Advertisement

ಕೃಷ್ಣೆ ತಟದಲ್ಲಿ ಭಕ್ತರ ಪುಣ್ಯಸ್ನಾನ

10:17 AM Jan 16, 2019 | |

ಆಲಮಟ್ಟಿ: ರಾಜ್ಯದಲ್ಲಿ ಭೀಕರ ಬರಗಾಲದ ಕರಾಳ ಛಾಯೆ ಮಕರ ಸಂಕ್ರಮಣದ ಮೇಲೂ ಬಿದ್ದಿರುವ ಪರಿಣಾಮ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಕಳೆದ ಬಾರಿಗಿಂತಲೂ ಕಡಿಮೆಯಾಗಿದ್ದರೂ ಕೃಷ್ಣೆಯ ಎರಡೂ ಬದಿಯಲ್ಲಿ ಪುಣ್ಯ ಸ್ನಾನ ಮಾಡುವವರ ಸಂಖ್ಯೆ ಕ್ಷೀಣಿಸಿತ್ತು.

Advertisement

ಆಲಮಟ್ಟಿ ಪಟ್ಟಣವು ಕೃಷ್ಣಾ ನದಿ ದಂಡೆಯಲ್ಲಿರುವುದಲ್ಲದೇ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಸಂಪರ್ಕ ಹೊಂದಿ ವಿವಿಧ ಉದ್ಯಾನ ಹಾಗೂ ಧಾರ್ಮಿಕ ಕೇಂದ್ರಗಳ ಕೇಂದ್ರ ಸ್ಥಾನದಲ್ಲಿದೆ. ಇದರಿಂದ ಜ. 15 ಮಕರ ಸಂಕ್ರಮಣದಂದು ದಕ್ಷಿಣಾಯಣ ಮುಗಿದು ಉತ್ತರಾಯಣ ಪ್ರಾರಂಭದ ದಿನವಾದ ಮಂಗಳವಾರ ಪ್ರತಿ ಬಾರಿ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಹಾಪುರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಬಾರಿಯೂ ಆಗಮಿಸಿದ್ದರೂ ರಾಜ್ಯದ ರೈತ ಸಮೂಹ ಮಾತ್ರ ಕಡಿಮೆಯಾಗಿದೆ.

ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶವಾದ ಚಂದ್ರಮ್ಮ ದೇವಸ್ಥಾನದ ಬಳಿ, ಪಾರ್ವತಿಕಟ್ಟೆ ಸೇತುವೆ, ಕೃಷ್ಣಾ ಸೇತುವೆಗಳ ಕೆಳ ಭಾಗಗಳಲ್ಲಿ ಮತ್ತು ಯಲಗೂರ, ಕಾಶಿನಕುಂಟಿ, ಸೀತಿಮನಿ, ಮನಹಳ್ಳಿ ಹೀಗೆ ನದಿ ದಡದಲ್ಲಿ ಪುಣ್ಯ ಸ್ನಾನ ಮಾಡಿದರು.

ಆಟೋ, ಟ್ರ್ಯಾಕ್ಟರ್‌, ಕಾರು, ಬಸ್‌, ದ್ವಿಚಕ್ರ ವಾಹನಗಳ ಮೂಲಕ ಬೆಳಗ್ಗೆ 10ರಿಂದ ನಗರ, ಪಟ್ಟಣ, ಗ್ರಾಮೀಣ ಭಾಗಗಳಿಂದ ಜನರು ಪುಣ್ಯಸ್ನಾನ ಮಾಡಲು ಜನ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೃಷ್ಣೆಯಲ್ಲಿ ಮಿಂದೆದ್ದ ಜನರು ನದಿ ದಡದಲ್ಲಿ ಹಾಗೂ ರಾಕ್‌ ಉದ್ಯಾನದಲ್ಲಿ ಜನ ತಾವು ತಂದಿದ್ದ ಶೇಂಗಾ ಹೋಳಗಿ, ಖಡಕ್‌ ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ತುಪ್ಪ, ಬದನೆಕಾಯಿ ಪಲ್ಯೆ, ಕರೆಳ್ಳು ಚಟ್ನಿ, ಎಣ್ಣೆಗಾಯಿ, ನಿಂಬೆಹಣ್ಣಿನ ಉಪ್ಪಿನಕಾಯಿ, ಮಾವಿನ ಉಪ್ಪಿನಕಾಯಿ, ನೆಲ್ಲಿ ಕಾಯಿ ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿದರು.

ಉದ್ಯಾನಗಳಲ್ಲಿ ಪ್ರವಾಸಿಗರ ದಂಡು: ಮಧ್ಯಾಹ್ನ 1ರಿಂದ ಆಲಮಟ್ಟಿಗೆ ಆಗಮಿಸುವವರ ಸಂಖ್ಯೆ ಏರಿಕೆಯಾಗಿದ್ದರಿಂದ ರಾಕ್‌ ಉದ್ಯಾನದ 2ನೇ ಗೇಟ್ ತೆರೆದು ಜನದಟ್ಟಣೆ ನಿಯಂತ್ರಿಸಲಾಯಿತು. ಕೆಲವೆಡೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿರುವುದರಿಂದ ಜನರು ಸಂತೋಷದಿಂದ ತಮ್ಮ ಕುಟುಂಬ ಪರಿವಾರದೊಡನೆ ಉದ್ಯಾನಗಳನ್ನು ವೀಕ್ಷಿಸಿದರು.

Advertisement

77 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸಂಗೀತ ನೃತ್ಯ ಕಾರಂಜಿ, ಮೊಘಲ್‌, ಇಟಾಲಿಯನ್‌, ರೋಜ್‌ ಉದ್ಯಾನಗಳನ್ನು ವೀಕ್ಷಿಸಲು ಜನರು ಸರತಿ ಸಾಲಿನಲ್ಲಿ ಹೋಗಿ ಕಣ್ತುಂಬಿಕೊಂಡರು.

ಮಕರ ಸಂಕ್ರಮಣದ ಪುಣ್ಯಸ್ನಾನ, ವಿಜಯಪುರದ ಸಿದ್ದೇಶ್ವರ ಜಾತ್ರೆ, ಕೂಡಲ ಸಂಗಮದಲ್ಲಿ ನಡೆಯುತ್ತಿರುವ ಶರಣ ಮೇಳಕ್ಕೆ ಆಗಮಿಸಿದ್ದ ಶರಣರು ಆಲಮಟ್ಟಿಯ ವಿವಿಧ ಉದ್ಯಾನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ಸಹಜವಾಗಿ ಪ್ರವಾಸಿಗರು ತಮಗೆ ಬೇಕಾದ ಸಾಮಗ್ರಿ ಖರೀದಿಸುತ್ತಿರುವುದರಿಂದ ಹುಡುಗರ ಆಟಿಕೆ ಸಾಮಾನು, ಕುರುಕಲು ತಿಂಡಿ, ಐಸ್‌ಕ್ರೀಂ, ಹಣ್ಣಿನ ವ್ಯಾಪಾರ, ಜ್ಯೂಸ್‌, ಫೋಟೋ ತೆಗೆಸಿಕೊಳ್ಳುವವರು, ಆಲಮಟ್ಟಿ ಜಲಾಶಯ,ಉದ್ಯಾನವನಗಳ ಹಾಗೂ ವಿಜಯಪುರದ ಗತವೈಭವ ಸಾರುವ ಫೋಟೋಗಳ ಖರೀದಿಗೆ ಮಂಕು ಕವಿದಿತ್ತು.

ಬಸವನಬಾಗೇವಾಡಿ ಸಿಪಿಐ ಮಹಾದೇವ ಶಿರಹಟ್ಟಿ ಅವರ ನೇತೃತ್ವದಲ್ಲಿ ಆಲಮಟ್ಟಿ, ನಿಡಗುಂದಿ, ಕೊಲ್ಹಾರ ಠಾಣೆಗಳ ಒಟ್ಟು ಮೂವರು ಪಿಸೈ, 6 ಎಎಸೈ ಹಾಗೂ 25 ಪೊಲೀಸ್‌ ಪೇದೆಗಳು, 1 ಡಿಎಆರ್‌ತುಕಡಿ, 13 ಅರಣ್ಯ ಇಲಾಖೆ ಅಕಾರಿಗಳು, 100ಕ್ಕೂ ಹೆಚ್ಚು ದಿನಗೂಲಿಗಳು ಮತ್ತು ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಮೂವರು ಪಿಎಸೈ, ಒಬ್ಬ ಎಸೈ, 76 ಪೇದೆಗಳು ಅಗತ್ಯ ಭದ್ರತಾ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next