲ್ಲಿ 201. ಅಫ್ಘಾನಿಸ್ಥಾನ-32.4 ಓವರ್‌ಗಳಲ್ಲಿ 152 (ನಜೀಬುಲ್ಲ 43, ಜಜಾಯ್‌ 30, ನೈಬ್‌ 23, ಪ್ರದೀಪ್‌ 31ಕ್ಕೆ 4, ಮಾಲಿಂಗ 39ಕ್ಕೆ 3).

Advertisement

ಪಂದ್ಯಶ್ರೇಷ್ಠ: ನುವಾನ್‌ ಪ್ರದೀಪ್‌.

ಗೆಲುವಿನಿಂದ ಆತ್ಮವಿಶ್ವಾಸ
ಬ್ಯಾಟಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ನೀಡಲು ನಾವು ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ. ಈ ಗೆಲುವಿನಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೂಟದ ಇನ್ನುಳಿದ ಪಂದ್ಯಗಳಿಗೆ ಈ ಗೆಲುವು ಪ್ರೇರಣೆಯಾಗಲಿದೆ’ ಎಂಬುದು ನಾಯಕ ದಿಮುತ್‌ ಕರುಣರತ್ನೆ ಪ್ರತಿಕ್ರಿಯೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಬೇಕಾಗಿದೆ. ಒಂದು ವೇಳೆ ಬ್ಯಾಟಿಂಗ್‌ನಲ್ಲಿ ಶ್ರೀಲಂಕಾ ಗಮನಾರ್ಹ ನಿರ್ವಹಣೆ ನೀಡಿದರೆ ಸುಲಭ ಗೆಲುವಿನತ್ತ ಸಾಗಬಹುದು ಎಂದು ಕೋಚ್‌ ಚಂಡಿಕ ಹತುರುಸಿಂಘ ಹೇಳಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಶ್ರೀಲಂಕಾ-ಅಫ್ಘಾನಿಸ್ಥಾನ
-ರಶೀದ್‌ ಖಾನ್‌ 100 ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ಅಫ್ಘಾನಿಸ್ಥಾನದ 7ನೇ ಕ್ರಿಕೆಟಿಗನೆನಿಸಿದರು. ಉಳಿದವರೆಂದರೆ ನಬಿ (184), ಅಸYರ್‌ ಅಫ್ಘಾನ್‌ (163), ಶಾಜಾದ್‌ (151), ಸಮಿಯುಲ್ಲ ಶೆನ್ವರಿ (143), ದೌಲತ್‌ ಜದ್ರಾನ್‌ (112) ಮತ್ತು ನಜೀಬುಲ್ಲ ಜದ್ರಾನ್‌ (108).
– ಮೊಹಮ್ಮದ್‌ ನಬಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ದಾಖಲಿಸಿದ ಅಫ್ಘಾನ್‌ ಬೌಲರ್‌ ಎನಿಸಿದರು (9-0-30-4). ಹಿಂದಿನ ದಾಖಲೆ ಶಪೂರ್‌ ಜದ್ರಾನ್‌ ಹೆಸರಲ್ಲಿತ್ತು (2015ರ ಸ್ಕಾಟ್ಲೆಂಡ್‌ ಎದುರಿನ ಡ್ಯುನೆಡಿನ್‌ ಪಂದ್ಯ, 10-1-38-4).
– ಲಹಿರು ತಿರಿಮನ್ನೆ 100 ಏಕದಿನ ಇನ್ನಿಂಗ್ಸ್‌ಗಳಲ್ಲಿ 3 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದ ಲಂಕೆಯ 3ನೇ ಬ್ಯಾಟ್ಸ್‌ಮನ್‌. ಮೊದಲೆರಡು ಸ್ಥಾನದಲ್ಲಿರುವವರು ಉಪುಲ್‌ ತರಂಗ (93 ಇನ್ನಿಂಗ್ಸ್‌) ಮತ್ತು ಮರ್ವನ್‌ ಅತ್ತಪಟ್ಟು (94 ಇನ್ನಿಂಗ್ಸ್‌).
– ಲಸಿತ ಮಾಲಿಂಗ 325 ವಿಕೆಟ್‌ ಉರುಳಿಸಿದರು. ಏಕದಿನದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಸಾಧಕರಲ್ಲಿ ಅವರಿಗೀಗ 10ನೇ ಸ್ಥಾನ.
– ಅಫ್ಘಾನಿಸ್ಥಾನ ವಿಶ್ವಕಪ್‌ನಲ್ಲಿ ತನ್ನ 2ನೇ ಕನಿಷ್ಠ ಮೊತ್ತ ದಾಖಲಿಸಿತು (152 ಆಲೌಟ್‌). ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ಪರ್ತ್‌ನಲ್ಲಿ 142ಕ್ಕೆ ಆಲೌಟ್‌ ಆದದ್ದು ಅಫ್ಘಾನ್‌ ತಂಡದ ಕನಿಷ್ಠ ಮೊತ್ತವಾಗಿದೆ.
– ಶ್ರೀಲಂಕಾ ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತವನ್ನು ಉಳಿಸಿ ಕೊಂಡಿತು (187). ಇದಕ್ಕೂ ಮೊದಲು 2003ರ ಕೂಟದಲ್ಲಿ ವಿಂಡೀಸ್‌ ಎದುರು ಕೇವಲ 229 ರನ್‌ ಗಳಿಸಿ ಗೆದ್ದು ಬಂದದ್ದು ದಾಖಲೆಯಾಗಿದೆ.
– ಶ್ರೀಲಂಕಾದ ವಿಶ್ವಕಪ್‌ ಇತಿಹಾಸಲ್ಲಿ ಪೇಸ್‌ ಬೌಲರ್‌ಗಳು 4ನೇ ಸಲ ಸರ್ವಾಧಿಕ 9 ವಿಕೆಟ್‌ ಉರುಳಿಸಿದರು.
– ವಿಶ್ವಕಪ್‌ನಲ್ಲಿ ಶ್ರೀಲಂಕಾ ಕೊನೆಯ 8 ವಿಕೆಟ್‌ಗಳಿಂದ ಕನಿಷ್ಠ 57 ರನ್‌ ಗಳಿಸಿತು. 1975ರ ಕೂಟದಲ್ಲಿ ವೆಸ್ಟ್‌ ಇಂಡೀಸ್‌ ಎದುರು 81 ರನ್‌ ಗಳಿಸಿದ್ದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು.
– ಲಸಿತ ಮಾಲಿಂಗ ಅವರನ್ನೊಳಗೊಂಡ ಶ್ರೀಲಂಕಾ ತಂಡ 2017ರ ಜುಲೈ 6ರ ಬಳಿಕ ಮೊದಲ ಜಯ ದಾಖಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next